ಯೋಗಿ ಆದಿತ್ಯನಾಥ್ ಸಂಪುಟದ ಒಬ್ಬೊಬ್ಬರೇ ರಾಜೀನಾಮೆ: ಅಸಲಿ ಪ್ರಹಸನ ಏನು ಗೊತ್ತಾ?
ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿರುವ ಉತ್ತರ ಪ್ರದೇಶದ ಅಸೆಂಬ್ಲಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುತ್ತಾ ಅಥವಾ ಅಖಿಲೇಶ್ ಯಾದವ್ ಮೋಡಿ ಮಾಡ್ಯಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳಿಗೆ ನಿಯತ್ತು ಬದಲಾವಣೆಯಾಗುವ ಪರ್ವ ಕಾಲ. ಅದೇ ರೀತಿ ಉತ್ತರ ಪ್ರದೇಶದಲ್ಲೂ ನಡೆಯುತ್ತಿದೆ. ಸಾಮಾನ್ಯವಾಗಿ ಬೇರೆ ಪಕ್ಷದವರು ಬಿಜೆಪಿಯತ್ತ ಬರುವುದನ್ನು ಇತ್ತೀಚೆಗೆ ನಾವು ಕಂಡಿದ್ದೇವೆ, ಆದರೆ ಅಪರೂಪ ಎನ್ನುವಂತೆ ಬಿಜೆಪಿಯನ್ನು ಅದರಲ್ಲೂ ಸಚಿವರೇ ಪಕ್ಷ ತೊರೆಯುತ್ತಿರುವ ವಿದ್ಯಮಾನ ಅಲ್ಲಿ ನಡೆಯುತ್ತಿದೆ.
ಯುಪಿ ಚುನಾವಣೆ: ಐಶ್ವರ್ಯಾ ಸೆಂಗಾರ್ ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ
ಸಚಿವರು, ಶಾಸಕರು ಬಿಜೆಪಿಯನ್ನು ತೊರೆಯುತ್ತಿದ್ದಾರೆ ಮತ್ತು ಅಖಿಲೇಶ್ ಯಾದವ್ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಈಗಾಗಲೇ ಮೂವರು ಸಚಿವರು ಬಿಜೆಪಿಗೆ ರಾಜೀನಾಮೆ ನೀಡಿ, ಸೈಕಲ್ ಏರಿದ್ದಾಗಿದೆ. ಸೈಕಲ್ ಪಂಚರ್ ಆಗುತ್ತೋ, ನಿರಾಯಾಸವಾಗಿ ಲಕ್ನೋ ತಲುಪುತ್ತೋ ಎನ್ನುವುದನ್ನು ಅರಿತುಕೊಳ್ಳಲು ಮಾರ್ಚ್ ಹತ್ತರವರೆಗೆ ಕಾದರೆ ಉತ್ತರ ಸಿಕ್ಕಿ ಬಿಡುತ್ತದೆ.
ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ರಾಜಕೀಯ ವಿಶ್ಲೇಷಕರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ತಿರುವನ್ನು ಪಡೆಯುತ್ತಿದೆ. ಇಂತಹ ಸಮಯದಲ್ಲಿ ಶಾಸಕರು, ಅಸೆಂಬ್ಲಿ ಮಟ್ಟದ ಮುಖಂಡರು ಇನ್ನೊಂದು ಪಾರ್ಟಿಗೆ ಪಕ್ಷಾಂತರಗೊಳ್ಳುವುದು ಓಕೆ, ಆದರೆ ಸಚಿವರೇ, ಯೋಗಿ ಆದಿತ್ಯನಾಥ್ ಅವರಿಂದ ದೂರ ಹೋಗುತ್ತಿದ್ದಾರೆ ಎಂದರೆ ಇದಕ್ಕೆ ಕಾರಣ ಏನಿರಬಹುದು? ಬಿಜೆಪಿಯ ಹೈಕಮಾಂಡ್ ಇದನ್ನು ನಿರೀಕ್ಷಿಸಿತ್ತೇ?
ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ
ಆಡ್ವಾಣಿ, ವಾಜಪೇಯಿ ಇದ್ದ ಬಿಜೆಪಿ ಬೇರೆ, ಮೋದಿ ಮತ್ತು ಶಾ ಇರುವ ಬಿಜೆಪಿ ಬೇರೆ
ರಾಜಕೀಯ ವಿಚಾರಕ್ಕೆ ಬಂದಾಗ ಜನಸಾಮಾನ್ಯರಲ್ಲಿ ಬರುವ ಮಾತೆಂದರೆ, ಆಡ್ವಾಣಿ, ವಾಜಪೇಯಿ ಇದ್ದ ಬಿಜೆಪಿ ಬೇರೆ, ಮೋದಿ ಮತ್ತು ಶಾ ಇರುವ ಬಿಜೆಪಿಯೇ ಬೇರೆ. ಆಗಲೂ, ಈಗಲೂ, ಬೇಕೆಂದರೂ, ಬೇಡವೆಂದರೂ ನಡೆಯುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಫರ್ಮಾನೇ ಅಂತಿಮ. ಚುನಾವಣೆಯ ಈ ಸಮಯದಲ್ಲಿ ಕ್ಯಾಬಿನೆಟ್ ದರ್ಜೆಯ, ಒಬಿಸಿ ಸಮುದಾಯದ ಪ್ರಮುಖ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ನೀಡಿ, ಅಖಿಲೇಶ್ ಬತ್ತಳಿಕೆಗೆ ಸೇರಿಕೊಂಡಿದ್ದಾರೆ.
ಒಬಿಸಿ ಸಮುದಾಯದ ಪ್ರಮುಖ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ
ಪಕ್ಷ ಬಿಟ್ಟಾಗ ಒಂದು ಕಾರಣ ಹೇಳಬೇಕಲ್ಲಾ ಅದನ್ನೇ ಸ್ವಾಮಿ ಪ್ರಸಾದ್ ಹೇಳಿದ್ದಾರೆ. ಆದರೆ, ಇವರು ಮೂಲ ಬಿಜೆಪಿಯವರಲ್ಲ, ಬದಲಿಗೆ ಮಾಯಾವತಿಗೆ ಬೆನ್ನುಕೊಟ್ಟು ಕಳೆದ ಚುನಾವಣೆಯ ವೇಳೆ ಬಂದವರು. ಬಿಜೆಪಿ ಸೇರಬೇಕಾದರೂ ಕಂಡೀಷನ್, ಬಿಡುವ ಮುನ್ನವೂ ಕಂಡೀಷನ್ ಹಾಕಿದವರೇ ಸ್ವಾಮಿ ಪ್ರಸಾದ್. ತನ್ನ ಮಗನಿಗೆ, ಸೊಸೆಗೆ ಟಿಕೆಟ್ ನೀಡಬೇಕು ಎನ್ನುವ ಕಂಡೀಷನಿಗೆ ಅಮಿತ್ ಶಾ ಒಪ್ಪದೇ ಇದ್ದಿದ್ದರಿಂದ ಬಿಜೆಪಿ ದಲಿತ ವಿರೋಧಿ ಎಂದು ಇವರು ಪಕ್ಷ ತೊರೆದರು ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಬಿಜೆಪಿಯ ಹೈಕಮಾಂಡ್ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ
ಈಗಾಗಲೇ ಪಕ್ಷ ಬಿಟ್ಟ ಇನ್ನಿಬ್ಬರು ಸಚಿವರು ಮತ್ತು ಶಾಸಕರದ್ದು ಇದೇ ಸಮಸ್ಯೆ ಎಂದು ಹೇಳಲಾಗುತ್ತಿದೆ. ಒಂದೋ ತಮಗೆ ಅಥವಾ ತಾವು ಶಿಫಾರಸು ಮಾಡಿರುವ ಮುಖಂಡರಿಗೆ ಟಿಕೆಟ್ ಸಿಗುವುದು ಖಾತ್ರಿಯಾಗದೇ ಇರುವುದರಿಂದ ಬಿಜೆಪಿಯ ಮೇಲೆ ಇವರಿಗೆ ನಿಯತ್ತು ಬದಲಾವಣೆಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಾಗಾಗಿಯೇ, ಪಕ್ಷ ತೊರೆಯುವವರು ಬಿಟ್ಟೋಗಲಿ ಎಂದು ಬಿಜೆಪಿಯ ಹೈಕಮಾಂಡ್ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ
ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ ಎನ್ನುವುದು ದಿನದಿಂದ ದಿನಕ್ಕೆ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿ. ಜಾತಿ ರಾಜಕಾರಣಕ್ಕೆ ಎತ್ತಿದ ಕೈಯಂತಿರುವ ಇಲ್ಲಿ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಅಳೆದುತೂಗಿ ಬಿಡುಗಡೆ ಮಾಡಿದೆ. ಅಖಿಲೇಶ್ ದಲಿತ ವಿರೋಧಿ ಎಂದು ಭೀಮ್ ಆರ್ಮಿಯವರು ಹೇಳುತ್ತಿದ್ದರೆ, ರೈತ ಮುಖಂಡ ಟಿಕಾಯತ್ ಅವರು ಎಸ್ಪಿಗೆ ಬೆಂಬಲ ಎಂದಿದ್ದರು. ಈಗ, ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ದೆಹಲಿ ಗಡಿಯನ್ನು ಹಂಚಿಕೊಂಡಿರುವ ಕ್ಷೇತ್ರಗಳಿಗಳಲ್ಲಿ ಟಿಕಾಯತ್ ಮಾತು ಮುಖ್ಯವಾಗಬಹುದು. ಒಟ್ಟಿನಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಉತ್ತರ ಪ್ರದೇಶ ಚುನಾವಣೆ ಹಾವು ಏಣಿ ಆಟದಂತೆ ಸಾಗಬಹುದು.
Recommended Video