ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗುತ್ತಾ ಮಂಡ್ಯದ ಈ "ಮುತ್ತಿನ ಕೆರೆ"?
ಮಂಡ್ಯ, ನವೆಂಬರ್ 26: ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿಯಿರುವ ಐತಿಹಾಸಿಕ ತೊಣ್ಣೂರು ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಮೇಲುಕೋಟೆಗೆ ತೆರಳುವ ಹಾದಿಯಲ್ಲಿಯೇ ತೊಣ್ಣೂರು ಕೆರೆ ಇರುವುದರಿಂದ ಇದನ್ನು ಒಂದು ಪ್ರವಾಸಿ ತಾಣವನ್ನಾಗಿ ರೂಪಿಸಿದ್ದೇ ಆದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಧಾವಿಸುವುದಂತೂ ಖಚಿತ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿ ತೊಣ್ಣೂರು ಉತ್ಸವವನ್ನು ಮಾಡಲಾಗಿತ್ತು. ಮುಂದೆ ಓದಿ...
ತುಂಬಿರುವ ತೊಣ್ಣೂರು ಕೆರೆ
ಈ ಬಾರಿ ಕೆರೆ ತುಂಬಿರುವುದರಿಂದ ಸುತ್ತಮುತ್ತಲಿನ ರೈತರು ಸೇರಿದಂತೆ ಜನ ಖುಷಿಯಾಗಿದ್ದಾರೆ. ಇಲ್ಲಿಂದ ಮೇಲುಕೋಟೆ ಸೇರಿದಂತೆ ಸುಮಾರು ಐವತ್ತು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಜತೆಗೆ ಸುತ್ತಮುತ್ತಲಿನ ರೈತರಿಗೂ ಪ್ರಯೋಜನವಾಗಿದೆ. ನಿಸರ್ಗ ಸೌಂದರ್ಯದೊಂದಿಗೆ ಐತಿಹಾಸಿಕವಾಗಿಯೂ ತನ್ನದೇ ಆದ ಮಹತ್ವ ಹೊಂದಿರುವ ತೊಣ್ಣೂರು ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವ ಮಾತುಗಳು ಈ ಹಿಂದೆಯೇ ಕೇಳಿ ಬಂದಿದ್ದವು. ಆದರೆ ಅದು ಭರವಸೆಯಾಗಿಯೇ ಉಳಿದು ಹೋಗಿದ್ದವು. ಇದೀಗ ಮತ್ತೆ ಈ ಬಗ್ಗೆ ಚಿಂತನೆ ನಡೆದಿದ್ದು ಒಂದು ವೇಳೆ ಇದು ಕಾರ್ಯಗತವಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.
ನವೆಂಬರ್ 23 ರಿಂದ ಐತಿಹಾಸಿಕ ತೊಣ್ಣೂರು ಕೆರೆ ಉತ್ಸವ
ಮುತ್ತಿನಕೆರೆ ಎಂಬ ಮತ್ತೊಂದು ಹೆಸರು
ಪಾಂಡವಪುರದಿಂದ ಸುಮಾರು ಒಂಬತ್ತು ಕಿ.ಮೀ. ದೂರದಲ್ಲಿರುವ ಕೆರೆ ತೊಣ್ಣೂರು ಕರ್ನಾಟಕದಲ್ಲಿರುವ ಕೆರೆಗಳ ಪೈಕಿ ಎರಡನೆಯ ದೊಡ್ಡಕೆರೆಯಾಗಿದೆ. ಗುಡ್ಡಗಳ ನಡುವೆ ನಿರ್ಮಾಣಗೊಂಡಿರುವ ಈ ಕೆರೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕೆರೆಯನ್ನು 'ಮುತ್ತಿನಕೆರೆ' ಎಂದು ಕೂಡ ಕರೆಯಲಾಗುತ್ತಿದೆ. 1746ರಲ್ಲಿ ಸೈನ್ಯದಲ್ಲಿದ್ದ ಸುಬೇದಾರನ ಪುತ್ರ ನಾಸಿರ್ ಸಿಂಗ್ ಎಂಬಾತ ಕೆರೆತೊಣ್ಣೂರಿನಲ್ಲಿ ನೆಲೆಸಿದ್ದಾಗ ಒಮ್ಮೆ ಅಂದಿನ ರಾಜ ಪರಿವಾರಕ್ಕೆ ಸೇರಿದ ಮಹಿಳೆಯೊಬ್ಬರ ಮುತ್ತಿನ ಆಭರಣ ಕೈಜಾರಿ ಈ ಕೆರೆಯೊಳಗೆ ಬಿತ್ತಂತೆ. ಆದರೆ ಅದು ಕೆರೆಯ ತಳ ಸೇರಿದರೂ ತಿಳಿ ನೀರಿನಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದುದರಿಂದ ಈಜುಗಾರರು ನೀರಿನಲ್ಲಿ ಮುಳುಗಿ ಹೊರತೆಗೆದರೆಂದು ಹೇಳಲಾಗುತ್ತಿದೆಯಲ್ಲದೆ, ಆ ಕಾರಣದಿಂದಲೇ ನಾಸಿರ್ ಸಿಂಗ್ ಇದನ್ನು ಮೋತಿ ತಲಾಬ್ (ಮುತ್ತಿನ ಕೆರೆ) ಎಂದು ಕರೆದನು ಎಂದು ಹೇಳಲಾಗುತ್ತಿದೆ.
ರಾಮಾನುಜಚಾರ್ಯರು ನೆಲೆಸಿದ್ದ ತಾಣ
ಕ್ರಿ.ಶ. 1326ರಲ್ಲಿ ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಮೇಲೆ ಮುಸಲ್ಮಾನ ದೊರೆಗಳು ದಾಳಿ ಮಾಡಿದ ಸಂದರ್ಭ ತಮ್ಮ ರಕ್ಷಣೆಗೆ ಕೆರೆತೊಣ್ಣೂರನ್ನು ಆಶ್ರಯಿಸಿದರೆಂಬ ಇತಿಹಾಸದ ಕಥೆಯೂ ಇದೆ. ಕೆರೆತೊಣ್ಣೂರನ್ನು ತೊಂಡನೂರು ಅಗ್ರಹಾರ, ಯಾದವಪುರ, ಯಾದವನಾರಾಯಣ ಚತುರ್ವೇದಿಮಂಗಲ, 'ತೊಂಡೂರು' ಎಂಬ ಮತ್ತೊಂದು ಹೆಸರಿನಿಂದಲೂ ಕರೆಯಲಾಗುತ್ತದೆ. ಕೆರೆಯ ಬಗ್ಗೆ ಹೇಳುವುದಾದರೆ, ಶ್ರೀರಾಮಾನುಜಚಾರ್ಯರು ಮೇಲುಕೋಟೆಗೆ ತೆರಳುವ ಸಂದರ್ಭ ಕೆಲ ಕಾಲ ಇಲ್ಲಿಯೇ ನೆಲೆಸಿದ್ದರೆಂದೂ ಅಲ್ಲದೆ ಇಲ್ಲಿನ ಕೆರೆಯನ್ನು 'ತಿರುಮಲಸಾಗರ' ಎಂಬ ಹೆಸರಿನಿಂದ ಕರೆದಿದ್ದರೆನ್ನಲಾಗಿದೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಕೆರೆಯ ಜೀರ್ಣೋದ್ಧಾರ ಮಾಡಿದ್ದನೆಂದು ಹೇಳಲಾಗುತ್ತಿದೆ.
ಮೈಸೂರು, ಸುತ್ತಮುತ್ತ ಊರು ನೋಡಲು ದರ್ಶಿನಿ ಪ್ಯಾಕೇಜ್
ಇಷ್ಟಾರ್ಥ ನೆರವೇರಿಸುವ ಮದಗ
ಕೆರೆಯ ದಂಡೆಯನ್ನು ಮೆಟ್ಟಿಲಿನಿಂದ ನಿರ್ಮಿಸಲಾಗಿದ್ದು ಒಂದೊಂದೇ ಮೆಟ್ಟಿಲನ್ನು ಇಳಿಯುತ್ತಾ ನೀರಿನಲ್ಲಿ ಆಟವಾಡಬಹುದು. ಕೆರೆಯ ಒಂದು ದಡದಲ್ಲಿ ಸ್ನಾನಘಟ್ಟ ಹಾಗೂ ಮಂಟಪವಿದ್ದು ಇದು ಕೆರೆಗೆ ಕಳೆಗಟ್ಟಿದೆ. ಈ ಕೆರೆಯಲ್ಲಿ ದಿನನಿತ್ಯವೂ ನೂರಾರು ಮಂದಿ ಸ್ನಾನ ಮಾಡಿ ಖುಷಿ ಪಡುತ್ತಾರೆ. ಆದರೆ ಸೌಂದರ್ಯಕ್ಕೆ ಮಣಿದು ಈಜಲು ಹೋಗದಿರುವುದು ಒಳಿತು. ಏಕೆಂದರೆ ಈಗಾಗಲೇ ಈಜಲು ಹೋಗಿ ಪ್ರಾಣ ಕಳೆದುಕೊಂಡವರ ದೊಡ್ಡ ಪಟ್ಟಿಯೇ ಇದೆ.
ಕೆರೆಬಳಿ ಧುಮುಕುವ ಮದಗವಿದ್ದು, ಈ ಮದಗದಲ್ಲಿ ತಲೆಕೊಟ್ಟು ಸ್ನಾನ ಮಾಡಿದರೆ ಇಷ್ಟಾರ್ಥಗಳು ನೆರವೇರುವುದರೊಂದಿಗೆ ಜನ್ಮ ಪಾವನವಾಗುತ್ತದೆ. ಅಷ್ಟೇ ಅಲ್ಲ ಚರ್ಮವ್ಯಾಧಿಗಳು ಮಾಯವಾಗುತ್ತವೆ ಎಂಬ ನಂಬಿಕೆಯೂ ಜನರಲ್ಲಿದೆ. ಇಲ್ಲಿರುವ ದೇವಾಲಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೊಯ್ಸಳರ ಕಾಲದಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ನಿರ್ಮಿತವಾದ ದ್ರಾವಿಡ ಶೈಲಿಯ ದೇವಾಲಯಗಳ ಮಾದರಿಯನ್ನು ಹೋಲುವುದನ್ನು ಕಾಣಬಹುದು.
ಅಭಿವೃದ್ಧಿಯಾಗುತ್ತಾ ಸುಂದರ ತಾಣ
ಕೆರೆಯ ದಂಡೆಯಲ್ಲಿ 'ನಿಕುಂಬಿನಿ' ಎಂಬ ದೇವಿಯ ದೇವಾಲಯವಿದ್ದು, ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಹಿಂದೂ-ಮುಸ್ಲಿಂ ಭಾವೈಕ್ಯ ಸಾರುವ ಶಾಹ ಸಲಾ ಮಸೂದ್ ಘಾಸಿಯ ದರ್ಗಾವೂ ಇಲ್ಲಿದೆ. ಇದನ್ನು 1358ರಲ್ಲಿ ನಿರ್ಮಿಸಿದ್ದು, ಈ ದರ್ಗಾದ ಕಟ್ಟಡಕ್ಕೆ ದೇವಾಲಯದ ಕಂಬಗಳನ್ನು ಬಳಸಿರುವುದು ಗಮನಾರ್ಹ. ಕೆರೆ ಬಳಿಯ ಬೆಟ್ಟಗಳು ಚಾರಣಪ್ರಿಯರಿಗೆ ಹೇಳಿಮಾಡಿಸಿದಂತಿದೆ. ಬೆಟ್ಟದ ಮೇಲ್ಭಾಗದಿಂದ ಕಾಣಸಿಗುವ ನಿಸರ್ಗದ ಸುಂದರ ಕಣ್ಮನ ಸೆಳೆಯುತ್ತದೆ. ಪ್ರಕೃತಿ ಸುಂದರ ಮತ್ತು ಐತಿಹಾಸಿಕತೆ ಹೊಂದಿರುವ ಕೆರೆತೊಣ್ಣೂರನ್ನು ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿ ತಾಣವನ್ನಾಗಿ ಮಾಡಿದ್ದೇ ಆದರೆ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗುತ್ತದೆ.