The Kerala Story: ಪ್ರಧಾನಿ ಬೆಂಬಲಿಸಿದ್ದ ಸಿನಿಮಾಗೆ ಸಿಗುತ್ತಿಲ್ಲ ಒಟಿಟಿ ಪ್ಲಾಟ್ಫಾರ್ಮ್- ಕಾರಣವೇನು ಗೊತ್ತೇ?
ಮುಂಬೈ, ಜೂನ್ 26: ಅದಾ ಶರ್ಮಾ ಅಭಿನಯದ ಕೇರಳ ಸ್ಟೋರಿ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದೂಳ್ ಎಬ್ಬಿಸಿದೆ. ಈ ಚಿತ್ರವು ಹಿಂದುತ್ವವಾದಿಗಳ ಮೆಚ್ಚಿನ ಚಿತ್ರವಾಗಿದ್ದು 200 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಗಳಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಸಿನಿಮಾಗೆ ಯಾವುದೇ ಒಟಿಟಿ ಪ್ಲಾಟ್ಪಾರ್ಮ್ ಸಿಗದೇ ಇರುವುದು ಚಿತ್ರ ತಂಡದ ಕಳವಳಕ್ಕೆ ಕಾರಣವಾಗಿದೆ.
ಈ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಅವರು ಹಲವು ಒಟಿಟಿ ಪ್ಲಾಟ್ಫಾರ್ಮ್ಗಳೊಂದಿಗೆ ಈಗಾಗಲೇ ಮಾತನಾಡಿದ್ದಾರೆ. ಆದರೆ, ಚಿತ್ರವನ್ನು ಪ್ರದರ್ಶಿಸಲು ಯಾವುದೇ ಒಟಿಟಿ ಪ್ಲಾಟ್ಪಾರ್ಮ್ ಮುಂದೆ ಬಂದಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.

'ದಿ ಕೇರಳ ಸ್ಟೋರಿ' ಚಿತ್ರವನ್ನು ಶೀಘ್ರದಲ್ಲೇ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತದೆ ಎಂದು ವರದಿಗಳಾಗಿದ್ದವು. ಆದರೆ ಚಿತ್ರಕ್ಕೆ ಯಾವುದೇ ಒಟಿಟಿ ಪ್ಲಾಟ್ಫಾರ್ಮ್ನಿಂದ ಸೂಕ್ತ ಆಫರ್ ಸಿಕ್ಕಿಲ್ಲ ಎಂದು ಸುದೀಪ್ತೋ ಹೇಳಿದ್ದಾರೆ.
ಚಿತ್ರವು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎಂಬ ವರದಿಗಳನ್ನು ನಿರ್ದೇಶಕ ಸುದೀಪ್ತೋ ತಳ್ಳಿಹಾಕಿದ್ದಾರೆ. ಅದು ನಕಲಿ ಸುದ್ದಿ ಎಂದು ಹೇಳಿದ್ದಾರೆ. ಯಾವುದೇ ಪ್ರಮುಖ ಒಟಿಟಿ ಪ್ಲಾಟ್ಫಾರ್ಮ್ಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಒಪ್ಪಂದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಸುದೀಪ್ತೋ ತಿಳಿಸಿದ್ದಾರೆ. ನಾವು ಪರಿಗಣಿಸಲು ಯೋಗ್ಯವಾದ ಯಾವುದೇ ಆಫರ್ ಬಂದಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.

ನಮ್ಮನ್ನು ಶಿಕ್ಷಿಸಲು ಸಿನಿ ಮಾಧ್ಯಮದ ಒಂದು ಗುಂಪು ಈ ರೀತಿಯ ಕುತಂತ್ರ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.
ದಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್ ಯಶಸ್ಸು ಚಿತ್ರರಂಗದ ಅನೇಕರನ್ನು ಕೆರಳಿಸಿದೆ ಎಂದು ಅವರು ಹೇಳಿದ್ದಾರೆ. ಮನರಂಜನಾ ಉದ್ಯಮದ ಒಂದು ಗುಂಪು ತಮ್ಮ ಯಶಸ್ಸಿಗಾಗಿ ಅವರನ್ನು ಶಿಕ್ಷಿಸಲು ಒಗ್ಗೂಡಿದೆ ಎಂದು ಎಂದು ನಿರ್ದೇಶಕ ಹೇಳಿದ್ದಾರೆ.

ಚಿತ್ರದ ವಿಷಯ ಒಂದು ನಿರ್ದಿಷ್ಟ ವರ್ಗದ ಪ್ರೇಕ್ಷಕರನ್ನು ಕೆರಳಿಸಿದೆ ಎಂದು ಉಲ್ಲೇಖಿಸಿದ್ದಾರೆ. ಇದು ರಾಜಕೀಯವಾಗಿ ವಿವಾದಾಸ್ಪದವಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಪ್ರಮುಖ ಒಟಿಟಿ ಪ್ಲಾಟ್ಫಾರ್ಮ್ಗಳು ಚಿತ್ರವನ್ನು ಪ್ರದರ್ಶಿಲು ಮುಂದೆ ಬರುತ್ತಿಲ್ಲ. ಇದೇ ನಿಜವಾದ ಕಾರಣ ಎಂದು ಸುದೀಪ್ತೋ ಹೇಳಿದ್ದಾರೆ.
ಚಿತ್ರಕ್ಕೆ ಪ್ರಧಾನಿ ಮೋದಿ ಬೆಂಬಲ
ಕರ್ನಾಟಕ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕೇರಳ ಸ್ಟೋರಿ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದರು. ಲವ್ ಜಿಹಾದ್ ಬಗ್ಗೆ ಇರುವ 'ದಿ ಕೇರಳ ಸ್ಟೋರಿ' ಚಿತ್ರವನ್ನು ಪ್ರಸ್ತಾಪಿಸಿ, ಚಿತ್ರವನ್ನು ವಿರೋಧಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

'ದಿ ಕೇರಳ ಸ್ಟೋರಿ' ಚಿತ್ರವು ಸಮಾಜದಲ್ಲಿನ ಭಯೋತ್ಪಾದನೆಯ ಪರಿಣಾಮಗಳನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತಿದೆ. ವಿಶೇಷವಾಗಿ ಕೇರಳದಂತಹ ಕಠಿಣ ಪರಿಶ್ರಮಿ, ಪ್ರತಿಭಾವಂತ ಮತ್ತು ಬುದ್ಧಿಜೀವಿಗಳ ಸುಂದರ ನಾಡಿನಲ್ಲಿ ನಡೆಯುತ್ತಿರುವ ಕೆಟ್ಟ ಬೆಳವಣಿಗೆಗಳನ್ನು ಬಿಚ್ಚಿಡಲು ಯತ್ನಿಸಿದೆ.
ಇಂತಹ ಚಿತ್ರವನ್ನು ಕಾಂಗ್ರೆಸ್ ಪಕ್ಷವು ವಿರೋಧಿಸುತ್ತಿದೆ. ಈ ಚಿತ್ರವನ್ನು ನಿಷೇಧಿಸಲು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸಲು ಪ್ರಯತ್ನಿಸುತ್ತಿದೆ. ನಾನು 'ಜೈ ಬಜರಂಗ್ ಬಲಿ' ಎಂದು ಜಪಿಸುವುದರಿಂದ ಪಕ್ಷಕ್ಕೆ ಸಮಸ್ಯೆ ಇದೆ ಎಂದು ಹೇಳಿದ್ದರು.
ಭಯೋತ್ಪಾದನೆ ಈಗ ಹೊಸ ರೂಪ ಪಡೆದಿದೆ. ಆಯುಧಗಳು ಮತ್ತು ಬಾಂಬ್ಗಳನ್ನು ಬಳಸುವುದರ ಹೊರತಾಗಿ, ಅವರು ಸಮಾಜವನ್ನು ಒಳಗಿನಿಂದ ಪೊಳ್ಳಾಗಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಮೋದಿ ಮಾಡಿದ್ದರು.
'ದಿ ಕೇರಳ ಸ್ಟೋರಿ' ಸಿನಿಮಾ ಭಯೋತ್ಪಾದನೆಯ ಈ ಹೊಸ ಮುಖವನ್ನು ತೆರೆದಿಟ್ಟಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಯೋತ್ಪಾದಕ ಸಂಘಟನೆಗಳ ಮುಂದೆ ಮಂಡಿಯೂರಿತ್ತು. ಹಿಂಸಾಚಾರದಿಂದ ನಾವು ಬಹಳ ಸಮಯದಿಂದ ಬಳಲುತ್ತಿದ್ದೇವೆ. ಕಾಂಗ್ರೆಸ್ ಈ ದೇಶವನ್ನು ಭಯೋತ್ಪಾದನೆಯಿಂದ ರಕ್ಷಿಸಲಿಲ್ಲ. ಕರ್ನಾಟಕವನ್ನು ಕಾಂಗ್ರೆಸ್ ರಕ್ಷಿಸಬಹುದೇ? ಎಂದು ಪ್ರಶ್ನಿಸಿದ್ದರು.












Click it and Unblock the Notifications