ಕಾಖಂಡಕಿಯಲ್ಲಿ ವೇಶ್ಯೆಗೊಂದು ದೇವಸ್ಥಾನ; ಜನರಿಂದ ನಿತ್ಯನಮನ

ಎಂಟನೇ ವಯಸ್ಸಿಗೆ ತಂದೆ ತಾಯಿ ಕಳೆದುಕೊಂಡಿದ್ದ ಆಕೆ ರೂಪವತಿ. ಆ ಸೌಂದರ್ಯವೇ ಮುಂದೆ ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಲಕ್ಷ ಲಕ್ಷ ಸಂಪಾದಿಸಲು ಕಾರಣವಾಗಿತ್ತು. ಅನಿವಾರ್ಯಕ್ಕೆ ವೇಶ್ಯಾವಾಟಿಕೆ ಹಾದಿ ಹಿಡಿದಿದ್ದ ಆಕೆಗೆ ವೈಭವೋಪೇತ ಜೀವನವೂ ಒಲಿದುಬಂದಿತ್ತು. ಆದರೆ ಅದೇನಾಯಿತೋ ಗೊತ್ತಿಲ್ಲ, ಅದೊಂದು ದಿನ ಇದ್ದಕ್ಕಿದ್ದಂತೆ ಎಲ್ಲವನ್ನೂ ದಾನ ಮಾಡಲು ಮುಂದಾದಳು. ತನ್ನ ಬಳಿ ಇದ್ದ ಒಡವೆ, ಹಣ, ಸಂಪತ್ತೆಲ್ಲವನ್ನೂ ತೊರೆದಳು, ಸನ್ಯಾಸಿಯಾಗಲು ಹೊರಟಳು...

ಈ ಒಂದು ಪುಟ್ಟ ಕಥೆಗೆ ಈಗ ಸಾಕ್ಷಿಯಾಗಿ ನಿಂತಿದೆ ವಿಜಯಪುರ ತಾಲೂಕಿನ ಕಾಖಂಡಕಿ ಗ್ರಾಮದ ಈ ದೇವಸ್ಥಾನ. ಕರ್ನಾಟಕದಲ್ಲಿ ದೇವಸ್ಥಾನಗಳು ಹೆಜ್ಜೆಗೊಂದರಂತೆ ಸಿಗುತ್ತವೆ. ದೇವರಿಗೆ ಮಾತ್ರವಲ್ಲ, ತಮ್ಮಿಷ್ಟದ ನಾಯಕರಿಗೆ, ನಟ ನಟಿಯರಿಗೆ, ರಾಜಕಾರಣಿಗಳಿಗೂ ದೇವಸ್ಥಾನ ಕಟ್ಟಿಸಿದ್ದಾರೆ ಜನ. ಆದರೆ ಈ ದೇವಸ್ಥಾನ ವಿಶಿಷ್ಟವಾಗಿ ನಿಲ್ಲುವುದು ಇದರ ಹಿನ್ನೆಲೆಯಿಂದ. ವೇಶ್ಯೆಯೊಬ್ಬಳ ಜೀವನವನ್ನು ತೆರೆದಿಡುವ ಈ ದೇವಸ್ಥಾನ ಆಕೆ ಸಾಗಿ ಬಂದ ಹಾದಿ, ಸಮಾಜಕ್ಕೆ ಮಾಡಿದ ಕೆಲಸಗಳ ಕಥೆಯನ್ನೂ ಬಿಡಿಸಿಡುತ್ತದೆ.

Recommended Video

      ಸಿದ್ದರಾಮಯ್ಯ ಆದ್ಮೇಲೆ ನಾನೇ ಆಗೋದು..!? | Oneindia Kannada

      ಅಂದ ಹಾಗೆ ಈ ದೇವಸ್ಥಾನದ ದೇವತೆ ವೇಶ್ಯೆ ಕೆಂಚವ್ವ. 1882ರಲ್ಲಿ ವಿಜಯಪುರ ಜಿಲ್ಲೆಯ ಜಮಖಂಡಿ ತಾಲೂಕಿನ ಕೊಣ್ಣೂರಿನಲ್ಲಿ ರಾಮಪ್ಪ ಮತ್ತು ತಾಯವ್ವ ತಳಗೇರಿ ದಂಪತಿಗೆ ಜನಿಸಿದ ಕೆಂಚವ್ವ ತಳಗೇರಿ ಎಂಟನೇ ವಯಸ್ಸಿಗೇ ಅಪ್ಪ ಅಮ್ಮನನ್ನು ಕಳೆದುಕೊಂಡಳು. ಆನಂತರ ತನ್ನ ತಮ್ಮ ನಾಗಪ್ಪನ ಜೊತೆ ಕೊಲ್ಹಾರ ಪಟ್ಟಣಕ್ಕೆ ಬಂದು ಚಿಕ್ಕಮ್ಮ ಹುಚ್ಚಮ್ಮನ ಆರೈಕೆಯಲ್ಲಿ ಬೆಳೆದಳು. ನಂತರ ಹುಚ್ಚಮ್ಮ ಸಂಬಂಧಿ ಯಲ್ಲಪ್ಪ ಚಂದ್ರಪ್ಪ ತಳಗೇರಿ ಅವರೊಂದಿಗೆ ಕಾಖಂಡಕಿ ಗ್ರಾಮಕ್ಕೆ ಬಂದು ನೆಲೆಸಿದಳು. ಆದರೆ ಕೆಂಚವ್ವ ಚಿಕ್ಕ ವಯಸ್ಸಿನಲ್ಲೇ ದೇವದಾಸಿ ಪದ್ಧತಿಗೆ ಒಳಗಾಗಬೇಕಾಯಿತು.

      Temple For Prostitute Kenchavva In Kakhandaki Of Vijayapura

      ಮತ್ತೆ ಈಕೆಯ ಹಾದಿ ತೆರೆದುಕೊಂಡಿದ್ದು ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ. ವೇಶ್ಯಾವೃತ್ತಿಗೆ ಇಳಿದ ಈಕೆಯ ಸೌಂದರ್ಯಕ್ಕೆ ಮರುಳಾಗಿ ಸಾಕಷ್ಟು ಶ್ರೀಮಂತರು ಬರುತ್ತಿದ್ದರು. ಎಲ್ಲೆಡೆಯಿಂದಲೂ ಸಂಪತ್ತು ಹರಿದುಬಂದಿತ್ತು. ಆದರೆ ಇವೆಲ್ಲದರ ನಡುವೆಯೂ ವೈರಾಗ್ಯವೊಂದು ಕೆಂಚವ್ವನಲ್ಲಿ ಉಳಿದುಕೊಂಡಿತ್ತು.

      ದಿಕ್ಕು ಬದಲಾಗಿದ್ದೆಲ್ಲಿ?: ಈ ಎಲ್ಲಾ ಸುಖ ಸಂಪತ್ತಿನ ನಡುವೆ ಜೀವಿಸುತ್ತಿದ್ದ ಕೆಂಚವ್ವ ಹೀಗೆ ಒಮ್ಮೆ ಹುಟ್ಟೂರಿಗೆ ಬಂದಳು. ಉತ್ತರ ಕರ್ನಾಟಕದಲ್ಲಿ ಪವಾಡ ಪುರುಷ ಎಂದೇ ಕರೆಸಿಕೊಂಡಿದ್ದ ಭೀಮಾಶಂಕರ ಶ್ರೀಗಳು ಈಕೆ ಕಣ್ಣಿಗೆ ಕಾಣಿಸಿಕೊಂಡಿದ್ದರು. ಆಗ ಕೆಂಚವ್ವಳ ಆಧ್ಯಾತ್ಮ, ಸನ್ಯಾಸದ ಆಲೋಚನೆಗೆ ಗರಿಗೆದರಿತ್ತು. ಗುರುವಿನಲ್ಲಿ ತನ್ನೆಲ್ಲ ತಳಮಳವನ್ನೂ ಹಂಚಿಕೊಂಡಿದ್ದ ಕೆಂಚವ್ವ ಕೊನೆಗೂ ಸದ್ಗುರು ಶಿವಲಿಂಗೇಶ್ವರ ಮಹಾರಾಜರ ಶಿಷ್ಯತ್ವ ಸ್ವೀಕರಿಸಿದಳು. ಗುರುವಿನಿಂದಾಗಿ ಕೆಂಚಮ್ಮಳಲ್ಲಿ ಅಗಾಧ ಬದಲಾವಣೆಗಳಾಯಿತು. ಇದು ಸಮಾಜ ಕಾರ್ಯಕ್ಕೆ ಪ್ರೇರೇಪಿಸಿತ್ತು. ತನ್ನ ಪಾಪ ಪ್ರಜ್ಞೆಯಿಂದ ಹೊರ ಬರಲು ಗುರುವಿನ ಮಾತಿನಂತೆ ಸಮಾಜ ಕಾರ್ಯಕ್ಕೆ ಮುಂದಾದಳು ಕೆಂಚವ್ವ.

      Temple For Prostitute Kenchavva In Kakhandaki Of Vijayapura

      ವೇಶ್ಯೆಯಲ್ಲಡಗಿದ್ದ ಸಮಾಜ ಸೇವೆ: ಕಾಖಂಡಕಿಯಲ್ಲಿ ಶಿವನ ಮಂದಿರ, ಸಮೀಪದ ಹರಳಯ್ಯನ ಗುಂಡದಲ್ಲಿ ಸಮುದಾಯ ಭವನ, ಬಬಲೇಶ್ವರದ ಶಾಂತವೀರ ಕಾಲೇಜಿನಲ್ಲಿ ವಿಜ್ಞಾನ ಭವನಕ್ಕಾಗಿ ದೇಣಿಗೆ, ತಿಡಗುಂದಿಯಲ್ಲಿ ತನ್ನ ಗುರುವಿನ ಮಠಕ್ಕಾಗಿ ಹತ್ತಾರು ಎಕರೆ ಜಮೀನು, ಹೀಗೆ ಸಾಕಷ್ಟು ಸಹಾಯ ಮಾಡಿದಳು. ಸಾಮೂಹಿಕ ವಿವಾಹ, ಮದುವೆಗಳಲ್ಲಿ ಬಡವರಿಗೆ ಬಟ್ಟೆ, ಸ್ಮಶಾನಕ್ಕಾಗಿ ಜಾಗ, ವಿಧವೆಯರಿಗೆ ಹಣ ಸಹಾಯ ಹೀಗೆ ಮುಂತಾದ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ನೆರವೇರಿಸಿದಳು. ತಳಗೇರಿ ಬಬಲೇಶ್ವರದಲ್ಲಿ ಶಾಂತವೀರ ಕಾಲೇಜಿಗೆ 43 ವರ್ಷಗಳ ಹಿಂದೆಯೇ ವಿಜ್ಞಾನ ಪ್ರಯೋಗಾಲಯ ನಿರ್ಮಿಸುವ ಮೂಲಕ ಶಿಕ್ಷಣ ಪ್ರೇಮಿಯೂ ಎನಿಸಿಕೊಂಡಿದ್ದಳು. ಸಮಾಜಮುಖಿ ಕೆಲಸಗಳು ಜನರನ್ನು ಕೆಂಚವ್ವಳ ಹತ್ತಿರಕ್ಕೆ ಕರೆದುಕೊಂಡುಬಂದಿತ್ತು.

      ಗುರುವಿನ ಗದ್ದುಗೆ ಪಕ್ಕದಲ್ಲೇ ಸಮಾಧಿ: ಕಾಖಂಡಕಿ ಗ್ರಾಮದಲ್ಲಿನ ಕೆಂಚವ್ವಳ ದೇವಸ್ಥಾನದಲ್ಲಿ ಕೆಂಚವ್ವಳ ಸಮಾಧಿಯಿದೆ. ಸಮಾಧಿ ನಿರ್ಮಾಣದ ಹಿಂದೆಯೂ ಒಂದು ಕಥೆಯಿದೆ. ತನ್ನ ಗುರುಗಳ ಗದ್ದುಗೆ ಮೇಲೆ ಬಿದ್ದ ನೀರು ತನ್ನ ಸಮಾಧಿಗೆ ಬಂದು ಇಂಗುವಂತೆ ಕೆಂಚಮ್ಮ ತನ್ನ ಸಮಾಧಿಯನ್ನು ತಾನೇ ನಿರ್ಮಿಸಿಕೊಂಡಿದ್ದಳು. ನಂತರ 1972ರಲ್ಲಿ ಮುಂಬಯಿಯಲ್ಲಿ ನಿಧನಳಾದ ಕೆಂಚಮ್ಮಳನ್ನು ಕಾಖಂಡಕಿಯ ಅವಳ ಗುರುವಿನ ಸಮಾಧಿ ಪಕ್ಕದಲ್ಲಿಯೇ ಸಮಾಧಿ ಮಾಡಿ ದೇವಸ್ಥಾನ ನಿರ್ಮಿಸಲಾಯಿತು.

      ವೇಶ್ಯಾವಾಟಿಕೆ ವೃತ್ತಿಯಿಂದ ಬಂದು ಸನ್ಯಾಸತ್ವ ಸ್ವೀಕರಿಸಿ ಸಮಾಜಕ್ಕೆ ಸಾಕಷ್ಟು ಒಳಿತನ್ನು ಮಾಡಿರುವ ಕೆಂಚವ್ವಳನ್ನು ಇಲ್ಲಿನ ಜನರು ದೈವಸ್ವರೂಪಿಯಾಗಿ ಕಾಣಲು ಆರಂಭಿಸಿದರು. ಇಂದಿಗೂ ಪ್ರತಿನಿತ್ಯ ಕೆಂಚವ್ವಳ ಸಮಾಧಿಗೆ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇರುತ್ತದೆ. ಆಕೆಯ ಕುಟುಂಬಸ್ಥರು ವರ್ಷಕ್ಕೊಮ್ಮೆ ಇಲ್ಲಿ ಉತ್ಸವವನ್ನೂ ಮಾಡುತ್ತಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+