ಅಫ್ಘಾನಿಸ್ತಾನದ ರಕ್ತ ಚರಿತ್ರೆ, ತಾಲಿಬಾನ್ ಹುಟ್ಟಿದ್ದು-ಬೆಳೆದಿದ್ದು ಹೇಗೆ?
ಸುಮಾರು 4 ದಶಕಗಳ ಹಿಂದೆ ಅಫ್ಘಾನಿಸ್ತಾನದ ಜನ ಕೂಡ ನಮ್ಮಂತೆ, ನಿಮ್ಮಂತೆ ಜೀವನ ನಡೆಸುತ್ತಿದ್ದರು. ಅಲ್ಲಿ ಮಳೆಗೆ ಕೊರತೆ ಇತ್ತು, ನೀರಿಗೂ ಕೊರತೆ ಇತ್ತು. ಆದರೆ ಜೀವನ ನಡೆಸಲು ಹಾಗೂ ಸಂತೋಷವಾಗಿ ಬಾಳಲು ಯಾವ ಅಡ್ಡಿಯೂ ಇರಲಿಲ್ಲ. ಜನ ನೆಮ್ಮದಿಯಾಗಿ ಇರುವಾಗಲೇ ರಷ್ಯಾ ಅಫ್ಘಾನ್ ನೆಮ್ಮದಿಗೆ ಕಿಚ್ಚು ಹಚ್ಚಿತ್ತು. ಅದು 1979 ಡಿಸೆಂಬರ್, ಅಫ್ಘಾನ್ ಮೇಲೆ ದಂಡೆತ್ತಿ ಬಂದ ಸೋವಿಯತ್ ರಷ್ಯಾ ಯುದ್ಧವನ್ನೇ ಆರಂಭಿಸಿತ್ತು. ಅಫ್ಘಾನ್ ನೆಲದಲ್ಲಿ ರಷ್ಯಾ ರಣಕಹಳೆ ಮೊಳಗಿಸಿದ್ದೇ ತಡ, ಸೋವಿಯತ್ ರಷ್ಯಾ ವಿರೋಧಿ ಬಣ ಒಗ್ಗೂಡಿತ್ತು.
ರಷ್ಯಾ ಪಡೆಗಳಿಗೆ ಬಿಸಿ ಮುಟ್ಟಿಸಲು ಅಮೆರಿಕದ ಸಾರಥ್ಯದಲ್ಲಿ ರಣತಂತ್ರ ರೂಪುಗೊಂಡಿತ್ತು. ನೇರವಾಗಿ ರಷ್ಯಾ ವಿರುದ್ಧ ಹೋರಾಟ ನಡೆಸದ ಅಮೆರಿಕ ಹಾಗೂ ಮಿತ್ರ ಪಡೆಗಳು, ಅಫ್ಘಾನ್ ಜನರನ್ನೇ ಬಳಸಿಕೊಂಡು ರಷ್ಯನ್ ಸೇನೆ ವಿರುದ್ಧ ರಣತಂತ್ರ ಹೆಣೆದವು. ಹೀಗೆ ಶುರುವಾಯಿತು ನೋಡಿ ತಿಕ್ಕಾಟ.
ಸ್ಥಳೀಯ ಜನರಿಗೆ ಗುಟ್ಟಾಗಿಯೇ ಶಸ್ತ್ರಾಸ್ತ್ರಗಳನ್ನ ಪೂರೈಸಿ, ಬೆನ್ನೆಲುಬಾಗಿ ನಿಂತ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾಗೆ ತಿರುಗೇಟು ನೀಡಲು ನಿಂತವು. ಮುಂದೆ ಇದೇ ತಾಲಿಬಾನ್ ಸಂಘಟನೆಯ ಉಗಮಕ್ಕೂ ಕಾರಣವಾಗಿತ್ತು. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರ ಎಂದರೆ, ಆಗಿನ್ನೂ ರಷ್ಯಾ ವಿಭಜನೆ ಆಗಿರಲಿಲ್ಲ. ರಷ್ಯಾ ದೇಶವನ್ನು ಆಗ ಸೋವಿಯತ್ ರಷ್ಯಾ ಎಂದು ಕರೆಯಲಾಗುತ್ತಿತ್ತು. ಸೋವಿಯತ್ ರಷ್ಯಾ ಪಡೆಗಳು ಅಫ್ಘಾನ್ನಲ್ಲಿ ತಿಂದ ಪೆಟ್ಟು ಮರೆಯಲಾಗದು.

9 ವರ್ಷಗಳ ಭೀಕರ ಕಾಳಗ
ಮೊದಲಿಗೆ ಗೆಲುವಿನ ನಗೆ ಬೀರಿದ್ದ ಸೋವಿಯತ್ ರಷ್ಯಾ ನಿಧಾನಕ್ಕೆ ಸೋಲುತ್ತಾ ಬಂತು. ರಷ್ಯಾ ಸೇನೆಯನ್ನು ಹೇಗಾದ್ರೂ ಮಾಡಿ ಅಫ್ಘಾನ್ ನೆಲದಿಂದ ಹೊರಹಾಕಲು ಅಮೆರಿಕ ಮತ್ತು ಅದರ ಮಿತ್ರರು ಸ್ಕೆಚ್ ಹಾಕಿದ್ದರು. ಹೀಗೆ ಕೆಲವೇ ದಿನಗಳಲ್ಲಿ ಯುದ್ಧ ಮುಗಿದು ಹೋಗಬಹುದು ಎಂಬ ಆಸೆಯಲ್ಲಿ ಅಫ್ಘಾನ್ ನೆಲಕ್ಕೆ ಬಂದಿಳಿದಿದ್ದ ಸೋವಿಯತ್ ರಷ್ಯಾ, ಬರೋಬ್ಬರಿ 9 ವರ್ಷಗಳಿಗೂ ಹೆಚ್ಚು ಕಾಲ ಅಫ್ಘಾನ್ ನೆಲದಲ್ಲಿ ಪರದಾಡುವ ಪರಿಸ್ಥಿತಿ ಎದುರಾಯಿತು. ಕಡೆಗೆ 1989ರ ಫೆಬ್ರವರಿ 15ರಂದು ಅಫ್ಘಾನ್ ನೆಲದಲ್ಲಿನ ಈ ಘೋರ ಕಾಳಗ ಮುಗಿಯಿತು. ಆದರೂ ಮೂಲಭೂತವಾದಿ ಗುಂಪುಗಳಿಗೆ ಶಾಶ್ವತ ನೆಲೆ ಸಿಕ್ಕಿರಲಿಲ್ಲ.

ಸರ್ಕಾರ ರಚಿಸಿದ್ದ ಸೋವಿಯತ್..!
1989ರಲ್ಲಿ ಸೋವಿಯತ್ ಒಕ್ಕೂಟ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹೊರಬಂದ ನಂತರ ಕೂಡ, ರಷ್ಯಾ ಬೆಂಬಲಿತ ಕಮ್ಯುನಿಸ್ಟ್ ಸರ್ಕಾರ ಮತ್ತು ಮುಜಾಹಿದ್ದೀನ್ ಸಂಘಟನೆ ಮಧ್ಯೆ ಹಿಂಸಾಚಾರ ಮುಂದುವರಿದಿತ್ತು. ಸೋವಿಯತ್ ನೆರವು ಸಿಕ್ಕಿದ್ದರಿಂದಲೇ ಮೊಹಮ್ಮದ್ ನಜೀಬುಲ್ಲಾ ಸರ್ಕಾರ ಭದ್ರವಾಗಿತ್ತು. ಆದರೆ ಯಾವಾಗ 1991ರಲ್ಲಿ ಸೋವಿಯತ್ ಒಕ್ಕೂಟ ಪತನವಾಯಿತೋ, ಅಲ್ಲಿಂದ ಮತ್ತೊಂದು ತಲೆನೋವು ಶುರುವಾಯಿತು. ಅಫ್ಘಾನ್ ನೆಮ್ಮದಿ ಹಾಳಾಗಿ ಹೋಗಿತ್ತು. ಏಪ್ರಿಲ್ 18, 1992 ರಂದು ಮೊಹಮ್ಮದ್ ನಜೀಬುಲ್ಲಾ ಸರ್ಕಾರ ಮಕಾಡೆ ಮಲಗಿತ್ತು. ಅಬ್ದುಲ್ ರಶೀದ್ ದೋಸ್ತಮ್ ಪಡೆ ಅಹ್ಮದ್ ಶಾ ಮಸೂದ್ ಎದುರು ಶರಣಾಗಿತ್ತು.
Recommended Video

4 ವರ್ಷ ಹಿಂಸೆ ನಿಲ್ಲಲೇ ಇಲ್ಲ..!
ಏಪ್ರಿಲ್ 18, 1992 ರಂದು ಮೊಹಮ್ಮದ್ ನಜೀಬುಲ್ಲಾ ಸರ್ಕಾರ ಬಿದ್ದು ಹೋದ ಬಳಿಕ ಅಫ್ಘಾನಿಸ್ತಾನದಲ್ಲಿ ಅಧಿಕಾರ ಹಿಡಿಯಲು ಮುಜಾಹಿದ್ದೀನ್ ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿತ್ತು. ಈ ತಿಕ್ಕಾಟಗಳಿಗೆ 4 ವರ್ಷಗಳ ಕಾಲ ಬ್ರೇಕ್ ಬೀಳಲೇ ಇಲ್ಲ. ಇದೆಲ್ಲಾ ಮುಂದೆ ‘ತಾಲಿಬಾನ್' ಹುಟ್ಟಲು ಕಾರಣವಾಯಿತು. ತನ್ನ ಬುಡ ಭದ್ರಪಡಿಸಿಕೊಂಡ ತಾಲಿಬಾನ್, ಮುಂದೆ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುತ್ತೆ ಎಂಬುದನ್ನ ಯಾರೂ ಊಹಿಸಿರಲಿಲ್ಲ. ಸತತ ಘರ್ಷಣೆಯಲ್ಲೇ ಮುಳುಗಿ ಹೋಗಿದ್ದ ಅಫ್ಘಾನ್ ನೆಲದಲ್ಲಿ ಸುಸ್ಥಿರ ಸರ್ಕಾರ ತರಬೇಕು ಎಂಬ ಉದ್ದೇಶ ಹೊಂದಿದ್ದ ತಾಲಿಬಾನ್, ಮುಜಾಹಿದ್ದೀನ್ ಗುಂಪುಗಳನ್ನೂ ಹಿಂದಿಕ್ಕಿ ಗೆಲುವು ಸಾಧಿಸಿತ್ತು.

ತಾಲಿಬಾನ್ ಅಧಿಕಾರ ಹಿಡಿದಿದ್ದೇಗೆ..?
ಪಶ್ತೂನ್ ಭಾಷೆಯಲ್ಲಿ ‘ತಾಲಿಬಾನ್'ಗೆ ‘ವಿದ್ಯಾರ್ಥಿಗಳು' ಎಂಬ ಅರ್ಥವಿದೆ. 1994ರಲ್ಲಿ ಕಂದಹಾರ್ನ ಬಳಿ ತಾಲಿಬಾನ್ ಹುಟ್ಟಿತ್ತು. ಸೇನಾಡಳಿತವನ್ನು ಸಂಪೂರ್ಣವಾಗಿ ನಾಶ ಮಾಡಿ, ಅಫ್ಘಾನಿಸ್ತಾನ ಆಳಲು ತಾಲಿಬಾನ್ ಮುಖಂಡರು ರಣತಂತ್ರ ರೂಪಿಸಿದ್ದರು. ಯಾವಾಗ ಸೋವಿಯತ್ ರಷ್ಯಾ ಪಡೆಗಳು ಅಫ್ಘಾನಿಸ್ತಾನವನ್ನ ಬಿಟ್ಟು ಹೋದವೋ, ಅಲ್ಲಿಂದ ಮತ್ತೆ 7 ವರ್ಷಗಳ ಕಾಲ ಹಿಂಸೆ ಮುಂದುವರಿದಿತ್ತು. ಇಂತಹ ಸಂದರ್ಭವನ್ನೇ ತಮ್ಮ ಗೆಲುವಿಗೆ ಬಳಸಿಕೊಂಡ ತಾಲಿಬಾನ್, ‘ಮುಜಾಹಿದೀನ್' ಹೋರಾಟಗಾರರನ್ನ ಸೆಳೆಯಿತು. ಮುಜಾಹಿದೀನ್ ಹೋರಾಟಗಾರರು ಸೋವಿಯತ್ ರಷ್ಯಾ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಡೆಗೆ ಅಲ್ಲಿನ ರಾಜಕೀಯ ಅಸ್ತಿರತೆ ‘ಮುಜಾಹಿದೀನ್' ಹೋರಾಟಗಾರರು ಮತ್ತು ಯುವಕರನ್ನು ತಾಲಿಬಾನ್ನತ್ತ ಸೆಳೆದಿತ್ತು.

ಇತಿಹಾಸ ನಿರ್ಮಿಸಿದ್ದ ತಾಲಿಬಾನ್..!
1995ರ ಸೆಪ್ಟೆಂಬರ್ನಲ್ಲಿ ಹೆರಾತ್ ಹಾಗೂ ನಂತರ 1996 ರ ಸೆಪ್ಟೆಂಬರ್ನಲ್ಲಿ ಕಾಬೂಲ್ ಮೇಲೆ ತಾಲಿಬಾನ್ ಪಡೆಗಳು ನಿಯಂತ್ರಣ ಸಾಧಿಸಿದವು. ಈ ಹೊತ್ತಿಗೆ ಅಫ್ಘಾನಿಸ್ತಾನದಲ್ಲಿ 17 ನೇ ಯುದ್ಧ ಆರಂಭವಾಗಿತ್ತು. ಅಲ್ಲಿನ ಜನರು ಬೇಸತ್ತು ಹೋಗಿದ್ದರು. ಹತ್ತಾರು ಲಕ್ಷ ಜನ ನಿರಾಶ್ರಿತ ಶಿಬಿರ ಸೇರಿದ್ದರು. ಮುಂದೆ ಇದೇ ಅನಿವಾರ್ಯ ಪರಿಸ್ಥಿತಿ ತಾಲಿಬಾನ್ ಆಡಳಿತವನ್ನ ಒಪ್ಪಿಕೊಳ್ಳಲು ಕಾರಣವಾಯಿತು. 1994ರಿಂದ 1996ರವರೆಗೆ ತಾಲಿಬಾನ್ ಉಗ್ರಗಾಮಿ ಸಂಘಟನೆ ಪಟ್ಟ ಕಟ್ಟಿಕೊಂಡಿತ್ತು. ಆದರೆ 1996ರಲ್ಲಿ ಅಧಿಕೃತವಾಗಿ ಅಫ್ಘಾನಿಸ್ತಾನದ ನೆಲದಲ್ಲಿ ತನ್ನ ಸರ್ಕಾರ ರಚಿಸಿ, 2001ರವರೆಗೂ ಆಡಳಿತ ನಡೆಸಿತು. 2000 ರ ಅಂತ್ಯದ ವೇಳೆಗೆ, ತಾಲಿಬಾನ್ ಶೇ. 95ರಷ್ಟು ಭಾಗ ನಿಯಂತ್ರಿಸುತ್ತಿತ್ತು. ಅಂದರೆ ಕೇವಲ 4 ವರ್ಷದಲ್ಲಿ ಇಡೀ ಅಫ್ಘಾನ್ ತಾಲಿಬಾನ್ ವಶವಾಗಿ ಹೋಗಿತ್ತು.

ತಾಲಿಬಾನ್ ಸಿದ್ಧಾಂತ ಏನು..?
ಅಫ್ಘಾನಿಸ್ತಾನದಲ್ಲಿ ಇಸ್ಲಾಂ ಧರ್ಮೀಯರು ಬಹುಸಂಖ್ಯಾತರು. ಹೀಗಾಗಿ ಅಫ್ಘಾನ್ನಲ್ಲಿ ಷರಿಯಾ ಕಾನೂನು ಜಾರಿಗೆ ತರಬೇಕೆಂಬ ಉದ್ದೇಶ ತಾಲಿಬಾನ್ ಸಂಘಟನೆಯದ್ದು. 1996ರಲ್ಲಿ ತಾಲಿಬಾನ್ ಮೊದಲ ಬಾರಿಗೆ ಅಧಿಕಾರ ಹಿಡಿದಾಗ ಅಫ್ಘಾನ್ನಲ್ಲಿ ಷರಿಯಾ ಕಾನೂನು ಜಾರಿಗೆ ತಂದಿತ್ತು. ಷರಿಯಾ ಕಾನೂನು ಮಹಿಳೆಯರ ಮೇಲೆ ಸಾಕಷ್ಟು ನಿರ್ಬಂಧ ಹೇರಿತ್ತು. ಮಹಿಳೆಯರು ಕೆಲಸ ಮಾಡುವುದು, ಅಧ್ಯಯನ ಮಾಡುವುದಾಗಲಿ ಅಥವಾ ಒಬ್ಬರೇ ಮನೆಯಿಂದ ಹೊರ ಬರುವುದನ್ನು ಷರಿಯಾ ಕಾನೂನು ನಿರ್ಬಂಧಿಸಿತ್ತು. ಇಷ್ಟೇ ಅಲ್ಲದೆ ತಪ್ಪು ಮಾಡಿದವರಿಗೆ ಮರಣದಂಡನೆ ಮತ್ತು ಚಾಟಿ ಏಟಿನಂತಹ ಕಠಿಣ ಶಿಕ್ಷೆಗಳು ಮಾಮೂಲಿಯಾಗಿದ್ದವು. ಈ ಎಲ್ಲಾ ಕಾರಣಕ್ಕೆ ತಾಲಿಬಾನ್ ಆಡಳಿತಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರಲಿಲ್ಲ. ಪಾಕಿಸ್ತಾನ, ಚೀನಾ ಸೇರಿದಂತೆ ಕೆಲವೇ ಕೆಲವು ದೇಶಗಳು ಮಾತ್ರ ತಾಲಿಬಾನ್ ಆಡಳಿತ ಒಪ್ಪಿಕೊಂಡಿದ್ದವು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications