Shiradi Ghat ದುರಸ್ತಿ ಎನ್ನುವ ಬೃಹನ್ನಾಟಕಕ್ಕೆ ಮತ್ತೆ ರೆಕ್ಕೆಪುಕ್ಕ!
ಕರಾವಳಿ ಭಾಗದ ಜನರಿಗೆ ಶಿರಾಡಿ ಘಾಟ್ ದುರಸ್ಥಿ ಅಥವಾ ಸುರಂಗ ಮಾರ್ಗ ಎನ್ನುವುದು ಗಗನ ಕುಸುಮವಾಗಿಯೇ ಉಳಿದುಕೊಂಡಿದೆ. ಬಹುಷ: ಇಷ್ಟು ಕಡೆಗಣಿಸಲ್ಪಟ್ಟ ಹೆದ್ದಾರಿ ಇನ್ನೊಂದಿರಲಿಕ್ಕಿಲ್ಲ. ಇದಕ್ಕೆ ಯಾವ ಪಕ್ಷವೂ ಹೊರತಾಗಿಲ್ಲ. ಬಿಜೆಪಿ ಈ ಕಳಂಕದಿಂದ ಹೊರಬರಬಹುದು ಎನ್ನುವ ಜನರ ಲೆಕ್ಕಾಚಾರವೂ ದೂರವಾಗುತ್ತಿದೆ.
ಹಾಗಂತ, ಈ ಘಾಟ್ ದುರಸ್ಥಿಗೆ ಹಣ ಬಿಡುಗಡೆಯಾಗಿಲ್ಲ ಅಂತ ಇಲ್ಲ, ಕೋಟ್ಯಾಂತರ ರೂಪಾಯಿ ಪ್ರತೀ ವರ್ಷವೂ ಇದಕ್ಕೆ ಸುರಿಯಲ್ಪಡುತ್ತದೆ. ಆದರೆ, ರಾಜಕೀಯ ನಾಯಕರ ಇಚ್ಚಾಶಕ್ತಿಯ ಕೊರತೆಯಿಂದಾಗಿ ದುರಸ್ಥಿಗೆ ಖರ್ಚು ಮಾಡಿದ ಹಣ ಮಳೆಗಾಲದಲ್ಲಿ ಕೊಚ್ಚಿ ಹೋಗುತ್ತಿದೆ.
ಜನಾಕ್ರೋಶ ಹೆಚ್ಚಾದಾಗ ಪ್ರಯಾಣಿಕರ ಕಣ್ಣೊರೆಸುವ ತಂತ್ರದ ಭಾಗವಾಗಿ ದುರಸ್ಥಿ ಕೆಲಸ ನಡೆಯುತ್ತದೆ. ಸರಕಾರದಿಂದ ಹೊಸ ಘೋಷಣೆ ಹೊರಬೀಳುತ್ತದೆ. ಅಲ್ಲಿಗೆ, ಜನರ ಮೈಂಡ್ ಡೈವರ್ಟ್ ಮಾಡುವ ಕೆಲಸ ಶಾಸ್ತ್ರಬದ್ದವಾಗಿ ನಡೆಯುತ್ತದೆ.
ಮೋದಿ ಸರಕಾರದಲ್ಲಿ ಆಕ್ಟೀವ್ ಸಚಿವರಾಗಿರುವ ನಿತಿನ್ ಗಡ್ಕರಿಯವರು ದಶಕಗಳ ಈ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಹಾಡುವವರು ಎನ್ನುವ ನಿರೀಕ್ಷೆ ಮೊದಲು ಇದ್ದಷ್ಟು ಈಗ ಇಲ್ಲ. ಹತ್ತರ ಜೊತೆಗೆ ಹನ್ನೊಂದು ಎನ್ನುವ ಹಾಗೇ ಇವರ ಹೇಳಿಕೆಗಳೂ ಅದೇ ನಿಟ್ಟಿನಲ್ಲಿ ಸಾಗುತ್ತಿದೆ.

ಶಿರಾಡಿ ಘಾಟಿಗೆ ಪರ್ಯಾಯವಾಗಿ ಸುರಂಗ ಮಾರ್ಗ - ನಿತಿನ್ ಗಡ್ಕರಿ
ಶಿರಾಡಿ ಘಾಟಿಗೆ ಪರ್ಯಾಯವಾಗಿ ಸುರಂಗ ಮಾರ್ಗ ಎನ್ನುವ ನಿತಿನ್ ಗಡ್ಕರಿಯವರ ಹೇಳಿಕೆಯನ್ನು ಆ ಭಾಗದ ಜನರು ಆಶಾದಾಯಕವಾಗಿ ತೆಗೆದುಕೊಂಡಿದ್ದರು. ಆದರೆ, ಹೇಳಿಕೆ ನೀಡಿದ ಕೆಲವೇ ತಿಂಗಳಲ್ಲಿ ಈ ಕೆಲಸ ಕಾರ್ಯಸಾಧುವಲ್ಲ ಎನ್ನುವ ಹೇಳಿಕೆಯನ್ನು ನೀಡಿದರು. ಇಲ್ಲಿ ಸುರಂಗ ನಿರ್ಮಾಣ ಮಾಡುವುದು ಸವಾಲಿನ ಕೆಲಸ ಎಂದು ಗೊತ್ತಿದ್ದರೂ, ಗಡ್ಕರಿಯವರು ಕರ್ನಾಟಕ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಈ ಘೋಷಣೆಯನ್ನು ಮಾಡಿದರೇ ಎನ್ನುವ ಚರ್ಚೆ ಜೋರಾಗಿದೆ.

ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರವನ್ನು ಬರೆದಿದೆ
ಈಗ ಮತ್ತೊಂದು ಪ್ರಕಟಣೆಯನ್ನು ಹೊರಡಿಸಿರುವ ಕೇಂದ್ರ ಭೂಸಾರಿಗೆ ಇಲಾಖೆ, ಶಿರಾಡಿ ಘಾಟ್ (ಮಾರನಹಳ್ಳಿ - ಅಡ್ಡಹೊಳೆ) ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ 1,976 ಕೋಟಿ ರೂಪಾಯಿಯ ಬಿಡ್ ಅನ್ನು ಆಹ್ವಾನಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರವನ್ನು ಬರೆದಿದೆ. ಜೊತೆಗೆ, ಹದಿನೈದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 23 ಕಿ.ಮೀ ಉದ್ದದ ಸುರಂಗ ರಸ್ತೆಗೆ ಏಪ್ರಿಲ್ ತಿಂಗಳೊಳಗೆ ಡಿಪಿಆರ್ (ವಿಸ್ಕೃತ ಯೋಜನಾ ವರದಿ) ಅಂತಿಮಗೊಳಿಸುವುದಾಗಿ ಹೇಳಿದೆ. ಇದಕ್ಕೆ, ಪರಿಸರವಾದಿಗಳ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಕಟೀಲ್ ಅವರ ಟ್ವೀಟಿಗೆ ತರಹೇವಾರಿ ವ್ಯಂಗ್ಯ
ಕೂಸಿಗೆ ಮುನ್ನವೇ ಕುಲಾವಿ ಎನ್ನುವ ಹಾಗೆ, "ಬೆಂಗಳೂರು-ಮಂಗಳೂರು ಸಂಚಾರದ ಅವಧಿ ಕಡಿಮೆಯಾಗಿ, ಪ್ರಯಾಣ ಸುಗಮವಾಗಲಿದೆ. ಇದಕ್ಕೆ ಅನುವು ಮಾಡಿಕೊಡುತ್ತಿರುವ ಪ್ರಧಾನಿ ಶ್ರೀ @narendramodi ಅವರು ಹಾಗೂ ಕೇಂದ್ರ ಹೆದ್ದಾರಿ ಸಚಿವರಾದ ಶ್ರೀ @nitin_gadkari ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ಬಿಜೆಪಿ ಸರ್ಕಾರದ ಮಹತ್ವದ ಕೊಡುಗೆ" ಎಂದು ನಳಿನ್ ಕಟೀಲ್ ಹೇಳಿದ್ದಾರೆ. ಕಟೀಲ್ ಅವರ ಟ್ವೀಟಿಗೆ ತರಹೇವಾರಿ ವ್ಯಂಗ್ಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಮಂಗಳೂರು - ಉಡುಪಿ ಹೆದ್ದಾರಿಯಲ್ಲಿ ಜನರ ತೀವ್ರ ಪ್ರತಿಭಟನೆಯ ನಂತರ ಸುರತ್ಕಲ್ ಟೋಲ್ ಅನ್ನು ಹೆದ್ದಾರಿ ಪ್ರಾಧಿಕಾರ ನಿಲ್ಲಿಸಿ, ಹೆಜಮಾಡಿ ಟೋಲ್ ಶುಲ್ಕವನ್ನು ದುಪ್ಪಟ್ಟು ಮಾಡಿತ್ತು. ಆ ವೇಳೆಯೂ, ಕಟೀಲ್ ಸಾಕಷ್ಟು ಟೋಲಿಗೆ ಗುರಿಯಾಗಿದ್ದರು.

ಚತುಷ್ಫಥ ರಸ್ತೆ ನಿರ್ಮಾಣಕ್ಕಾಗಿ ಬಿಡ್ ಮತ್ತು ಡಿಪಿಆರ್
ಈಗ, ಸುರಂಗ ಮಾರ್ಗ ಮತ್ತು ಅದರ ಮೊದಲು ಚತುಷ್ಫಥ ರಸ್ತೆ ನಿರ್ಮಾಣಕ್ಕಾಗಿ ಬಿಡ್ ಮತ್ತು ಡಿಪಿಆರ್ ಕೆಲಸ ಮುಗಿಯಲು ಇನ್ನೆರಡು ತಿಂಗಳು ಬೇಕಾಗಬಹುದು. ಇದಾದ ನಂತರ ಪಶ್ಚಿಮ ಘಟ್ಟ ಪರಿಸರವಾದಿಗಳ ನಿಲುವು ಯಾವರೀತಿ ಇರಲಿದೆ ಎನ್ನುವುದು ಗಮನಿಸಬೇಕಾದ ವಿಚಾರ. ಸುರಂಗ ಮಾರ್ಗವನ್ನು ನಿರ್ಮಿಸಿದರೆ ಪ್ರಕೃತಿಗೆ ಇನ್ನಷ್ಟು ಹಾನಿಯಾಗುತ್ತೆ ಅನ್ನೋದು ಪರಿಸರ ಪ್ರೇಮಿಗಳ ಆತಂಕ ಕೋರ್ಟ್ ಮೆಟ್ಟಲೇರುವ ಸಾಧ್ಯತೆಯಿಲ್ಲದಿಲ್ಲ.

ದುರಸ್ತಿ ಎನ್ನುವ ಬೃಹನ್ನಾಟಕಕ್ಕೆ ಮತ್ತೆ ರೆಕ್ಕೆಪುಕ್ಕ
ಇದಲ್ಲದೇ, ಕರ್ನಾಟಕದಲ್ಲಿ ಈಗ ಚುನಾವಣಾ ವರ್ಷ. ಅವಧಿಪೂರ್ವ ಚುನಾವಣೆಯ ವಿಚಾರ ಸದ್ಯ ಮುನ್ನಲೆಯಲ್ಲಿದೆ. ಒಂದು ವೇಳೆ ಮೇ ತಿಂಗಳ ಮುನ್ನ ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆ ಜಾರಿಗೆಯಾಗಲಿದೆ. ಇದೆಲ್ಲವನ್ನು ಅರಿತೇ ಕೇಂದ್ರ ಮತ್ತು ರಾಜ್ಯ ಸರಕಾರ ಮತ್ತು ಸ್ಥಳೀಯ ಸಂಸದರು ಸುಮ್ಮನೇ ಒಂದು ಘೋಷಣೆಯನ್ನು ಮಾಡಿ, ಕರಾವಳಿ ಭಾಗದ ಜನರ ಕಿವಿಗೆ ಲಾಲ್ ಬಾಗ್ ಇಟ್ಟರೇ ಎನ್ನುವುದು ಜನರಿಗೆ ಇರುವ ಗೊಂದಲ.












Click it and Unblock the Notifications