ಉಡುಪಿಯ ಅಜ್ಜರಕಾಡಿನಲ್ಲಿ 35 ವರ್ಷಗಳ ಹಿಂದಿನ ಸ್ವಾತಂತ್ರ್ಯೋತ್ಸವದ ನೆನಪು
ಸರತಿ ಸಾಲಿನಲ್ಲಿ ಪಥಸಂಚಲನದ ರೀತಿಯಲ್ಲಿ ಶಿಸ್ತುಬದ್ದವಾಗಿ ಸಾಗುವ ವಿದ್ಯಾರ್ಥಿಗಳ ಮೆರವಣಿಗೆ, ಸಣ್ಣನೆ ಬೀಳುವ ಮಳೆ, ದಾರಿಯುದ್ದಕ್ಕೂ ಸಾಗುವ ಬೋಲೋ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ... 1983-84ರ ಸುಮಾರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯೆಂದರೆ, ಅಕ್ಷರಶಃ ಇದೊಂದು ಹಬ್ಬವಾಗಿತ್ತು.
ನಾನು ಓದಿದ ಉಡುಪಿಯ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತ್ಯೇಕವಾಗಿ ಧ್ವಜ ಹಾರಿಸುವ ಪದ್ದತಿಯಿರಲಿಲ್ಲ. ತಾಲೂಕಿನ (ಆಗ ಉಡುಪಿ ಜಿಲ್ಲಾ ಕೇಂದ್ರವಾಗಿರಲಿಲ್ಲ) ಎಲ್ಲಾ ಕನ್ನಡ ಶಾಲೆಗಳು, ಕಾನ್ವೆಂಟ್ ಸ್ಕೂಲಿನ ವಿದ್ಯಾರ್ಥಿಗಳು ಒಂದೆಡೆ ಸೇರಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿತ್ತು.
ಸ್ವಾತಂತ್ರ್ಯ ದಿನಾಚರಣೆ : ಮಳೆಯ ಹಾಡು, ಅರ್ಧ ಭಾಷಣ, ಲಾಡು!
ಪ್ರತೀ ಶಾಲೆಯ ವಿದ್ಯಾರ್ಥಿಗಳು ಬೆಳಗ್ಗೆ ಎಂಟು ಗಂಟೆ ಸರಿಯಾಗಿ ನಗರದ ಅಜ್ಜರಕಾಡು ಗಾಂಧಿ ಮೈದಾನದಲ್ಲಿ ಕಡ್ಡಾಯವಾಗಿ ಸೇರ ಬೇಕಾಗಿತ್ತು. ನಮ್ಮ ಶಾಲೆಯಿಂದ ಅಜ್ಜರಕಾಡು ಮೈದಾನಕ್ಕೆ ಸುಮಾರು ಎರಡೂವರೆ ಕಿಲೋಮೀಟರ್. ಏಳು ಗಂಟೆಗೆ ಶಾಲೆಯ ಮಾಸ್ತರ ನಮ್ಮನ್ನೆಲ್ಲಾ ಶಿಸ್ತಿನಿಂದ ಸರತಿಯಲ್ಲಿ ನಿಲ್ಲಿಸುತ್ತಿದ್ದರು. ಖಾಕಿ ಚಡ್ಡಿ, ಬಿಳಿ ಅಂಗಿ, ಚಡ್ಡಿ ಲೂಸಾಗದಿರಲಿ ಎಂದು ಅದಕ್ಕೊಂದು ಬೆಲ್ಟ್.
ಸಮವಸ್ತ್ರದ ಜೊತೆಗಳು ನಮ್ಮಲ್ಲಿ ಒಂದಿರಲಿ ಎರಡಿರಲಿ, ಶುಭ್ರವಾಗಿ ಬರಬೇಕಿತ್ತು. ಇದಕ್ಕೆ ತಪ್ಪಿದರೆ ಯಾವ ಸಬೂಬನ್ನೂ ಶಿಕ್ಷಕರು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಶಿಸ್ತಾಗಿ ಬರದಿದ್ದರೆ ಮರದ ಅಡಿಕೋಲು (ಸ್ಕೇಲ್) ನಿಂದ ಕೈತೋರಿಸು ಎಂದು ರಪ್ಪನೇ ಬೀಸುತ್ತಿದ್ದರು. ಇದರ ಅನುಭವ ನನ್ನ ಸಹಪಾಠಿಗಳಿಗೆ ಬಹಳಷ್ಟು ಬಾರಿ ಆಗಿತ್ತು. ಒಂದು ಬಾರಿ ಇಸ್ತ್ರಿ ಹಾಕದ ಯೂನಿಫಾರಂ ಹಾಕಿಕೊಂಡು ಹೋಗಿದ್ದೆ. ಆದ್ರೆ ಅದು ಹೇಗೂ, ಟೀಚರ್ ಕಣ್ಣಿಗೆ ಬಿದ್ದಿರಲಿಲ್ಲ.
ಬಾಲ್ಯದ ನೆನಪು: ಹೊರಗೆ ಮಳೆ, ಒಳಗೆ ಆಹಾ! ಪತ್ರೊಡೆ, ಕಳಲೆ
ಬೆಳಗ್ಗೆ ಏಳು ಗಂಟೆಗೆ ನಮ್ಮ ಶಾಲೆಯಲ್ಲಿ ಒಂದು ರೌಂಡ್ ರಾಷ್ಟ್ರಗೀತೆ ಹಾಡಿದ ನಂತರ ವಿದ್ಯಾರ್ಥಿಗಳ ಮೆರವಣಿಗೆ ಅಜ್ಜರಕಾಡು ಮೈದಾನದತ್ತ ಸಾಗುತ್ತಿತ್ತು. ದಾರಿಯುದ್ದಕ್ಕೂ ದೇಶಭಕ್ತಿ ಮೊಳಗಿಸುವ ಘೋಷಣೆ. ಸಣ್ಣನೇ ಮಳೆ ಬೀಳುತ್ತಿದ್ದರೂ ಮೆರವಣಿಗೆ ನಿಲ್ಲುತ್ತಿರಲಿಲ್ಲ. ಅಲ್ಲಲ್ಲಿ ದಾರಿಯುದ್ದಕ್ಕೂ ಕೆಲವರು ಚಾಕೋಲೇಟ್, ಸಿಹಿತಿಂಡಿ, ಬ್ರೆಡ್, ರಸ್ಕ್, ಬೆಳಗ್ಗೆನೇ ಪಾನಕ ನೀಡುತ್ತಿದ್ದದ್ದು ವರುಷ ಕಳೆದು ಮೂವತ್ತೈದರ ಮೇಲಾದರೂ ಮನಸ್ಸಿನಲ್ಲಿ ಹಾಗೇ ಅಚ್ಚಳಿಯದೇ ಉಳಿದುಕೊಂಡಿದೆ.
ಮೆರವಣಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ಬೇರೆ ಶಾಲೆಯ ವಿದ್ಯಾರ್ಥಿಗಳೂ ಸೇರಿಕೊಳ್ಳುತ್ತಿದ್ದರು. ಆಗ ಭಾರತ್ ಮಾತಾ ಕೀ ಜೈ ಘೋಷಣೆ ಮುಗಿಲು ಮುಟ್ಟುತ್ತಿತ್ತು. ಘೋಷಣೆ ಕೂಗಿ ಕೂಗಿ ಸುಸ್ತಾದಾಗ.. ಮತ್ತೆ ಮಾಸ್ತರ ನಮಗೆ ಸ್ಪೂರ್ತಿ ತುಂಬುತ್ತಿದ್ದರು. ಬ್ಯಾಂಡ್ ನೊಂದಿಗೆ ಸುಮಾರು 45-50 ನಿಮಿಷದ ಮೆರವಣಿಗೆಯ ನಂತರ ಅಜ್ಜರಕಾಡು ಮೈದಾನದಲ್ಲಿ ಸೇರುತ್ತಿದ್ದೆವು. ಪ್ರತೀ ಶಾಲೆಗಳಿಗೂ ಧ್ವಜಾರೋಹಣ ಮಾಡುವ ಸುತ್ತ ಒಂದು ಸ್ಥಳ ನಿಗದಿ ಪಡಿಸುತ್ತಿದ್ದರು.
ಸುಮಾರು ಒಂದರಿಂದ ಎರಡು ಸಾವಿರ ವಿದ್ಯಾರ್ಥಿಗಳ ಘೋಷಣೆಗಳು ಮೈದಾನದಲ್ಲಿ ಮುಗಿಲು ಮುಟ್ಟುತ್ತಿತ್ತು. ಶಾಸಕರು, ತಾಲೂಕು ಪಂಚಾಯತಿಯ ಅಧಿಕಾರಿಗಳ ಸಮ್ಮುಖದಲ್ಲಿ ಧ್ವಜಾರೋಹಣ, ನಂತರ ಬ್ಯಾಂಡಿನ ಜೊತೆಗೆ ಇಡೀ ವಿದ್ಯಾಥಿಗಳು ಒಂದೇ ಸ್ವರದಲ್ಲಿ ರಾಷ್ಟ್ರಗೀತೆ ಹಾಡುವಾಗ ನಮಗರಿವಿಲ್ಲದೇ ರೋಮಾಂಚನಗೊಳ್ಳುತ್ತಿದ್ದೆವು.
ಇದಾದ ನಂತರ ಹಿರಿಯರು ಮತ್ತು ಪ್ರಮುಖರು ಭಾಷಣ, ಕೆಲವೊಮ್ಮೆ ಯಾವಾಗ ಭಾಷಣ ಮುಗಿಸುತ್ತಾರಪ್ಪಾ ಎಂದು ನಾವುನಾವು ಮುಖಮುಖ ನೋಡುತ್ತಿದ್ದೆವು. ಈ ಎಲ್ಲಾ ಕಾರ್ಯಕ್ರಮದ ನಂತರ ಉಡುಪಿ ಪರ್ಯಾಯ ಮಠದಿಂದ ಬಂದ ಅಷ್ಟೂ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಗುತ್ತಿತ್ತು, ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತಿತ್ತು.
ಈ ಎಲ್ಲಾ ಕಾರ್ಯಕ್ರಮಗಳು 9.45-10ಗಂಟೆಗೆ ಮುಗಿಯುತ್ತಿತ್ತು. ಶಾಲೆಯಿಂದ ಕರೆದುಕೊಂಡು ಬರುವಾಗ ಮಾತ್ರ ನಮ್ಮ ಜೊತೆ ಶಿಕ್ಷಕರು ಇರುತ್ತಿದ್ದರು, ಹೋಗುವಾಗ ಇರುತ್ತಿರಲಲ್ಲ. ಹಾಗಾಗಿ, ಕಾರ್ಯಕ್ರಮ ಮುಗಿದ ನಂತರ ನಾವೆಲ್ಲಾ ಸ್ವತಂತ್ರ ಹಕ್ಕಿಗಳು, ನಮ್ಮದೇ ದರ್ಬಾರು. ಅಜ್ಜರಕಾಡು ಮೈದಾನ ವಿಶಾಲವಾಗಿದ್ದರಿಂದ ಜಾರು ಬಂಡಿ, ನೂರು ಮೀಟರ್ ಓಟ, ಕುಟ್ಟಿದೊಣ್ಣೆ (ಗಿಲ್ಲಿದಂಡು), ಲಗೋರಿ, ಖೋ..ಖೋ..ಮನಸ್ಸೋ ಇಚ್ಚೆ ಆಟವಾಡಿ ಮಧ್ಯಾಹ್ನದ ಹೊತ್ತಿಗೆ ಮನೆಗೆ ಸೇರುತ್ತಿದ್ದೆವು.
ಶಾಲಾ ಜೀವನದ ವೇಳೆ ಪ್ರತೀ ಸ್ವಾತಂತ್ರ್ಯ ದಿನಾಚರಣೆಯ ದಿನದಂದೂ ಅಪ್ಪನಿಂದ ಒಂದೆರಡು ಏಟು ಖಂಡಿತ ಬೀಳುತ್ತಿತ್ತು. ಯಾಕೆಂದರೆ, ಜಾರುಬಂಡಿಯಲ್ಲಿ ಆಡಿ..ಆಡಿ ಚಡ್ಡಿಯ ಬ್ಯಾಕ್ ಸೈಡಿನ ಎರಡೂ ಭಾಗದಲ್ಲಿ ಎರಡು ರಂಧ್ರವಾಗುತ್ತಿತ್ತು. ಮೂವತ್ತೈದು ವರ್ಷದ ಹಿಂದಿನ ರಾಷ್ಟ್ರಹಬ್ಬ ಆಚರಣೆ ಇನ್ನೂ ಕಣ್ಣುಮುಂದೆ ಬಂದು ಹೋಗುತ್ತದೆ.
ಈ ಲೇಖನವನ್ನು ಬರೆಯುವಾಗ, ಮತ್ತೆ ಆ ನೆನಪಿನಂಗಣಕ್ಕೆ ಜಾರಿದೆ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..