ದೇವಸ್ಥಾನ- ಮಠ ಸುತ್ತಿ, ಮಂಡಕ್ಕಿ ತಿಂದು ಜನಕ್ಕೆ ಹತ್ತಿರವಾದರೆ ರಾಹುಲ್!
Recommended Video
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸುತ್ತು ಹೊಡೆದಿದ್ದಾರೆ. ಭೋರ್ಗರೆವ ಭಾಷಣ ಮಾಡಿದ್ದಾರೆ. ಮೋದಿ ಅವರನ್ನು ಹಿಗ್ಗಾಮುಗ್ಗಾ ತೆಗಳಿದ್ದಾರೆ. ಬಿಜೆಪಿಯ ರಾಜ್ಯ ನಾಯಕರನ್ನು ಎಗಾದಿಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಈ ಕಾರಣಕ್ಕೆ ಅವರು ನಮಗೆ ಅಂದರೆ ಕನ್ನಡಿಗರಿಗೆ ಹತ್ತಿರವಾದರಾ? ಹತ್ತಿರಾ ಆಗ್ತಾರಾ? ಎಂಬ ಪ್ರಶ್ನೆ ಕೇಳಿಕೊಂಡರೆ ಉತ್ತರ ಸಿಗಲ್ಲ.
ಆದರೆ, ರಾಹುಲ್ ಗಾಂಧಿ ಹುಲಿಗೆಮ್ಮ ದೇವಸ್ಥಾನಕ್ಕೆ ಹೋದರು. ಬೀದರ್ ನಲ್ಲಿ ಬಸವನ ಬಾಗೇವಾಡಿಯ ಅನುಭವ ಮಂಟಪಕ್ಕೆ ಭೇಟಿ ನೀಡಿದರು. ಮೌಲಾ ಸಾಬ್ ಅವರ ದುಕಾನಿನಲ್ಲಿ ಮಿರ್ಚಿ ಬಜ್ಜಿ- ಮಂಡಕ್ಕಿ ಒಗ್ಗರಣೆ ರುಚಿ ನೋಡಿದರು. ತಮ್ಮದೇ ಪಕ್ಷದ ಅತಿರಥ- ಮಹಾರಥ ರಾಜ್ಯ ನಾಯಕರಿಗೆ ತಾವೇ ಬೋಂಡ-ಬಜ್ಜಿ ಹಂಚಿದರು. ಇಂಥ ನಡವಳಿಕೆ ಸಹಜವಾಗಿ ಒಬ್ಬ ವ್ಯಕ್ತಿಯ ಬಗ್ಗೆ ಕುತೂಹಲ ಹುಟ್ಟು ಹಾಕುತ್ತದೆ.
ಸಮೀಕ್ಷೆ: ರಾಹುಲ್ ಮುಗುಳು ನಗೆ, ಮೋದಿಯದ್ದು ಅಂತಿಮ ನಗೆ
ಆತನೂ ನಮ್ಮಂತೆಯೇ ಎಂಬ ಮೊದಲ ಭಾವನೆ ಮೂಡಿಸುತ್ತದೆ. ದೂರದ ದಿಲ್ಲಿಯಲ್ಲಿರುವ ಯುವರಾಜ ನಮ್ಮೂರಿನ ಶೆಡ್ಡಿನ ಅಂಗಡಿಯಲ್ಲಿ ಕೂತು ಪೊಟ್ಟಣ ಬಿಚ್ಚಿದ ಬಜ್ಜಿ ತಿನ್ನುವುದೇನಿತ್ತು? ಇದು ಬರೀ ಎಲೆಕ್ಷನ್ ಗಾಗಿ ಮಾಡಿರುವುದೆ? ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಬಗ್ಗೆ ನಮಗೆ ಅಂದರೆ ಜನ ಸಾಮಾನ್ಯರ ಕಣ್ಣಿಗೆ ಕಂಡಂತೆ ಎಂಬ ಹಾಗೆ ವಿಶ್ಲೇಷಣೆ ಮಾಡುವ ಪ್ರಯತ್ನ ಇದು. ಇಲ್ಲಿನ ಅಂಶಗಳಿಗೆ ಓದುಗರು ತಮ್ಮ ಅಭಿಪ್ರಾಯವನ್ನೂ ಜಮೆ ಮಾಡಬಹುದು.
ಮೋದಿ ವಿರುದ್ಧ ಪರಿಣಾಮಕಾರಿ ಭಾಷಣ
ಬಳ್ಳಾರಿಯ ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿದವರು ದಿನೇಶ್ ಗುಂಡೂರಾವ್. ಅದು ಮೂಲ ಭಾಷಣಕ್ಕಿಂತ ಹೆಚ್ಚಾಗಿಯೇ ಪರಿಣಾಮಕಾರಿಯಾಗಿತ್ತು. ತಾನು ಹೇಳಿದ ಪುಟ್ಟ ವಾಕ್ಯ ಇದೇನು ಇಷ್ಟು ಹೊತ್ತು ಆಗುತ್ತದೆಯೇ ಕನ್ನಡದಲ್ಲಿ ಅಂತ ಸ್ವತಃ ಕಣ್ಣು ಕಣ್ಣು ಬಾಯಿ ಬಾಯಿ ಬಿಟ್ಟರು ರಾಹುಲ್ ಗಾಂಧಿ. ಆದರೆ ಮೋದಿ ವಿರುದ್ಧದ ಅವರ ಟೀಕೆ ಪರಿಣಾಮಕಾರಿಯಾಗಿತ್ತು. ಮುಖ್ಯವಾಗಿ ಅವರೇನು ಮಾತನಾಡಿದರೋ ಅದು ರಾಜ್ಯದ ಜನಕ್ಕೆ ಅರ್ಥವಾಗುವಂತೆ ಅನುವಾದ ಮಾಡಿಸಲಾಯಿತು.
In Pics : ಬೀದರ ಅನುಭವ ಮಂಟಪದಲ್ಲಿ ಶರಣೆಂದ ರಾಹುಲ್
ಭವಿಷ್ಯದ ಬಗ್ಗೆ ದೃಷ್ಟಿ ಬೇಕು
ಹೌದು, ನಾವು ಇತಿಹಾಸದಲ್ಲಿ ಹೀಗಾಗಿತ್ತು. ಹಾಗೆ ಮಾಡಿದ್ದರು ಎಂದು ಕಾರಿನ ಮುಂಭಾದಲ್ಲಿನ ಕನ್ನಡಿ ನೋಡಿಕೊಂಡು ಡ್ರೈವಿಂಗ್ ಮಾಡಿದಂತಿದೆ ಮೋದಿ ವರಸೆ ಎಂದರು ರಾಹುಲ್. ಇನ್ನು ಸಿದ್ದರಾಮಯ್ಯ ಅವರ ದೃಷ್ಟಿ ಭವಿಷ್ಯದ ಕಡೆಗಿದೆ. ಒಬ್ಬ ಆಡಳಿತಗಾರನಿಗೆ ಇತಿಹಾಸದ ಅರಿವು ಬೇಕು. ಆದರೆ ಭವಿಷ್ಯದ ಬಗ್ಗೆ ದೃಷ್ಟಿ ಇರಬೇಕು ಎಂಬ ಸೊಗಸಾದ ಮಾತಾಡಿದರು.
ಮಹಾದಾಯಿ ಎಂಬ ಎರಡು ಅಲುಗಿನ ಕತ್ತಿ
ಮಹಾದಾಯಿ ಬಗ್ಗೆ ಮಾತನಾಡುವುದು ಎರಡು ಅಲುಗಿನ ಕತ್ತಿ ಎಂದು ಯಾರೋ ಅದಾಗಲೇ ರಾಹುಲ್ ಗೆ ಹೇಳಿದ್ದರೋ ಏನೋ ಆದ್ದರಿಂದಲೇ ಮೋದಿ ರೀತಿಯಲ್ಲೇ ಇವರೂ ಆ ಬಗ್ಗೆ ತುಟಿ ಬಿಚ್ಚಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕೋಟಾ ಅಡಿಯಲ್ಲಿ ಅದೇ ಮಹಾದಾಯಿ ವಿಚಾರವಾಗಿ ಮೋದಿಯವರನ್ನು ಗೇಲಿ ಮಾಡಿ, ತಮ್ಮ ಜವಾಬ್ದಾರಿ ಮುಗಿಸಿಕೊಂಡರು.
ಯಾರದಾದರೂ ಅಪ್ಪಣೆ ಬೇಕಾ?
ಉತ್ತರ ಕರ್ನಾಟಕದಲ್ಲಿ ತನ್ನದೇ ಆದ ಮಹತ್ವ, ಪ್ರಾಮುಖ್ಯ ಹೊಂದಿರುವ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಹೋದದ್ದನ್ನು ಟೆಂಪಲ್ ಅಥವಾ ಹಿಂದೂ ಪಾಲಿಟಿಕ್ಸ್ ಎಂದು ಕರೆಯುವುದಾದರೆ, ಸದಾ ಇಂಥ ಕಡೆಯೇ ತೆರಳುವವರು ಅದರ ಗುತ್ತಿಗೆ ಹಿಡಿದಿದ್ದಾರೆಯೇ ಎಂಬ ಪ್ರಶ್ನೆ ಬರುವುದಿಲ್ಲವಾ? ಇನ್ನು ದೇವಸ್ಥಾನಕ್ಕೋ, ಚರ್ಚ್ ಗೋ ಅಥವಾ ಮಸೀದಿಗೋ ಹೋಗಲು ಯಾರದಾದರೂ ಅಪ್ಪಣೆ ಬೇಕಾ?
ಸರಳ ಜುಬ್ಬಾ, ಸಾಮಾನ್ಯ ರಾಹುಲ್
ಇನ್ನು ಸರಳವಾದ ಜುಬ್ಬಾ ತೊಟ್ಟಿದ್ದ, ಸಾಮಾನ್ಯರಂತೆ ಕಾಣುತ್ತಿದ್ದ ರಾಹುಲ್ ಗಾಂಧಿ ಮಕ್ಕಳ ಬಳಿ ತುಂಬ ಸುಲಭವಾಗಿ ಬೆರೆಯಲು ಸಾಧ್ಯವಾಯಿತು ಅನ್ನೋದು ಕೂಡ ಕರ್ನಾಟಕ ಪ್ರವಾಸದ ಹೈಲೈಟ್. ಹಾಗೆ ನೋಡಿದರೆ ಗುಜರಾತ್ ನಲ್ಲಿ ಕೂಡ ಹೆಣ್ಣುಮಗಳೊಬ್ಬಳ ಮನವಿ ಮೇರೆಗೆ ಸೆಲ್ಫಿ ತೆಗೆಸಿಕೊಂಡು ಸುದ್ದಿಯಾಗಿದ್ದರು ರಾಹುಲ್. ಇದು ಬದಲಾವಣೆಯನ್ನು ಸೂಚಿಸುತ್ತಲ್ಲವೆ!
ಕುಟುಂಬಗಳಿಗೆ ಸಾಂತ್ವನ
ಕಲಬುರಗಿಯಲ್ಲಿ ತೀರಿಕೊಂಡ ಪಕ್ಷದ ಹಿರಿಯ ನಾಯಕರ ಮನೆಗಳಿಗೆ ಭೇಟಿ ನೀಡಿದ ರಾಹುಲ್, ಆ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇಂಥ ನಡೆ ಕಾರ್ಯಕರ್ತರಲ್ಲಿ ಒಂದು ಆತ್ಮವಿಶ್ವಾಸ ಮೂಡಿಸುತ್ತದೆ. ದುಃಖದಲ್ಲಿದ್ದಾಗ ಪಕ್ಷದ ನಾಯಕ ಮನೆ ಬಾಗಿಲವರೆಗೆ ಬಂದಿದ್ದು ಆತ್ಮಸ್ಥೈರ್ಯ ನೀಡುತ್ತದೆ. ಆ ವಿಷಯದಲ್ಲೂ ರಾಹುಲ್ ಒಂದು ಅಂಕ ಹೆಚ್ಚು ಪಡೆದರು.
ಲಿಂಗಾಯತ ಸಮುದಾಯಕ್ಕೆ ಸಂದೇಶ
ಇನ್ನು ಬೀದರ್ ನ ಬಸವನ ಬಾಗೇವಾಡಿಗೆ ನೀಡಿದ ಭೇಟಿಯಂತೂ ರಾಜ್ಯದಲ್ಲಿ ತುಂಬ ಮುಖ್ಯವಾಗಿರುವ ಲಿಂಗಾಯತ ಸಮುದಾಯವನ್ನು ಮೆಚ್ಚಿಸುವ ಸಲುವಾಗಿಯೇ ತೆರಳಿದ್ದು. ಬಸವಣ್ಣನ ನಾಡಿನಲ್ಲಿ ಎಂದು ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಆ ಸ್ಥಳಕ್ಕೆ ತೆರಳುವುದು, ಅಲ್ಲಿನ ಜನರ ಜತೆ ಬೆರೆಯುವುದು ನಾಯಕನಾದ ವ್ಯಕ್ತಿಗೆ ಹೆಚ್ಚು ಪ್ಲಸ್ ಆಗುತ್ತದೆ.
ನಾಟಿ ಕೋಳಿ- ನರಸಿಂಹ ಸ್ವಾಮಿ ದೇವಸ್ಥಾನ
ನಾಟಿ ಕೋಳಿ ತಿಂದು ರಾಹುಲ್ ಗಾಂಧಿ ನರಸಿಂಹ ದೇವಸ್ಥಾನಕ್ಕೆ ಹೋದರು ಎಂದು ಪತ್ರಿಕೆಯೊಂದರ ವರದಿ ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಆಕ್ಷೇಪ ಮಾಡಿದರು. ಈ ವಿಚಾರದಲ್ಲಿ ಎಂಥವರಿಗೂ ಭಾವನಾತ್ಮಕ ನಂಟು ಇರುತ್ತದೆ ಹೌದು. ಆದರೆ ರಾಹುಲ್ ಗಾಂಧಿ ಅವರು ಮೋದಿ ಬಗ್ಗೆ, ರಾಜ್ಯ ನಾಯಕರ ಭ್ರಷ್ಟಾಚಾರದ ಬಗ್ಗೆ ಮಾಡಿದ ಆರೋಪಗಳಿಗೆ ಉತ್ತರ ಹೇಳಬೇಕಾದವರು ನಾಟಿ ಕೋಳಿ- ನರಸಿಂಹ ದೇವರ ದೇವಸ್ಥಾನ- ಹಿಂದೂಗಳ ಮನಸಿಗೆ ಘಾಸಿ ಅತ ಅದೇ ಹಳೇ ಪಿಟೀಲೇ ಬಾರಿಸಿದರೆ ಇವರಿಗೆ ಎದುರಾಳಿಗಳನ್ನು ಎದುರಿಸುವುದಕ್ಕೆ ವಿಷಯವೇ ಇಲ್ಲವೇ ಅನ್ನಿಸಲ್ಲವಾ?