ಉಪ ಚುನಾವಣೆ: ಸಿಎಂ ಬೊಮ್ಮಾಯಿ ಬೆನ್ನಿಗೆ ನಿಲ್ಲದ ಬಿಜೆಪಿ ನಾಯಕರ ಪಟ್ಟಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಸಿಂಧಗಿ ಮತ್ತು ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ನಾಯಕರಿಂದ ನಿರೀಕ್ಷಿತ ಬೆಂಬಲ ಅವರಿಗೆ ಸಿಗಲಿಲ್ಲ ಎನ್ನುವುದು ಬಹಿರಂಗ ಪ್ರಚಾರ ಮುಗಿದ ನಂತರ ಕಾಣುವ ಸತ್ಯ.
ಇದಕ್ಕೆ ಕಾರಣ ಏನಿರಬಹುದು ಎಂದಾಗ ಹಲವು ಆಯಾಮಗಳು ಎದುರಾಗುತ್ತವೆ. ಒಂದೋ, ಸ್ಥಳೀಯ ನಾಯಕರ ಮೇಲೆ ವಿಶ್ವಾಸವನ್ನು ಇಟ್ಟು ಚುನಾವಣೆ ಎದುರಿಸಿ ಎನ್ನುವ ಫರ್ಮಾನು ವರಿಷ್ಠರಿಂದ ಬಂದಿರಬಹುದು.
ಹಾನಗಲ್: ಬಹಿರಂಗ ಪ್ರಚಾರದ ಕೊನೆಯ ದಿನ ಬಿಜೆಪಿಗೆ ಭಾರೀ ಹಿನ್ನಡೆ
ಇಲ್ಲವೇ, ವಲಸೆ ಬಿಜೆಪಿ ಸಚಿವರು ಅತ್ಯಂತ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದದ್ದು, ಮೂಲ ಬಿಜೆಪಿ ಸಚಿವರಿಗೆ ಸಹ್ಯ ಆಗದೇ ಇರುವಂತದ್ದು. ಇದೂ, ಅಲ್ಲದಿದ್ದರೆ, ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ ಎನ್ನುವ ಹೈಕಮಾಂಡ್ ಹೇಳಿಕೆಯಿಂದಾಗಿ ಹಿರಿಯ ಬಿಜೆಪಿ ಮುಖಂಡರಿಗೆ ಬೇಸರ ಆಗಿದ್ದರೂ ಆಗಿರಬಹುದು.
ಸಿಂಧಗಿಯಲ್ಲಿ ಗೌಡ್ರ ಪ್ರಚಾರದ ಹಿಂದೆ ಮುಂದಾಲೋಚನೆಯ ಪರಮಾವಧಿ
ಅದೇನೇ ಇರಲಿ, ಪ್ರತಿಷ್ಠೆಯ ಉಪ ಚುನಾವಣೆಯನ್ನು ಸಂಪೂರ್ಣವಾಗಿ ಸಿಎಂ ಬೊಮ್ಮಾಯಿ ಹೆಗಲ ಮೇಲೆ ಹೊತ್ತು ಪ್ರಚಾರ ನಡೆಸಿದ್ದಾರೆ. ಬಹಿರಂಗ ಪ್ರಚಾರದ ನಂತರದ ಕೆಲಸಗಳಿಗೂ ಕ್ಷೇತ್ರದ ಹೊರವಲಯದಲ್ಲಿ ಬಿಜೆಪಿ ಸಚಿವರುಗಳು ಬೀಡು ಬಿಟ್ಟಿದ್ದಾರೆ ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಉಸ್ತುವಾರಿಗಳಿಗೆ ಅಗತ್ಯ ಸೂಚನೆ/ಸಲಹೆಗಳನ್ನು ಸಿಎಂ ಬೊಮ್ಮಾಯಿ ನೀಡಿದ್ದರು
ಉಪ ಚುನಾವಣೆಯ ಪ್ರಚಾರದ ಜವಾಬ್ದಾರಿಯನ್ನು ಒಂದೊಂದು ಪಂಚಾಯತಿಗೆ ಒಬ್ಬೊಬ್ಬರು ಸಚಿವರಂತೆ ಬಿಜೆಪಿ ರಾಜ್ಯ ಬಿಜೆಪಿ ಘಟಕ ನೇಮಿಸಿತ್ತು. ಜೊತೆಗೆ, ಸಿಎಂ ಬೊಮ್ಮಾಯಿಯವರು ಖುದ್ದು ತಾವೇ ಮುಂದೆ ನಿಂತು ಉಸ್ತುವಾರಿಗಳಿಗೆ ಅಗತ್ಯ ಸೂಚನೆ/ಸಲಹೆಗಳನ್ನು ನೀಡಿದ್ದರು. ಆದರೆ, ಮೂಲ ಬಿಜೆಪಿ ಮುಖಂಡರು ಮನಸಿಟ್ಟು ಕೆಲಸವನ್ನು ಮಾಡುತ್ತಿಲ್ಲ ಎನ್ನುವ ದೂರು ದೆಹಲಿಯ ವರೆಗೆ ಹೋಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ವಲಸಿಗ ಸಚಿವರ ವಿಚಾರದಲ್ಲಿ ಈ ಅನ್ವಯ ಮಾತು ಅನ್ವಯವಾಗುತ್ತಿರಲಿಲ್ಲ.
ಉಪ ಚುನಾವಣೆಗೆ ಎಷ್ಟು ನಾಯಕರು ಬೇಕೋ, ಅದನ್ನು ಪಕ್ಷ ಬಳಸಿಕೊಂಡಿದೆ
ಉಪ ಚುನಾವಣೆಯ ಉಸ್ತುವಾರಿಯಲ್ಲಿರುವ ಮೂಲ ಬಿಜೆಪಿಗರಲ್ಲಿ ಶ್ರೀರಾಮುಲು, ವಿ.ಸೋಮಣ್ಣ, ಸಿ.ಸಿ. ಪಾಟೀಲ್ ಮಾತ್ರ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದನ್ನು ಕಾಣಬಹುದಾಗಿತ್ತು. ಕೆ.ಎಸ್. ಈಶ್ವರಪ್ಪ, ಡಾ. ಅಶ್ವಥ್ ನಾರಾಯಣ, ಆರ್. ಅಶೋಕ್ ಮುಂತಾದವರು ಚುರುಕಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿರಲಿಲ್ಲ. ಬೊಮ್ಮಾಯಿಯವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಅಶೋಕ್ ಕೂಡಾ ಒಂದೋ ಎರಡೋ ದಿನ ಪ್ರಚಾರ ಮಾಡಿ ಬಂದಿದ್ದರು. "ಎರಡು ಉಪ ಚುನಾವಣೆಗೆ ಎಷ್ಟು ನಾಯಕರು ಬೇಕೋ, ಅದನ್ನು ಪಕ್ಷ ಬಳಸಿಕೊಂಡಿದೆ. ಸಚಿವ ಸಂಪುಟದ ಎಲ್ಲರೂ ಪ್ರಚಾರಕ್ಕೆ ಹೋಗಬೇಕೆಂದು ಏನೂ ಇಲ್ಲ" ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸಮರ್ಥಿಸಿಕೊಂಡಿದ್ದರು.
ಜೋಶಿಯವರು ಬಂದು ಹೋಗಿದ್ದಾರೆ, ಇದು ಉಪ ಚುನಾವಣೆ
ಇನ್ನು, ರಾಜ್ಯದಿಂದ ಐವರು ಕೇಂದ್ರ ಸಚಿವರಿದ್ದಾರೆ. ಅದರಲ್ಲಿ ಪ್ರಲ್ಹಾದ್ ಜೋಶಿ ಒಂದು ದಿನ ಪ್ರಚಾರ ಮಾಡಿ ಹೋಗಿದ್ದಾರೆ. ಇನ್ನು, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್ ಅವರು ಕ್ಷೇತ್ರದ ಕಡೆ ಹೋಗಲೇ ಇಲ್ಲ. "ಜೋಶಿಯವರು ಬಂದು ಹೋಗಿದ್ದಾರೆ, ಇದು ಉಪ ಚುನಾವಣೆ. ನಾವೇ ನೋಡಿಕೊಳ್ಳುತ್ತೇವೆ"ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.
ಸಿಎಂ ಬೊಮ್ಮಾಯಿ ಬೆನ್ನಿಗೆ ನಿಲ್ಲದ ಬಿಜೆಪಿ ನಾಯಕರ ಪಟ್ಟಿ
ಕೇಂದ್ರ ಸಚಿವ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಿಎಂ ಬಸವರಾಜ ಬೊಮ್ಮಾಯಿ ಜೊತೆಗಿನ ಉತ್ತಮ ಬಾಂಧವ್ಯದಿಂದ ಪ್ರಚಾರಕ್ಕೆ ಬಂದಿದ್ದಾರೆ ಎನ್ನುವ ಮಾತಿದೆ. ಪ್ರಚಾರ ಮತ್ತು ಕಾರ್ಯತಂತ್ರದ ವಿಚಾರದಲ್ಲಿ ವಲಸೆ ಬಿಜೆಪಿ ಸಚಿವರುಗಳು ಮುಖ್ಯಮಂತ್ರಿ ಬೊಮ್ಮಾಯಿಗೆ ಬೆನ್ನಾಗಿ ನಿಂತರು, ಅದರಲ್ಲೂ ಪ್ರಮುಖವಾಗಿ ಡಾ.ಸುಧಾಕರ್, ಮುನಿರತ್ನ, ಬೈರತಿ ಬಸವರಾಜ್, ಬಿ.ಸಿ.ಪಾಟೀಲ್. ಮೂಲ ಬಿಜೆಪಿಯವರ ಬೆಂಬಲ ಸಿಎಂ ಬೊಮ್ಮಾಯಿಗೆ ಅಷ್ಟಾಗಿ ಕಾಣಿಸಲಿಲ್ಲ.