ಅಚ್ಚರಿ ಆಟಗಾರ್ತಿಯಾಗಿ ಕಣಕ್ಕೆ ಇಳಿದಿರುವ ಪ್ರಿಯಾಂಕಾ, ಕಾಂಗ್ರೆಸ್ ನ ಗೆಲ್ಲಿಸಬಹುದೆ?
Recommended Video

ರಾಜಕೀಯದ ತಂತ್ರಗಾರಿಕೆಯಲ್ಲಿ ಇದು ಒಂದು ಭಾಗ. ಕ್ರೀಡೆಯಲ್ಲಿ ಕೂಡ ಇದೇ ತಂತ್ರ ಅನುಸರಿಸಲಾಗುತ್ತದೆ. ಏನಪ್ಪಾ ಅದು ಅಂದರೆ, ಎದುರಾಳಿಗಳಿಗೆ ಯಾವ ಕ್ರೀಡಾಳುವಿನ ಪಟ್ಟು ಪರಿಚಯವೇ ಇಲ್ಲವೋ ಹಾಗೂ ಆ ಕ್ರೀಡಾಳು ಎದುರಾಳಿಯನ್ನು ಗೊಂದಲಕ್ಕೆ ದೂಡಬಹುದೋ ಅಂಥವರನ್ನು ಪ್ರಮುಖ ಪಂದ್ಯಗಳಲ್ಲಿ ಕಣಕ್ಕೆ ಇಳಿಸುತ್ತಾರೆ.
ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರಪ್ರದೇಶದಲ್ಲಿ ಅಖಾಡಕ್ಕೆ ಇಳಿಸಿರುವುದು ಅದೇ ಲೆಕ್ಕಾಚಾರದಲ್ಲಿ. ಅಲ್ಲಿಗೆ ರಾಷ್ಟ್ರ ರಾಜಕಾರಣಕ್ಕೆ ಪ್ರಿಯಾಂಕಾ ಅವರು ಬರುವುದಿಲ್ಲ. ಏನಿದ್ದರೂ ನಿರ್ಣಾಯಕ ಕದನ ಇರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸುವುದಕ್ಕೆ ಹಾಗೂ ಬಿಜೆಪಿಗೆ ಎಲ್ಲೆಲ್ಲಿ ಹೊಡೆತ ನೀಡಬಹುದೋ ಅಲ್ಲಿ ಪೆಟ್ಟು ಕೊಡುವುದಕ್ಕೆ ಮಾತ್ರ ಸೀಮಿತರಾಗುತ್ತಾರೆ ಎನ್ನುವುದೇ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ ಕೂಡ.
ರಾಹುಲ್ ಗಾಂಧಿ ಅವರಿಗೆ ಪರ್ಯಾಯವಾಗಿ ಮತ್ತೊಂದು ಆಯ್ಕೆಯನ್ನು ಕಾಂಗ್ರೆಸ್ ನೊಳಗೇ ಹುಟ್ಟು ಹಾಕಿ, ಮತ್ತೆ ಪ್ರಯೋಗ ಆರಂಭಿಸುವುದು ಈ ಹಂತದಲ್ಲಿ ಮೂರ್ಖತನ ಆದೀತು. ಈ ಸಂಗತಿ ಗೊತ್ತಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗದಂತೆ ನೋಡಿಕೊಳ್ಳುವುದು ಆದ್ಯತೆಯಾಗಿ ತೆಗೆದುಕೊಂಡು, ಪ್ರಿಯಾಂಕಾರನ್ನು ಪ್ರಮುಖ ಸ್ಥಾನವೊಂದಕ್ಕೆ ನೇಮಿಸಲಾಗಿದೆ.

ಒಂದು ಸಲಕ್ಕೆ ಕುಟುಂಬದಿಂದ ಒಬ್ಬರೇ
ಪಕ್ಷದೊಳಗಿನ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಪ್ರಿಯಾಂಕಾ ಗಾಂಧಿ ಅವರು ಸಹ ಉಪಸ್ಥಿತರಿರುತ್ತಾರೆ. ಆದರೆ ರಾಹುಲ್ ರನ್ನು ಮೀರಿ ಕಾಣಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ನ ಈವರೆಗಿನ ರಣತಂತ್ರವನ್ನು ಗಮನಿಸಿ ನೋಡಿ, ಕಾಂಗ್ರೆಸ್ ಇನ್ನೇನು ನೆಲ ಕಚ್ಚಿತು ಅನ್ನೋ ಸಂದರ್ಭದಲ್ಲಿ ಸೋನಿಯಾ ಗಾಂಧಿ ಪಕ್ಷದ ಚುಕ್ಕಾಣಿ ಹಿಡಿದರು. ಒಂದು ಅವಧಿಗೆ ವಿರೋಧ ಪಕ್ಷದಲ್ಲಿ ಕಾಂಗ್ರೆಸ್ ಇತ್ತು. ಆ ನಂತರ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಅವಧಿಯಲ್ಲಿ ರಾಹುಲ್ ಗಾಂಧಿ ಪರೋಕ್ಷವಾಗಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಅವರನ್ನು ತೆರೆಯ ಮುಂದೆ ಕರೆದುಕೊಂಡು ಬಾರದೆ, ಲೋಕಸಭೆ ಚುನಾವಣೆಯ ಸೋಲಿನ ಸ್ವಲ್ಪ ಕಾಲದ ನಂತರವೇ ಕೈ ಪಕ್ಷದ ಚುಕ್ಕಾಣಿ ನೀಡಲಾಯಿತು. ಆ ವೇಳೆಯಿಂದ ಸೋನಿಯಾ ಗಾಂಧಿ ಅವರು ಪಕ್ಷದ ಮುಖ್ಯ ಕಾರ್ಯಕ್ರಮಗಳಿಂದ ದೂರ ಉಳಿಯಲು ಆರಂಭಿಸಿದ್ದಾರೆ.

ರಾಜ್ಯಪಾಲರ ಕಚೇರಿ ದುರುಪಯೋಗದ ಆರೋಪ
ಸರಕಾರ ಬೀಳಿಸುವ ವಿಚಾರದಲ್ಲಿ ಕಾಂಗ್ರೆಸ್ ಬಗ್ಗೆ ಹಿಂದಿನಿಂದಲೂ ಅಸಮಾಧಾನ ಇದೆ. ಅಸಾಂವಿಧಾನಿಕವಾಗಿ- ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿಕೊಂಡು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದು ಹಿಂದಿನ ಆರೋಪ. ಆ ನಂತರ ಯಾವಾಗ ಇಡೀ ದೇಶದಲ್ಲಿ ಕಾಂಗ್ರೆಸ್ ಬಲ ಕುಂದುತ್ತಾ ಹೋಯಿತೋ ಆಗಿನಿಂದ ವಿರೋಧ ಪಕ್ಷವು ತಾನಾಗಿ ಕುಸಿಯಲು ಕಾಯುವ ತಾಳ್ಮೆ ಬೆಳೆಸಿಕೊಂಡಿದೆ. ಒಂದು ಅವಧಿಗೆ ಅಥವಾ ತೀರಾ ಹೆಚ್ಚೆಂದರೆ ಎರಡು ಅವಧಿಗೆ ಯಾವುದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದರೆ ಅದರ ವಿರುದ್ಧ ಜನರ ಅಭಿಪ್ರಾಯ ರೂಪುಗೊಳ್ಳುತ್ತದೆ. ಅಂಥ ಸನ್ನಿವೇಶದಲ್ಲಿ ಮೈ ಕೈ ಕೊಳೆ ಮಾಡಿಕೊಳ್ಳದೆ, ಹೊಡೆದಾಟ ನಡೆಸದೆ ಅಧಿಕಾರಕ್ಕೆ ಏರಬಹುದು ಎಂಬುದು ಕೈ ಪಕ್ಷದ ಸ್ಟ್ರಾಟೆಜಿ. ಇಂಥ ಲೆಕ್ಕಾಚಾರಗಳು ಬಹಳ ರಾಜ್ಯಗಳಲ್ಲಿ ಕಾಂಗ್ರೆಸ್ ಕೈ ಹಿಡಿದಿದೆ. ಇದೀಗ ಅಂಥದ್ದೇ ಸನ್ನಿವೇಶ ಎದುರಾಗಿದೆ.

ರಾಹುಲ್ ಉತ್ತರಪ್ರದೇಶಕ್ಕೆ ಸೀಮಿತರಾಗುವುದು ಬೇಡ ಎಂಬ ಲೆಕ್ಕಾಚಾರ
ಈಗ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಬೇಕು ಎಂದು ಕಾಂಗ್ರೆಸ್ ನ ತಂತ್ರ. ಸದ್ಯದ ಸನ್ನಿವೇಶದಲ್ಲಿ ಉತ್ತರಪ್ರದೇಶದ ಎಂಬತ್ತು ಕ್ಷೇತ್ರಗಳ ಮಾರಾಮಾರಿಗೆ ರಾಹುಲ್ ಸೀಮಿತರಾಗಿಬಿಟ್ಟರೆ ಇಡೀ ದೇಶದಾದ್ಯಂತ ಸುತ್ತಾಟ ಸಾಧ್ಯವಾಗುವುದಿಲ್ಲ. ಜತೆಗೆ ಬಿಜೆಪಿ ಮತ್ತು ಬಿಎಸ್ಪಿ- ಎಸ್ ಪಿ ಮೈತ್ರಿ ಕೂಟದ ಮಧ್ಯೆ ಕಾಂಗ್ರೆಸ್ ಅದೆಂಥ ಕಾದಾಟಕ್ಕೆ ಇಳಿದರೂ ದೊಡ್ಡ ಮಟ್ಟದ ಫಸಲು ಸಿಗುವುದಿಲ್ಲ. ಇನ್ನು ಯಾವಾಗಲೂ ದೊಡ್ಡ ಶತ್ರುವನ್ನು ಹಣಿದು ಹಾಕಿಬಿಟ್ಟರೆ, ಆ ನಂತರ ಉಳಿದ ಸಣ್ಣ-ಪುಟ್ಟದವರನ್ನು ದಾರಿಯಿಂದ ಪಕ್ಕಕ್ಕೆ ಸರಿಸುವುದು ಕಷ್ಟವಾಗಲಾರದು. ಮೊದಲಿಗೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್, ಅಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಒಂದು ಜವಾಬ್ದಾರಿ ಸ್ಥಾನದಲ್ಲಿ ಕೂರಿಸಿದೆ. ಅದರಿಂದ ಯಾವ ರೀತಿಯ ಲಾಭ ಇದೆ ಎಂಬುದು ಗೊತ್ತೆ?

ಕಾದಾಟದಿಂದ ಬಿಜೆಪಿಗೆ ಅನುಕೂಲ ಆಗಬಹುದು
ಪ್ರಿಯಾಂಕಾರನ್ನು ಉತ್ತರಪ್ರದೇಶಕ್ಕೆ ನೇಮಿಸಿದರೆ ಕಾಂಗ್ರೆಸ್ ಗಂಭೀರವಾಗಿ ಪ್ರಯತ್ನ ಮಾಡುತ್ತಿದೆ ಎಂಬ ಸಂದೇಶ ರವಾನಿಸಿದಂತಾಗುತ್ತದೆ. ಪ್ರಿಯಾಂಕಾ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಲು ವಿಪಕ್ಷಗಳಿಗೆ ಸಾಧ್ಯವಿಲ್ಲ. ಏಕೆಂದರೆ, ಇದೇ ಮೊದಲ ಬಾರಿಗೆ ಪ್ರಮುಖ ಸ್ಥಾನವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದಿರಾಗಾಂಧಿ ಅವರಂತೆ ಕಾಣುವ ಪ್ರಿಯಾಂಕಾ ಬಗ್ಗೆ ಮಹಿಳಾ ಮತದಾರರಲ್ಲಿ ಮಮಕಾರ ಇದೆ. ಹಾಗೊಂದು ವೇಳೆ ಪ್ರಿಯಾಂಕಾ ವಿರುದ್ಧವೇ ತೀಕ್ಷ್ಣ ವಾಗ್ದಾಳಿ ಆರಂಭಿಸಿದರೆ ಚುನಾವಣೆ ವೇಳೆ ಆ ಅಂಶವನ್ನೇ ಕಾಂಗ್ರೆಸ್ ಪರವಾಗಿ ತಿರುಗಿಸಿಕೊಳ್ಳುವುದಕ್ಕೆ ಯೋಜನೆ ರೂಪಿಸಬಹುದು. ಉತ್ತರಪ್ರದೇಶದಲ್ಲಿ ಎಸ್ ಪಿ- ಬಿಎಸ್ ಪಿಗೆ ಹೋರಾಡಲು ಬಿಟ್ಟರೆ ಕಾಂಗ್ರೆಸ್ ತನ್ನ ಪಾರಮ್ಯ ಕಳೆದುಕೊಂಡಂತೆ. ಅದೇ ವೇಳೆ ಎಲ್ಲ ಬಲವೂ ಹಾಕಿ ಹೋರಾಡಿದರೆ ತೀರಾ ಹೆಚ್ಚೆಂದರೆ ಬಿಜೆಪಿಗೆ ಸಾಧ್ಯವಾಗುವ ಅವಕಾಶವೇ ಹೆಚ್ಚು. ಆದ್ದರಿಂದಲೇ ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಅವರನ್ನು ಕಾಂಗ್ರೆಸ್ ಅಖಾಡಕ್ಕೆ ಇಳಿಸಿದೆ.











Click it and Unblock the Notifications