ಹೃದಯ ಶ್ರೀಮಂತ ''ದುರ್ಯೋಧನ'' ಮೊಹಮ್ಮದ್ ರಫೀ ಹೆಜ್ಜೆ ಹಿಂದೆ ಅಡಗಿರುವ ಬದುಕಿನ ಸತ್ಯಗಳು
ಬೆಂಗಳೂರು, ಅ. 21: ಅವರ ಹೆಸರು ಮೊಹಮ್ಮದ್ ರಫೀ ಇರಬಹುದು. ಬೆಳಗ್ಗೆ ಪೊಲೀಸ್ ಠಾಣೆಗೆ ಬರುವ ಮುನ್ನ ಎದುರಿನಲ್ಲಿದ್ದ ಗಣೇಶ ವಿಗ್ರಹಕ್ಕೆ ಪೂಜೆ ಮಾಡಿ ಹಣೆಯಲ್ಲಿ ಕುಂಕಮ ಇಟ್ಟು ಠಾಣೆ ಒಳಗೆ ಬರುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ ಬಿಹಾರ, ಉತ್ತರ ಪ್ರದೇಶ ಮೂಲದ ಕಾರ್ಮಿಕರಿಗೆ ಮೊದಲು ಅನ್ನ ಕೊಟ್ಟು ಅವರನ್ನು ಸಂತೈಸಿ ಊರಿಗೆ ಕಳಿಸಿಕೊಟ್ಟು ಮಾನವೀಯತೆ ತೋರಿದ್ದರು. ರಂಗಭೂಮಿ ಕಲಾವಿದ ಹಿನ್ನೆಲೆ ಹೊಂದಿದ್ದ ಮೊಹಮ್ಮದ್ ರಫೀ ದುರ್ಯೋಧನ ಪಾತ್ರದಲ್ಲಿ ಮಿಂಚುತ್ತಿದ್ದರು.
ಹೃದಯಾಘಾತದಿಂದ ನಿಧನ ಹೊಂದಿದ ಪೊಲೀಸ್ ಇನ್ಸ್ಪೆಕ್ಟರ್ ಮೊಹಮ್ಮದ್ ರಫೀ ಅವರ ಹಿನ್ನೆಲೆ ಬಗ್ಗೆ ತಿಳಿದುಕೊಂಡರೆ ಕಣ್ಣೀರು ತರಿಸುತ್ತದೆ. ಅವರು ಇಲ್ಲದೇ ಹೋಗಬಹುದು, ಆದರೆ ಅವರು ಬಿಟ್ಟು ಹೋಗಿರುವ ಮಾನವೀಯ ಗುಣಗಳು, ಪರರಿಗೆ ನೆರವಾಗುತ್ತಿದ್ದ ಹೃದಯ ಶ್ರೀಮಂತಿಕೆ ಎಂದೂ ಮರೆಯಾಗಲಾರದು. ಅಂತಹ ಕೆಲವು ಘಟನೆಗಳು ಇಲ್ಲಿವೆ ನೋಡಿ.
ಮೊಹಮ್ಮದ್ ರಫೀ ಬೈಯಪ್ಪನಹಳ್ಳಿ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದರು. ವೃದ್ಧ ಅಜ್ಜಿಯೊಬ್ಬರು ಅಪಘಾತಕ್ಕೆ ಈಡಾಗಿ ಎರಡು ಕಾಲು ಕಳೆದುಕೊಂಡಿದ್ದರು. ಒಬ್ಬ ಪೊಲೀಸ್ ಅಧಿಕಾರಿಯಾಗಿ ಸಂಚಾರ ಪೊಲೀಸರಿಗೆ ವಿಷಯ ತಿಳಿಸಿ ಪ್ರಕರಣ ದಾಖಲಿಸುವಂತೆ ಸೂಚಿಸಿ ತನ್ನ ಕರ್ತವ್ಯಕ್ಕೆ ತೆರಳಬಹುದಿತ್ತು. ಆದರೆ, ಮೊಹಮ್ಮದ್ ರಫೀ ಹಾಗೆ ಮಾಡಲು ಅವರಲ್ಲಿದ್ದ ಮಾನವೀಯ ಗುಣ ಬಿಡಲಿಲ್ಲ.

ರಫೀ ನೆನೆದು ಕಣ್ಣೀರು ಹಾಕಿದ ಸಿಬ್ಬಂದಿ
''ಅಪಘಾತಕ್ಕೆ ಈಡಾಗಿದ್ದಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದರು. ಅಜ್ಜಿಯ ಆರ್ಥಿಕ ಸಂಕಷ್ಟ ನೋಡಿ ಆಸ್ಪತ್ರೆಯ ವೆಚ್ಚವನ್ನು ಮೊಹಮ್ಮದ್ ರಫೀ ಸರ್ ಪಾವತಿ ಮಾಡಿದ್ದರು. ಅಜ್ಜಿ ಗುಣಮುಖವಾದ ಬಳಿಕ ಅವರ ಸಂಬಂಧಿಕರನ್ನು ಕರೆಸಿ ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಕಳುಹಿಸಿದ್ದರು. ನಾನು ಅವರ ಬಳಿ ಕೆಲಸ ಮಾಡಿದಾಗ ಆದ ಅನುಭವ ಎಂದು ಮೊಹಮ್ಮದ್ ರಫೀ ಅವರ ಮಾನವೀಯ ಗುಣ, ಹೃದಯ ಶ್ರೀಮಂತಿಕೆಯನ್ನು ನೆನಪಿಸಿಕೊಂಡು ಅವರ ಜತೆ ಕೆಲಸ ಮಾಡಿದ ಸಿಬ್ಬಂದಿಯೊಬ್ಬರು ಕಣ್ಣೀರು ಹಾಕಿದರು.

ಅಮ್ಮನಿಗಾಗಿ ಹೆಂಡತಿಯನ್ನು ಬಿಟ್ಟಿದ್ದರು
ಮೊಹಮ್ಮದ್ ರಫೀ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರ ತಾಯಿ ಕೂಡ ರಂಗಭೂಮಿ ಕಲಾವಿದೆ. ಸಹೋದರ ಕರೀಂ ಕೂಡ ರಂಗಭೂಮಿ ಕಲೆಯಲ್ಲಿ ಗುರುತಿಸಿಕೊಂಡು ಜೀವನಾಧಾರಕ್ಕೆ ಪೊಟೋ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ವಯಸ್ಸಾದ ಅಮ್ಮನಿಗಾಗಿ, ಅವಿವಾಹಿತ ತಮ್ಮನ ಹಾರೈಕೆಗೆ ಮೊದಲು ಆದ್ಯತೆ ನೀಡಿದ್ದ ಮೊಹಮ್ಮದ್ ರಫೀ, ತನ್ನ ಪತ್ನಿ ಮಕ್ಕಳನ್ನು ಮೈಸೂರಿನ ಮನೆಯಲ್ಲಿಯೇ ಬಿಟ್ಟಿದ್ದರು. ಆರು ತಿಂಗಳಾದರೂ ಮೈಸೂರಿಗೆ ಹೋಗುತ್ತಿರಲಿಲ್ಲ. ಕೇಳಿದರೆ, ಅಮ್ಮನಿಗೆ ವಯಸ್ಸಾಗಿದೆ. ತಮ್ಮನಿಗೆ ಇನ್ನೂ ಮದುವೆ ಮಾಡಿ ಜವಾಬ್ದಾರಿ ಬಂದಿಲ್ಲ. ನನ್ನ ಸುಖ, ಸಂತೋಷಕ್ಕೆ ಆದ್ಯತೆ ಕೊಟ್ಟರೆ ನನ್ನ ತಮ್ಮ ಮತ್ತು ಅಮ್ಮ ಅನಾಥರಾಗಿ ಬಿಡುತ್ತಾರೆ. ಹಾಗೆ ಅವರಲ್ಲಿ ಯಾವತ್ತೂ ಕಾಡಬಾರದು. ಅವರನ್ನು ನೋಡಿಕೊಳ್ಳುವರು ಯಾರು? ಎಂದು ಮೊಹಮ್ಮದ್ ರಫೀ ತನ್ನ ಆಪ್ತರೊಂದಿಗೆ ಕೌಟುಂಬಿಕ ವಿಚಾರವನ್ನೂ ಹಂಚಿಕೊಂಡಿದ್ದರು. ಹೆತ್ತವರಿಗೆ, ಸಹೋದರರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಮೊಹಮ್ಮದ್ ರಫೀ ಬದುಕು ತೋರಿಸಿಕೊಟ್ಟು ಬಿಟ್ಟು ಹೋಗಿರುವ ಬಳುವಳಿ.

ಅರು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ವರ್ಗಾವಣೆ
ಮಕ್ಕಳ ವಿದ್ಯಾಭ್ಯಾಸ ನಿಮಿತ್ತ ಆರು ತಿಂಗಳ ಹಿಂದಷ್ಟೇ ಅವರು ತನ್ನ ಕುಟುಂಬವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದರು. ಸದಾ ಕಲೆ, ಮಾನವೀಯ ಮೌಲ್ಯದಲ್ಲೇ ಉಸಿರಾಡುತ್ತಿದ್ದರು. ಮಕ್ಕಳನ್ನು ಇತ್ತೀಚೆಗೆ ಖಾಸಗಿ ಶಾಲೆಗೆ ಸೇರಿಸಿದ್ದ ಕಾರಣಕ್ಕಾಗಿ ಕುಟುಂಬವನ್ನು ವರ್ಗಾವಣೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ತನಗಿಂತ ತನ್ನ ತಾಯಿ ಹಾರೈಕೆ ಮುಖ್ಯ ಎಂದು ತೋರಿಸಿಕೊಟ್ಟಿದ್ದರು. ಕಷ್ಟದಲ್ಲಿರುವ ಯಾರೇ ಆಗಲೀ, ಮೊಹಮ್ಮದ್ ರಫೀ ಅವರನ್ನು ಭೇಟಿ ಮಾಡಿದರೆ ಅವರ ನೋವಿಗೆ ಸ್ಪಂದಿಸುತ್ತಿದ್ದರು.
ದುರ್ಯೋಧನನ ಕಲಾಭಿನಯ
ಡಾ. ರಾಜ್ ಕುಮಾರ್ ಅವರ ಪೌರಾಣಿಕ ಪಾತ್ರಗಳನ್ನು ನೋಡುತ್ತಿದ್ದ ಮೊಹಮ್ಮದ್ ರಫೀ ಕೂಡ ರಂಗಭೂಮಿ ಕಲಾವಿದ. ದುರ್ಯೋಧನ ಪಾತ್ರ ಅಂದರೆ ಪಂಚಪ್ರಾಣ. ಖಾಕಿ ತೊಟ್ಟರೂ ಒಂದು ಡೈಲಾಗ್ ಮರೆಯದೇ ಹೇಳುವ ಕಲೆ ಕರಗತ ಮಾಡಿಕೊಂಡಿದ್ದರು. ನಟನಾಗಿ ನಟಿಸುವ ಎಲ್ಲಾ ಅರ್ಹತೆ ಹೊಂದಿದ್ದ ಮೊಹಮ್ಮದ್ ಪೊಲೀಸ್ ಇಲಾಖೆಯಲ್ಲಿ ಹೀರೋ ಆಗಿಯೇ ಮಿಂಚಿದ್ದರು. ಅಪಘಾತದಲ್ಲಿ ಸಿಕ್ಕಿದ್ದ ಕರುವನ್ನು ಠಾಣೆಗೆ ಕರೆತಂದು ಸಾಕಿ ಅದಕ್ಕೆ ಭೀಮಾ ಎನ್ನುವ ಹೆಸರು ಇಟ್ಟಿದ್ದರು. ಹೀಗೆ ಅವರ ಪ್ರತಿ ಹೆಜ್ಜೆಯ ಹಿಂದೆಯೂ ಒಂದೊಂದು ಒಳ್ಳೆಯತನ ಕಾಣುತ್ತಿತ್ತು. ಹೃದಯಾಘಾತದಿಂದ ಗುರುವಾರ ಬೆಳಗ್ಗೆ ಅವರು ಸಾವನ್ನಪ್ಪಿದ್ದಾರೆ.
ಮೊಹಮ್ಮದ್ ತನ್ನ ಆಪ್ತ ಬಳಗವನ್ನು ಬಿಟ್ಟು ಹೋಗಿರಬಹುದು. ಅವರು ಪ್ರತಿ ಹೆಜ್ಜೆಯಲ್ಲೂ ಪೊಲೀಸ್ ಇಲಾಖೆಯಲ್ಲಿ ಮಾನವೀಯ ಗುಣ, ಹೃದಯ ಶ್ರೀಮಂತಿಕೆ, ಖಾಕಿ ಇರುವುದು ಬಡವರ ಸೇವೆಗೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಅವರ ಈ ಗುಣಗಳು ಎಂದಿಗೂ ಮರೆಯಲಾಗಲಾರವು...












Click it and Unblock the Notifications