2021ರ ಮಾರ್ಚ್ ಮಾಯೆ: ಚಿತ್ರಗಳಲ್ಲಿ ಪಂಚರಾಜ್ಯಗಳ ಎಲೆಕ್ಷನ್ ಛಾಯೆ
ನವದೆಹಲಿ, ಡಿಸೆಂಬರ್ 22: ಕಳೆದ 2021ರ ವರ್ಷದಲ್ಲಿ ಪ್ರತಿ ತಿಂಗಳು ಒಂದೊಂದು ವಿಶೇಷತೆಗಳಿಗೆ ವೇದಿಕೆ ಆಗಿತ್ತು. ಮಾರ್ಚ್ 27ರಿಂದ ಮೇ 2ರವರೆಗೆ ಪಂಚರಾಜ್ಯಗಳಲ್ಲಿ ವಿಧಾನಸಭೆಗಳ ಚುನಾವಣೆ ನಡೆಯಿತು. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಿತು.
ಪಂಚರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯು ಕದನ ಕುತೂಹಲ ಕೆರಳಿಸಿತು. ವ್ಹೀಲ್ ಚೇರ್ ಮೇಲೆ ಕುಳಿತು ರಾಜ್ಯ ಸುತ್ತಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರ್ಜರಿ ಪ್ರಚಾರದ ಮೂಲಕ ಗದ್ದುಗೆಯನ್ನು ಗೆದ್ದುಕೊಂಡರು. ರಾಜ್ಯದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಕೊವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಯಿತು. ಕಾರ್ಮಿಕರು ಮತ್ತೆ ವಲಸೆ ಹೋಗುವುದಕ್ಕೆ ಶುರು ಮಾಡಿದರು. ಹೀಗೆ ಹಲವು ವಿಷಯಗಳನ್ನು ಮಾರ್ಚ್ ತಿಂಗಳ ಚಿತ್ರಗಳು ಸಾರಿ ಹೇಳುವಂತಿವೆ.
2021ರ ವರ್ಷದ ಪೈಕಿ ಮಾರ್ಚ್ ತಿಂಗಳಿನಲ್ಲಿ ಅತಿಹೆಚ್ಚು ಸದ್ದು ಮಾಡಿದ್ದೇ ಪಂಚರಾಜ್ಯಗಳ ಚುನಾವಣೆ. ಇದರ ಮಧ್ಯೆ ಕೊವಿಡ್-19 ಅಪಾಯ ಹಾಗೂ ಲಾಕ್ ಡೌನ್ ಹೇರಿಕೆ ಮತ್ತು ಸಡಲಿಕೆಗಳ ಸುದ್ದಿಗೆ ಚಿತ್ರಗಳು ಸಾಕ್ಷಿಯಾದವು. ಮಾರ್ಚ್ ತಿಂಗಳಿನಲ್ಲಿ ನಡೆದ ಪ್ರಮುಖ ಘಟನೆಗಳನ್ನು ಸಾರಿ ಹೇಳುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದವು. ಇಂಥ ಪ್ರಮುಖ ಚಿತ್ರಗಳನ್ನು ಗುರುತಿಸುವುದು ಹಾಗೂ ಅವುಗಳ ಹಿಂದಿನ ಕಥೆ ಮುಂದೆ ಓದಿ.

ವ್ಹೀಲ್ ಚೇರ್ ಮೇಲೆ ಕುಳಿತು ರಾಜ್ಯ ಸುತ್ತಿದ ದೀದಿ!
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಲಿಗೆ ಗಾಯವಾಗಿತ್ತು. ಮಾರ್ಚ್ 10ರಂದು ನಂದಿಗ್ರಾಮ್ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರಿನ ಬಾಗಿಲು ಮುಚ್ಚಿಕೊಂಡಿದ್ದರಿಂದ ಅವರ ಕಾಲಿಗೆ ಗಾಯವಾಗಿತ್ತು. ತದನಂತರದಲ್ಲಿ ವ್ಹೀಲ್ ಚೇರ್ ನಲ್ಲಿ ಕುಳಿತುಕೊಂಡ ದೀದಿ, ರಾಜ್ಯಾದ್ಯಂತ ಸುತ್ತಿ ಪಕ್ಷದ ಪರ ಭರ್ಜರಿ ಪ್ರಚಾರ ನಡೆಸಿದರು. ಇದರ ಮಧ್ಯೆ ನಂದಿಗ್ರಾಮ್ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಗದ್ದಲವಾಗಿದ್ದು, ಒಬ್ಬ ಟಿಎಂಸಿ ಕಾರ್ಯಕರ್ತನ ಹತ್ಯೆ ನಡೆದಿತ್ತು. ಈ ಎಲ್ಲ ಬೆಳವಣಿಗೆಗಳಿಂದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮತ್ತಷ್ಟು ಕದನ ಕೌತುಕ ಕೆರಳಿಸಿತ್ತು.

ಟಿಎಂಸಿ ಭದ್ರಕೋಟೆ ನಂದಿಗ್ರಾಮ್ ಕ್ಷೇತ್ರದಲ್ಲಿ ಬಿಜೆಪಿ ಬಾವುಟ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ವಿರುದ್ಧ ಬಿಜೆಪಿ ಹಲವು ರಣತಂತ್ರಗಳನ್ನು ಹೆಣೆಯಿತು. ದೀದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ಅನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡಿದ್ದು, ಟಿಎಂಸಿ ಭದ್ರಕೋಟೆ ನಂದಿಗ್ರಾಮ್ ಕ್ಷೇತ್ರದಲ್ಲಿ ಟಿಕೆಟ್ ನೀಡಿತು. ಬಿಜೆಪಿಗೆ ಸವಾಲೊಡ್ಡಿದ ಮಮತಾ ಬ್ಯಾನರ್ಜಿ ಅದೇ ನಂದಿಗ್ರಾಮ್ ಕ್ಷೇತ್ರದಲ್ಲಿ ತಮ್ಮ ಆಪ್ತನ ಎದುರು ಸ್ಪರ್ಧೆಗೆ ಇಳಿದರು. ಟಿಎಂಸಿ ವಿರುದ್ಧ ಗೆಲುವಿನ ಬಾವುಟ ಹಾರಿಸುವುದಕ್ಕೆ ಬಿಜೆಪಿ ಭರ್ಜರಿ ಪ್ರಚಾರ ನಡೆಸಿತು. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ನಡೆಸಿದರು. ಅಂತಿಮವಾಗಿ ನಂದಿಗ್ರಾಮ್ ಕ್ಷೇತ್ರದಲ್ಲಿ ಆಪ್ತನ ಎದುರು ಸ್ಪರ್ಧಿಸಿದ ಮಮತಾ ಬ್ಯಾನರ್ಜಿ ಸೋಲಿನ ಕಹಿ ಉಂಡರು.

ಪಶ್ಚಿಮ ಬಂಗಾಳದಲ್ಲಿ ವಲಸೆ ಕಾರ್ಮಿಕರಿಗೆ ಕೊವಿಡ್ ಭೀತಿ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ರಾಜಕೀಯ ನಾಯಕರು ಭರ್ಜರಿ ಜನರನ್ನು ಸೇರಿಸಿದರು. ಕೊವಿಡ್-19 ಭೀತಿ ಇಲ್ಲದಂತೆ ನಡೆದ ಪ್ರಚಾರದ ನಂತರದಲ್ಲಿ ಮತ್ತೆ ಸಾಂಕ್ರಾಮಿಕ ಪಿಡುಗಿನ ಆತಂಕ ಹೆಚ್ಚಾಗಿತು. ಪಶ್ಚಿಮ ಬಂಗಾಳದಲ್ಲಿ ಮತ್ತೆ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಯಿತು. ಮಹಾಮಾರಿಗೆ ಬೆದರಿದ ವಲಸೆ ಕಾರ್ಮಿಕರು ರಾಜ್ಯವನ್ನು ತೊರೆದು ಹೊರಟರು. ಕೋಲ್ಕತ್ತಾದ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ವಾಪಸ್ಸಾಗುತ್ತಿರುವುದಕ್ಕೆ ಈ ಚಿತ್ರ ಸಾಕ್ಷಿ ಆಯಿತು.

ಉದ್ಯೋಗ ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ಎಳೆದೊಯ್ದ ಖಾಕಿಗಳು
ಪಂಜಾಬಿನಲ್ಲಿ ನಿರುದ್ಯೋಗ ಸಮಸ್ಯೆ ವಿದ್ಯಾರ್ಥಿಗಳನ್ನು ಕಂಗೆಡಿಸಿತ್ತು. ಉದ್ಯೋಗ ನೀಡುವಂತೆ ಆಗ್ರಹಿಸಿ ಇಟಿಟಿ ಮತ್ತು ಟಿಇಟಿ ಅರ್ಹ ಶಿಕ್ಷಕರು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನಿವಾಸದ ಎದುರಿಗೆ ಪ್ರತಿಭಟನೆ ನಡೆಸಿದರು. ಪಟಿಯಾಲದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಪೊಲೀಸರ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಅಬ್ಬಬ್ಬಾ ಎಂಥಾ ಬಿಸಿಲು; ಪ್ರೇಮಸೌಧದ ಎದುರು ಛತ್ರಿಯ ನೆರಳು
ಮಾರ್ಚ್ ತಿಂಗಳು ಅಂದರೆ ಬಿಸಿಲಿಗೆ ಏನೂ ಕಡಿಮೆ ಇರುವುದಿಲ್ಲ. ಆಗ್ರಾದ ಪ್ರೇಮಸೌಧ ತಾಜಮಹಲ್ ಎದುರಿಗೆ ಕೇಂದ್ರೀಯ ಕೈಗಾರಿಕಾ ಮೀಸಲು ಪಡೆಯ ಸಿಬ್ಬಂದಿಯೊಬ್ಬರು ಛತ್ರಿ ಹಿಡಿದು ಸಾಗುತ್ತಿರುವುದು ನೆತ್ತಿ ಸುಡುವ ಬಿಸಿಲಿನ ತಾಪವನ್ನು ಹೇಳುವಂತಿತ್ತು. ಈ ಫೋಟೋ ಅಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.












Click it and Unblock the Notifications