ಗುಹ್ಯದಲ್ಲಿ ದೀಪಾವಳಿಯಂದು ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ
ದೀಪಾವಳಿ ಹಬ್ಬವನ್ನು ಪ್ರತಿ ಮನೆಗಳಲ್ಲಿ ಆಚರಣೆ ಮಾಡುವುದು ಒಂದೆಡೆಯಾದರೆ ಕೆಲವು ದೇವಾಲಯ ಹಾಗೂ ಗ್ರಾಮಗಳಲ್ಲಿ ಹಬ್ಬದ ವೇಳೆ ಜಾತ್ರೆ ನಡೆಯುತ್ತದೆ. ಅದರಂತೆ ದೀಪಾವಳಿಯಂದು ಕೊಡಗಿನ ಗುಹ್ಯ ಎಂಬಲ್ಲಿ ನಡೆಯುವ ಐದು ದಿನಗಳ ಕಾಲ ಜಾತ್ರೆ ವೈಶಿಷ್ಟ್ಯಪೂರ್ಣವಾಗಿರುತ್ತದೆ.
ಗುಹ್ಯ ಎನ್ನುವುದು ಕೊಡಗಿನಲ್ಲಿನ ಕಾವೇರಿ ನದಿ ತಟದಲ್ಲಿರುವ ಗ್ರಾಮ. ಇದು ಪವಿತ್ರ ಕ್ಷೇತ್ರವೂ ಹೌದು. ಕೊಡಗಿನ ಸಿದ್ದಾಪುರದಿಂದ ಐದು ಕಿ.ಮೀ ದೂರದಲ್ಲಿದ್ದು, ಸಿದ್ದಾಪುರದಿಂದ ವೀರಾಜಪೇಟೆ ಮಾರ್ಗವಾಗಿ ಎರಡು ಕಿ.ಮೀ ಕ್ರಮಿಸಿ ಇಲ್ಲಿಂದ ಬಲ ಭಾಗಕ್ಕಿರುವ ರಸ್ತೆಯಲ್ಲಿ ಮೂರು ಕಿ.ಮೀ ಸಾಗಿದರೆ ಗುಹ್ಯ ಗ್ರಾಮವನ್ನು ತಲುಪಬಹುದು. ಕಾವೇರಿ ನದಿ ತಟದಲ್ಲಿ ನಿರ್ಮಾಣವಾಗಿರುವ ಅಗಸ್ತ್ಯೇಶ್ವರ ದೇಗುಲ ಇಲ್ಲಿನ ವಿಶೇಷತೆ.

ಇಲ್ಲಿರುವ ಅಗಸ್ತ್ಯೇಶ್ವರ ದೇವಾಲಯದ ಗರ್ಭ ಗುಡಿ ವೃತ್ತಾಕಾರದಲ್ಲಿದೆ. ಇಲ್ಲಿನ ಈಶ್ವರ ಲಿಂಗವು ಅಗಸ್ತ್ಯ ಮಹರ್ಷಿಯು ಪ್ರತಿಷ್ಠಾಪಿಸಿದ್ದು, ಬಹಳ ಆಳದಲ್ಲಿದೆ. ಗರ್ಭ ಗುಡಿಯು ಎರಡು ಅಂಕಣದಲ್ಲಿ ರಚಿತವಾಗಿರುವುದನ್ನು ಕಾಣಬಹುದು.

ಇಲ್ಲಿ ದೀಪಾವಳಿ ಸಮಯದಲ್ಲಿ ಐದು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಯಂದು ಕಾವೇರಿ ನದಿಯಲ್ಲಿ ಮಿಂದರೆ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ನರಕ ಚತುರ್ದಶಿಯಂದು ಅಗಸ್ತ್ಯೇಶ್ವರನಿಗೆ ನೆರಪು ನಡೆಯುತ್ತದೆಯಲ್ಲದೆ, ದೀಪಾವಳಿ ಅಮಾವಾಸ್ಯೆಯಂದು ಕಾವೇರಿ ನದಿಯಲ್ಲಿ ಮಿಂದರೆ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅಮಾವಾಸ್ಯೆಯಂದು ನಡೆಯುವ ಜಳಕದೊಂದಿಗೆ ಉತ್ಸವವು ಪೂರ್ಣಗೊಳ್ಳುತ್ತದೆ.












Click it and Unblock the Notifications