ಬರೀ ಪಾಠವಲ್ಲ, ಈ ಶಾಲೆಯಲ್ಲಿ "ಜೀವನ ಪಾಠ"ವನ್ನೂ ಕಲಿಸುತ್ತಾರೆ
ಈಗೀಗ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಕೆಲವು ಉದಾಹರಣೆಗಳು ದೊರೆಯುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಮೂಲ ಸೌಕರ್ಯ ಅಭಿವೃದ್ಧಿ ಮಾತ್ರವಲ್ಲದೇ, ಮಕ್ಕಳಿಗೆ ಪಾಠ ಮಾಡುವ ಪರಿಕಲ್ಪನೆಯೂ ಬದಲಾಗುತ್ತಿರುವುದು ಒಳ್ಳೆ ಬೆಳವಣಿಗೆ. ಈ ಧನಾತ್ಮಕ ಪರಿವರ್ತನೆಗೆ ಒಂದು ಉದಾಹರಣೆಯಾಗಿದೆ ಉಡುಪಿಯ ಈ ಶಾಲೆ.
ಗುಣಮಟ್ಟದಲ್ಲೂ ಖಾಸಗಿ ಶಾಲೆಗಳಿಗೆ ಸವಾಲು ನೀಡುವಂತಿರುವ ಉಡುಪಿಯ ನಿಟ್ಟೂರು ಕನ್ನಡ ಪ್ರೌಢ ಶಾಲೆಯಲ್ಲಿ ಶಿಕ್ಷಣದ ಪರಿಕಲ್ಪನೆಯೇ ವಿಶೇಷವೆನಿಸುತ್ತದೆ. ಮಕ್ಕಳಿಗೆ ತಲೆ ತುಂಬುವ ಪಾಠಗಳು, ಹೋಂವರ್ಕ್ ಗಳ ಹೊರತಾಗಿ ಜೀವನದ ಪಾಠವನ್ನೂ ಇಲ್ಲಿ ಕಲಿಸಲಾಗುತ್ತಿದೆ.

ಮಕ್ಕಳಿಗೆ ಪ್ರಕೃತಿಯ ಒಡನಾಟ
ಪಾಠಗಳೊಂದಿಗೆ ನಾಲ್ಕು ಗೋಡೆಗಳಿಂದಾಚೆ ಪ್ರಕೃತಿಯ ಪಾಠವನ್ನೂ ಮಾಡಿದರೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಸಾಧ್ಯ ಎಂಬುದು ಇಲ್ಲಿನ ಅಧ್ಯಾಪಕರು ಕಂಡುಕೊಂಡಿರುವ ಸತ್ಯ. ಹೀಗಾಗಿಯೇ ಪ್ರಕೃತಿಯಲ್ಲೂ ಮಕ್ಕಳು ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಇದೇ ಕಾರಣಕ್ಕೆ ಮಕ್ಕಳೂ ಖುಷಿಖುಷಿಯಾಗಿ ಶಾಲೆಗೆ ಬರುತ್ತಾರೆ.

ಭತ್ತದ ಗದ್ದೆಯಲ್ಲಿ ಕೃಷಿ ಪಾಠ
ಕೃಷಿ ನಮ್ಮ ಗ್ರಾಮಗಳ ಒಡನಾಡಿ. ಹೀಗಾಗೇ ಮಕ್ಕಳಿಗೆ ಅದರ ಮಹತ್ವವೂ ತಿಳಿಯಬೇಕು ಎಂದು ಭತ್ತದ ಗದ್ದೆಯಲ್ಲಿ ಮಕ್ಕಳಿಗೆ ಪ್ರಾಯೋಗಿಕವಾಗಿ ಕೃಷಿಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುತ್ತಾರೆ ಶಿಕ್ಷಕರು. ಈ ಮೂಲಕ ಆಹಾರದ ಮೌಲ್ಯ ಮತ್ತು ಶಿಕ್ಷಣದ ಮಹತ್ವವನ್ನೂ ಒಟ್ಟಿಗೆ ತಿಳಿಸುವ ಪ್ರಯತ್ನವನ್ನು ಪ್ರತಿ ವರ್ಷದಿಂದಲೂ ಮಾಡುತ್ತಾ ಬಂದಿದ್ದಾರೆ.
ಕಳೆದ ಮಳೆಗಾಲದಲ್ಲಿ ಈ ಮಕ್ಕಳು ಗದ್ದೆಗೆ ಇಳಿಸಿ ಭತ್ತ ನಾಟಿ ಮಾಡಿದ್ದರು. ಮಳೆ ಗಾಳಿಯನ್ನೂ ಲೆಕ್ಕಿಸದೆ ರೈತರ ಮಾರ್ಗದರ್ಶನದಲ್ಲಿ ಹೈಸ್ಕೂಲ್ ಮಕ್ಕಳು ಬಿತ್ತನೆ ಮಾಡಿದ್ದರು.

ಜೀವನ ಪಾಠ ಎಲ್ಲ ಮಕ್ಕಳಿಗೂ ಸಿಗುತ್ತದೆಯೇ?
ಮಕ್ಕಳು ಬಿತ್ತನೆ ಮಾಡಿದ್ದ ಭತ್ತ ಈಗ ತೆನೆಯಿಂದ ತುಂಬಿ ನಳನಳಿಸುತ್ತಿದೆ. ತಾವೇ ಬೆಳೆದ ಭತ್ತವನ್ನು ಕಟಾವು ಮಾಡಲೂ ವಿದ್ಯಾರ್ಥಿಗಳೇ ಮುಂದಾಗಿದ್ದಾರೆ. ಕಟಾವು ಮಾಡಿ, ಭತ್ತದ ತೆನೆ ಕೊಂಡೊಯ್ದು ಭತ್ತ ಬೇರ್ಪಡಿಸಿ ಕೃಷಿಯ ಮೂಲ ಪಾಠವನ್ನು ಕಲಿತಿದ್ದಾರೆ. ರೈತರ ಕಷ್ಟ, ನಷ್ಟ ಹಾಗೂ ತಿನ್ನುವ ಅನ್ನದ ಬೆಲೆ ತಿಳಿಸುವುದಕ್ಕೆ ಇದಕ್ಕಿಂತ ಉತ್ತಮ ಮಾರ್ಗ ಬೇರೆ ಇರಲು ಸಾಧ್ಯವೇ? ಇಂಥ ಜೀವನ ಪಾಠ ಎಲ್ಲ ಮಕ್ಕಳಿಗೂ ಸಿಗುತ್ತದೆಯೇ?

ಫಲಿತಾಂಶದಲ್ಲೂ ಶಾಲೆ ಮುಂದು
ವೈವಿಧ್ಯ, ಶಿಕ್ಷಣದ ಪರಿಕಲ್ಪನೆಯಿಂದಷ್ಟೇ ಅಲ್ಲ, ಫಲಿತಾಂಶದಲ್ಲೂ ಶಾಲೆ ಮುಂದು. ನೂರಕ್ಕೆ ನೂರರಷ್ಟು ಫಲಿತಾಂಶ ಶಾಲೆಗೆ ಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕೆ ಈ ಕನ್ನಡ ಶಾಲೆಗೆ ಸೇರಿಸಲು ಪೋಷಕರೂ ನಾಮುಂದು ತಾಮುಂದು ಎಂದು ಬರುತ್ತಿದ್ದಾರೆ. ಆಟ, ಪಾಠದ ಜೊತೆಗೆ ಇಂತಹ ಜೀವನ ಪಾಠವನ್ನೂ ಕಲಿಸುವ ನಿಟ್ಟೂರಿನಲ್ಲಿನ ಈ ಕನ್ನಡ ಶಾಲೆಯಂತೆ ಎಲ್ಲಾ ಸರ್ಕಾರಿ ಶಾಲೆಗಳಿದ್ದರೆ ಎಷ್ಟು ಚಂದವಲ್ಲವೇ?












Click it and Unblock the Notifications