ಎನ್ಐಎ ರೇಡ್: ಬಿಜೆಪಿಗೆ ಲಾಭವಾಗುತ್ತಾ? ಕಾಂಗ್ರೆಸ್ ನಡೆ ಏನಿರಬಹುದು?
ದೇಶಾದ್ಯಂತ ವಿವಿಧೆಡೆ ಪಿಎಫ್ಐ ಕಚೇರಿಗಳ ಮೇಲೆ ಎನ್ಐಎ ಮತ್ತು ಇಡಿ ದಾಳಿಗಳನ್ನು ಮಾಡಿರುವುದು ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ. ಕರ್ನಾಟಕ, ಕೇರಳ ಸೇರಿ 10 ರಾಜ್ಯಗಳಲ್ಲಿ ಕಳೆದ ರಾತ್ರಿಯಿಂದಲೇ ರೇಡ್ ನಡೆದಿದೆ. ಈವರೆಗೂ 100ಕ್ಕೂ ಹೆಚ್ಚು ಪಿಎಫ್ಐ ನಾಯಕರು ಮತ್ತು ಕಾರ್ಯಕರ್ತರನ್ನು ತನಿಖಾ ಸಂಸ್ಥೆಗಳು ಕಸ್ಟಡಿಗೆ ಪಡೆದಿವೆ.
ಕೇರಳದಲ್ಲಿ 22 ಮಂದಿ ಬಂಧನವಾದರೆ, ಕರ್ನಾಟಕದಲ್ಲಿ 20 ಮಂದಿ ಬಂಧನವಾಗಿರುವುದು ತಿಳಿದುಬಂದಿದೆ. ಮಹಾರಾಷ್ಟ್ರ, ಉತ್ತರಪ್ರದೇಶ, ಆಂಧ್ರಪ್ರದೆಶ, ಬಿಹಾರ, ತೆಲಂಗಾಣ ಮೊದಲಾದ ರಾಜ್ಯಗಳಲ್ಲೂ ಎನ್ಐಎ ದಾಳಿ ಮಾಡಿದೆ. ಮಂಗಳೂರಿನಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ನಾಯಕರನ್ನು ಎನ್ಐಎ ತಂಡಗಳು ಬಂಧಿಸಿ ಕರೆದೊಯ್ದಿವೆ.
ಮಂಗಳೂರು ಪಿಎಫ್ಐ ಕಚೇರಿ ಮೇಲೆ ಎನ್ಐಎ ದಾಳಿ ಅಂತ್ಯ; ಪಿಎಫ್ಐ, ಎಸ್ಡಿಪಿಐ ಆಕ್ರೋಶ
ಮಧ್ಯರಾತ್ರಿಯಿಂದಲೇ ಶುರುವಾದ ಈ ದಾಳಿ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಎಚ್ಚರದ ಪ್ರತಿಕ್ರಿಯೆ ನೀಡಿದೆ. ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, "ಕೋಮುವಾದ ಮತ್ತು ಹಿಂಸಾಚಾರ ವಿಚಾರದಲ್ಲಿ ಕಿಂಚಿತ್ತೂ ಸಹಿಸಬಾರದು" ಎಂದು ಕರೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಮಂಗಳೂರಿನಲ್ಲಿ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ಡಿಪಿಐ, ಪಿಎಫ್ಐ ಕಚೇರಿಯಲ್ಲಿ ಎನ್ಐಎ ಅಧಿಕಾರಿಗಳು ಮಹತ್ವದ ದಾಖಲೆ, ಕಡತ, ಲ್ಯಾಪ್ಟಾಪ್ಗಳನ್ನೂ ಜಪ್ತಿ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದಾರೆ.
ಮಂಗಳೂರು ಪಿಎಫ್ಐ ಕಚೇರಿ ಮೇಲೆ ಎನ್ಐಎ ದಾಳಿ ಅಂತ್ಯ; ಪಿಎಫ್ಐ, ಎಸ್ಡಿಪಿಐ ಆಕ್ರೋಶ
ಅದೇ ವೇಳೆ, ಎನ್ಐಎ ರೇಡ್ ವಿರುದ್ಧ ಮಂಗಳೂರಿನಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆರೆಸ್ಸೆಸ್ ಆದೇಶದ ಮೇಲೆ ಬಂದಿದ್ದೀರಿ ಎಂದು ಎನ್ಐಎ ಅಧಿಕಾರಿಗಳ ವಿರುದ್ಧ ಇವರು ಘೋಷಣೆ ಕೂಗಿದರು. ಪೊಲೀಸರು 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದರು.
ಗಾಯಕ್ಕೆ ಮುಲಾಮು
ಹಿಂದೆ ಶಿವಮೊಗ್ಗ, ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾದ ಘಟನೆಗಳು ಬಿಜೆಪಿಗೆ ಘಾಸಿ ಮಾಡಿದ್ದವು. ಹಿಂದೂ ಪರ ಸಂಘಟನೆಗಳೇ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಕೊಲೆಗಳ ಹಿಂದೆ ಪಿಎಫ್ಐ ಕೈವಾಡ ಇದೆ ಎಂಬುದು ಹಿಂದೂಪರ ಸಂಘಟನೆಗಳ ಆರೋಪ. ಇವನ್ನು ನಿಷೇಧಿಸುತ್ತೇವೆ ಎಂದು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರ ಏನೂ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಹಿಂದೂಪರ ಕಾರ್ಯಕರ್ತರಲ್ಲಿ ಮನೆಮಾಡಿತ್ತು. ಈಗ ಪಿಎಫ್ಐ ಕಚೇರಿಗಳ ಮೇಲೆ ವ್ಯಾಪಕ ರೇಡ್ ಸರಿಯಾದ ಸಂದರ್ಭದಲ್ಲಿ ಆಗಿದೆ.
ಬಿಜೆಪಿಗೆ ಹೇಗೆ ಲಾಭ?
ಪಿಎಫ್ಐ ಮತ್ತು ಎಸ್ಡಿಪಿಐ ಮೇಲೆ ಎನ್ಐಎ ನಡೆಸಿರುವ ದಾಳಿ ಒಂದು ರೀತಿಯಲ್ಲಿ ರಾಜ್ಯ ಬಿಜೆಪಿಗೆ ಸಮಾಧಾನದ ನಿಟ್ಟುಸಿರುವ ಬಿಡಲು ಅವಕಾಶ ಕಲ್ಪಿಸಿದಂತಿದೆ. ಭ್ರಷ್ಟಾಚಾರ ಅಸ್ತ್ರವನ್ನು ಇಟ್ಟುಕೊಂಡಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಈಗ ಭಯೋತ್ಪಾದನೆಯ ಪ್ರತ್ಯಸ್ತ್ರ ಸಿಕ್ಕಿದಂತಾಗಿದೆ. ಕಳೆದ ಕೆಲ ತಿಂಗಳಿಂದ ನಡೆದ ಸಮೀಕ್ಷೆಗಳು ಮುಂದಿನ ಚುನಾವಣೆಯಲ್ಲಿ ಭ್ರಷ್ಟಾಚಾರ ಪ್ರಮುಖ ವಿಷಯ ಆಗಬಹುದು ಎಂಬುದನ್ನು ಸೂಚಿಸಿದ್ದವು. ರಾಜ್ಯ ಸರಕಾರದ ಮೇಲೆ ಈಗಾಗಲೇ ಪರ್ಸೆಂಟೇಜ್ ಕಮಿಷನ್ ಸೇರಿದಂತೆ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳಿವೆ. ವಿಪಕ್ಷದಲ್ಲಿರುವ ಸಿದ್ದರಾಮಯ್ಯರ ವಾಗ್ದಾಳಿಯನ್ನು ಎದುರಿಸುವ ಶಕ್ತಿಯೂ ಬಿಜೆಪಿಗೆ ಇಲ್ಲ.
ಇದೇ ವೇಳೆ, ಬಿಜೆಪಿಯ ಮೂಲ ಬಲ ಇರುವುದು ಹಿಂದುತ್ವದಲ್ಲಿ. ಈಗ ಪಿಎಫ್ಐ ಮೇಲಿನ ದಾಳಿ ಘಟನೆಗಳು ಬಿಜೆಪಿಯ ಹಿಂದುತ್ವ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಚುನಾವಣೆಯಲ್ಲಿ ಭ್ರಷ್ಟಾಚಾರ ವಿಚಾರಕ್ಕಿಂತ ಇದೇ ಹೆಚ್ಚು ಮುಖ್ಯ ಎನಿಸಬಹುದು. ಹೀಗಾಗಿ, ರಾಜ್ಯ ಬಿಜೆಪಿ ನಾಯಕರು ನಿಟ್ಟುಸಿರು ಬಿಡುತ್ತಿರಬಹುದು.
ಕೋಮುಸೂಕ್ಷ್ಮ ವಾತಾವರಣ
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳು ಕೋಮುಧ್ರುವೀಕರಣಕ್ಕೆ ಕಾರಣವಾಗುತ್ತಿರಬಹುದು. ಸಿಎಎ ಎನ್ಆರ್ಸಿ ವೇಳೆ ಮುಸ್ಲಿಂ ಸಂಘಟನೆಗಳು ನಡೆಸಿದ ಪ್ರತಿಭಟನೆ, ರಾಜ್ಯದ ವಿವಿಧ ಕಡೆ ನಡೆದ ಹಿಂದೂಪರ ಕಾರ್ಯಕರ್ತರ ಹತ್ಯೆ ಘಟನೆಗಳು, ಹಿಜಾಬ್ ಪ್ರತಿಭಟನೆ ಇವೆಲ್ಲವೂ ರಾಜ್ಯದಲ್ಲಿ ಧರ್ಮಾಧಾರಿತವಾಗಿ ಧ್ರುವೀಕರಣ ಆಗಲು ಎಡೆ ಮಾಡಿವೆ. ಈ ಪ್ರತಿಭಟನೆಗಳಲ್ಲಿ ಪಿಎಫ್ಐ ನೇರ ಪಾತ್ರ ಇದ್ದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಬಿಜೆಪಿ ಪ್ರತಿಪಾದಿಸಿದೆ.
ಯಾವುದಿದು ಪಿಎಫ್ಐ?
ವಿವಿಧ ಮುಸ್ಲಿಂ ಸಂಘಟನೆಗಳನ್ನು ಸೇರಿಸಿ 2006ರಲ್ಲಿ ಪಾಪುಲರ್ ಫ್ರಂಟ್ ಅಫ್ ಇಂಡಿಯಾ ಸಂಘಟನೆಯನ್ನು ರಚಿಸಲಾಗಿದೆ. ಮುಸ್ಲಿಮ್ ಸಮುದಾಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಏಳ್ಗೆಗೆ ತರುವುದು ಪಿಎಫ್ಐನ ಮೂಲ ಉದ್ದೇಶ ಎನ್ನಲಾಗಿದೆ. ಆದರೆ, ನಿಷೇಧಿತ ಸಿಮಿ ಸಂಘಟನೆಯ ಹೊಸ ಸ್ವರೂಪವೇ ಪಿಎಫ್ಐ ಎಂಬ ಆರೋಪವಿದೆ.
ಪಿಎಫ್ಐ ಮತ್ತದರ ವಿವಿಧ ಅಂಗ ಸಂಘಟನೆಗಳಿಂದ ಮುಸ್ಲಿಂ ಸಮುದಾಯದವರಲ್ಲಿ ಇಸ್ಲಾಂ ಮೂಲಭೂತವಾದದ ಭಿತ್ತನೆಯಾಗುತ್ತಿದೆ. ಮುಸ್ಲಿಮರನ್ನು ಉಗ್ರವಾದಕ್ಕೆ ಸೆಳೆದುಕೊಳ್ಳಲಾಗುತ್ತಿದೆ, ಅವರ ಬ್ರೇನ್ ವಾಶ್ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.
ಕಾಂಗ್ರೆಸ್ ನಡೆ ಏನು?
ಕೇರಳ ಮತ್ತು ಮಂಗಳೂರಿನಲ್ಲಿ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಲ್ಲಿ ಪಿಎಫ್ಐ ಕೈವಾಡ ಇರುವುದೂ ಕೂಡ ಬಟಾಬಯಲಾಗಿರುವ ಸಂಗತಿ. ಅದನ್ನು ನಿಷೇಧಿಸಬೇಕೆಂಬ ಕೂಗು ಕೆಲವಾರು ವರ್ಷಗಳಿಂದಲೂ ಕೇಳಿಬರುತ್ತಿದೆ. ಸಾಕ್ಷ್ಯಾಧಾರಗಳಿದ್ದರೂ ಪಿಎಫ್ಐ ಅನ್ನು ಸರಕಾರ ಯಾಕೆ ನಿಷೇಧಿಸಿಲ್ಲ ಎಂಬುದು ಪ್ರಶ್ನೆ. ಕಾಂಗ್ರೆಸ್ ಕೂಡ ಕೆಲ ಬಾರಿ ಇದೇ ಪ್ರಶ್ನೆಯನ್ನು ಹಾಕಿದ್ದಿದೆ. ಈಗ ಕಾಂಗ್ರೆಸ್ ಪಕ್ಷ ಪಿಎಫ್ಐ ಸಂಘಟನೆಯ ನಿಷೇಧ ಯಾಕೆ ಮಾಡುತ್ತಿಲ್ಲ ಎಂಬ ವಿಚಾರವನ್ನು ಇಟ್ಟುಕೊಂಡು ಸರಕಾರದ ಮೇಲೆ ಏರಿ ಹೋಗುವ ಧೈರ್ಯ ತೋರುತ್ತದಾ ಎಂಬುದು ಪ್ರಶ್ನೆ.
ಅಲ್ಪಸಂಖ್ಯಾತರು ಮೊದಲಿಂದಲೂ ಕಾಂಗ್ರೆಸ್ ಪರ ನಿಂತಿರುವವರು. ಆದರೆ, ಪಿಎಫ್ಐ, ಎಐಎಂಐಎಂ ಮೊದಲಾದ ಸಂಘಟನೆಗಳಿಂದಾಗಿ ಕಾಂಗ್ರೆಸ್ನ ಈ ಪ್ರಮುಖ ವೋಟ್ ಬ್ಯಾಂಕ್ ಛಿದ್ರಗೊಳ್ಳುತ್ತಿರುವುದು ಹೌದು. ಈ ಸಂಘಟನೆಗಳು ಬಲಗೊಂಡಷ್ಟೂ ಕಾಂಗ್ರೆಸ್ಗೆಯೇ ಕಷ್ಟ. ಪಿಎಫ್ಐ ಜೊತೆ ನೇರವಾಗಿ ಮೈತ್ರಿ ಮಾಡಿಕೊಳ್ಳುವ ಸ್ಥಿತಿಯಲ್ಲೂ ಕಾಂಗ್ರೆಸ್ ಇಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯಾವ ನಡೆ ಅನುಸರಿಸುತ್ತದೆ ಎಂಬುದು ಕುತೂಹಲದ ಸಂಗತಿ.
(ಒನ್ಇಂಡಿಯಾ ಸುದ್ದಿ)