ಕೊಡಗಿನಲ್ಲಿ ನಡೆಯುತ್ತಿತ್ತು ಅಪರೂಪದ ಹುಲಿ ಮದುವೆ!
ಹುಲಿಗಳ ಬಗ್ಗೆ ಮಾತನಾಡುವಾಗಲೆಲ್ಲ ಕೊಡಗಿನಲ್ಲಿ ಹಲವು ದಶಕಗಳ ಹಿಂದೆ ಇದ್ದಂತಹ ಆಚರಣೆಯೊಂದು ನೆನಪಾಗುತ್ತದೆ. ಅದುವೇ ನರಿಮಂಗಲ. ಅರ್ಥಾತ್ ಹುಲಿ ಮದುವೆ. ಇಷ್ಟಕ್ಕೂ ಹುಲಿವೇಷ, ಹುಲಿಕುಣಿತವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ ಹುಲಿ ಮದುವೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾಗಿ ಈ ಹುಲಿ ಮದುವೆ ಕುರಿತಂತೆ ತಿಳಿಯಬೇಕಾದರೆ, ನಾವು ಆರೇಳು ದಶಕಗಳ ಹಿಂದಿನ ದಿನಗಳಿಗೆ ಹೋಗಬೇಕು.
ಅಂದಿನ ದಿನಗಳಲ್ಲಿ ಕೊಡಗು ದಟ್ಟ ಕಾಡುಗಳಿಂದ ಕೂಡಿತ್ತು. ಹೆಚ್ಚಿನ ಭೂ ಪ್ರದೇಶ ಬೆಟ್ಟಗುಡ್ಡ, ಕಾಡುಗಳಿಂದ ಕೂಡಿತ್ತು. ಆಗ ವಾಣಿಜ್ಯ ಬೆಳೆಗಳ ಭರಾಟೆಗಳಿರಲಿಲ್ಲ. ಭತ್ತವೇ ಎಲ್ಲದಕ್ಕೂ ಮೂಲವಾಗಿತ್ತು. ನೀರಿನಾಶ್ರಯವಿರುವ ಸಮತಟ್ಟಾದ ಜಾಗಗಳನ್ನು ಕಡಿದು ಗದ್ದೆಗಳನ್ನು ನಿರ್ಮಿಸಿಕೊಂಡು ರೈತರು ಭತ್ತ ಬೆಳೆಯುತ್ತಿದ್ದರು.
ಭತ್ತದ ಕೃಷಿ ಮಾಡಲು ಅನುಕೂಲವಾಗುವಂತೆ ದನಗಳನ್ನು ಸಾಕುತ್ತಿದ್ದರು. ಈ ದನಗಳನ್ನು ಕಾಡುಗಳಲ್ಲಿ ಮೇಯಿಸಿಕೊಂಡು ಬರುತ್ತಿದ್ದರು. ಮನೆಗಳು ಕೂಡ ಅಲ್ಲೊಂದು ಇಲ್ಲೊಂದು ಎಂಬಂತಿತ್ತು. ಕಾಡಿನ ನಡುವೆ ಒಂಟಿ ಮನೆಗಳಲ್ಲಿ ವಾಸಿಸುತ್ತಿದ್ದ ಜನ ಧೈರ್ಯವಂತರಾಗಿದ್ದರು. ತಾವು ಮಾಡಿದ ಕೃಷಿಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಸದಾ ವನ್ಯ ಪ್ರಾಣಿಗಳೊಂದಿಗೆ ಹೋರಾಡುತ್ತಿದ್ದರು.

ಅಂದಿನ ದಿನಗಳಲ್ಲಿ ಬೇಟೆಗೆ ನಿಷೇಧವಿರಲಿಲ್ಲ
ಇಂತಹ ಸಂದರ್ಭಗಳಲ್ಲಿ ಬೆಟ್ಟಗುಡ್ಡ, ಕಾಡಿನ ನಡುವೆ ಇರುತ್ತಿದ್ದ ಹುಲಿಗಳು ಕೆಲವೊಮ್ಮೆ ಜಾನುವಾರುಗಳ ಮೇಲೆ ದಾಳಿ ಮಾಡಿ ತಿಂದು ಹಾಕುತ್ತಿದ್ದವು. ಅಂತಹ ಹುಲಿಯನ್ನು ಕೊಂದು ದನಗಳನ್ನು ರಕ್ಷಿಸಬೇಕಾಗುತ್ತಿತ್ತು. ಆ ದಿನಗಳಲ್ಲಿ ಬೇಟೆಗೆ ನಿಷೇಧವಿರಲಿಲ್ಲ. (ರಾಜಮಹಾರಾಜರ ಕಾಲದಿಂದಲೂ ಬೇಟೆಯಾಡುವುದು ಒಂದು ಹವ್ಯಾಸವಾಗಿ ಮುಂದುವರೆದುಕೊಂಡು ಬಂದಿತ್ತು). ಕೋವಿಗಳ ಬಳಕೆ ಬಂದ ನಂತರ ಬೇಟೆಯಾಡುವ ಆಸಕ್ತಿ ಹೆಚ್ಚಾಯಿತು. ಹೀಗಿರುವಾಗ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಭಕ್ಷಿಸುವ ಹುಲಿಗಳನ್ನು ಯಾರಾದರೂ ಗುಂಡಿಕ್ಕಿ ಕೊಂದರೆ ಅವನೇ ಶೂರನಾಗಿ ಬಿಡುತ್ತಿದ್ದನು. ಅವನನ್ನು ವೀರ, ಶೂರನೆಂದು ಕರೆಯಲಾಗುತ್ತಿತ್ತು.

ಕೊಡಗರ ವೀರ... ಹುಲಿಕೊಂದ ಶೂರ...
ಬೇಟೆಯಾಡಿದ ವೀರನನ್ನು ಕೋವಿಯೊಂದಿಗೆ ಹುಲಿ ಜತೆ ನಿಲ್ಲಿಸಿ ಸನ್ಮಾನ ಮಾಡಲಾಗುತ್ತಿತ್ತು. ಕುಟುಂಬಸ್ಥರು, ಗ್ರಾಮಸ್ಥರೆಲ್ಲರೂ ಸತ್ತ ಹುಲಿಯನ್ನು ಸಿಂಗರಿಸಿ ಹೊತ್ತು ನಡೆದರೆ, ಹುಲಿಯನ್ನು ಬೇಟೆಯಾಡಿದಾತ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿ ಕೋವಿಯನ್ನು ಹೆಗಲ ಮೇಲಿಟ್ಟುಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಜೈಕಾರಗಳು ಮೊಳಗುತ್ತಿದ್ದವು, ಅಭಿನಂದನೆ, ಸನ್ಮಾನಗಳು ಸಲ್ಲುತ್ತಿದ್ದವು. ನಂತರ ಊರ್ ಮಂದ್ (ಗ್ರಾಮದ ಮೈದಾನ)ನಲ್ಲಿ ಸನ್ಮಾನ ನಡೆಯುತ್ತಿದ್ದವಲ್ಲದೆ, ಊರವರಿಗೆಲ್ಲ ಭೋಜನ ಏರ್ಪಡಿಸಲಾಗುತ್ತಿತ್ತು.
ಆ ನಂತರ ಹುಲಿಯನ್ನು ಕೊಂದ ಶೂರನಿಗೆ ಎಲ್ಲೆಡೆಯೂ ಗೌರವ, ಸನ್ಮಾನಗಳು ದೊರೆಯುತ್ತಿತ್ತು. ಕೆಲವೊಮ್ಮೆ ಕುಟುಂಬದ ಐನ್ ಮನೆ (ಕುಟುಂಬದ ಹಿರಿಯ ಮನೆ)ಯಲ್ಲಿಯೇ ಇಂತಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇವತ್ತಿಗೂ ಕೊಡಗಿನ ಹಲವು ಕುಟುಂಬಗಳಲ್ಲಿ ಹುಲಿಯನ್ನು ಬೇಟೆಯಾಡಿ ಶೂರನೆನೆಸಿಕೊಂಡು ಕಾಲವಾದ ಹಿರಿಯರಿದ್ದಾರೆ. ಬಹಳಷ್ಟು ಐನ್ ಮನೆಗಳಲ್ಲಿ ಹುಲಿ ಮದುವೆಯ ಕಪ್ಪುಬಿಳುಪಿನ ಭಾವಚಿತ್ರಗಳು ನೆನಪಾಗಿ ಉಳಿದಿವೆ.

ಆಗ ಮೆರವಣಿಗೆ ಈಗ ಸೆರೆಮನೆಗೆ
ಹಿಂದಿನ ಕಾಲದ ಶೂರತ್ವದ ಸಂಕೇತವಾಗಿದ್ದ ಹುಲಿ ಮದುವೆಯನ್ನು ನಂತರದ ಕಾಲಾವಧಿಯಲ್ಲಿ ನಿಷೇಧಿಸಲಾಯಿತು. ಈಗ ಉಪಟಳ ನೀಡುವ ಹುಲಿಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗುತ್ತಿದೆ. ಅವತ್ತಿನ ಕಾಲಘಟ್ಟದಲ್ಲಿದ್ದ ಹುಲಿ ಮದುವೆ ಈಗ ಇತಿಹಾಸವಾಗಿದೆ. ಹಾಗಾಗಿ ವೇದಿಕೆ ಕಾರ್ಯಕ್ರಮಗಳಲ್ಲಿ ಅವುಗಳ ಅಣಕು ಪ್ರದರ್ಶನದ ಮೂಲಕ ಕೊಡಗಿನಲ್ಲೊಂದು ವಿಶಿಷ್ಟವಾದ ಸಂಪ್ರದಾಯವಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಹಲವು ಕಾರಣಗಳಿಗೆ ಹುಲಿ ಸಂತತಿ ನಾಶ
ಇವತ್ತಿನ ಪರಿಸ್ಥಿತಿಯಲ್ಲಿ ಹುಲಿ ಸಂತತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಇದರ ಕುರಿತಂತೆ ಅರಿವು ಮೂಡಿಸುವ ಸಲುವಾಗಿಯೇ ಪ್ರತಿ ವರ್ಷ ಜುಲೈ 29 ಅನ್ನು ವಿಶ್ವ ಹುಲಿ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಹಲವು ಕಾರಣಗಳಿಗೆ ಅಳಿವಿನಂಚಿಗೆ ತಲುಪಿದ್ದ ಹುಲಿಗಳನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತಿದ್ದು, ಹುಲಿಗಳು ಹೆಚ್ಚು ವಾಸವಾಗಿರುವ ತಾಣಗಳನ್ನು ಹುಲಿ ಸಂರಕ್ಷಣಾ ಪ್ರದೇಶವಾಗಿ ಘೋಷಣೆ ಮಾಡುವ ಮೂಲಕ ಹುಲಿಗಳ ರಕ್ಷಣಾ ಕಾರ್ಯಗಳು ನಡೆಯುತ್ತಿವೆ.
ಹುಲಿಗಳ ಸಂತತಿ ಹಲವು ಕಾರಣಗಳಿಗೆ ನಶಿಸುತ್ತಾ ಬಂದಿದೆ. ಹುಲಿಗಳ ಕಾದಾಟದಿಂದ ಸಾವು ಸಂಭವಿಸುತ್ತಿದ್ದರೆ, ಅದರ ಉಗುರು, ಚರ್ಮ, ಮೂಳೆಗಳಿಗಾಗಿಯೂ ಕೆಲವು ದುಷ್ಟರು ಬೇಟೆಯಾಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇತ್ತೀಚೆಗಿನ ವರ್ಷಗಳಲ್ಲಿ ಅರಣ್ಯ ಇಲಾಖೆಯ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹುಲಿಗಳ ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಹುಲಿಗಳ ಸಂರಕ್ಷಣೆ ನಮ್ಮ ಹೊಣೆ
ಆದರೂ ಕೆಲವೊಮ್ಮೆ ಅರಣ್ಯದಿಂದ ನಾಡಿಗೆ ನುಗ್ಗಿ ಸಾಕು ಪ್ರಾಣಿಗಳನ್ನು ಮಾತ್ರವಲ್ಲದೆ, ಮನುಷ್ಯರ ಮೇಲೆ ದಾಳಿ ಮಾಡಿ ಸಾಯಿಸಿದ ಹಲವು ಘಟನೆಗಳು ನಡೆದಿವೆ. ಈ ಸಂದರ್ಭದಲ್ಲಿ ಹುಲಿಯನ್ನು ಸೆರೆ ಹಿಡಿಯಲು ಸಾಧ್ಯವಾಗದೆ ಇದ್ದಾಗ ಗುಂಡಿಕ್ಕಿ ಸಾಯಿಸಿದ ಪ್ರಕರಣಗಳನ್ನು ನಾವು ತಳ್ಳಿಹಾಕುವಂತಿಲ್ಲ. ಅದು ಏನೇ ಇರಲಿ ನಾವೆಲ್ಲರೂ ಹುಲಿಗಳ ಸಂರಕ್ಷಣೆಗಾಗಿ ಪಣತೊಡೋಣ...












Click it and Unblock the Notifications