ಜಂಬೂಸವಾರಿಯಂದು ತೆರೆದುಕೊಳ್ಳಲಿವೆ ಅರಮನೆ ದ್ವಾರಗಳು!
ಮೈಸೂರು ಅರಮನೆಯೇ ವಿಶಿಷ್ಟ ಮತ್ತು ವಿಭಿನ್ನ. ಹೀಗಾಗಿಯೇ ಇದು ಜಗದ್ವಿಖ್ಯಾತವಾಗಿ ಗಮನಸೆಳೆಯುತ್ತಿದೆ. ಇಲ್ಲಿರುವ ಪ್ರತಿಯೊಂದು ವಸ್ತು, ಕಟ್ಟಡ, ಆಯುಧ, ಸಿಂಹಾಸನ ಎಲ್ಲದಕ್ಕೂ ತನ್ನದೇ ಆದ ಮಹತ್ವ ಮತ್ತು ಇತಿಹಾಸ ಇರುವುದನ್ನು ನಾವು ಕಾಣಬಹುದಾಗಿದೆ. ಇದೀಗ ದಸರಾ ಸಮಯವಾಗಿರುವುದರಿಂದ ಅರಮನೆ ಸದಾ ಜನರಿಂದ ತುಂಬಿ ತುಳುಕುತ್ತಿರುತ್ತದೆ.
ಪ್ರತಿದಿನ ಸಂಜೆ ಅರಮನೆ ವಿದ್ಯುದ್ದೀಪದಿಂದ ಬೆಳಗುತ್ತಿದ್ದರೆ, ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನತಣಿಸುತ್ತದೆ. ಅದರಲ್ಲೂ ವಿಶ್ವವಿಖ್ಯಾತ ಮೈಸೂರು ದಸರಾದ ಅಂತಿಮ ಮತ್ತು ಕುತೂಹಲದ ಘಟ್ಟವಾದ ಜಂಬೂಸವಾರಿಯ ದಿನವಂತು ಅರಮನೆಯ ವೈಭವ ಜಗತ್ತನ್ನೇ ಸೆಳೆಯುತ್ತದೆ. ಈ ಬಾರಿಯ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಎಲ್ಲರ ಚಿತ್ತ ಮೈಸೂರು ಅರಮನೆಯತ್ತ ನೆಟ್ಟಿದೆ.
ಅರಮನೆ ಮುಂಭಾಗ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಅಭಿಮನ್ಯು ಸೇರಿದಂತೆ ಗಜಪಡೆಯ ಜಂಬೂಸವಾರಿ ಮತ್ತು ಜಂಬೂ ಸವಾರಿಗೆ ಮೆರಗು ನೀಡುವ ಸ್ತಬ್ದ ಚಿತ್ರಗಳು, ಕಲಾತಂಡಗಳು, ಜನಪದ ನೃತ್ಯ, ಹೀಗೆ ಒಂದು ಸುಂದರ ಮೆರವಣಿಗೆ ಅರಮನೆಗೆ ಕಳೆಕಟ್ಟುತ್ತದೆ. ಜಂಬೂಸವಾರಿ ಅರಮನೆ ಆವರಣದಲ್ಲಿ ಸಾಗಿ ಬಲರಾಮದ್ವಾರದ ಮೂಲಕ ಮುನ್ನಡೆಯುವ ಆ ಸುಂದರ, ಐತಿಹಾಸಿಕ ಕ್ಷಣಗಳನ್ನು ವೀಕ್ಷಿಸಲು ಅರಮನೆ ಆವರಣದಲ್ಲಿ ಜನ ಸಾಗರವೇ ನೆರೆಯುತ್ತದೆ.

ಜಂಬೂಸವಾರಿ ವೀಕ್ಷಣೆಗೆ ಜನಸ್ತೋಮ
ಅದರಾಚೆಗೆ ಅಂದರೆ ಅರಮನೆ ಹೊರಗೆ ರಾಜಮಾರ್ಗದಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ವೀಕ್ಷಿಸಲು ಜನ ಮರವೇರುತ್ತಾರೆ, ಕಟ್ಟಡದ ಮೇಲೆ ಹತ್ತಿ ಕುಳಿತುಕೊಳ್ಳುತ್ತಾರೆ. ದೂರದ ಊರುಗಳಿಂದ ಬರುವ ಜನ ಜಂಬೂಸವಾರಿ ಸಾಗುವ ಹಾದಿಯಲ್ಲಿ ಸೂಕ್ತ ಜಾಗವನ್ನು ಮಾಡಿಕೊಂಡು ಅಲ್ಲಿಯೇ ಕಾದು ಕುಳಿತು ಕಣ್ತುಂಬಿಸಿಕೊಳ್ಳುತ್ತಾರೆ.
ದಸರಾ ಜಂಬೂಸವಾರಿಯನ್ನು ಅರಮನೆ ಆವರಣದಲ್ಲಿ ಕುಳಿತು ನೋಡಬೇಕೆನ್ನುವ ತವಕ ಹಲವರದ್ದು. ಹೀಗಾಗಿ ಕೆಲವರು ಹಣ ನೀಡಿ ಪಾಸ್ ಪಡೆದು ನೋಡಿದರೆ, ಮತ್ತೆ ಕೆಲವರು ಪಾಸ್ಗಾಗಿ ಹಲವು ನಾಯಕರ ಮನೆಬಾಗಿಲಲ್ಲಿ ನಿಂತು ಗೋಗರೆಯುವುದು ಕಂಡು ಬರುತ್ತದೆ. ಗೋಲ್ಡ್ ಕಾರ್ಡ್ ವ್ಯವಸ್ಥೆಯೂ ಇದೆ. ಜಂಬೂಸವಾರಿಯ ದಿನ ವೀಕ್ಷಕರು ಅರಮನೆ ಒಳಗೆ ತೆರಳಲು ಪಾಸ್ ಗಳು ಅಗತ್ಯವಾಗಿದ್ದು, ಪಾಸ್ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಅರಮನೆಗೆ ತೆರಳುವ ವೀಕ್ಷಕರಿಗೆ ಅರಮನೆಗೆ ಇರುವ ಪ್ರಮುಖ ಐದು ದ್ವಾರಗಳ ಮೂಲಕ ಪ್ರವೇಶ ನೀಡಲಾಗುತ್ತದೆ.

ಮೈಸೂರು ಅರಮನೆಯ ದ್ವಾರಗಳು
ಅರಮನೆಯ ಸುತ್ತಲೂ ಇರುವ ಈ ಐದು ದ್ವಾರಗಳು ವಿಶೇಷತೆಯನ್ನು ಹೊಂದಿದ್ದು, ಇವುಗಳ ಪೈಕಿ ಅರಮನೆಯ ಎದುರಿನ ಪೂರ್ವಕ್ಕೆ ದೊಡ್ಡ ಕೆರೆ ಮೈದಾನ ಕಡೆಗಿನ ಜಯ ಮಾರ್ತಾಂಡ ದ್ವಾರ ಪ್ರಮುಖವಾಗಿದೆ. ದ್ವಾರದ ಎರಡು ಬದಿ ಹೂ ತೋಟವಿದೆ ಬುರುಜುಗಳಿದ್ದು ಗಮನಸೆಳೆಯುತ್ತದೆ. ಅರಮನೆಯ ಉತ್ತರಕ್ಕೆ ಬಲರಾಮ ದ್ವಾರವಿದೆ. ಇದರ ಮೂಲಕವೇ ಜಂಬೂಸವಾರಿ ಸಾಗುತ್ತದೆ. ದ್ವಾರದ ಬದಿಯಲ್ಲಿ ಕೋಟೆ ಆಂಜನೇಯ ಸ್ವಾಮಿ, ಗಣಪತಿ ದೇವಾಲಯವಿದೆ. ದ್ವಾರಕ್ಕೆ ಸೇರಿಕೊಂಡಂತೆ ಅರಮನೆ ಆವರಣದ ಒಳಭಾಗದಲ್ಲಿ ದೊಡ್ಡ ಕನ್ನಡಿಯನ್ನಿಡಲಾಗಿದ್ದು ಇದರಲ್ಲಿ ಅರಮನೆಯ ಭವ್ಯ ದೃಶ್ಯವನ್ನು ವೀಕ್ಷಿಸಬಹುದಾಗಿದೆ.

ಪ್ರವಾಸಿಗರಿಗಾಗಿ ವರಹಾ ದ್ವಾರದ ಮೂಲಕ ಪ್ರವೇಶ
ಅರಮನೆ ದಕ್ಷಿಣ ಭಾಗದಲ್ಲಿ ವರಹಾ ದ್ವಾರವಿದ್ದು, ಈ ದ್ವಾರದ ಮೂಲಕವೇ ಪ್ರವಾಸಿಗರಿಗೆ ಅರಮನೆಗೆ ಪ್ರವೇಶ ನೀಡಲಾಗುತ್ತದೆ. ಕರಿಕಲ್ ತೊಟ್ಟಿ ದ್ವಾರವು ನಗರ ಪಾಲಿಕೆ ಕಡೆಗೆ ಅರ್ಥಾತ್ ಸಯ್ಯಾಜಿರಾವ್ ರಸ್ತೆ ಕಡೆಗೆ ಇದೆ. ಈ ದ್ವಾರದ ಮೂಲಕ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಬ್ರಹ್ಮಪುರಿ ದ್ವಾರವು ನಗರ ಬಸ್ ನಿಲ್ದಾಣದ ಬಳಿ ಇದೆ ಈ ದ್ವಾರದ ಮೂಲಕ ಎಲ್ಲ ದಿನಗಳಲ್ಲಿ ಪ್ರವೇಶ ಇಲ್ಲ. ದಸರಾ ಸಂದರ್ಭ ದ್ವಾರ ತೆಗೆಯಲಾಗುತ್ತದೆ.

ಧಾರ್ಮಿಕ ಕಾರ್ಯಕ್ಕಾಗಿ ಆನೆ ಬಾಗಿಲು
ಪ್ರಮುಖ ಐದು ದ್ವಾರಗಳ ಮೂಲಕ ಅರಮನೆ ಆವರಣಕ್ಕೆ ಪ್ರವೇಶ ಪಡೆಯಬಹುದಾದರೂ ಅರಮನೆಗೆ ಪ್ರವೇಶ ಪಡೆಯುವಾಗ ಅರಮನೆಯ ಹೆಬ್ಬಾಗಿಲಾದ ಆನೆ ಬಾಗಿಲು ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ದಸರಾದ ಎಲ್ಲ ಧಾರ್ಮಿಕ ಕಾರ್ಯಗಳು ನಡೆಯುತ್ತದೆ. ಗಜಪಡೆಗಳ ಸ್ವಾಗತದಿಂದ ಆರಂಭವಾಗಿ ಜಂಬೂಸವಾರಿಯ ರೂವಾರಿ ಅಭಿಮನ್ಯು ಅಂಬಾರಿ ಹೊತ್ತು ಸಾಗುವರೆಗೆ ಹಲವು ಕಾರ್ಯಕ್ರಮಗಳು ನಡೆಯುತ್ತವೆ.

ಆನೆ ಬಾಗಿಲು ವಿಶೇಷ
ಈ ಆನೆಬಾಗಿಲು ಅರಮನೆಯ ಪೂರ್ವ ದಿಕ್ಕಿನಲ್ಲಿದೆ. ಇಲ್ಲಿ ಕಂಚಿನ ಬಾಗಿಲಿದೆ. ಇಲ್ಲಿನ ಮತ್ತೊಂದು ವಿಶೇಷ ಎಂದರೆ ಎರಡು ಕಂಬಗಳಲ್ಲಿ ನಿಜವಾದ ಆನೆಗಳ ತಲೆಯನ್ನೇ ಅಲಂಕಾರಕ್ಕಾಗಿ ಅಳವಡಿಸಿರುವುದು. ಇವುಗಳನ್ನು ಜಯ ಚಾಮರಾಜ ಒಡೆಯರ್ ಸೈನ್ಯದೊಡನೆ ಬೇಟೆಗೆ ತೆರಳಿ ಅಲ್ಲಿ ಬೇಟೆಯಾಡಿ ತಂದಿದ್ದು ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರು ಅರಮನೆಯಿಂದ ಆರಂಭವಾಗಿ ಜಂಬೂಸವಾರಿ ತನಕ ಹತ್ತು ಹಲವು ವಿಶೇಷತೆಗಳು ನಮ್ಮ ಗಮನಸೆಳೆಯುತ್ತಲೇ ಇರುತ್ತವೆ.












Click it and Unblock the Notifications