ಮೇಕೆದಾಟು: ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ವಿಡಿಯೋ ಶೂಟೌಟ್ ಜಿದ್ದು!
ಭಾನುವಾರದಿಂದ (ಜ 9) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಹು ನಿರೀಕ್ಷಿತ ಮೇಕೆದಾಟು ಪಾದಯಾತ್ರೆ ಆರಂಭಗೊಳ್ಳಲಿದೆ. ದಿನಕ್ಕೆ ಹತ್ತರಿಂದ ಹದಿನೈದು ಕಿಲೋಮೀಟರ್ ನಡೆಯಬೇಕಾಗಿರುವುದರಿಂದ ಡಿಕೆಶಿಯವರ ರಿಹರ್ಸಲ್ ಜೋರಾಗಿ ನಡೆಯುತ್ತಿದೆ.
ಪಾದಯಾತ್ರೆಗಾಗಿ ಹೊಸ ಶೂವನ್ನು ಖರೀದಿಸಿರುವ ಡಿ.ಕೆ.ಶಿವಕುಮಾರ್ ದಿನಾ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ಜನರಿಗಾಗಿ, ಜನರಿಗೋಸ್ಕರ ಎಂದು ಡಿಕೆಶಿ ಹೇಳುತ್ತಿದ್ದಾರೆ. ಹೌದಾ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮುಂದುವರಿದಿದೆ.
ಸಾರ್ವಜನಿಕ ವಲಯದಲ್ಲಿ ಮೇಕೆದಾಟು ಪಾದಯಾತ್ರೆಯ ಬಗ್ಗೆ ಪರ/ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇನ್ನೊಂದು ಕಡೆ, ಕೆಪಿಸಿಸಿ ಅಂಗಣದಲ್ಲಿ ಇದು ಬಿಸಿಬಿಸಿ ಚರ್ಚೆಯ ವಿಷಯವಾಗಿ, ಬಣ ರಾಜಕೀಯಕ್ಕೆ ಇನ್ನಷ್ಟು ತುಪ್ಪ ಸುರಿದಂತಾಗುತ್ತಿದೆ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ.
ಎಐಸಿಸಿ ಅಂಗಣದವರೆಗೂ ಮೇಕೆದಾಟು ಪಾದಯಾತ್ರೆ ಸದ್ದು ಮಾಡುತ್ತಿದ್ದು, ಕೆಪಿಸಿಸಿಯಲ್ಲಿ ಇದೆ ಎನ್ನಲಾಗುತ್ತಿರುವ ಎರಡು ಬಲಾಢ್ಯ ಬಣಗಳ ನಡುವೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪ್ರತಿಷ್ಠೆ ಯಾಕೆಂದರೆ, ಒಂದು ವೇಳೆ ಮೇಕೆದಾಟು ಪಾದಯಾತ್ರೆ ಸಕ್ಸಸ್ ಆದರೆ, ಅದು ಮುಂದಿನ ಚುನಾವಣೆ ಯಾರ ನಾಯಕತ್ವದಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಕೊಡಲಿದೆ ಎನ್ನುವ ಕಾರಣಕ್ಕಾಗಿ. ವಿಡಿಯೋ ಶೂಟೌಟ್ ಮೇಲಾಟ?

ವಿಧಾನಮಂಡಲದ ಚಳಿಗಾಲದ ಅಧಿವೇಶನ
ವಿಧಾನಮಂಡಲದ ಚಳಿಗಾಲದ ಅಧಿವೇಶನದ ನಿರ್ಣಾಯಕ ಮತಾಂತರ ನಿಷೇಧ ಮಸೂದೆ ಮಂಡಣೆಯ ವೇಳೆ ಅಸೆಂಬ್ಲಿಯಲ್ಲಿ ಡಿ.ಕೆ.ಶಿವಕುಮಾರ್ ಹಾಜರಿರಲಿಲ್ಲ. ಡಿಕೆಶಿಯವರು ಮೇಕೆದಾಟು ಪೂರ್ವಭಾವಿ ಮಾತುಕತೆ ನಡೆಸಲು ಕಾವೇರಿ ಕಣಿವೆ ಭಾಗದಲ್ಲಿದ್ದರು. ಈ ವಿಚಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ತಿಳಿದು ಡಿಕೆಶಿಯವರ ಮೇಲೆ ಬಹಿರಂಗವಾಗಿಯೇ ಬೇಸರ ವ್ಯಕ್ತ ಪಡಿಸಿದ್ದರು. "ಏ ಅಧ್ಯಕ್ಷರೇ, ಬಾರಯ್ಯಾ ಇಲ್ಲಿ, ನನ್ನ ಅನುಪಸ್ಥಿತಿಯಲ್ಲಿ ಯಾವುದೇ ಸಭೆಯನ್ನು ನಡೆಸಬೇಡ"ಎಂದು ಡಿಕೆಶಿಗೆ ಸುವರ್ಣ ಸೌಧದ ಮೊಗಶಾಲೆಯಲ್ಲಿ ಸಿದ್ದರಾಮಯ್ಯ ಗದರಿದ್ದು ಗುಟ್ಟಾಗಿಯೇನೂ ಉಳಿದಿಲ್ಲ. ಇದು, ಇಬ್ಬರ ನಡುವೆ ಸರಿಯಿಲ್ಲ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿತ್ತು. ಇದಷ್ಟೇ ಅಲ್ಲ..
|
ಡಿ.ಕೆ.ಶಿವಕುಮಾರ್ ಕಾವೇರಿ ಉಗಮಸ್ಥಾನಕ್ಕೂ ಹೋಗಿದ್ದರು
ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ವೇಳೆ, ಡಿ.ಕೆ.ಶಿವಕುಮಾರ್ ಕಾವೇರಿ ಉಗಮಸ್ಥಾನಕ್ಕೂ ಹೋಗಿದ್ದರು. ಅಲ್ಲಿ ರೇಷ್ಮೆ ಪಂಚೆ, ಶಾಲನ್ನು ಹಾಕಿಕೊಂಡು ವಿಡಿಯೋ/ಫೋಟೋ ಶೂಟೌಟ್ ಕೂಡಾ ಮಾಡಿದ್ದರು. ಆ ವಿಡಿಯೋ, ಕೆಪಿಸಿಸಿಯ ಅಧಿಕೃತ ಸಾಮಾಜಿಕ ಜಾಲತಾಣದ ಹ್ಯಾಂಡಲ್ ಗಳಲ್ಲಿ ಬಿತ್ತರವಾಗಿತ್ತು ಕೂಡಾ.. ಅಧ್ಯಕ್ಷರ ಈ ನಡೆ ಸಿದ್ದರಾಮಯ್ಯನವರಿಗೆ ಯಾಕೋ ಹಿಡಿಸಲಿಲ್ಲ. ಹಾಗಾಗಿ, ಅಧಿವೇಶನ ಮುಗಿದ ಕೂಡಲೇ ಅವರು ಕೂಡಾ ಒಂದು ವಿಡಿಯೋ ಹೊರಬಿಟ್ಟರು.
|
ಸಿದ್ದರಾಮಯ್ಯನವರು ಗ್ರೀನ್ ಸ್ಕ್ರೀನ್ ಮೂಲಕ ವಿಡಿಯೋ
ಡಿ.ಕೆ.ಶಿವಕುಮಾರ್ ಅವರು ಕಾವೇರಿ/ಮೇಕೆದಾಟು ಆಸುಪಾಸಿನಲ್ಲೇ ವಿಡಿಯೋ ಶೂಟೌಟ್ ಮಾಡಿದರೆ, ಸಿದ್ದರಾಮಯ್ಯನವರು ಗ್ರೀನ್ ಸ್ಕ್ರೀನ್ ಮೂಲಕ, ಮೇಕೆದಾಟು ಬ್ಯಾಕ್ ಗ್ರೌಂಡ್ ಹಾಕಿ ವಿಡಿಯೋ ಹರಿಯಬಿಟ್ಟರು. ತಮ್ಮ ಅಪಾರವಾದ ರಾಜಕೀಯ ಅನುಭವವನ್ನು ಸಿದ್ದರಾಮಯ್ಯ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಆದರೆ, ಕೆಪಿಸಿಸಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ (ಜನವರಿ ಎರಡರ ರಾತ್ರಿ ಹತ್ತೂವರೆ ತನಕ) ಸಿದ್ದರಾಮಯ್ಯನವರ ಆ ವಿಡಿಯೋ ಶೇರ್ ಆಗಿರಲಿಲ್ಲ. ಯತೀಂದ್ರ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಸಲೀಂ ಅಹ್ಮದ್ ಮುಂತಾದ ನಾಯಕರ ವಿಡಿಯೋವನ್ನು ಕೆಪಿಸಿಸಿ ಶೇರ್ ಮಾಡಿದೆ. ಸಿದ್ದರಾಮಯ್ಯನವರ ವಿಡಿಯೋವನ್ನು ಡಿಕೆಶಿ ಶೇರ್ ಮಾಡಿದ್ದಾರೆ.

ಮೇಕೆದಾಟು: ವಿಡಿಯೋ ಶೂಟೌಟ್ ಗಾಗಿ ಜಿದ್ದಿಗೆ ಬಿದ್ದ ಸಿದ್ದರಾಮಯ್ಯ, ಡಿಕೆಶಿ?
ಜನರಿಂದ, ಜನರಿಗಾಗಿ, ಜನರಿಗೋಸ್ಕರ ಈ ಮೇಕೆದಾಟು ಪಾದಯಾತ್ರೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದರೂ, ಈ ರಾಜಕೀಯ ನಡೆಯ ಯಶಸ್ವಿಗಾಗಿ ಅವಿರತವಾಗಿ ದುಡಿಯುತ್ತಿದ್ದರೂ, ಇದು ಮತ್ತೆ ಕೆಪಿಸಿಸಿಯ ಎರಡು ಬಣಗಳ ನಡುವಿನ ಮೇಲಾಟಕ್ಕೆ ಮತ್ತೊಂದು ವೇದಿಕೆಯನ್ನು ರೂಪಿಸುತ್ತಿರುವುದು ಅತ್ಯಂತ ಸ್ಪಷ್ಟ. ಈ ಪಾದಯಾತ್ರೆಯ ಬಗ್ಗೆ ಬಿಜೆಪಿ ಅಲ್ಲಲ್ಲಿ ಹೇಳಿಕೆ ನೀಡುತ್ತಿದ್ದರೂ, ಈ ವಿಚಾರದಲ್ಲಿ ಗಂಭೀರವಾಗಿಲ್ಲ. ಈ ಪಾದಯಾತ್ರೆ ಮುಗಿಯುವಷ್ಟರಲ್ಲಿ ರಾಜ್ಯ ಕಾಂಗ್ರೆಸ್ಸಿನ ಬಣ ರಾಜಕೀಯ ಜಗಜ್ಜಾಹೀರವಾಗಲಿ ಎನ್ನುವುದು ಬಿಜೆಪಿ ಮತ್ತು ಜೆಡಿಎಸ್ನವರ ನಡೆಯಾ ಎನ್ನುವುದು ಅರಿಯಲು ಜಾಸ್ತಿ ದಿನ ಬೇಕಾಗಿಲ್ಲ.












Click it and Unblock the Notifications