ಸೆ. 30ಕ್ಕೆ 'ಜಯನಗರದ ಹುಡುಗಿ' ಪುಸ್ತಕ ಬಿಡುಗಡೆ; ಮೇಘನಾ ಮನದ ಮಾತು

'ಜಯನಗರದ ಹುಡುಗಿ' ಅಂಕಣ ಒನ್ಇಂಡಿಯಾ ಕನ್ನಡ ವೆಬ್ ಪೋರ್ಟಲ್ ನ ಬಹಳ ಜನಪ್ರಿಯ ಅಂಕಣಗಳಲ್ಲಿ ಒಂದು. ಬಹಳ ಸಲ ಅದರ ಮೊದಲ ಓದುಗರು ನಾವೇ. ಈ ವಾರ ಮೇಘನಾ ಏನು ಬರೆದಿರಬಹುದು ಎಂಬ ಕುತೂಹಲವನ್ನು ಅವರು ವರ್ಷದ ನಂತರವೂ ಹಾಗೇ ಕಾಯ್ದುಕೊಂಡಿದ್ದಾರೆ. ಸೆಪ್ಟೆಂಬರ್ 30ರ ಭಾನುವಾರ ಅವರ ಪುಸ್ತಕ ಬಿಡುಗಡೆ ಆಗಲಿದೆ.

ಒನ್ಇಂಡಿಯಾ ಕನ್ನಡದ ಅಂಕಣಕ್ಕಾಗಿ ಅವರು ಹಂಚಿಕೊಂಡ ಅನುಭವದ ಲೇಖನಗಳ ಪೈಕಿ ಆಯ್ದ ನಲವತ್ತನ್ನು ಪುಸ್ತಕವನ್ನಾಗಿ ಬಿಡುಗಡೆ ಮಾಡುತ್ತಿದ್ದಾರೆ ಸಾವಣ್ಣ ಪ್ರಕಾಶನದ ಜಮೀಲ್. ನಮ್ಮ ಅಂಕಣಗಾರ್ತಿಯೊಬ್ಬರ ಪುಸ್ತಕ ಬಿಡುಗಡೆ ಆಗುತ್ತಿರುವುದು ಸಹಜವಾಗಿಯೇ ನಮಗೆ ಇನ್ನಷ್ಟು ಖುಷಿ ಕೊಡುವ ವಿಚಾರ.

ಅದನ್ನೇ ನೆಪ ಮಾಡಿಕೊಂಡು, ಮೇಘನಾ ಅವರ ಜತೆಗೆ ಹರಟೆ ಹೊಡೆಯಬಹುದು. ಅವರಿಗಿರುವ ಜಯನಗರದ ಬಗೆಗಿನ ಪ್ರೀತಿ ಬಗ್ಗೆ ಇನ್ನಷ್ಟು ಕೇಳಿ ತಿಳಿದುಕೊಳ್ಳಬಹುದು. ಮುಖ್ಯವಾಗಿ ಪುಸ್ತಕ ಬಿಡುಗಡೆ ವಿಚಾರವಾಗಿ ಒಂದಿಷ್ಟು ಮಾಹಿತಿ ಕಲೆ ಹಾಕಬಹುದು ಎಂಬುದು ನಮ್ಮ ಉದ್ದೇಶ ಆಗಿತ್ತು.

Meghana Sudhindras Jayanagarada Hudugi book will be released on September 30th

ಇಲ್ಲಿಂದ ಮುಂದೆ ಮೇಘನಾ ಸುಧೀಂದ್ರ ಅವರ ಮಾತುಗಳಲ್ಲೇ ಕೇಳಿ.

"ಬಾಲ್ಯದ ಅನುಭವಗಳನ್ನು ಬರೆಯಬೇಕು ಅನ್ನೋದು ನನ್ನ ಒಳಗಿನ ತುಡಿತವಾಗಿತ್ತು. ಮಾಸ್ಟರ್ಸ್ ಮಾಡುವುದಕ್ಕೆ ಬಾರ್ಸಿಲೋನಾದಲ್ಲಿದ್ದ ನಾನು ಆ ವಿಷಯವನ್ನು ಎಸ್.ಕೆ.ಶ್ಯಾಮ್ ಸುಂದರ್ ಅವರಿಗೆ ತಿಳಿಸಿದೆ. ನನ್ನ ಉದ್ದೇಶವನ್ನು ಪ್ರೋತ್ಸಾಹಿಸುವುದಷ್ಟೇ ಅಲ್ಲದೇ ಅದಕ್ಕೆ ಅವಕಾಶವೂ ಕೊಟ್ಟಿದ್ದು ಒನ್ಇಂಡಿಯಾ ಕನ್ನಡ. ಶ್ಯಾಮ್ ಸರ್ ಹಾಗೂ ಪ್ರಸಾದ್ ಸರ್. ಹೀಗೆ ಅಬ್ಬಬ್ಬಾ ಅಂದರೆ ನಲವತ್ತು ವಾರ ಅಂಕಣ ಬರೆಯಬಹುದೇನೋ ಅಂತ ಅಂದಾಜು ಮಾಡಿದ್ದೆ ಅಷ್ಟೇ. ಆದರೆ ಅದು ವರ್ಷವನ್ನೂ ದಾಟಿ, ಒಂದು ಪುಸ್ತಕವಾಗಿ ಹೊರಗೆ ಬರುವ ಮಟ್ಟಿಗೆ ಆಗಬಹುದು ಅನ್ನೋ ಯಾವ ನಿರೀಕ್ಷೆಯೂ ಇರಲಿಲ್ಲ.

"ಇನ್ನು ಈ ಅಂಕಣಕ್ಕೆ ಇಟ್ಟ ಹೆಸರು 'ಜಯನಗರದ ಹುಡುಗಿ'. ನೀವು ಗಮನಿಸಿ ನೋಡಿ. ಅಥವಾ ನನಗೇ ಹಾಗೆ ಅನಿಸುತ್ತೋ ಏನೋ, ಜಯನಗರ ನಾನು ಹುಟ್ಟಿ ಬೆಳೆದ ಬಡಾವಣೆ. ಪ್ಲಾನ್ಡ್ ಲೇಔಟ್. ಇಲ್ಲಿನ್ನೂ ರೆಡ್ ಆಕ್ಸೈಡ್ ನೆಲದ ಹಳೆ ಮನೆಗಳು ಹಾಗೇ ಉಳಿದಿವೆ. ನಾನು ಬೆಂಗಳೂರಿನವಳು, ಅದರಲ್ಲಿ ಜಯನಗರದವಳು ಅನ್ನೋದು ನನ್ನ ಗುರುತು. ನನ್ನ ಅಪ್ಪ, ತಾತ ಅವರ ಮೂಲ ತುಮಕೂರು. ನಾನು ಇಪ್ಪತ್ತೈದು ವರ್ಷಗಳ ಕಾಲ ಅಂದರೆ ಬಾರ್ಸಿಲೋನಾಗೆ ಮಾಸ್ಟರ್ಸ್ ಮಾಡುವ ಮುಂಚೆ ಜಯನಗರದಲ್ಲೇ ಇದ್ದವಳು. ಜಗತ್ತಿನಲ್ಲಿ ಎಲ್ಲೇ ಹೋದರೂ ಅದು ನನ್ನ ಜಯನಗರಕ್ಕೆ ಸಮ ಅಲ್ಲ ಅನ್ನಿಸುತ್ತದೆ. ಆ ಕಾರಣಕ್ಕೇ ಅಂಕಣಕ್ಕೆ ಈ ಹೆಸರನ್ನಿಟ್ಟೆವು.

Meghana Sudhindras Jayanagarada Hudugi book will be released on September 30th

"ಇನ್ನೊಂದಿಷ್ಟು ವಿವರವಾಗಿ ಹೇಳಬೇಕು ಅಂದರೆ ಜೋಗಿಯಂಥವರಿಗೆ ಉಪ್ಪಿನಂಗಡಿ, ಜಯಂತ್ ಕಾಯ್ಕಿಣಿ ಅವರಿಗೆ ಮುಂಬೈ ಜತೆಗೆ ನಂಟು ಅಂಥದ್ದಿದೆ. ಅವರ ಬರವಣಿಗೆಯಲ್ಲಿ ತುಂಬ ಸ್ಪಷ್ಟವಾಗಿ ಕಾಣುತ್ತದೆ. ಹಾಗೆ ನನ್ನ ಮೇಲೆ ಪ್ರಭಾವ ಬೀರಿರುವುದು ಜಯನಗರ. ನೀವು ಈಗಲೂ ಇಲ್ಲಿ ಕನ್ನಡ ಕಾಣಬಹುದು, ಕೇಳಬಹುದು. ಇನ್ನೂ ಕಾಸ್ಮೋಪಾಲಿಟನ್ ಆಗದ ಜಯನಗರ ಇದು.

"ನನ್ನ ಅಂಕಣ ಓದಿದ ಮೇಲೆ ಬಹಳ ಜನ ಮೇಲ್ ಮಾಡ್ತಾರೆ, ಕೆಲವರು ವಾಟ್ಸ್ ಆಪ್ ಮೆಸೇಜ್ ಮಾಡ್ತಾರೆ. ಮೊದಲಿಗೆ ಅವರು ನೆನಪಿಸಿಕೊಳ್ಳೋದು ನನ್ನ ತಂದೆ ಹಾಲ್ದೊಡ್ಡೇರಿ ಸುಧೀಂದ್ರ ಅವರನ್ನು. ಅವರ ಲೇಖನಗಳನ್ನು ಓದುತ್ತಲೇ ನಾವು ಬೆಳೆದ್ವಿ. ನೀವು ಚೆನ್ನಾಗಿ ಬರೆಯುತ್ತೀರಿ ಅಂತಾರೆ. ಅಪ್ಪನ ಬಗ್ಗೆ ಮಾತು ಕೇಳುತ್ತಲೇ ಇನ್ನಷ್ಟು ಖುಷಿಯಾಗುವ ಜತೆಗೆ ಇನ್ನಷ್ಟು ಚೆಂದಕ್ಕೆ, ಹೊಸ-ಹೊಸ ವಿಷಯ ಹೆಕ್ಕಿ ಬರೆಯಬೇಕು ಎಂಬ ತಪನೆ ಶುರುವಾಗುತ್ತದೆ.

Meghana Sudhindras Jayanagarada Hudugi book will be released on September 30th

"ನಾನು ಹಾಗೂ ತಂಗಿ ಮಾಧುರ್ಯ ಕನ್ನಡವನ್ನು ಚೆನ್ನಾಗಿ ಬರೀತೀವಿ ಅಂತ ಬಹಳ ಜನ ಪ್ರೀತಿಯಿಂದ ಹೇಳ್ತಾರೆ. ಅದಕ್ಕೆ ಮುಖ್ಯ ಕಾರಣ ನನ್ನ ಅಮ್ಮ ಸೌಮ್ಯಸುಮಾ. ಅಪ್ಪನಿಗೆ ಕೇಂದ್ರ ಸರಕಾರಿ ನೌಕರಿಯಾದ್ದರಿಂದ ನಮಗೆ ಕೇಂದ್ರೀಯ ವಿದ್ಯಾಲಯದಲ್ಲಿ ಅವಕಾಶ ಸಿಗುವುದು ಕಷ್ಟ ಇರಲಿಲ್ಲ. ಆದರೆ ಅಮ್ಮನಿಗೆ ನಾವು ಕನ್ನಡ ಕಲಿಯಲೇ ಬೇಕು ಅನ್ನೋ ಆಸೆ. ಅದೇ ಕಾರಣಕ್ಕೆ ಕನ್ನಡ ನಮ್ಮ ಪ್ರಥಮ ಭಾಷೆಯಾಗಿತ್ತು.

Meghana Sudhindras Jayanagarada Hudugi book will be released on September 30th

"ಇನ್ನು ಪುಸ್ತಕ ಬಿಡುಗಡೆ ವಿಷಯಕ್ಕೆ ಬಂದರೆ ಸೆಪ್ಟೆಂಬರ್ 30ನೇ ತಾರೀಕು ಬೆಳಗ್ಗೆ 10.30ಕ್ಕೆ ಜಯನಗರ ನ್ಯಾಷನಲ್ ಕಾಲೇಜಿನ ಎಚ್.ಎನ್.ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಇದೆ. ಭಾರತಿ ಬಿ.ವಿ., ರಂಗರಾಜ ಚಕ್ರವರ್ತಿ ಅವರ ಪುಸ್ತಕಗಳು ಕೂಡ ಅವತ್ತೇ ಬಿಡುಗಡೆ ಆಗ್ತಿವೆ. ಇನ್ನು ನನ್ನ ಪುಸ್ತಕಕ್ಕೆ ಎಸ್.ಕೆ.ಶ್ಯಾಮ್ ಸುಂದರ್ ಅವರು ಮುನ್ನುಡಿ ಬರೆದಿದ್ದರೆ, ಜೋಗಿ ಬೆನ್ನುಡಿ ಬರೆದಿದ್ದಾರೆ. ಅಂದಿನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಾಹಿತಿ ನಿಸಾರ್ ಅಹ್ಮದ್, ನಟ ಶ್ರೀನಾಥ್, ಶ್ಯಾಮ್ ಸುಂದರ್ ವೇದಿಕೆ ಮೇಲೆ ಇರ್ತಾರೆ. ಒಂದು ಕಾಲದಲ್ಲಿ ಇವರನ್ನೆಲ್ಲ ನೋಡಿದರೆ, ಇವರ ಜತೆಗೆ ಮಾತನಾಡುವುದಕ್ಕೆ ಹತ್ತು ನಿಮಿಷ ಅವಕಾಶ ಸಿಕ್ಕರೆ ಅಂದುಕೊಳ್ಳುತ್ತಿದ್ದೆ. ಅಂಥವರೆಲ್ಲ ಇವತ್ತು ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರುವಂತಾಗಿರುವುದು ಬಹಳ ಖುಷಿ ಆಗ್ತಿದೆ. ಇನ್ನು ನಮ್ಮ ಇಡೀ ಕುಟುಂಬ ಇದ್ದೇ ಇರುತ್ತದೆ. ಲೇಖಕಿ ಮೇಘನಾ ಅಪ್ಪನಾಗಿ ಬರ್ತೀನಿ ಅಂತ ಈಗಾಗಲೇ ಅಪ್ಪ ಹೇಳಿದ್ದಾರೆ" ಎಂದು ಮಾತು ಮುಗಿಸಿದರು 'ಜಯನಗರದ ಹುಡುಗಿ' ಮೇಘನಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+