ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ : ರಿಜ್ವಾನ್ ಪರ ಜಮೀರ್ ಬ್ಯಾಟಿಂಗ್
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಟ್ಟಾರೆ, ಬಿಜೆಪಿ ಸಂಸದ ಪಿ.ಸಿ ಮೋಹನ್ ರನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಕೈ ಪಡೆ ಮಾಡುತ್ತಿದೆ. ಈ ನಡುವೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಐದಕ್ಕೇರಿದೆ.ಆಕಾಂಕ್ಷಿಗಳ ಪೈಕಿ, ಕಳೆದ ಬಾರಿ ಸೋಲು ಕಂಡ ರಿಜ್ವಾನ್ ಅರ್ಷದ್ ಅವರ ಪರ ಜಮೀರ್ ಅಹ್ಮದ್ ಖಾನ್ ಅವರು ಬ್ಯಾಟಿಂಗ್ ಮಾಡುತ್ತಿದ್ದಾರೆ.
2008ರಲ್ಲಿ ರಚನೆಯಾದ ಬೆಂಗಳೂರು ಸೆಂಟ್ರಲ್ ಕ್ಷೇತ್ರ ಎರಡು ಚುನಾವಣೆಯನ್ನು ಎದುರಿಸಿದೆ. ಎರಡು ಬಾರಿಯೂ ಬಿಜೆಪಿಯ ಪಿ.ಸಿ.ಮೋಹನ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪ್ರತಿ ಚುನಾವಣೆಗೂ ಅಭ್ಯರ್ಥಿಗಳನ್ನು ಕ್ಷೇತ್ರದಲ್ಲಿ ಬದಲಾವಣೆ ಮಾಡುತ್ತಿದೆ. 2009ರಲ್ಲಿ ಎಚ್.ಟಿ.ಸಾಂಗ್ಲಿಯಾ, 2014ರಲ್ಲಿ ರಿಜ್ವಾನ್ ಅರ್ಷದ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.
ಬೆಂಗಳೂರು ಸೆಂಟ್ರಲ್: ಐದಕ್ಕೇರಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿರುವುದು, ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ತಂದುಕೊಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ ರಾಜ್ಯ ಮುಖಂಡರು.
ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಜಮೀರ್ ಅಹ್ಮದ್ ಖಾನ್ ಹಾಗೂ ಹ್ಯಾರೀಸ್ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಮೀರ್, ಟಿಕೆಟ್ ಯಾರಿಗೆ ಕೊಟ್ಟರೂ ಕೆಲಸ ಮಾಡಬೇಕು. ಗೆಲ್ಲುವುದು ನಮ್ಮ ಗುರಿಯಾಗಬೇಕು. ಎಲ್ಲರೂ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದಿದ್ದಾರೆ.
ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆದಿದೆ. ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಮಾಜಿ ಸಚಿವ ರೋಷನ್ ಬೇಗ್, ನಿವೃತ್ತ ಐಎಎಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ ಅವರು ಈಗಾಗಲೇ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಪಟ್ಟಿಗೆ ಸಲೀಂ ಅಹಮದ್ ಅವರು ಹೊಸ ಸೇರ್ಪಡೆಯಾಗಿದ್ದಾರೆ.
ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತಮತಗಳು ಹೆಚ್ಚು. 5.5 ಲಕ್ಷ ಲಕ್ಷ ತಮಿಳು, 4.5 ಲಕ್ಷ ಮುಸ್ಲಿಂ, 2 ಲಕ್ಷ ಕ್ರಿಶ್ಚಿಯನ್ ಮತದಾರರು ಇದ್ದಾರೆ. ಚಿಕ್ಕಪೇಟೆ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೈನ ಮತ್ತು ಮಾರ್ವಾಡಿ ಸಮುದಾಯದ ಮತಗಳಿವೆ. ಅಲ್ಪ ಸಂಖ್ಯಾತರನ್ನು ಸೆಳೆದವರು ಚುನಾವಣೆಯಲ್ಲಿ ಜಯಗಳಿಸುತ್ತಾರೆ.
ಅಲ್ಪಸಂಖ್ಯಾತರಿಗೆ ಟಿಕೆಟ್ ಪಕ್ಕಾ
ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿರುವುದರಿಂದ ಈ ಕ್ಷೇತ್ರದಿಂದ ಸ್ಪರ್ಧಿಸಲು ರೋಷನ್ ಬೇಗ್ ಅಥವಾ ರಿಜ್ವಾನ್ ಅರ್ಷದ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಯೇ ಹೆಚ್ಚು ಎಂಬ ಸುದ್ದಿ ಬಂದಿದೆ. ಸಲೀಂ ಅಹ್ಮದ್ ಅವರ ಹೆಸರು ಕೇಳಿ ಬಂದಿದ್ದರೂ ಅವರ ಪರ ಲಾಬಿ ನಡೆಸುತ್ತಿರುವವರು ಕಡಿಮೆ. ರಿಜ್ವಾನ್ ಪರ ಜಮೀರ್ ಅಹ್ಮದ್ ಹಾಗೂ ಶಾಸಕ ಹ್ಯಾರೀಸ್ ಲಾಬಿ ನಡೆಸಿದ್ದಾರೆ. ಅಂತಿಮ ನಿರ್ಣಯ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ತೆಗೆದುಕೊಳ್ಳಲಿದ್ದಾರೆ.
2014ರ ಫಲಿತಾಂಶ: ಹಾಲಿ ಸಂಸದ ಪಿ.ಸಿ ಮೋಹನ್
ಬೆಂಗಳೂರು ಸೆಂಟ್ರಲ್ ಕ್ಷೇತ್ರ ಬಿಜೆಪಿಯ ವಶದಲ್ಲಿದೆ. 2009ರ ಚುನಾವಣೆಯಲ್ಲಿ ಪಿ.ಸಿ.ಮೋಹನ್ ಅವರು 340162 ಮತಗಳನ್ನು ಪಡೆದು ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ 557130 ಮತಗಳನ್ನು ಪಡೆದು 2ನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಕಳೆದ ಚುನಾವಣೆ ಗೆಲುವಿನ ಅಂತರ 1,37,500 ಮತಗಳು. ಈ ಬಾರಿಯೂ ಬಿಜೆಪಿಯಿಂದ ಅವರು ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದೆ.
ಪ್ರಕಾಶ್ ರಾಜ್ ಸ್ಪರ್ಧೆ : ಬೆಂಗಳೂರು ಸೆಂಟ್ರಲ್ನ ರಾಜಕೀಯ ಚಿತ್ರಣ
ಪ್ರಕಾಶ್ ರಾಜ್ ಸ್ಪರ್ಧೆಯಿಂದ ಏನು ವ್ಯತ್ಯಾಸ
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಪ್ರಕಾಶ್ ರಾಜ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಸಂಚಾರ ನಡೆಸಿ ಪ್ರಣಾಳಿಕೆ ರಚನೆ ಮಾಡಲು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪ್ರಕಾಶ್ ರಾಜ್ ಸ್ಪರ್ಧೆಯಿಂದ ಮತ ವಿಭಜನೆಯಾಗುವ ನಿರೀಕ್ಷೆಯಿದ್ದು, ಹೀಗಾಗಿ, ಪ್ರಮುಖ ಪಕ್ಷಗಳು ಎಚ್ಚರಿಕೆಯಿಂದ ಅಭ್ಯರ್ಥಿ ಆಯ್ಕೆ, ಪ್ರಣಾಳಿಕೆ, ಪ್ರಚಾರದ ಬಗ್ಗೆ ಚಿಂತನೆ ನಡೆಸಿವೆ.