ಉತ್ತಮ ಪ್ರಜಾಕೀಯ ಪಕ್ಷದ ತಯಾರಿ ಬಗ್ಗೆ ಉಪ್ಪಿ ಹಂಚಿಕೊಂಡ ಇಂಚಿಂಚೂ ಮಾಹಿತಿ
Recommended Video

ನಟ-ನಿರ್ದೇಶಕ, 'ಪ್ರಜಾಕಾರಣಿ' ಉಪೇಂದ್ರ ಅವರ ಲೋಕಸಭಾ ಚುನಾವಣೆ ತಯಾರಿ ಹೇಗಿದೆ ಎಂದು ತಿಳಿದುಕೊಳ್ಳುವುದು ಹಾಗೂ ಅದನ್ನು ಒನ್ ಇಂಡಿಯಾ ಕನ್ನಡದ ಓದುಗರಿಗೆ ಮುಟ್ಟಿಸುವುದು ನಮ್ಮ ಉದ್ದೇಶವಾಗಿತ್ತು. ಆ ಕಾರಣಕ್ಕೆ ಅವರ ಸಂದರ್ಶನ ಮಾಡಿ, ಅದನ್ನು ನಿಮ್ಮ ಮುಂದೆ ತಂದಿದ್ದೇವೆ. ಅವರ ಜತೆ ಮಾತನಾಡಿಸುವ ಅಷ್ಟೂ ಸಮಯ ಘನವಾದ ಉದ್ದೇಶ ಉಪೇಂದ್ರಗೆ ಇರುವುದು ಗೊತ್ತಾಗುತ್ತದೆ.
ಶತಾಯಗತಾಯ ಜನರಿಗೆ ತಮ್ಮ ಕನಸು, ಉದ್ದೇಶವನ್ನು ದಾಟಿಸಲೇಬೇಕು ಎಂದು ಅವರು ನಿರ್ಧರಿಸಿಯಾಗಿದೆ. ಅವರ ಬಳಿ ನೇರವಾಗಿ ಉತ್ತರ ಪಡೆಯುವುದು ಎಷ್ಟು ಕಷ್ಟವೋ ಪ್ರಶ್ನೆ ಕೇಳುವುದು ಮತ್ತೂ ಕಷ್ಟ. ಏಕೆಂದರೆ ನಾವೇ ಕೇಳಿದ ಪ್ರಶ್ನೆಗೆ ಮರುಪ್ರಶ್ನೆಯೊಂದನ್ನು ಇಟ್ಟು, ಸಂದರ್ಶನಕ್ಕೆ ಕೂತವರು ನಾವೋ ಅಥವಾ ಅವರೋ ಎಂಬ ಗೊಂದಲ ಉಂಟು ಮಾಡುವಂತೆ ಇರುತ್ತದೆ ಅವರ ವಾಗ್ಝರಿ.
ಇನ್ನೇನು ಈ ಸಲದ ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಮೊದಲಿಗೆ ಏಪ್ರಿಲ್ ಹದಿನೆಂಟು, ಆ ನಂತರ ಏಪ್ರಿಲ್ ಇಪ್ಪತ್ಮೂರನೇ ತಾರೀಕು ಹೀಗೆ ಎರಡು ಹಂತ. ಈ ಸ್ಪರ್ಧೆಗೆ ಉಪೇಂದ್ರ ಅವರ ತಯಾರಿ ಹೇಗಿದೆ ಎಂಬುದನ್ನು ಅವರ ಮಾತಿನಲ್ಲೇ ಇಲ್ಲಿ ನೀಡಲಾಗಿದೆ. ಪ್ರಶ್ನೋತ್ತರದ ಮಾತಿಲ್ಲ. ಉಪೇಂದ್ರ ಮಾತನಾಡಿದ್ದಾರೆ, ನಾವು ಕೇಳಿಸಿಕೊಂಡಿದ್ದೀವಿ ಅಂದುಕೊಳ್ಳಿ.
ಉತ್ತಮ ಪ್ರಜಾಕೀಯ ಪಕ್ಷದ ಅಧ್ಯಕ್ಷ ಉಪೇಂದ್ರ ಅವರಿಗೆ ಇದು ಮೊದಲ ಚುನಾವಣೆ ಸ್ಪರ್ಧೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲೇ ಉಪೇಂದ್ರ ಸ್ಪರ್ಧಿಸಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಆದರೆ ಈಗಲೂ ಲೋಕಸಭೆ ಚುನಾವಣೆಗೆ ಅಖಾಡಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಿದ್ದರೆ ಉಪೇಂದ್ರ ಹೇಳಿರುವುದನ್ನು ಮುಂದೆ ಓದಿಕೊಳ್ಳಿ.

ಪ್ರಶ್ನಿಸುವುದನ್ನು ರೂಢಿಸಿಕೊಳ್ಳಬೇಕು
ನೀವು ನಮಗೆ ಯಾಕೆ ಮತ ಹಾಕಬೇಕು? ನಂಬಿಕೆ ಅಂತ ಹೇಳ್ತೀರಿ ಆಲ್ಲವಾ? ಎಪ್ಪತ್ತೆರಡು ವರ್ಷಗಳಿಂದ ನಂಬಿಕೊಂಡೇ ಬಂದಿದ್ದೀವಿ. ಆದರೆ ಏನಾಗಿದೆ? ನಾವು ಪ್ರಶ್ನೆ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದೀವಿ. ಯಾರೇ ಆದರೂ ಸರಿ, ಭರವಸೆ ನೀಡಿದಾಗ ಅದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಬೇಕು. ಈಗ ನೀವು ನೀಡುತ್ತಿರುವ ಭರವಸೆ ಪೂರೈಸಲು ಎಷ್ಟು ಸಮಯ ಬೇಕಾಗುತ್ತದೆ ಎಂದು ಪ್ರಶ್ನೆ ಮಾಡಬೇಕು. ನಾವು ಪ್ರಶ್ನೆ ಮಾಡುವುದನ್ನು ರೂಢಿಸಿಕೊಳ್ಳದಿದ್ದರೆ ವ್ಯವಸ್ಥೆಯಲ್ಲೂ ಬದಲಾವಣೆ ಆಗಲ್ಲ. ನಾವೀಗ ಉತ್ತಮ ಪ್ರಜಾಕೀಯ ಪಕ್ಷದಿಂದ ಹೇಳಲು ಹೊರಟಿರುವುದು ಅದನ್ನೇ.

ನಿರಂತರವಾಗಿ ಜನರ ಜೊತೆ ಸಂಪರ್ಕ
ಮೊದಲಿಗೆ ಜನರ ಜತೆಗೆ ಸರಕಾರ ನೇರವಾದ ಸಂಪರ್ಕ ಬೆಳೆಸಿಕೊಳ್ಳಬೇಕು. ಈಗ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಆದ್ದರಿಂದ ಜನರ ಜತೆಗೆ ಸಂಪರ್ಕ ಸಾಧಿಸುವುದು ಕಷ್ಟವೇ ಅಲ್ಲ. ಐದು ವರ್ಷಗಳ ಕಾಲ ಜನರ ಕೈಗೆ ಸಿಗದಷ್ಟು ಬಿಜಿಯಾಗಿ ಇರುವುದಕ್ಕೆ ಯಾರಿಗೂ ಸಾಧ್ಯವೂ ಇಲ್ಲ. ಜನರನ್ನು ಸಂಪರ್ಕಿಸಿ, ಅವರ ಸಮಸ್ಯೆಗಳನ್ನು ಅವರ ಮೂಲಕವೇ ತಿಳಿದುಕೊಂಡು, ಬಗೆಹರಿಸಲು ಪ್ರಯತ್ನಿಸಬೇಕು. ಹೀಗೆ ಪ್ರತಿ ಹಳ್ಳಿ-ಹಳ್ಳಿಯನ್ನು ಸಂಪರ್ಕಿಸಬೇಕು. ನಮ್ಮ ಸಂವಿಧಾನ ರಚನೆ ಆದ ಕಾಲಕ್ಕೆ ಒಬ್ಬರ ಮೇಲೆ ಒಬ್ಬರು, ಅವರ ನಿಗಾಕ್ಕೆ ಒಬ್ಬರು ಎಂದು ಒಂದು ವ್ಯವಸ್ಥೆ ರೂಪಿಸಿದ್ದರು. ಆ ರೀತಿ ಐದು ಜನ ಬುಕ್ ಆದರೆ ಏನು ಬೇಕಾದರೂ ಮಾಡಬಹುದು. ಈಗ ತಂತ್ರಜ್ಞಾನ ಬೆಳೆದಿದೆ. ಆಡಳಿತದಲ್ಲಿ ಅದನ್ನು ತಂದು, ಬದಲಾವಣೆ ಮಾಡಿಕೊಳ್ಳಬೇಕಿದೆ.

ಜನರ ಮನಸ್ಥಿತಿ ಬದಲಾಗಬೇಕು.
ಜನರ ಮನಸ್ಥಿತಿಯಲ್ಲೂ ಬದಲಾವಣೆ ಆಗಬೇಕಿದೆ. ಅಲ್ಲಿಯ ತನಕ ನಾವು ನಿರೀಕ್ಷಿಸುವ ಬದಲಾವಣೆಯನ್ನು ತರುವುದಕ್ಕೆ ಸಾಧ್ಯವಿಲ್ಲ. ಇವತ್ತಿಗೂ ಚುನಾವಣೆಗೆ ನಿಲ್ಲಬೇಕು ಅಂದರೆ ಅವರು ಖ್ಯಾತರೇ ಆಗಿರಬೇಕು, ಫೇಮಸ್ ಆಗಿರಬೇಕು ಎಂಬ ಕಲ್ಪನೆ ಇದೆ. ಜೊತೆಗೆ ಅದು ದೊಡ್ಡ ಪಕ್ಷ, ಇದು ಸಣ್ಣ ಪಕ್ಷ ಎಂಬ ಭೇದ ಇದೆ. ಇನ್ನು ಹತ್ತು ಸಲ ಗೆದ್ದವರನ್ನೇ ಮತ್ತೆ ಮತ್ತೆ ಗೆಲ್ಲಿಸಬೇಕು. ಇಂಥ ಮನಸ್ಥಿತಿ ಈಗಲೂ ನಮ್ಮ ಜನರಲ್ಲಿ ಉಳಿದುಹೋಗಿದೆ. ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಅಂದುಕೊಳ್ಳುವಾಗ ನಮ್ಮಲ್ಲಿ ಒಬ್ಬೊಬ್ಬರ ಆಲೋಚನೆಯಲ್ಲೂ ಬದಲಾವಣೆ ಆಗಬೇಕು.

ಚುನಾವಣೆಗೆ ಕೋಟಿ ಕೋಟಿ ಖರ್ಚು ಮಾಡೋದು ಮೂರ್ಖತನ
ಚುನಾವಣೆಗಾಗಿ ಅನವಶ್ಯಕವಾಗಿ ಕೋಟ್ಯಂತರ ರುಪಾಯಿ ಖರ್ಚು ಮಾಡುವುದು ಮೂರ್ಖತನ. ಈಗ ನೀವೇ ಯೋಚನೆ ಮಾಡಿ, ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಚುನಾವಣೆಯಲ್ಲಿ ಗೆದ್ದ ವ್ಯಕ್ತಿ ಏನು ಮಾಡುತ್ತಾನೆ? ತಾನು ಹಾಕಿದ್ದ ದುಡ್ಡನ್ನು ಲಾಭ ಸಹಿತವಾಗಿ ವಾಪಸ್ ಪಡೆಯಲು ಬಯಸುತ್ತಾನೆ. ಹೀಗೆ ದುಡ್ಡು ಹಾಕಿ, ದುಡ್ಡು ತೆಗೆಯುವುದು ವ್ಯಾಪಾರ ಆಗುತ್ತದೆಯೇ ವಿನಾ ಸಮಾಜ ಸೇವೆ ಹೇಗಾಗುತ್ತದೆ? ಆದ್ದರಿಂದ ನಮ್ಮ ಚುನಾವಣೆ ಆಯೋಗದಿಂದ ಕೆಲವು ನಿಯಮಗಳನ್ನು ತಂದು, ಈಗಿರುವ ಪದ್ಧತಿಯಿಂದ ಹೊರಬಂದರೆ ಬಹಳ ಬದಲಾವಣೆ ಆಗುತ್ತದೆ. ಚುನಾವಣೆಗೆ ಖರ್ಚು ಮಾಡುವ ಹಣವನ್ನು ಬೇರೆಯದಕ್ಕೆ ಬಳಸಬಹುದು.

ಅಭ್ಯರ್ಥಿಗಳ ಆಯ್ಕೆ ಬಹುತೇಕ ಮುಕ್ತಾಯಗೊಂಡಿದೆ.
ನಮ್ಮ ಪಕ್ಷಕ್ಕೆ (ಉತ್ತಮ ಪ್ರಜಾಕೀಯ ಪಕ್ಷ) ಈಗಾಗಲೇ ಸಾಕಷ್ಟು ಅಭ್ಯರ್ಥಿಗಳು ಬಂದಿದ್ದಾರೆ. ಎಲ್ಲರೂ ತುಂಬ ಒಳ್ಳೆ ಅಭ್ಯರ್ಥಿಗಳು. ಈ ವ್ಯವಸ್ಥೆ ವಿರುದ್ಧ ಹೋರಾಡಲು ಅವರು ಬಂದಿರುವುದೇ ಗ್ರೇಟ್! ಈಗ ಅವರಲ್ಲೇ ಫಿಲ್ಟರ್ ಮಾಡಬೇಕು. ಡಾಕ್ಯುಮೆಂಟೇಷನ್ ಪ್ರಕ್ರಿಯೆ ನಡೆಯುತ್ತಿದೆ. ಲೋಕಸಭೆ ಚುನಾವಣೆಯ ಕೆಲಸಗಳು ಸಾಕಷ್ಟು ಇವೆ. ನಾನು ಸ್ಪರ್ಧಿಸಿದರೆ ಆಗ ನನ್ನ ಕ್ಷೇತ್ರದ ಬಗ್ಗೆ ಮಾತ್ರ ಗಮನ ಕೊಡಬೇಕಾಗುತ್ತದೆ. ಹಾಗೆ ಆಗೋದು ಬೇಡ. ನಾನು ಎಲ್ಲ ಕ್ಷೇತ್ರಗಳ ಬಗ್ಗೆಯೂ ಗಮನ ಕೊಡಬೇಕು. ಆದ್ದರಿಂದ ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ.

ಉತ್ತಮ ಪ್ರಜಾಕೀಯ ಪಕ್ಷ ಪ್ರಣಾಳಿಕೆ ಸಿದ್ಧ
ಪ್ರಜಾಕೀಯ ಅನ್ನೋ ಆಪ್ಲಿಕೇಷನ್ ನಲ್ಲಿ ಪ್ರಣಾಳಿಕೆ ಇದೆ. ಅದರಲ್ಲಿ ಎಲ್ಲ ಮಾಹಿತಿಯೂ ಇದೆ. ಲೋಕಸಭೆಗೆ ಪ್ರತ್ಯೇಕ ಪ್ರಣಾಳಿಕೆ ಮಾಡಿಲ್ಲ. ವಿಧಾನಸಭೆಗೆ ಮಾಡಿದ್ದನ್ನೇ ಇಲ್ಲಿ ಬಳಸುತ್ತೀವಿ. ಪ್ರಜಾಕೀಯ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ದುಡ್ಡು ನಿಮಗೆ ಶೇಕಡಾ ನೂರರಷ್ಟು ತಲುಪಿಸುತ್ತೇವೆ. ಮೈಕ್ರೋ ಲೆವೆಲ್ ಪ್ಲಾನಿಂಗ್ ಮಾಡ್ತೀವಿ. ಶ್ರಮ ಹಾಕಿ, ಬುದ್ಧಿವಂತಿಕೆ ಉಪಯೋಗಿಸಿ, ಕಮ್ಮಿ ಖರ್ಚಿನಲ್ಲಿ ಕೆಲಸ ಮಾಡಿ ತೋರಿಸುತ್ತೇವೆ. ನಿಮ್ಮ ಹತ್ತಿರ ಇರುವ ದುಡ್ಡಿನಲ್ಲಿ ಎಷ್ಟು ಕಡಿಮೆ ಖರ್ಚಿನಲ್ಲಿ ಎಷ್ಟು ಬುದ್ಧಿವಂತಿಕೆಯಿಂದ ಉತ್ತಮ ಕೆಲಸ ಮಾಡಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ಇನ್ನು ನಮ್ಮ ಪಕ್ಷಕ್ಕೆ ತಾತ್ಕಾಲಿಕವಾಗಿ ಆಟೋ ಚಿಹ್ನೆ ನೀಡಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಇಂತಿಷ್ಟು ಪರ್ಸೆಂಟ್ ಮತವನ್ನು ನಮ್ಮ ಪಕ್ಷಕ್ಕೆ ನೀಡಿದರೆ ಚುನಾವಣೆ ಆಯೋಗದಿಂದ ನಮಗೆ ಇದೇ ಗುರುತು ಮುಂದಿನ ಚುನಾವಣೆಗಳಲ್ಲೂ ಕಾಯಂ ಆಗುತ್ತದೆ.

ಇಲ್ಲೇ ಉಳಿಯುವುದಕ್ಕೆ ಯೋಗ್ಯತೆ ಇರಬೇಕು
ಮೊದಲನೆಯದಾಗಿ ಆ ಬಗ್ಗೆ ಮಾತನಾಡುವುದೇ ತಪ್ಪು. ಅಪ್ಪ ರಾಜಕಾರಣಿಯಾಗಿ, ಅವರು ಮಾಡುತ್ತಿರುವ ಕೆಲಸ ಮಗನಿಗೆ ಸ್ಫೂರ್ತಿಯಗಿ ಅವರಿಗಿಂತ ಉತ್ತಮವಾದ ಕೆಲಸ ಮಾಡ್ತೀನಿ ಅಂತ ಜನರ ಮುಂದೆ ಬರಲು ಆತ ರಾಜಕಾರಣಕ್ಕೆ ಬಂದರೆ ತಪ್ಪಲ್ಲ. ಆದರೆ ಅವನಿಗೆ ಯೋಗ್ಯತೆ ಇರಬೇಕು. ಕೇವಲ ಅಪ್ಪನ ಹೆಸರು ಮುಂದಿಟ್ಟುಕೊಂಡು ಬರಬಾರದು. ಹಾಗೆ ಬಂದರೂ ಅಂಥವರು ತುಂಬ ದಿನ ಇರಕ್ಕಾಗಲ್ಲ. ಉದಾಹರಣೆಗೆ ನನ್ನ ಮಗ ನಾಳೆ ಸಿನಿಮಾ ಇಂಡಸ್ಟ್ರಿಗೆ ಬಂದ ಅಂದರೆ ಮೊದಲ ಸಿನಿಮಾ ಮಾಡಬಹುದು. ಆದರೆ ನಂತರ ಇಲ್ಲೇ ಉಳಿಯಬೇಕು ಅಂದರೆ ಯೋಗ್ಯತೆ ಇರಬೇಕು. ಇಲ್ಲದಿದ್ದರೆ ಇಲ್ಲಿ ಉಳಿಯುವುದಕ್ಕೆ ಆಗಲ್ಲ. ಅದೇ ರೀತಿ ರಾಜಕಾರಣದಲ್ಲೂ ಯೋಗ್ಯತೆ ಇಲ್ಲದಿದ್ದರೆ ಇರುವುದಕ್ಕೆ ಆಗಲ್ಲ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications