ತಂದೆ ತಾಯಿಯಂತೆ 'ಕ್ಯಾನ್ಸರ್' ಮಹಾಮಾರಿಗೆ ಬಲಿಯಾದ ಅನಂತ್ ಕುಮಾರ್
ಮೋದಿ ಸರಕಾರದ ಮಹತ್ವಾಕಾಂಕ್ಷೆಯ ' ಪ್ರಧಾನಮಂತ್ರಿ ಭಾರತೀಯ ಜನ ಔಷಧ ಪರಿಯೋಜನಾ' ಮಳಿಗೆಯೊಂದನ್ನು ಮೈಸೂರಿನಲ್ಲಿ ಈ ಹಿಂದೆ ಉದ್ಘಾಟನೆ ಮಾಡುವ ವೇಳೆ, ಕೇಂದ್ರ ರಾಸಾಯನಿಕ ರಸಗೊಬ್ಬರ, ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಅನಂತ್ ಕುಮಾರ್, ಭಾವೋದ್ವೇಗಕ್ಕೊಳಗಾಗಿ ಜೀವನದಲ್ಲಿ ತಾನು ಪಟ್ಟ ನೋವನ್ನು ವಿವರಿಸುತ್ತಿದ್ದರು.
ತಾಯಿಗೆ ಔಷಧಿ ಕೊಡಿಸಿದರೆ, ಉಟಕ್ಕೆ ದುಡ್ಡಿಲ್ಲದೇ ಬದುಕಿದ್ದ ದಿನವನ್ನು ಕಂಡಿದ್ದೇನೆ. ನಾನಿಂದು ಈ ಮಟ್ಟಕ್ಕೆ ಬೆಳೆಯಲು ನನ್ನ ಕಷ್ಟ ಕಾಲದಲ್ಲಿ ಜೀವನ ನನಗೆ ಕಲಿಸಿದ ಪಾಠವೇ ಕಾರಣ. ಅಂದು ನಾನು ಎದುರಿಸಿದ ಕಷ್ಟಕಾರ್ಪಣ್ಯವನ್ನು ಜನಸಾಮಾನ್ಯರು ಎದುರಿಸದೇ ಇರಲು, ನನ್ನ ಕೈಲಾದ ಕೆಲಸವನ್ನು ಮಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದಿದ್ದರು.
ಎಚ್ ಎನ್ ನಾರಾಯಣ ಶಾಸ್ತ್ರಿ ಮತ್ತು ಗಿರಿಜಾ ಶಾಸ್ತ್ರಿ ದಂಪತಿಗಳ ಮಗ ಅನಂತ್ ಕುಮಾರ್, ಸೋಮವಾರ (ನ 12) ನಸುಕಿನಲ್ಲಿ ವಿಧಿವಶರಾದರು. ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅನಂತ್ ನಿಧನರಾಗುವ ಮುನ್ನ, ಲಂಡನ್ ನಗರದ ಆಸ್ಪತ್ರೆಯೊಂದರಲ್ಲೂ ಚಿಕಿತ್ಸೆ ಪಡೆದಿದ್ದರು.
ಅನಂತ್ ಕುಮಾರ್ ಅವರ ತಂದೆ ನಾರಾಯಣ ಶಾಸ್ತ್ರಿಗಳು, ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದರೂ, ಬಡತನ ಅವರನ್ನು ಹಿಂಬಾಲಿಸಿಕೊಂಡೇ ಬಂದಿತ್ತು. ಜೊತೆಗೆ, ಅನಂತ್ ಕುಮಾರ್ ತಾಯಿ ಗಿರಿಜಾ ಶಾಸ್ತ್ರಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದೆಗೆಟ್ಟಿತ್ತು ಎನ್ನುವುದನ್ನು ಅನಂತ್ ಕುಮಾರ್ ಬಹಳಷ್ಟು ಬಾರಿ ಸ್ಮರಿಸಿಕೊಂಡಿದ್ದರು.
ವಿದ್ಯಾರ್ಥಿ ಜೀವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಂತರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ, ತತ್ವಗಳಿಂದ ಪ್ರೇರಿತರಾಗಿದ್ದ ಅನಂತ್ ಕುಮಾರ್, ಮೋದಿ ಕ್ಯಾಬಿನೆಟ್ ನಲ್ಲಿ ಸಚಿವರಾದ ನಂತರ, ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು.

ತಾಯಿಯ ಚಿಕಿತ್ಸೆಗೂ ದುಡ್ಡು ಸಾಲುತ್ತಿರಲಿಲ್ಲ
ತಂದೆ ನಾರಾಯಣ ಶಾಸ್ತ್ರಿ, ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ, ತಾಯಿಯ ಚಿಕಿತ್ಸೆಗೂ ದುಡ್ಡು ಸಾಲುತ್ತಿರಲಿಲ್ಲ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಮ್ಮನಿಗೆ ಮೆಡಿಸಿನ್ ತಂದರೆ, ಊಟಕ್ಕೆ ದುಡ್ಡು ಮಿಕ್ಕುತ್ತಿರಲಿಲ್ಲ. ಅದೆಷ್ಟೋ ದಿನ ಊಟ ಮಾಡದೇ ಮಲಗಿಕೊಂಡ ದಿನಗಳನ್ನು ನಾನು ಕಳೆದಿದ್ದೇನೆ ಎಂದು ಅನಂತ್ ಕುಮಾರ್ ಹೇಳಿದ್ದನ್ನು, ಅವರ ಆಪ್ತರು ಸ್ಮರಿಸಿಕೊಳ್ಳುತ್ತಾರೆ. (ಚಿತ್ರ: ಅನಂತ್ ಕುಮಾರ್ ಅವರು ಬಾಲ್ಯದಲ್ಲಿ ಬೆಳೆದ ಮನೆ)

ಟ್ಯಾಬ್ಲೆಟ್ಸ್ ಕೊಡಲು ಆಗದೇ ಅರ್ಥ ಅರ್ಥ ಮಾತ್ರೆ ಕೊಟ್ಟಿದ್ದೂ ಇದೆ
ಕೆಲವೊಮ್ಮೆ, ವೈದ್ಯರು ಬರೆದ ಮಾತ್ರೆ ಚೀಟಿಯಲ್ಲಿ ಎಲ್ಲವನ್ನು ತರಲು ತಂದೆಗೆ ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ, ಪೂರ್ಣ ಪ್ರಮಾಣದಲ್ಲಿ ಟ್ಯಾಬ್ಲೆಟ್ಸ್ ಕೊಡಲು ಆಗದೇ ಅರ್ಥ ಅರ್ಥ ಮಾತ್ರೆ ಕೊಟ್ಟಿದ್ದೂ ಇದೆ. ಕೊನೆಗೂ, ತಾಯಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಜೊತೆಗೆ, ತಂದೆಗೂ ಕ್ಯಾನ್ಸರ್ ಇದೆ ಎನ್ನುವ ವಿಚಾರ ತಿಳಿದಾಗ ಅವರಿಗೆ ದಿಕ್ಕೇ ತೋಚದಂತಾಗಿತ್ತು ಎಂದು ಅಂದಿನ ಅನಂತ್ ಕುಮಾರ್ ಅವರ ಪರಿಸ್ಥಿತಿಯನ್ನು ಅವರ ಸ್ನೇಹಿತರು ನೆನೆಪಿಸಿಕೊಳ್ಳುತ್ತಾರೆ.

ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ
ತಾಯಿ ನಂತರ ತಂದೆ ಕ್ಯಾನ್ಸರ್ ರೋಗದಿಂದ ಸಾವನ್ನಪ್ಪಿದ ನಂತರ, ಈಗ ಅನಂತ್ ಕುಮಾರ್ ಅದೇ ರೋಗಕ್ಕೆ ಬಲಿಯಾಗಿದ್ದಾರೆ. ತಂದೆ, ತಾಯಿಯ ದೇಹದ ಪರಿಸ್ಥಿತಿ ವಿಷಮಿಸಿದ್ದಾಗ, ತನ್ನ ಕುಟುಂಬ ಪಟ್ಟಪಾಡು ಜೀವನದಲ್ಲಿ ನನಗೆ ಹಲವು ಪಾಠವನ್ನು ಕಲಿಸಿದೆ ಎಂದು ಅವಾಗಾವಾಗ ಹೇಳುತ್ತಿದ್ದ ಅನಂತ್ ಕುಮಾರ್, ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಗಿರಿಜಾ ಶಾಸ್ತ್ರಿ ಸ್ಮಾರಕ ಟ್ರಸ್ಟ್ 'ಅದಮ್ಯ ಚೇತನ' ಎನ್ನುವ ಸ್ವಯಂಪ್ರೇರಿತ ಸಂಸ್ಥೆ
1998ರಲ್ಲಿ ಅನ್ನ, ಅಕ್ಷರ, ಆರೋಗ್ಯ ಅಡಿಬರಹದಲ್ಲಿ, ಗಿರಿಜಾ ಶಾಸ್ತ್ರಿ ಸ್ಮಾರಕ ಟ್ರಸ್ಟ್ ಮೂಲಕ 'ಅದಮ್ಯ ಚೇತನ' ಎನ್ನುವ ಸ್ವಯಂಪ್ರೇರಿತ ಸಂಸ್ಥೆಯನ್ನು, ಪತ್ನಿ ತೇಜಸ್ವಿನಿ ಮೂಲಕ ಆರಂಭಿಸಿದ ಅನಂತ್ ಕುಮಾರ್, ವಿವಿಧ ಸಾಮಾಜಿಕ ಕೆಲಸಗಳನ್ನು ನಡೆಸಿಕೊಂಡು ಬರುತ್ತಲೇ ಇದ್ದರು. ಬಡ ಹೆಣ್ಣುಮಕ್ಕಳಿಗೆ ಟೈಲರಿಂಗ್ ಕ್ಲಾಸ್ ಆರಂಭಿಸುವ ಮೂಲಕ, ಅದಮ್ಯ ಚೇತನ, ರಾಜ್ಯದ ಸಾಮಾಜಿಕ ಕಳಕಳಿಯ ವಿಚಾರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಮಂಚೂಣಿಯಲ್ಲಿದೆ.

ಭಾರತೀಯ ಜನ ಔಷಧಿ ಪರಿಯೋಜನಡಿಯಲ್ಲಿ ಸುಮಾರು 3,500ಕ್ಕೂ ಅಧಿಕ ಮಳಿಗೆ
ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನಡಿಯಲ್ಲಿ ಸುಮಾರು 3,500ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಅನಂತ್ ಕುಮಾರ್ ಅವರದ್ದು. ಇದರ ಜೊತೆಗೆ, ಕಡಿಮೆ ದರದಲ್ಲಿ ಹೃದಯಕ್ಕೆ ಬಳಸುವ ಸ್ಟಂಟ್ ಪೂರೈಸುವಲ್ಲೂ ಅನಂತ್ ಸಮರ್ಥವಾಗಿ ಕೆಲಸ ನಿರ್ವಹಿಸಿದ್ದರು. ಸಣ್ಣ ಕುಟುಂಬದಿಂದ, ಹುಬ್ಬಳ್ಳಿಯಿಂದ ಬಂದು, ಕಷ್ಟದ ಜೀವನ ಅನುಭವಿಸಿದ್ದ ಅನಂತ್ ಕುಮಾರ್, ಈ ಮಟ್ಟಕ್ಕೆ ಬೆಳೆದು, ಸಾಮಾಜಿಕ ಕಳಕಳಿಯ ಕೆಲಸಕ್ಕೆ ಹೆಚ್ಚಿನ ಮಹತ್ವನ್ನು ನೀಡುತ್ತಿದ್ದರು ಎನ್ನುವುದು ಆಪ್ತರ, ಸ್ನೇಹಿತರ, ಕುಟುಂಬದವರ ಮಾತು.












Click it and Unblock the Notifications