Get Updates
Get notified of breaking news, exclusive insights, and must-see stories!

ವೃದ್ಧರಿಗೆ ಭರವಸೆಯ ಬೆಳಕಾದ ಸುಯೋಗಾಶ್ರಯ: ಲತಿಕಾ ಭಟ್ ಸಂದರ್ಶನ

ಕುಟುಂಬದ ಜವಾಬ್ದಾರಿಯನ್ನು ಹೆಗಲಮೇಲಿರಿಸಿಕೊಂಡೇ ಮಹತ್ತರವಾದುದನ್ನು ಸಾಧಿಸಿದವವಳು ಹೆಣ್ಣು. ಅಂಥ ಅಸಾಮಾನ್ಯ ಮಾನಿನಿಯರ ಸಾಹಸಗಾಥೆಯನ್ನು ಪರಿಚಯಿಸುವ ಪುಟ್ಟ ಪ್ರಯತ್ನವನ್ನು 'ಮಹಿಳಾ ಸಾಧಕಿಯರು' ಅಂಕಣದ ಮೂಲಕ 'ಒನ್ ಇಂಡಿಯಾ' ಮಾಡುತ್ತಿದೆ.

ಪ್ರತಿ ಶನಿವಾರ ಪ್ರಕಟವಾಗುವ ಈ ಅಂಕಣದ ಈ ವಾರದ ಭಾಗವಾಗಿ, ಸುಯೋಗಾಶ್ರಯ ಎಂಬ ವೃದ್ಧಾಶ್ರಮ ನಡೆಸುತ್ತಿರುವ ಶಿರಸಿಯ 'ಲತಿಕಾ ಭಟ್' ಅವರ ಪರಿಚಯ ಇಲ್ಲಿದೆ.

***

ಮಾನವೀಯ ಸಂಬಂಧಗಳು ಮೆಲೆ ಕಳೆದುಕೊಂಡಿವೆ ಎಂಬುದನ್ನು ಊರೂರಲ್ಲೂ ತಲೆ ಎತ್ತಿರುವ ವೃದ್ಧಾಶ್ರಮಗಳು ಸಾಬೀತು ಪಡಿಸುತ್ತವೆ. ಆದರೆ ಅದೇ ಮಾನವೀಯ ಮೌಲ್ಯ ಅಲ್ಲಲ್ಲಿ ಇನ್ನೂ ಉಸಿರಾಡುತ್ತಿದೆ ಎಂಬುದನ್ನು ಸ್ವಾರ್ಥವನ್ನೆಲ್ಲ ಮರೆತು ವೃದ್ಧಾಶ್ರಮ ಕಟ್ಟಿ, ಸಂಬಂಧವೇ ಇಲ್ಲದ ವ್ಯಕ್ತಿಗಳನ್ನೂ ಜತನದಿಂದ ಸಲಹುತ್ತಿರುವ ಹಲವರು ತೋರಿಸಿಕೊಟ್ಟಿದ್ದಾರೆ. ಅಂಥವರಲ್ಲಿ ಉತ್ತರ ಕನ್ನಡ ಶಿರಸಿಯ ಲತಿಕಾ ಭಟ್ ಸಹ ಒಬ್ಬರು.

ಬಡ ಮಕ್ಕಳಿಗೆ ಉಚಿತ ಟ್ಯೂಶನ್, ಉದ್ಯೋಗ ಜೊತೆಗೆ ಮದುವೆ ಮಾಡಿಸುವ ಕೆಲಸದಿಂದ ಆರಂಭವಾದ ಇವರ ಸೇವಾಕಾರ್ಯ ಇದೀಗ ಸುಯೋಗಾಶ್ರಯ ಎಂಬ ವೃದ್ಧಾಶ್ರಮ ನಿರ್ಮಾಣದವರೆಗೆ ವ್ಯಾಪಿಸಿದೆ.

ಕೊಳಗೇರಿ ಮಕ್ಕಳ ಬದುಕಿಗೆ ಹೊಸ 'ದಿಕ್ಕು': ನರ್ಮದಾ ಕುರ್ತಕೋಟಿ ಸಂದರ್ಶನ
ತಮ್ಮಿಂದಾಗಿ ಮತ್ತೊಬ್ಬರಿಗೆ ಸಿಗುವ ನಗು, ಸಂತೋಷ ನೀಡುವ ನೆಮ್ಮದಿಯನ್ನು ಯಾವ ಒಡವೆ, ಸೀರೆಯೂ ನೀಡೋಲ್ಲ ಎಂಬ ಲತಿಕಾ ತಮ್ಮ ಮನದ ಮಾತನ್ನು ಒನ್ ಇಂಡಿಯಾ ಜೊತೆ ಹಂಚಿಕೊಂಡಿದ್ದಾರೆ. ಅವರು ನಮ್ಮ ಈ ವಾರದ ಸಾಧಕಿ.

ನೆಮ್ಮದಿ ಅಂದ್ರೆ ಏನು...?

ನೆಮ್ಮದಿ ಅಂದ್ರೆ ಏನು...?

"ಹುಟ್ಟುವಾಗಲೇ ಶ್ರೀಮಂತ ಮನೆತನದಲ್ಲಿ ಹುಟ್ಟಿದ ನನಗೆ ಮದುವೆಯಾದ ಮೇಲೂ ಯಾವ ಕೊರತೆಯೂ ಕಾಡಲಿಲ್ಲ. ಬೆಲೆಬಾಳುವ ಸೀರೆ, ಒಡವೆ ಕೊಳ್ಳುವುದೇ ಬದುಕು ಎಂದುಕೊಂಡು ಐಷಾರಾಮಿ ಬದುಕಿನಲ್ಲೇ ನೆಮ್ಮದಿ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅನ್ನಿಸೋದಕ್ಕೆ ಶುರುವಾಯ್ತು. ಅಷ್ಟಕ್ಕೂ ನೆಮ್ಮದಿ ಅಂದ್ರೆ ಏನು? ಎಷ್ಟು ದಿನ ಅಂತ ಈ ಹಣ, ಒಡವೆ, ಸೀರೆಯಲ್ಲೇ ಜೀವನ ಕಳೆಯೋದು. ಭಗವಂತ ನನಗೆ ಅಂತ ಒಂದು ಬದುಕು ಕೊಟ್ಟಿದ್ದಾನೆ. ಅದು ಹೀಗೇ ಮುಗಿದು ಹೋಗಬೇಕಾ? ಎಂದು ಒಂದು ರೀತಿಯ ಪಾಪಪ್ರಜ್ಞೆ ಕಾಡುವುದಕ್ಕೆ ಶುರುವಾಯ್ತು. ಅಲ್ಲಿಯವರೆಗೂ ನಾನು, ನನ್ನ್ ಮನೆ, ನನ್ನ ಕುಟುಂಬ, ಪತಿ ಮಕ್ಕಳು ಎಂದೇ ಸ್ವಾರ್ಥದಲ್ಲಿ ಬದುಕುತ್ತಿದ್ದ ನನಗೆ ಬದುಕನ್ನು ಬದಲಿಸಿಕೊಳ್ಳುವುದಕ್ಕೆ ಮನಸ್ಸಾಯ್ತು."

ನೆಮ್ಮದಿಯ ಅರ್ಥ ತಿಳಿದಿದ್ದು ಆಗ!

ನೆಮ್ಮದಿಯ ಅರ್ಥ ತಿಳಿದಿದ್ದು ಆಗ!

"ಕಟ್ಟಡದ ಕೆಲಸ ಮಾಡುವ, ಬಡ ಮಕ್ಕಳಿಗೆ ಉಚಿತವಾಗಿ ಟ್ಯೂಶನ್ ಹೇಳುವ ಮೂಲಕ ನಮ್ಮ ಮೊದಲ ಸೇವಾಕಾರ್ಯ ಶುರುವಾಯ್ತು. ನನ್ನೊಂದಿಗೆ ಮಗಳೂ ಕೈಜೋಡಿಸಿದಳು. ಆ ಮಕ್ಕಳು ಹೆಚ್ಚಿನ ಅಂಕ ಪಡೆದು, ಖುಷಿಯಾಗಿ ಬಂದು ಹೇಳುವಾಗ ಸಿಗುವ ಸಂತೋಷ ಯಾವ ಸೀರೆ, ಒಡವೆಯೂ ಕೊಡಲಿಲ್ಲ ಅನ್ನಿಸೋಕೆ ಶುರುವಾಯ್ತು. ನಿಜವಾದ ನೆಮ್ಮದಿ ಎಂಬುದು ಎಲ್ಲಿದೆ ಅಂತ ಮೊದಲ ಬಾರಿಗೆ ಅರಿವಾಗಿದ್ದೇ ಆಗ. ಅಲ್ಲಿಂದ ಸೇವಾ ಕಾರ್ಯಕ್ಕೆ ಒಂದು ಗುರಿ ಸಿಕ್ಕ ಹಾಗಾಯ್ತು."

ವಿಸ್ತರಿಸಿದ ಸೇವೆಯ ವ್ಯಾಪ್ತಿ

ವಿಸ್ತರಿಸಿದ ಸೇವೆಯ ವ್ಯಾಪ್ತಿ

"ಬಡ, ನಿರ್ಗತಿಕ ಮಕ್ಕಳಿಗೆ ಶಿಕ್ಷಣ ನೀಡುವುದರಿದ ಆರಂಭವಾದ ಕೆಲಸ, ಕ್ರಮೇಣ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ಸಾಗಿತು. ಬಡ ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲದೆ, ಆಹಾರ, ಸೂರು ನೀಡುವುದು. ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವುದು. ನಿರುದ್ಯೋಗಿಗಳಿಗೆ ದೇಶ-ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದು, ಬಡ ಹೆಣ್ಣು ಮಕ್ಕಳಿಗೆ ಸೂಕ್ತ ವರನನ್ನು ಹುಡುಕಿ ಮದುವೆ ಮಾಡುವುದು ಹೀಗೇ ಸಮಾಜದ ನಾನಾ ಆಯಾಮಗಳಿಗೆ ನಮ್ಮ ವ್ಯಾಪ್ತಿ ವಿಸ್ತಾರಗೊಂಡಿತು."

ನಿರುದ್ಯೋಗಿಗಳಿಗೆ ಉದ್ಯೋಗ

ನಿರುದ್ಯೋಗಿಗಳಿಗೆ ಉದ್ಯೋಗ

"ನಿರುದ್ಯೋಗಿಗಳಿಗೆ ಅವರಿಗೆ ಸೂಕ್ತವಾಗುವಂಥ ಕೆಲಸ ನೀಡಿ ಅವರಿಗೆ ಕೆಲಸ ನೀಡಿದ ಮಾಲಿಕ(ಉದ್ಯೋಗಿಯ ಬಳಿ ಅಲ್ಲ)ರ ಬಳಿ ಕಮಿಷನ್ ಪಡೆದು ಈ ಹಣದಿಂದ ವೃದ್ಧಾಶ್ರಮ ನಿರ್ಮಾಣದ ಕಾರ್ಯ ಆರಂಭಿಸಿದ್ದೇವೆ. ಶಿರಸಿ ಪಟ್ಟಣದಿಂದ ಒಂದಿ ಕಿ.ಮೀ.ದೂರದಲ್ಲಿ ಮುಂಡಗೇಸರ ಎಂಬಲ್ಲಿ ಜಾಗ ಖರೀದಿಸಿ ವೃದ್ಧಾಶ್ರಮ ನಿರ್ಮಾಣ ಕಾರ್ಯ ಆರಂಭಿಸಿದ್ದೇವೆ. ಇಷ್ಟು ದಿನ ಶಿರಸಿಯಲ್ಲೇ ಬಾಡಿಗೆ ಮನೆಯೊಂದರಲ್ಲಿ ವೃದ್ಧಾಶ್ರಮ ನಡೆಯುತ್ತಿತ್ತು. ಮೊದಲು ಒಂದಿಬ್ಬರಿದ್ದ ವೃದ್ಧಾಶ್ರಮಕ್ಕೆ ಜನ ಹೆಚ್ಚಾಗುತ್ತಿದ್ದಂತೆಯೇ ಖರ್ಚುಗಳು ಹೆಚ್ಚಾದವು.

25 ಕ್ಕಿಂತ ಹೆಚ್ಚು ಜನರನ್ನು ಸೇರಿಸಿಕೊಳ್ಳಲೇ ಬಾರದು ಎಂದುಕೊಂಡಿದ್ದೆವು. ಆದರೆ ಯಾರಾದರೂ ದಯನೀಯ ಸ್ಥಿತಿಯಲ್ಲಿರುವವರು ಬಂದರೆ ಇಲ್ಲ ಎನ್ನುವುದಕ್ಕೆ ಮನಸ್ಸು ಬಾರದೆ, ಸೇರಿಸಿಕೊಳ್ಳುತ್ತ ಈಗ 62 ಜನರಿದ್ದಾರೆ! ಇವರ ಆಸ್ಪತ್ರೆಯ ಖರ್ಚು ವೆಚ್ಚ, ಔಷಧಿಯ ವೆಚ್ಚ ಎಂದು ಸಾಕಷ್ಟು ಹಣ ಬೇಕಾಗುತ್ತದೆ. ದೇವರು ಅದ್ಹೇಗೋ ನಡೆಸಿಕೊಂಡು ಹೋಗುವುದಕ್ಕೆ ಶಕ್ತಿ ನೀಡುತ್ತಿದ್ದಾನೆ."

ಕುಟುಂಬದ ಪ್ರೋತ್ಸಾಹ

ಕುಟುಂಬದ ಪ್ರೋತ್ಸಾಹ

"ಕುಟುಂಬದ ಪ್ರೋತ್ಸಾಹವಿಲ್ಲದೆ ನನ್ನಿಂದ ಇದ್ಯಾವುದನ್ನೂ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ. ಪತಿ, ತಂದೆ-ತಾಯಿ, ಅತ್ತೆ-ಮಾವ ಎಲ್ಲರ ಆಶೀರ್ವಾದ ನನ್ನ ಮೇಲೆ ನಿರಂತರವಾಗಿದೆ. ಮಗ ಮತ್ತು ಮಗಳು ಇಬ್ಬರೂ ನನ್ನ ಈ ಕೆಲಸದಲ್ಲಿ ಕೈಜೋಡಿಸಿದ್ದಾರೆ. ವೃದ್ಧಾಶ್ರಮಕ್ಕೆ ಹಣದ ಕೊರತೆಯಾದರೆ ಪತಿಯೇ ತಮ್ಮ ಸಂಬಳವನ್ನು ಎಷ್ಟೋ ಬಾರಿ ಕೊಟ್ಟಿದ್ದಾರೆ. ಇವರೆಲ್ಲರ ಸತತ ಪ್ರೋತ್ಸಾಹವೇ ನನ್ನ ಬಳಿ ಇಷ್ಟನ್ನೆಲ್ಲ ಮಾಡಿಸಿದೆ."

ಯಾವಾಗಲೋ ಆಗುತ್ತದೆ ಎಂದುಕೊಂಡರೆ ಎಂದಿಗೂ ಆಗೋದಿಲ್ಲ!

ಯಾವಾಗಲೋ ಆಗುತ್ತದೆ ಎಂದುಕೊಂಡರೆ ಎಂದಿಗೂ ಆಗೋದಿಲ್ಲ!

"ಎಷ್ಟೋ ಮಹಿಳೆಯರಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮನಸ್ಸಿರಬಹುದು. ಆದರೆ ಬೇರೆ ಬೇರೆ ಕಾರಣದಿಂದ ಅದು ಸಾಧ್ಯವಾಗದಿರಬಹುದು. ಯಾವುದೇ ಕೆಲಸವನ್ನೂ ಮುಂದ್ಯಾವತ್ತೋ ಆಗುತ್ತದೆ ಎಂದುಕೊಂಡು ಬಿಟ್ಟರೆ ಅದು ಯಾವತ್ತೂ ಆಗುವುದೇ ಇಲ್ಲ. ದಯವಿಟ್ಟು ಅಂದುಕೊಂಡಿದ್ದನ್ನು ತಕ್ಷಣ ಮಾಡಿ. ಸೇವೆ ಅಂದರೆ ಒಂದು ಎನ್ ಜಿಒ ನಿರ್ಮಿಸಿ ದೊಡ್ಡ ಹಂತದಲ್ಲೇ ಮಾಡಬೇಕೆಂದಿಲ್ಲ. ಅಡುಗೆ ಮಾಡುವ ಮುನ್ನ ಊಟವಿಲ್ಲದವರಿಗಾಗಿ ಒಂದು ಹಿಡಿ ಅಕ್ಕಿ ಎತ್ತಿಟ್ಟರೂ ಅದು ಸಮಾಜ ಸೇವೆಯೇ. ಅಷ್ಟನ್ನಾದರೂ ಮಾಡಿದರೆ ಬದುಕು ಸಾರ್ಥಕವಾಗುತ್ತದೆ."

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+