ಮುಸ್ಲಿಂ ಮತಗಳ ಮೇಲೆ ಹಾಕಲು ಲಗ್ಗೆ, ಮಮತಾ ನೆತ್ತಿಯ ಮೇಲೆ ಜೆಡಿಎಸ್ ಪುಗ್ಗೆ
Recommended Video

ಮಮತಾ ಬ್ಯಾನರ್ಜಿ ಈ ದೇಶವನ್ನು ಆಳುವ ಶಕ್ತಿ ಹೊಂದಿದ್ದಾರೆ ಎಂದು ಮುಕ್ತಕಂಠದಿಂದ ಪ್ರಶಂಸಿಸುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ.
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ತೃತೀಯ ಶಕ್ತಿಗಳ ಬೃಹತ್ ಸಮಾವೇಶ ನಡೆಯಿತಲ್ಲ? ಈ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಫಾರೂಕ್ ಅಬ್ದುಲ್ಲಾ ಸೇರಿದಂತೆ ಪ್ರಧಾನಿ ಮೋದಿ ವಿರೋಧಿ ನಾಯಕರ ಪಡೆಯೇ ಸೇರಿತ್ತು.
ಈ ಸಭೆಯಲ್ಲಿ ಮಾತನಾಡಿದ ಕರ್ನಾಟಕದ ಸಿಎಂ ಕುಮಾರಸ್ವಾಮಿ ನೇರವಾಗಿಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ದೇಶವನ್ನು ಆಳುವ ಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ನಡೆದ ನಂತರ ಯಾವ ಪರಿಸ್ಥಿತಿ ನೆಲೆಸುತ್ತದೋ? ಅದು ಮುಂದಿನ ಪ್ರಶ್ನೆ. ಆದರೆ ಸದ್ಯಕ್ಕೆ ಹಲವು ಸರ್ವೇಗಳು, ಲೋಕಸಭಾ ಚುನಾವಣೆಯ ನಂತರ ಮೋದಿ ನೇತೃತ್ವದ ಬಿಜೆಪಿಯಾಗಲೀ, ಯಾವುದೇ ಶಕ್ತಿಯಾಗಲೀ ಸ್ವಯಂಬಲದ ಮೇಲೆ ಕೇಂದ್ರದ ಅಧಿಕಾರ ಸೂತ್ರ ಹಿಡಿಯುವುದಿಲ್ಲ ಎಂದು ಹೇಳಿವೆ.
ಅವುಗಳ ಪ್ರಕಾರ, ಮೋದಿ ನೇತೃತ್ವದ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಬಹುದಾದರೂ ಅದು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಬದಲಿಗೆ ಪ್ರಾದೇಶಿಕ ಪಕ್ಷಗಳು ಗಣನೀಯ ಸೀಟುಗಳನ್ನು ಪಡೆಯಲಿದ್ದು, ಕಾಂಗ್ರೆಸ್ ಪಕ್ಷದ ಗಳಿಕೆ ಎಪ್ಪತ್ತು ಸೀಟುಗಳ ಆಸುಪಾಸಿನಲ್ಲಿರಲಿದೆ ಎಂದಿವೆ.
ಅರ್ಥಾತ್, ಬಿಜೆಪಿ ನಂತರ ಅತ್ಯಂತ ದೊಡ್ಡ ಶಕ್ತಿಯಾಗಿ ತೃತೀಯ ಶಕ್ತಿ ಹೊರಹೊಮ್ಮಲಿದೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಡಲಿದೆ. ಹಾಗೇನಾದರೂ ಆದರೆ ಸಹಜವಾಗಿಯೇ ತೃತೀಯ ಶಕ್ತಿಯ ನಾಯಕರೊಬ್ಬರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿ ಮರಳಿ ಮೋದಿ ಪ್ರಧಾನಿಯಾಗುವುದನ್ನು ತಡೆಗಟ್ಟುವ ಪರಿಸ್ಥಿತಿ ಬರುತ್ತದೆ.

ತೃತೀಯ ಶಕ್ತಿ ಕುಗ್ಗಿಸುವುದು ಮೋದಿ ಟಾರ್ಗೆಟ್
ಇಂತಹ ಪರಿಸ್ಥಿತಿ ಬರಬಹುದು ಎಂಬ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರ ಸದ್ಯದ ಟಾರ್ಗೆಟ್ ತೃತೀಯ ಶಕ್ತಿಗಳ ಮನಸ್ಸನ್ನು ಕುಗ್ಗಿಸುವುದು. ಅಂದರೆ, ನೇರವಾಗಿ ಪ್ರಾದೇಶಿಕ ಶಕ್ತಿಗಳ ವಿರುದ್ಧ ಮುಗಿಬೀಳುವುದಲ್ಲ.
ಬದಲಿಗೆ, ಕಾಂಗ್ರೆಸ್ ಜತೆ ಹೋದರೆ ತೃತೀಯ ಶಕ್ತಿಯ ಅಂಗಪಕ್ಷಗಳಿಗೆ ಕಷ್ಟಕರ ದಿನಗಳು ಎದುರಾಗಲಿವೆ ಎಂಬುದು ಮೋದಿಯವರ ಸದ್ಯದ ವರಸೆ. ಇದೇ ಕಾರಣಕ್ಕಾಗಿ ಇತ್ತೀಚೆಗೆ ಅವರು ಬಹಿರಂಗವಾಗಿ, ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಪಕ್ಷ ಕ್ಲರ್ಕ್ ತರಹ ನೋಡಿಕೊಳ್ಳುತ್ತಿದೆ ಎಂದು ದಾಳಿ ಮಾಡಿದ್ದು.
ಅವರ ದಾಳಿಗೆ ಕುಮಾರಸ್ವಾಮಿ ಉತ್ತರ ನೀಡಿದರಾದರೂ ನರೇಂದ್ರ ಮೋದಿ ಮರಳಿ ಮಾತನಾಡಲೇ ಇಲ್ಲ. ಹಾಗೆ ವಿರೋಧಿಗಳನ್ನು ಸುಮ್ಮನೆ ಬಿಡುವುದು ನರೇಂದ್ರ ಮೋದಿಯವರ ಜಾಯಮಾನವೂ ಅಲ್ಲ. ಹಾಗಿದ್ದ ಮೇಲೆ ಕಾಂಗ್ರೆಸ್ ನನ್ನನ್ನು ಕ್ಲರ್ಕ್ ತರ ನೋಡಿಕೊಳ್ಳುತ್ತಿದೆ ಎಂದು ನಾನು ಹೇಳಿಯೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರೂ, ಅವರೇಕೆ ಮೌನಿಯಾದರು?

ಈ ಮೌನದಲ್ಲೇ ಇರುವುದು ಮೇಜರ್ ಸಸ್ಪೆನ್ಸ್
ನರೇಂದ್ರ ಮೋದಿಯವರ ಈ ಮೌನದಲ್ಲೇ ಇರುವುದು ಮೇಜರ್ ಸಸ್ಪೆನ್ಸ್. ಅಂದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೃತೀಯ ಶಕ್ತಿ ಗಣನೀಯ ಸೀಟುಗಳನ್ನು ಗಳಿಸಿದರೆ ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಸೀಟು ಗಳಿಕೆಯ ಪ್ರಮಾಣ ಇನ್ನೂರು ದಾಟಿದರೆ ತೃತೀಯ ಶಕ್ತಿಯ ದೊಡ್ಡ ಗುಂಪೊಂದು ಮೋದಿ ಅವರ ಜತೆ ಹೋಗಲಿದೆ.
ಆದರೆ ಹಾಗಂತ ಎಚ್ ಡಿ ಕುಮಾರಸ್ವಾಮಿ ಅವರು ಈಗಲೇ ಹೇಳಲು ಸಾಧ್ಯವಿಲ್ಲವಲ್ಲ? ಯಾಕೆಂದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಆರೇಳು ಸೀಟುಗಳನ್ನು ಗೆದ್ದರೆ ತಾನೇ ತೃತೀಯ ಶಕ್ತಿಯಲ್ಲಿ ಅದರ ಪಾಲು ಗಣನೀಯವಾಗಿರಲು ಸಾಧ್ಯ? ಹೀಗಾಗಿ ಮೊದಲು ಚುನಾವಣೆಯಲ್ಲಿ ಆರೇಳು ಸೀಟುಗಳನ್ನು ಗೆಲ್ಲುವುದು ಕುಮಾರಸ್ವಾಮಿ ಲೆಕ್ಕಾಚಾರ. ಈ ಲೆಕ್ಕಾಚಾರ ಮುಂದಿಟ್ಟುಕೊಂಡೇ ಮಮತಾ ಬ್ಯಾನರ್ಜಿಗೆ ಕುಮಾರಸ್ವಾಮಿ ಜೈ ಅಂದಿದ್ದು.

ಕಾಂಗ್ರೆಸ್ಸಿಗೆ ಬಿದ್ದ ಮುಸ್ಲಿಂ ಸಾಲಿಡ್ ಮತಗಳು
ಆದರೆ ಕರ್ನಾಟಕದಲ್ಲಿ ಜೆಡಿಎಸ್ ಆರೇಳು ಸೀಟುಗಳನ್ನು ಗೆಲ್ಲುವ ಲೆವೆಲ್ಲಿಗೆ ಬೆಳೆಯಬೇಕು ಎಂದರೆ ಕೇವಲ ನಿರ್ದಿಷ್ಟ ಸಮುದಾಯದ ಮತಗಳನ್ನು ನೆಚ್ಚಿಕೊಂಡು ಅದು ಮುಂದಡಿ ಇಡಲು ಸಾಧ್ಯವಿಲ್ಲ. ವಾಸ್ತವವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ, ಮುಸ್ಲಿಂ ಹಾಗೂ ಇತರ ಸಮುದಾಯಗಳ ಶೇಕಡಾ ಹತ್ತರಷ್ಟು ಮತಗಳನ್ನು ಪಡೆದರೂ ಅರವತ್ತರಷ್ಟು ಸೀಟುಗಳನ್ನು ಗಳಿಸಬಹುದು ಎಂಬುದು ಜೆಡಿಎಸ್ ಲೆಕ್ಕಾಚಾರವಾಗಿತ್ತು.
ಆದರೆ ದಿಲ್ಲಿಯ ಜಾಮಿಯಾ ಮಸೀದಿಯ ಷಾಹಿ ಇಮಾಮ್ ಬುಕಾರಿ ಅವರು ರಾಜ್ಯಕ್ಕೆ ರವಾನಿಸಿದ ಸಂದೇಶ ಎಷ್ಟು ವ್ಯವಸ್ಥಿತವಾಗಿ ಪ್ರಸಾರವಾಯಿತು ಎಂದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲಬೇಕೆಂದರೆ ಮುಸ್ಲಿಂ ಮತಗಳು ಸಾಲಿಡ್ಡಾಗಿ ಕಾಂಗ್ರೆಸ್ ಪಕ್ಷಕ್ಕೆ ಬೀಳಲೇಬೇಕು. ಮುಸ್ಲಿಂ ಸಮುದಾಯದ ಯಾರೇ ಆಗಲಿ, ಬೇರೆ ಪಕ್ಷದಿಂದ ಅಥವಾ ಪಕ್ಷೇತರರಾಗಿ ಸ್ಪರ್ಧಿಸಿದರೂ ಅವರಿಗೆ ಮತ ಕೊಡಬೇಡಿ ಎಂದು ಬುಕಾರಿ ಅವರು ರವಾನಿಸಿದ ಸಂದೇಶ ವರ್ಕ್ ಔಟ್ ಆಯಿತು.
ಪರಿಣಾಮವಾಗಿ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಸಮುದಾಯಗಳ ಪೈಕಿ ಸಾಲಿಡ್ಡಾಗಿ ವೋಟು ನೀಡಿದ್ದು ಮುಸ್ಲಿಂ ಸಮುದಾಯ. ಉಳಿದಂತೆ ಹಿಂದುಳಿದ ಸಮುದಾಯದ ಹಲ ಜಾತಿಗಳು ಮತ್ತು ದಲಿತ ವರ್ಗದ ಎಡಗೈ ಸಮುದಾಯದ ಮತಗಳು ಬಿಜೆಪಿ ಜತೆ ಹೋದವು.

ದೊಡ್ಡ ಲಾಸ್ ಆಗಿದ್ದು ಜೆಡಿಎಸ್ ಪಕ್ಷಕ್ಕೆ
ಎಲ್ಲ ಅಡೆತಡೆಗಳ ನಡುವೆಯೂ ಬಿಜೆಪಿ ನೂರಾ ನಾಲ್ಕರಷ್ಟು ಸ್ಥಾನಗಳನ್ನು ಗಳಿಸಿದರೆ, ಹಿಂದ ಸಮುದಾಯದ ಅರೆಬರೆ ಮನಸ್ಸಿನ ನಡುವೆಯೂ ಮುಸ್ಲಿಮರು ನೀಡಿದ ಸಾಲಿಡ್ಡು ಬೆಂಬಲದಿಂದ ಕಾಂಗ್ರೆಸ್ ಪಕ್ಷ ಎಂಭತ್ತರಷ್ಟು ಸೀಟುಗಳನ್ನು ಪಡೆಯಿತು.
ಪರಿಣಾಮವಾಗಿ ದೊಡ್ಡ ಮಟ್ಟದ ಲಾಸ್ ಆಗಿದ್ದು ಜೆಡಿಎಸ್ ಪಕ್ಷಕ್ಕೆ. ಅದು ಬಯಸಿದಂತೆ ಶೇಕಡಾ ಇಪ್ಪತ್ತರಷ್ಟು ಮುಸ್ಲಿಂ ಮತಗಳಾದರೂ ಬಂದಿದ್ದರೆ ಅದರ ಸೀಟು ಗಳಿಕೆಯ ಪ್ರಮಾಣ ಅರವತ್ತರ ಆಸುಪಾಸಿನಲ್ಲಿರುತ್ತಿತ್ತು. ಆದರೆ ದಿಲ್ಲಿಯ ಜಾಮಿಯಾ ಮಸೀದಿಯ ಬುಕಾರಿ ನೀಡಿದ ರವಾನಿಸಿದ ಸಂದೇಶ ಅದಕ್ಕೆ ಡ್ಯಾಮೇಜ್ ಆಗುವಂತೆ ಮಾಡಿತು.
ಈ ಬೆಳವಣಿಗೆಯಿಂದ ಅಸಮಾಧಾನಿತರಾದ ಕುಮಾರಸ್ವಾಮಿ ತಮ್ಮ ಬಜೆಟ್ ನಲ್ಲಿ ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸುವ ಮೂಲಕ ಅಸಮಾಧಾನ ತೋರಿಸಿದರಾದರೂ ಈಗ ಪಾರ್ಲಿಮೆಂಟ್ ಚುನಾವಣೆಯಲ್ಲಿ ಆ ಸಮುದಾಯದ ಗಣನೀಯ ಪ್ರಮಾಣದ ವೋಟುಗಳನ್ನು ಗಳಿಸಲೇಬೇಕಾದ ಅನಿವಾರ್ಯತೆ ಇದೆ ಎಂಬುದು ಅವರಿಗೆ ಗೊತ್ತಿದೆ.

ದೀದಿಯ ಮೊರೆಹೋದ ಕುಮಾರಸ್ವಾಮಿ
ಗಣನೀಯ ಪ್ರಮಾಣದಲ್ಲಿ ಮತಗಳನ್ನು ಗಳಿಸುವುದು ಹೇಗೆ? ಅನ್ನುವ ವಿಷಯ ಬಂದಾಗ ಕುಮಾರಸ್ವಾಮಿ ಮೊರೆ ಹೋಗಿರುವುದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಗೆ. ಅಂದ ಹಾಗೆ ಯಾರೇನೇ ಹೇಳಲಿ, ಇವತ್ತಿನ ಮಟ್ಟಿಗೆ ದೇಶದ ಮುಸ್ಲಿಂ ಮತದಾರರಿಗೆ ದೊಡ್ಡ ಮಟ್ಟದ ವಿಶ್ವಾಸದಂತೆ ಕಾಣುತ್ತಿರುವುದು ಮಮತಾ ಬ್ಯಾನರ್ಜಿ.
ಯಾಕೆಂದರೆ ಪಶ್ಚಿಮ ಬಂಗಾಳದಲ್ಲಿ ಅವರು ಮುಸ್ಲಿಮರಿಗೆ ನೀಡಿದ ಮತ್ತು ನೀಡುತ್ತಿರುವ ಬೆಂಬಲ ಹೇಗಿದೆಯೆಂದರೆ, ಪಶ್ಚಿಮ ಬಂಗಾಳಕ್ಕೆ ಅಂಟಿಕೊಂಡೇ ಇರುವ ಬಾಂಗ್ಲಾ ಕೂಡಾ ಆಗಾಗ ತೋರಿಸುತ್ತಿದ್ದ ತನ್ನ ತರಲೆ ಬುದ್ದಿಯನ್ನು ಕೈ ಬಿಟ್ಟಿದೆ. ಯಾಕೆಂದರೆ ತಾನು ಮಾಡುವ ತರಲೆಗಳಿಗೆ ಭಾರತದ ನೆಲದಿಂದಲೇ ಶಕ್ತಿ ಸಿಗಬೇಕು. ಆದರೆ ಮಮತಾ ಬ್ಯಾನರ್ಜಿ ಅವರನ್ನು ಆ ರಾಜ್ಯದ ಮುಸ್ಲಿಂ ಮತದಾರರು ಯಾವ ಮಟ್ಟದಲ್ಲಿ ನೆಚ್ಚಿಕೊಂಡಿದ್ದಾರೆ ಎಂದರೆ, ಯಾವುದೇ ಬಾಹ್ಯ ಶಕ್ತಿಗಳ ಮೂಗು ತೂರಿಸುವಿಕೆಯನ್ನು ಅವರು ಬಯಸುತ್ತಿಲ್ಲ.

ಬುಕಾರಿ ಪ್ರಭಾವ ದೀದಿ ವಿರುದ್ಧ ಆಗಲ್ಲ
ಅದರಲ್ಲೂ ನೋಟು ಅಮಾನ್ಯೀಕರಣದ ನಂತರದ ದಿನಗಳಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರಬಲವಾಗಿ ಹೋರಾಡಿದವರು ನಿರ್ಭಿಡೆಯ ಮಾತುಗಾರಿಕೆಗೆ ಹೆಸರುವಾಸಿಯಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಹೀಗಾಗಿ ಸಹಜವಾಗಿಯೇ ಬಡ, ಮಧ್ಯಮ ವರ್ಗ ಅವರ ಜತೆಗಿದೆ. ಮುಸ್ಲಿಂ ಸಮುದಾಯ ಕೂಡಾ ಇದೇ ಕಾರಣಕ್ಕಾಗಿ ಮಮತಾ ಬ್ಯಾನರ್ಜಿ ಜತೆಗಿದೆ.
ದಿಲ್ಲಿಯ ಜಾಮಿಯಾ ಮಸೀದಿಯ ಬುಕಾರಿ ಅವರ ಪ್ರಭಾವ ಇವತ್ತು ಯಾವ ರಾಜ್ಯದಲ್ಲಿ ಬೇಕಾದರೂ ವರ್ಕ್ ಔಟ್ ಆಗಬಹುದು. ಆದರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ವಿರುದ್ಧ ವರ್ಕ್ ಔಟ್ ಆಗುವುದಿಲ್ಲ. ಹೀಗಾಗಿ ಮಮತಾ ಬ್ಯಾನರ್ಜಿ ದೇಶವನ್ನಾಳುವ ಶಕ್ತಿ ಹೊಂದಿದ್ದಾರೆ ಎಂದು ಬಹಿರಂಗವಾಗಿ ಹೇಳಿದರೆ ಸಹಜವಾಗಿಯೇ ಅದರ ಲಾಭ ಒಂದು ಮಟ್ಟದಲ್ಲಾದರೂ ಜೆಡಿಎಸ್ ಗೆ ಸಿಗುತ್ತದೆ.

ನೀವೇ ಪ್ರಧಾನಿಯಾಗಿ ಅಂದಿದ್ದಾರೆ ಗೌಡ್ರು
ಯಾಕೆಂದರೆ, ಮಮತಾ ಬ್ಯಾನರ್ಜಿ ಪ್ರಧಾನಿಯಾಗಲಿ ಎಂದು ಇದುವರೆಗೆ ಪ್ರಾದೇಶಿಕ ಶಕ್ತಿಗಳ ನಾಯಕರ ಪೈಕಿ ಯಾರೂ ಜೆಡಿಎಸ್ ನಷ್ಟು ಪವರ್ ಫುಲ್ಲಾಗಿ ಹೇಳಿಲ್ಲ. ಈ ಹಿಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಮುಂದಿನ ಲೋಕಸಭಾ ಚುನಾವಣೆಯ ನಂತರ ತೃತೀಯ ಶಕ್ತಿಯ ವತಿಯಿಂದ ಯಾರಾದರೂ ಮಹಿಳೆ ಪ್ರಧಾನಿಯಾದರೆ ಅದಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದ್ದರಲ್ಲ?
ಆಗ ತಕ್ಷಣವೇ ವಿಮಾನ ಹತ್ತಿ ಮಮತಾ ಬ್ಯಾನರ್ಜಿ ಅವರನ್ನು ನೋಡಲು ಹೋದವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ. ಹೀಗೆ ಹೋದವರು, ನೀವು ಪ್ರಧಾನಿಯಾದರೆ ಅದನ್ನು ಸ್ವಾಗತಿಸುವವರಲ್ಲಿ ನಾನು ಮೊದಲಿಗ ಎಂದು ಅವರು ಹೇಳಿದಾಗ ಮಮತಾ ಬ್ಯಾನರ್ಜಿ ಸಹಜವಾಗಿಯೇ ಖುಷಿಯಾಗಿದ್ದರು.
ಹೀಗೆ ಅವತ್ತು ದೇವೇಗೌಡರು ಹಾಕಿ ಬಂದ ಅಡಿಪಾಯದ ಮೇಲೆ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಆಶಾಸೌಧವನ್ನು ಕಟ್ಟಿ ಬಂದಿದ್ದಾರೆ. ಈ ದೇಶವನ್ನಾಳಲು ಮಮತಾ ಬ್ಯಾನರ್ಜಿ ಅವರಿಗೆ ಶಕ್ತಿಯಿದೆ ಎನ್ನುವ ಅವರ ಮಾತು ಸಹಜವಾಗಿಯೇ ಮಮತಾ ಬ್ಯಾನರ್ಜಿ ಅವರ ಉತ್ಸಾಹವನ್ನು ಜಾಸ್ತಿ ಮಾಡಿದೆ.

ಎಚ್ಡಿಕೆ ಬಳಿ ಮಮತಾ ಎಂಬ ಬ್ರಹ್ಮಾಸ್ತ್ರ
ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮುಸ್ಲಿಂ ಮತದಾರರು, ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಎಲ್ಲಿ ಹೆಚ್ಚು ಸಮರ್ಥವೋ? ಅಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಅನ್ನುವ ಮೆಸೇಜ್ ಅನ್ನು ಸಂಬಂಧಪಟ್ಟವರ ಮೂಲಕವೇ ರವಾನಿಸಲಿದ್ದಾರೆ.
ಹೀಗಾಗಿ ಜೆಡಿಎಸ್ ಈಗ ಕರ್ನಾಟಕದಲ್ಲಿ ತನಗೆ ಹನ್ನೆರಡು ಸೀಟುಗಳನ್ನು ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್ ಮುಂದೆ ಇಂಡೆಂಟ್ ಇಟ್ಟಿದೆ. ಹೀಗೆ ಇಂಡೆಂಟ್ ಇಟ್ಟರೆ ಕನಿಷ್ಠ ಹತ್ತರಷ್ಟು ಸೀಟುಗಳು ತನಗೆ ದಕ್ಕಬಹುದು ಎಂಬುದು ಅದರ ನಿರೀಕ್ಷೆ. ಈ ಕ್ಷೇತ್ರಗಳಲ್ಲಿ ಒಕ್ಕಲಿಗ, ಮುಸ್ಲಿಂ ಮತದಾರರ ಜತೆ ಇತರ ವರ್ಗಗಳ ಒಂದಿಷ್ಟು ಮತಗಳು ದಕ್ಕಿದರೆ ಆರೇಳು ಸೀಟುಗಳನ್ನು ಗೆಲ್ಲಬಹುದು ಎಂಬುದು ಅದರ ಲೆಕ್ಕಾಚಾರ.
ತನ್ನ ಲೆಕ್ಕಾಚಾರಕ್ಕೆ ಪೂರಕವಾಗಿ ಅದು ಮಮತಾ ಬ್ಯಾನರ್ಜಿ ಎಂಬ ಬ್ರಹ್ಮಾಸ್ತ್ರವನ್ನು ಬಳಸಿಕೊಳ್ಳಲು ಹೊರಟಿರುವುದು ರಿಯಲಿ ಇಂಟರೆಸ್ಟಿಂಗ್ ಆಗಿದೆಯಲ್ಲವೇ?
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications