ಪರ್ಫೆಕ್ಟಾಗಿ ಕೆಲಸ ಮಾಡೋದು ಹೇಗೆ? ಆ್ಯಪಲ್ ಮಾಲೀಕನ ಸಖತ್ ಐಡಿಯಾ
ಆಫೀಸ್ಗೆ ಲಾಗಿನ್ ಆಗಿ 10-15 ಗಂಟೆ ಕಾಲ ಕತ್ತೆಯಂತೆ ದುಡಿದು ಮನೆಗೆ ಹೋಗಿ ತಿಂದು ಮಲಗಿಬಿಟ್ಟರೆ ಮತ್ತೆ ಆಫೀಸ್ ಟೈಮ್ಗೇ ನಾವು ಏಳೋದು. ಏನಪ್ಪ ಇದು ಲೈಫು ಇಷ್ಟೇನಾ ಅನಿಸುತ್ತೆ.
ಗಮನಿಸಿ, ಇದು ನಾವಷ್ಟೇ ಅಲ್ಲ ನಮ್ಮ ಬಾಸು, ಅವರ ಬಾಸು, ಕಂಪನಿಯ ಬಾಸು ಎಲ್ಲರ ಕಥೆಯೂ ಇಷ್ಟೇನೆ ಎಂಬುದು ನಮಗರ್ಥವಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವರ್ಕ್ ಕಲ್ಚರ್ ಹಾಗೆ ಬೆಳೆದುಕೊಂಡು ಹೋಗಿಬಿಟ್ಟಿದೆ. ಇದಕ್ಕೇನೂ ಕೊನೆ ಇಲ್ಲವಾ?
ಎಲ್ಲಾ ಶಾರ್ಟ್ಕಟ್; ಮನಶಾಸ್ತ್ರಜ್ಞರ ಬಳಿ ಇದೆ 9.6 ನಿಮಿಷದ ಸೂತ್ರ
ಸ್ಪರ್ಧೆಗೆ ಕೊನೆ ಇಲ್ಲ. ಅದು ಹೆಚ್ಚುತ್ತಾ ಹೋಗುತ್ತದೆ. ನೀವು ಕೆಲಸ ಬಿಟ್ಟು ಸ್ವಂತ ಬ್ಯುಸಿನೆಸ್ ಮಾಡಿದರೂ ಕಾಂಪಿಟೀಶನ್ ಎಂಬುದು ನಿಮ್ಮನ್ನು ಸುಮ್ಮನೆ ಕೂರಲಂತೂ ಬಿಡಲ್ಲ. ಇದಕ್ಕಿರುವ ಒಂದೇ ಆಯ್ಕೆ ಎಂದರೆ ನಾವು ಮಾಡುವ ಕೆಲಸವನ್ನೇ ವಿಭಿನ್ನವಾಗಿ ಮತ್ತು ಹೆಚ್ಚು ಕ್ಷಮತೆಯಿಂದ ಮಾಡುವುದು.
ಗೂಗಲ್, ಆ್ಯಪಲ್, ಫೇಸ್ಬುಕ್ ಮೊದಲಾದ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ. ಉದ್ಯೋಗಿಗಳು ಖುಷಿ ಖುಷಿಯಿಂದ ಕೆಲಸ ಮಾಡುವುದಕ್ಕೆ ಉತ್ತೇಜನ ನೀಡುತ್ತವೆ. ಐಫೋನ್ ತಯಾರಕ ಆ್ಯಪಲ್ ಸಂಸ್ಥೆ ಇತ್ತೀಚೆಗೆ ತನ್ನ ಉದ್ಯೋಗಿಗಳಿಗೆ ಕೆಲಸ ವಿಚಾರದಲ್ಲಿ ಬಹಳ ಸಡಿಲತೆ ತೋರಿದೆ. ಉದ್ಯೋಗಿಗಳು ಹೆಚ್ಚು ಕಾರ್ಯಕ್ಷಮತೆಯಿಂದ ಹಾಗೂ ಆರಾಮವಾಗಿ ಕೆಲಸ ಮಾಡಲು ಸಾಧ್ಯವಾಗುವಂತಹ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸಿದೆ.
ಮೂರು ವಿಧಾನ
ಸ್ಟೀವ್ ಜಾಬ್ಸ್ ಮಾಲೀಕತ್ವದ ಆ್ಯಪಲ್ ಸಂಸ್ಥೆ ತನ್ನ ಸಿಬ್ಬಂದಿವರ್ಗಕ್ಕೆ ಕೆಲಸದ ಒತ್ತಡ ಕಡಿಮೆ ಮಾಡಲು ಒಳ್ಳೆಯ ಐಡಿಯಾ ಮಾಡಿದೆ. ಹೆಚ್ಚೆಚ್ಚು ಬ್ರೇಕ್ ತೆಗೆದುಕೊಳ್ಳುವುದು ಮತ್ತು ಕಡಿಮೆ ಕೆಲಸ ಮಾಡುವುದು, ಈ ಪ್ರಯೋಗ ಮಾಡಲಾಗುತ್ತಿದೆ. ಹಾರ್ಡ್ ವರ್ಕ್ಗಿಂತ ಸ್ಮಾರ್ಟ್ ವರ್ಕ್ ಮುಖ್ಯ ಎಂಬ ಸಂದೇಶವನ್ನು ರವಾನಿಸಲಾಗುತ್ತಿದೆ. ಈ ವಿಚಾರದಲ್ಲಿ ಆ್ಯಪಲ್ ಸಂಸ್ಥೆ ಮಾಲೀಕ ಸ್ಟೀವ್ ಜಾಬ್ಸ್ ಅವರ ಮೂರು ಹಂತದ ವಿಧಾನವನ್ನು ಅನುಸರಿಸುವಂತೆ ಎಲ್ಲಾ ಉದ್ಯೋಗಿಗಳಿಗೂ ಸಲಹೆ ನೀಡಲಾಗಿದೆ.
ಕಠಿಣ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಮತ್ತು ಹೊಸ ಐಡಿಯಾಗಳನ್ನು ಶೋದಿಸಲು ಸ್ಟೀವ್ ಜಾಬ್ಸ್ ಬಳಸುತ್ತಿದ್ದ ವಿಧಾನಗಳಿವು. ಇದು ಆ್ಯಪಲ್ ಉದ್ಯೋಗಿಗಳಿಗಷ್ಟೇ ಅಲ್ಲ ನಮಗೂ ನಿಮಗೂ ಸಹಕಾರಿಯಾಗಲ್ಲುದು. ಅವರ ಮೂರು ವಿಧಾನಗಳು ಇಲ್ಲಿವೆ.
30 ನಿಮಿಷ ಒತ್ತಡ: ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿ
ಝೂಮ್ ಔಟ್
ಕಠಿಣ ಸಮಸ್ಯೆ ಬಂದಾಗ ಪರಿಹಾರ ಹುಡುಕುವುದು ಕಷ್ಟವೇ. ಆದರೆ, ಸ್ಟೀವ್ ಜಾಬ್ಸ್ ಈ ವಿಚಾರದಲ್ಲಿ ನಿಪುಣರೆನಿಸಿದ್ದರು. ಸಾಮಾನ್ಯವಾಗಿ ನಮಗೆ ಸಮಸ್ಯೆ ಎದುರಾದಾಗ ಯಾವುದಾದರೂ ಒಂದು ಪರಿಹಾರದತ್ತ ಸಂಪೂರ್ಣ ಗಮನ ಹರಿಸುತ್ತೇವೆ. ಆದರೆ, ಸ್ಟೀವ್ ಜಾಬ್ಸ್ ಅವರು ಒಂದು ಸಮಸ್ಯೆಗೆ ಪರಿಹಾರ ಹುಡುಕುವಾಗ ಸ್ಥೂಲ ನೋಟ ಅಳವಡಿಸಿಕೊಳ್ಳುತ್ತಿದ್ದರು. ಅಂದರೆ ಝೂಮ್ ಔಟ್ ರೀತಿಯ ತಂತ್ರ. ನೀವು ಝೂಮ್ ಔಟ್ ಮಾಡಿದಾಗ ವಿಸ್ತೃತ ಪ್ರಪಂಚ ಕಾಣುತ್ತದೆ, ಸಮಸ್ಯೆಗೆ ಎಂಥ ಪರಿಹಾರ ಸಾಧ್ಯ ಎಂಬ ಸುಳಿವು ನಮಗೆ ಸಿಗುತ್ತದೆ.
ಸಮಸ್ಯೆಗೆ ಈಗ ಏನು ಪರಿಹಾರ ಇದೆ ಎಂದು ಯೋಚಿಸುವುದಕ್ಕಿಂತ ಏನೇನು ಸಾಧ್ಯತೆ ಇದೆ ಎಂಬ ನಿಟ್ಟಿನಲ್ಲಿ ಯೋಚಿಸಬೇಕು. ಇದು ಸ್ಟೀವ್ ಜಾಬ್ಸ್ ಕಂಡುಕೊಂಡ ತಂತ್ರ.
ಫೋಕಸ್ ಇನ್
ಒಂದು ಸಮಸ್ಯೆಗೆ ಪರಿಹಾರ ಏನಿರಬಹುದು ಎಂದು ಗೊತ್ತಾದ ಬಳಿಕ ನಿಮ್ಮ ಆಲೋಚನೆ, ಚಿಂತನೆ ಎಲ್ಲವೂ ಆ ಪರಿಹಾರದತ್ತ ಇರಲಿ. ಅದರ ಸುತ್ತಲೂ ಎಲ್ಲಾ ಮಾಹಿತಿ ಕಲೆಹಾಕುವ ಕೆಲಸ ಮಾಡಿ. ಆಗ ಮುಂದಿನ ಗುರಿ ಏನು ಎಂಬುದು ನಿಮ್ಮ ಅರಿವಿಗೆ ನಿಲುಕುತ್ತದೆ. ಪರಿಹಾರ ಮತ್ತು ಗುರಿ ಗೊತ್ತಾದಾಗ ಅ ನಿಟ್ಟಿನಲ್ಲಿ ಎಡಬಿಡದೇ ಕೆಲಸ ಮಾಡಲು ಸಾಧ್ಯವಾಗುತ್ತದೆ.
ವಿಶ್ವದ ಸಾರ್ವಕಾಲಿಕ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರೆನಿಸಿದ ಆಲ್ಬರ್ಟ್ ಐನ್ಸ್ಟೀನ್ ಒಮ್ಮೆ ಹೀಗೆ ಹೇಳಿದ್ದರು: "ನನಗೆ ಒಂದು ಸಮಸ್ಯೆಗೆ ಪರಿಹಾರ ಹುಡುಕಲು ಒಂದು ಗಂಟೆ ಕಾಲಾವಕಾಶ ಇದೆ ಎಂದಾದರೆ ನಾನು 55 ನಿಮಿಷವನ್ನು ಸಮಸ್ಯೆ ಅವಲೋಕನಕ್ಕೆ ವಿನಿಯೋಗಿಸುತ್ತೇನೆ. ಐದು ನಿಮಿಷ ಪರಿಹಾರದ ಬಗ್ಗೆ ಚಿಂತಿಸುತ್ತೇನೆ" ಎಂದಿದ್ದರು.
ಹಾಗೆಯೇ, "ನಾಯಕರಾದವರು ಸಮಸ್ಯೆ ಬಗ್ಗೆ ಯೋಚಿಸೋದು ಶೇ. 5 , ಪರಿಹಾರದ ಬಗ್ಗೆ ಯೋಚಿಸೋದು ಶೇ. 95" ಎಂದು ಟೋನಿ ರಾಬಿನ್ಸ್ ಎಂಬುವರು ಒಮ್ಮೆ ಹೇಳಿದ್ದರು. ಅದೇನೇ ಇದ್ದರೂ ಒಂದು ವಿಚಾರದ ಬಗ್ಗೆ ನೀವು ಅಗಾಧ ಅಧ್ಯಯನ ನಡೆಸುವುದು ಇಲ್ಲಿ ಮುಖ್ಯ.
ಬ್ರೇಕ್ ಮುಖ್ಯ
ನೀವು ಅನೇಕ ಕ್ರಿಯಾಶೀಲ ಬರಹಗಾರರನ್ನು ತೆಗೆದುಕೊಂಡು ನೋಡಿ, ಅವರ ಹಲವು ವರ್ತನೆಗಳು ನಿಮಗೆ ಸೋಜಿಗ ಅನಿಸಬಹುದು. ಸುಖಾಸುಮ್ಮನೆ ಸುತ್ತಾಡುತ್ತಿರುತ್ತಾರೆ, ಅಥವಾ ಕೈಯಲ್ಲಿ ಸಿಗರೇಟು ಹಿಡಿದು ಹೊಗೆ ಎಳೆಯುತ್ತಿರುತ್ತಾರೆ, ಅಥವಾ ವಿಸ್ಕಿ ಬಾಟಲಿ ಹಿಡಿದು ಚಿಂತನೆಯಲ್ಲಿ ಮುಳುಗಿಹೋಗಿರುತ್ತಾರೆ. ಇಂಥ ವಿರಾಮಗಳ ಮಧ್ಯೆ ಅಷ್ಟೊಂದು ಕೆಲಸ ಹೇಗಪ್ಪಾ ಮಾಡುತ್ತಾರೆ ಎನಿಸಬಹುದು. ಆದರೆ, ಈ ರೀತಿಯ ಅಲ್ಪವಿರಾಮಗಳು ಕ್ರಿಯಾಶೀಲತೆಗೆ ಒಳ್ಳೆಯ ಪರಿಣಾಮ ಉಂಟು ಮಾಡುತ್ತವೆ.
ಸ್ಟೀವ್ ಜಾಬ್ಸ್ ಕೂಡ ಇಂಥದ್ದೇ ತಂತ್ರ ಕಂಡುಕೊಂಡಿದ್ದರು. ಹಾಗಂತ ನಾವು ಸಿಗರೇಟು, ಡ್ರಿಂಕ್ಸ್ ಮಾಡಬೇಕಂದಲ್ಲ. "ಮುಂದೆ ಹೆಜ್ಜೆ ಹಾಕುತ್ತಾ ನೀವು ಡಾಟ್ಸ್ ಕನೆಕ್ಟ್ ಮಾಡಲು ಆಗುವುದಿಲ್ಲ. ನೀವು ಹಿಂದಕ್ಕೆ ತಿರುಗಿದಾಗ ಮಾತ್ರ ಕೊಂಡಿ ಸೇರಿಸಲು ಸಾಧ್ಯ" ಎಂದು ಆ್ಯಪಲ್ ಮಾಲೀಕರು ಒಮ್ಮೆ ಹೇಳಿದ್ದರು.
ವಿಶ್ವದ ಅನೇಕ ವಿಜ್ಞಾನಿಗಳಿಗೆ ಹೊಸ ಐಡಿಯಾಗಳು ಹೊಳೆದದ್ದು ಲ್ಯಾಬ್ಗಳಲ್ಲಿ ಅಲ್ಲ, ಬದಲಾಗಿ ಸ್ನಾನದ ಮನೆಯಲ್ಲೋ, ವಾಕಿಂಗ್ ಮಾಡುವಾಗಲೋ ಅಥವಾ ಇನ್ನೇನೂ ಲೋಕಾಭಿರಾಮವಾಗಿ ಇದ್ದಾಗಲೇ ಅವರ ಹುಡುಕಾಟಕ್ಕೆ ಉತ್ತರ ಸಿಕ್ಕಿರುತ್ತಿದ್ದವು.
ನೀವು ಕತ್ತೆಯಂತೆ ದುಡಿಯುವ ಬದಲು ಸ್ವಲ್ಪ ವಿರಾಮ ತೆಗೆದುಕೊಂಡರೆ ಕೆಲಸದಲ್ಲಿ ಸ್ಪಷ್ಟತೆ ಸಿಗುತ್ತದೆ, ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಕೆಲಸದಲ್ಲಿ ಗೊಂದಲ ಕಾಣಿಸಿದಾಗ ನೀವು ಬ್ರೇಕ್ ತೆಗೆದುಕೊಂಡು ನೋಡಿ, ಅಗ ಕೆಲಸದಲ್ಲಿ ಮುಂದೇನು ಮಾಡಬೇಕು ಎಂಬ ಸ್ಪಷ್ಟತೆ ಸಿಗುತ್ತದೆ. ಸ್ಟೀವ್ ಜಾಬ್ಸ್ ಹಲವು ಬಾರಿ ತಮ್ಮ ಟೀಮ್ ಮೀಟಿಂಗ್ಗಳನ್ನು ನಡೆದಾಡಿಕೊಂಡೇ ಮಾಡುತ್ತಿದ್ದರು. ಉದ್ಯೋಗಿಗಳು ತಮ್ಮ ಡೆಸ್ಕ್ನಿಂದ ಹೊರಬಂದು ರೀಫ್ರೆಶ್ ಆಗಬಹುದು ಎಂಬುದು ಅವರ ಆಲೋಚನೆ.
(ಒನ್ಇಂಡಿಯಾ ಸುದ್ದಿ)