ಭಾರತ ಬ್ಯಾನ್ ಮಾಡಿದ್ದೇ ಬಂತು, ವಿಶ್ವದೆಲ್ಲೆಡೆ ಗೋಧಿ ದುಬಾರಿ
ನವದೆಹಲಿ, ಮೇ 17: ಭಾರತ ಸರಕಾರ ಮೊನ್ನೆಮೊನ್ನೆ (ಮೇ 13) ಗೋಧಿ ರಫ್ತಿಗೆ ನಿಷೇಧ ಹೇರಿದ ಬೆನ್ನಲ್ಲೇ ವಿಶ್ವಾದ್ಯಂತ ಗೋಧಿ ಬೆಲೆ ದುಬಾರಿಯಾಗಿದೆ. ಜಾಗತಿಕವಾಗಿ ಗೋಧಿ ಬೆಲೆ ನಿನ್ನೆ ಸೋಮವಾರ ಶೇ. 6ರಷ್ಟು ಹೆಚ್ಚಿದೆ. ಈಗ ವಿಶ್ವದ ಬಲಾಡ್ಯ G7 ದೇಶಗಳು ಭಾರತದ ಮೇಲೆ ಕೆಂಗಣ್ಣು ಬೀರಲು ಆರಂಭಿಸಿವೆ.
ಅಮೆರಿಕದ ಚಿಕಾಗೋ ಮಾರುಕಟ್ಟೆಯಲ್ಲಿ ಗೋಧಿ ಶೇ. 5.9ರಷ್ಟು ಬೆಲೆ ಹೆಚ್ಚಳ ಕಂಡಿದೆ. ಇಲ್ಲಿ ಒಂದು ಬುಶೆಲ್ಗೆ 12.47 ಡಾಲರ್ (969 ರೂಪಾಯಿ) ದರ ಇದೆ. ಇಲ್ಲಿ ಒಂದು ಬುಶೆಲ್ (Bushel) ಅಂದರೆ 27 ಕಿಲೋ. ಅಂದರೆ ಜಾಗತಿಕವಾಗಿ ಒಂದು ಕಿಲೋ ಗೋಧಿಗೆ ಸುಮಾರು 36 ರೂಪಾಯಿ ಬೆಲೆ ಬಂದಿದೆ. ಯೂರೋಪ್ ರಾಷ್ಟ್ರಗಳಲ್ಲಿ ಇನ್ನೂ ಹೀನಾಯ ಸ್ಥಿತಿ ಇದೆ. ಅಲ್ಲಿಯ ಯೂರೋನೆಕ್ಸ್ಟ್ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರಿದೆ. ಒಂದು ಟನ್ (100 ಕಿಲೋ) ಗೋಧಿ 435 ಯೂರೋ (ಸುಮಾರು 35 ಸಾವಿರ ರೂ) ಬೆಲೆ ಇದೆ.
ಅಷ್ಟಕ್ಕೂ ಭಾರತ ಯಾಕೆ ಗೋಧಿ ರಫ್ತು ನಿಷೇಧಿಸಿತು? ಅದರ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಹೇಗಾಯ್ತು ಇತ್ಯಾದಿ ವಿವರ ಇಲ್ಲಿದೆ.

ಭಾರತ ಗೋಧಿ ರಫ್ತು ನಿಷೇಧಿಸಿದ್ಯಾಕೆ?
ಭಾರತದಲ್ಲಿ ಈ ವರ್ಷ ಗೋಧಿ ಫಸಲು ಹುಲುಸಾಗಿ ಬರುವ ನಿರೀಕ್ಷೆ ಮಾಡಲಾಗಿತ್ತು. ಆದರೆ, ಮಾರ್ಚ್ ತಿಂಗಳಿಂದೀಚೆ ಉಷ್ಣಗಾಳಿ ಕಾರಣದಿಂದ ಹಲವೆಡೆ ಗೋಧಿ ಫಸಲು ಹಾಳಾಗಿ ಹೋಗಿದೆ. ಭಾರತದಲ್ಲಿ ಅಂತರಿಕ ಬಳಕೆಗೆ ಸಾಕಾಗುವಷ್ಟು ಗೋಧಿ ಸಂಗ್ರಹ ಇಲ್ಲದಂತಾಗಿದೆ. ಕಳೆದ 13 ವರ್ಷಗಳಲ್ಲೇ ಭಾರತದಲ್ಲಿ ಅತಿ ಕಡಿಮೆ ಗೋಧಿ ಸಂಗ್ರಹ ಇದೆ. ಹೀಗಾಗಿ ಮೇ 13ರಂದು ಭಾರತ ಸರಕಾರ ಗೋಧಿ ರಫ್ತು ನಿಷೇಧಿಸಿದೆ.

ವಿಶ್ವದ ಮೇಲೆ ಯಾಕೆ ಪರಿಣಾಮ?
ಭಾರತ ವಿಶ್ವದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆಯಾದರೂ ರಫ್ತು ವಿಚಾರಕ್ಕೆ ಬಂದರೆ ಅಷ್ಟೇನೂ ಅಲ್ಲ. ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಗೋಧಿ ಮೇಲೆ ಅವಲಂತನೆ ಇರುವುದು ಕಡಿಮೆಯೇ. ಆದರೆ, ಈ ವರ್ಷ ಅಸಾಮಾನ್ಯ ಪರಿಸ್ಥಿತಿ ಉದ್ಭವಿಸಿದೆ. ರಷ್ಯಾ ಉಕ್ರೇನ್ ಯುದ್ಧದ ಬಿಸಿ ಗೋಧಿ ಸೇರಿದಂತೆ ಅನೇಕ ಆಹಾರವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ರಷ್ಯಾ ಮತ್ತು ಉಕ್ರೇನ್ ದೇಶಗಳು ಅತಿ ಹೆಚ್ಚು ಗೋಧಿ ರಫ್ತು ಮಾಡುತ್ತವೆ. ವಿಶ್ವಾದ್ಯಂತ ಆಗುವ ಒಟ್ಟಾರೆ ಗೋಧಿ ರಫ್ತಿನಲ್ಲಿ ಮೂರನೇ ಒಂದು ಭಾಗ ಈ ಎರಡು ದೇಶಗಳಿಂದ ಆಗುತ್ತದೆ. ಆದರೆ, ಈ ಎರಡು ದೇಶಗಳ ಮಧ್ಯೆಯೇ ಯುದ್ಧ ನಡೆಯುತ್ತಿರುವುದರಿಂದ ಗೋಧಿಗೆ ಹೊಡೆತ ತಿದ್ದಿದೆ.

ಭಾರತಕ್ಕೆ ಪೆಟ್ಟುಕೊಟ್ಟ ಬಿಸಿಗಾಳಿ
ಭಾರತ ಕಳೆದ ಹಣಕಾಸು ವರ್ಷದಲ್ಲಿ 78.5 ಲಕ್ಷ ಟನ್ಗಳಷ್ಟು ಗೋಧಿಯನ್ನು ರಫ್ತು ಮಾಡಿತ್ತು. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಗೋಧಿ ರಫ್ತಿನಲ್ಲಿ ಶೇ. 275ರಷ್ಟು ಹೆಚ್ಚಳವಾಗಿತ್ತು. ಈ ಹಣಕಾಸು ವರ್ಷದಲ್ಲಿ ಅದಾಗಲೇ 45 ಲಕ್ಷ ಟನ್ ಗೋಧಿ ರಫ್ತಿಗೆ ಒಪ್ಪಂದಗಳಾಗಿದ್ದವು. ಈ ವರ್ಷ ಇನ್ನೂ ದಾಖಲೆ ಮಟ್ಟಕ್ಕೆ ಗೋಧಿ ರಫ್ತು ಮಾಡುವ ಉಮೇದಿನಲ್ಲಿ ಭಾರತ ಸರಕಾರ ಇತ್ತು. ಕಳೆದ ತಿಂಗಳೊಂದರಲ್ಲೇ ಭಾರತದ ವರ್ತಕರು 14 ಲಕ್ಷ ಟನ್ ಗೋಧಿಯನ್ನು ವಿದೇಶಗಳಿಗೆ ಒಳ್ಳೆಯ ಬೆಲೆಗೆ ಮಾರಾಟ ಮಾಡಿಕೊಂಡಿದ್ದರು. ಆದರೆ, ಬಿಸಿಗಾಳಿಯಿಂದಾಗಿ ಎಲ್ಲೆಡೆ ಗೋಧಿ ಬೆಳೆ ನೆಲಕಚ್ಚಿದ ಪರಿಣಾಮ ಭಾರತ ರಫ್ತು ಕೈಬಿಡಬೇಕಾಗಿದೆ.

ನಿಷೇಧಕ್ಕೆ ಇನ್ನೂ ಒಂದು ಕಾರಣ:
ಭಾರತ ಗೋಧಿ ರಫ್ತು ನಿಷೇಧಿಸಲು ಗೋಧಿ ಸಂಗ್ರಹ ಕೊರತೆಯೊಂದೇ ಕಾರಣವಲ್ಲ, ವಿವಿಧ ಉಬ್ಬರಗಳು ಏರಿಕೆಯಾಗಿದ್ದೂ ಇನ್ನೊಂದು ಪ್ರಮುಖ ಕಾರಣ. ಗ್ರಾಹಕ ಹಣದುಬ್ಬರ, ಆಹಾರ ಉಬ್ಬರ ಮತ್ತು ಬೇಳೆಕಾಳು ಉಬ್ಬರ ತೀರಾ ಹೆಚ್ಚಾಗಿ ಹೋಗಿದ್ದವು. ಈ ಸಂದರ್ಭದಲ್ಲಿ ಆಹಾರ ವಸ್ತುಗಳ ಲಭ್ಯತೆ ಕಡಿಮೆ ಆದರೆ ಈ ಉಬ್ಬರ ಪ್ರಮಾಣ ಇನ್ನೂ ಹೆಚ್ಚಾಗಿ ಆರ್ಥಿಕತೆಗೆ ದೊಡ್ಡ ಪೆಟ್ಟುಕೊಡುವ ಸಂಭವನೀಯತೆ ಇತ್ತು. ಹೀಗಾಗಿ, ಭಾರತ ಸರಕಾರ ತುರ್ತಾಗಿ ಗೋಧಿ ರಫ್ತನ್ನು ನಿಷೇಧಿಸಿದೆ.
ಆದರೆ, ಗೋಧಿ ರಫ್ತಿನ ವಿಚಾರದಲ್ಲಿ ಭಾರತ ಇನ್ನೂ ಮುಕ್ತ ಮನಸ್ಸಿನಲ್ಲೇ ಇದೆ. ಇಲ್ಲಿಯ ಉಬ್ಬರದ ಪರಿಸ್ಥಿತಿ ನೋಡಿಕೊಂಡು ಅಗತ್ಯ ಬಿದ್ದರೆ ಗೋಧಿ ರಫ್ತು ಮಾಡುವ ಆಲೋಚನೆ ಸರಕಾರದ್ದಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications