2 ಸೀಟಿಗೆ ಸ್ಪರ್ಧಿಸುವ 'ಜೀವವಿಮೆ' ಕರ್ನಾಟಕದಲ್ಲೇ ಶುಭಂ, ಏಕೆ ಗೊತ್ತೆ?
ರಾಜಕಾರಣಿಗಳು ಕೆಲ ಸಲ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದನ್ನು ನೀವು ಕೇಳಿರುತ್ತೀರಿ ಹಾಗೂ ನೋಡಿರುತ್ತೀರಿ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಇದೊಂಥರ ರಾಜಕಾರಣಿಗಳ ಪಾಲಿಗೆ 'ಜೀವ ವಿಮೆ'. ಕರ್ನಾಟಕ ಚುನಾವಣೆಯಲ್ಲೂ ಹಲವರು ಎರಡು ಸ್ಥಾನಗಳಲ್ಲಿ ಸ್ಪರ್ಧೆಗಿಳಿಯುವಂತೆ ಕಾಣುತ್ತಿದೆ.
ಜೆಡಿಎಸ್ ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಹಾಗೂ ರಾಮನಗರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಕೊರಟಗೆರೆ ಹೊರತುಪಡಿಸಿ ಮತ್ತೊಂದು ಕ್ಷೇತ್ರದಿಂದಲೂ ಟಿಕೆಟ್ ಕೇಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ಅವರು ಕೊರಟಗೆರೆಯಲ್ಲಿ ಸೋತಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಇನ್ನು ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಶಿಕಾರಿಪುರದ ಜತೆಗೆ ಉತ್ತರ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕಣಕ್ಕೆ ಇಳಿಸುವ ಆಲೋಚನೆ ಬಿಜೆಪಿಯಲ್ಲಿದೆ. ಇನ್ನು ಚಾಮುಂಡೇಶ್ವರಿಯಿಂದ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಇದೆ.

ಈ ಚುನಾವಣೆ ರಣತಂತ್ರ ದೇಶದಾದ್ಯಂತ ಚಾಲ್ತಿಯಲ್ಲಿದೆ
ಇದೊಂಥರ ಪ್ರತಿ ಚುನಾವಣೆಯ ರಣತಂತ್ರವಾಗಿ ಕೇವಲ ಕರ್ನಾಟಕ ಮಾತ್ರವಲ್ಲ, ದೇಶದ ವಿವಿಧೆಡೆ ಚಾಲ್ತಿಯಲ್ಲಿದೆ. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಆಸಕ್ತಿಕರವಾದ ಬೆಳವಣಿಗೆಯೊಂದು ಆಗಿದೆ. ಚುನಾವಣೆ ಆಯೋಗ ಸಲ್ಲಿಸಿದ ಅಫಿಡವಿಟ್ ಗೆ ಸಕಾರಾತ್ಮವಾಗಿ ಸುಪ್ರೀಂ ಕೋರ್ಟ್ ಸ್ಪಂದಿಸಿದರೆ ಕರ್ನಾಟಕ ವಿಧಾನಸಭೆ ಚುನಾವಣೆಯೇ ಕೊನೆಯಾಗುತ್ತದೆ. ಇನ್ನು ಮುಂದೆ ಎರಡು ಸ್ಥಾನಗಳಲ್ಲಿ ಸ್ಪರ್ಧೆ ಮಾಡುವುದು ಸಾಧ್ಯವಾಗುವುದಿಲ್ಲ.

ಆಘಾತಕಾರಿ ಸೋಲು ತಪ್ಪಿಸಿಕೊಳ್ಳಲು ಹೀಗೊಂದು 'ಜೀವ ವಿಮೆ'
ಚುನಾವಣೆ ಆಯೋಗ ಹೇಳಿರುವಂತೆ, ಕಾನೂನಿಗೆ ತಿದ್ದುಪಡಿ ತಂದು ಎರಡು ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ರಾಜಕಾರಣಿಗಳಿಗೆ ಕಡಿವಾಣ ಹಾಕಲಾಗುತ್ತದೆ. ಎರಡು ಸ್ಥಾನಗಳಲ್ಲಿ ಸ್ಪರ್ಧೆ ಎಂಬುದು ರಾಜಕಾರಣಿಗಳಿಗೆ ಒಂದು ರೀತಿಯ 'ಜೀವ ವಿಮೆ'. ಆಘಾತಕಾರಿ ಸೋಲಿನಿಂದ ತಪ್ಪಿಸಿಕೊಳ್ಳಲು ಕಂಡುಕೊಳ್ಳುವ ಮಾರ್ಗವೂ ಹೌದು.

ಸಾರ್ವಜನಿಕ ಶ್ರಮ, ಹಣ ಎಲ್ಲ ವ್ಯರ್ಥ
ಸೆಕ್ಷನ್ 33(7) ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು.ಹಾಗೆ ಮಾಡುವುದರಿಂದ ಒಂದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧೆ ಮಾಡುವುದಕ್ಕೆ ನಿಯಂತ್ರಣ ಹಾಕಬಹುದು ಎಂದು ಚುನಾವಣಾ ಆಯೋಗದ ಅಫಿಡವಿಟ್ ನಲ್ಲಿ ಹೇಳಲಾಗಿದೆ. "ಎರಡು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿ ಗೆದ್ದಾಗ ಒಂದಕ್ಕೆ ರಾಜೀನಾಮೆ ಕೊಡುವುದು ಅನಿವಾರ್ಯ ಆಗುತ್ತದೆ. ಆ ನಂತರ ಉಪಚುನಾವಣೆ ಅನಿವಾರ್ಯ ಆಗಿ, ಅದಕ್ಕಾಗಿ ಸಾರ್ವಜನಿಕ ಹಣ, ಶ್ರಮ ಎಲ್ಲ ಖರ್ಚಾಗುತ್ತದೆ. ಜನಾದೇಶದ ನಂತರ ಆ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ ಮತದಾರರಿಗೆ ಅನ್ಯಾಯ ಎಸಗಿದಂತಾಗುತ್ತದೆ" ಎಂದು ಚುನಾವಣೆ ಆಯೋಗ ಹೇಳಿದೆ.

ಉಪಚುನಾವಣೆಯ ಖರ್ಚು ಅಭ್ಯರ್ಥಿಗೆ ಹಾಕಬೇಕು
ಅಂದಹಾಗೆ 2004ರಲ್ಲೇ ತಿದ್ದುಪಡಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಒಂದೋ ಒಬ್ಬ ವ್ಯಕ್ತಿ ಎರಡು ಸ್ಥಾನಗಳಿಗೆ ಸ್ಪರ್ಧಿಸುವುದಕ್ಕೆ ಕಡಿವಾಣ ಹಾಕಬೇಕು. ಇಲ್ಲ, ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿ, ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡುತ್ತಾರಲ್ಲ, ಆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವುದಕ್ಕೆ ಆಗುವ ಖರ್ಚನ್ನು ಅಭ್ಯರ್ಥಿಯೇ ಭರಿಸಬೇಕು. ವಿಧಾನಸಭೆ ಚುನಾವಣೆ ಆದರೆ ಐದು ಲಕ್ಷ ಮತ್ತು ಲೋಕಸಭೆ ಚುನಾವಣೆಗೆ ಹತ್ತು ಲಕ್ಷ ರುಪಾಯಿಯನ್ನು ಅಭ್ಯರ್ಥಿಯೇ ಭರಿಸಬೇಕು ಎಂದು ಚುನಾವಣೆ ಆಯೋಗ ಮನವಿ ಮಾಡಿದೆ.












Click it and Unblock the Notifications