ಉಪ ಚುನಾವಣೆ: ದೊಡ್ಡಗೌಡ್ರು ಠಿಕಾಣಿ ಹೂಡಿದ್ರೂ, ಜೆಡಿಎಸ್ಸಿಗೆ ಠೇವಣಿ ಲಾಸ್
ರಾಜ್ಯದ ಜನತೆ ಕಾತುರದಿಂದ ನಿರೀಕ್ಷಿಸುತ್ತಿದ್ದ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಂದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಬಹುದು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ಎರಡೂ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ ಹಣಾಹಣಿ ಏರ್ಪಟ್ಟಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, " ಹಾನಗಲ್ನಲ್ಲಿ ಜೆಡಿಎಸ್ಸಿಗೆ ನೆಲೆಯಿಲ್ಲ, ಹಾಗಾಗಿ ಸಿಂಧಗಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದೇವೆ"ಎಂದು ಹೇಳಿದ್ದರು. ಉಪ ಚುನಾವಣೆಯ ಫಲಿತಾಂಶ ಅವರು ನಿರೀಕ್ಷಿಸಿದ್ದಕ್ಕಿಂತ ಕಳಪೆ ಪ್ರದರ್ಶನ ನೀಡಿದೆ. ಸಿಂಧಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಕನಿಷ್ಠ ಪೈಪೋಟಿ ನೀಡದೇ ಇರುವುದರಿಂದ, ಪ್ರಾದೇಶಿಕ ಪಕ್ಷಗಳ ಅವಶ್ಯಕತೆಯ ಬಗ್ಗೆ ಜನರಿಗೆ ಹೆಚ್ಚಿನ ಒಲವಿಲ್ಲ ಎಂದು ಮತದಾರ ಸಾರಿದಂತಿದೆ. ಹಾನಗಲ್ ನಲ್ಲಿ ಜೆಡಿಎಸ್ ಸೋಲು ನಿರೀಕ್ಷಿತವಾಗಿದ್ದರೂ, ಸಿಂಧಗಿಯಲ್ಲಿ ಪಕ್ಷ ಊಹಿಸಲೂ ಅಸಾಧ್ಯವಾದ ಹಿನ್ನಡೆಯನ್ನು ಅನುಭವಿಸಿದೆ.
ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೋಳಿ ಮತ್ತು ಬಿಜೆಪಿ ಶಾಸಕ ಎಂ.ಸಿ. ಉದಾಸಿ ನಿಧನದಿಂದ ಎರಡು ಕ್ಷೇತ್ರಗಳಿಗೆ ಅಕ್ಟೋಬರ್ ಮೂವತ್ತರಂದು ಚುನಾವಣೆ ನಡೆದಿತ್ತು. ಇದರಲ್ಲಿ, ಸಿಂಧಗಿಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಖುದ್ದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರೇ ಠಿಕಾಣಿ ಹೂಡಿ ಪ್ರಚಾರ ನಡೆಸಿದ್ದರು.

ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಿತ್ತು
ಸಿಂಧಗಿ ಮತ್ತು ಹಾನಗಲ್, ಎರಡೂ ಕ್ಷೇತ್ರಕ್ಕೆ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಿತ್ತು. ಸಿಂಧಗಿಯಲ್ಲಿ ನಾಜಿಯಾ ಅಂಗಡಿ ಅಭ್ಯರ್ಥಿಯಾಗಿದ್ದರು, ವಿದ್ಯಾವಂತೆಯಾಗಿದ್ದ ಇವರಿಗೆ ರಾಜಕೀಯ ಹಿನ್ನಲೆ ಕೂಡಾ ಇತ್ತು. ಇನ್ನು, ಪಕ್ಷಕ್ಕೆ ಇಲ್ಲಿ ನೆಲೆಯಿದೆ ಎಂದು ಅರಿತಿದ್ದ ದೇವೇಗೌಡ್ರು ತಾವೇ ಖುದ್ದಾಗಿ ಹತ್ತು ದಿನ ಅಲ್ಲೇ ಠಿಕಾಣಿ ಹೂಡಿ, ಪ್ರಚಾರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಇವರಿಗೆ, ಕುಮಾರಸ್ವಾಮಿ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಸಾಥ್ ನೀಡಿದ್ದರು.

ಸಿಂಧಗಿಯಲ್ಲಿ ಅಭ್ಯರ್ಥಿ ಪರವಾಗಿ ಖುದ್ದು ಜೆಡಿಎಸ್ ವರಿಷ್ಠ ದೇವೇಗೌಡ್ರೇ ಠಿಕಾಣಿ
"ನಾನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ದ ಆರೋಪವನ್ನು ಮಾಡುವುದಿಲ್ಲ, ನಾನು ಈ ಹಿಂದೆ ಮಾಡಿದ್ದ ನೀರಾವರಿ ಯೋಜನೆಯ ಬಗ್ಗೆ ಮಾತನಾಡಿ, ಜನರ ಬಳಿ ಕೂಲಿ ಕೇಳುತ್ತೇನೆ"ಎಂದು ದೇವೇಗೌಡ್ರು ಹೇಳಿದ್ದರು. ಗೌಡ್ರು ಪ್ರಧಾನಿಯಾಗಿದ್ದಾಗ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಿ ಸಿಂಧಗಿ ಭಾಗದ ಲಕ್ಷಾಂತರ ಹೆಕ್ಟೇರ್ ಜಮೀನಿಗೆ ನೀರು ಬರುವಂತೆ ಮಾಡಿದ್ದರು. ಆದರೆ, ಸಿಂಧಗಿ ಮತದಾರ ಇದ್ಯಾವುದಕ್ಕೂ ಬೆಲೆ ಕೊಡದೇ ಇದ್ದಿದ್ದರಿಂದ ಜೆಡಿಎಸ್ ಠೇವಣಿ ಕಳೆದುಕೊಂಡು, ಹೀನಾಯವಾಗಿ ಸೋಲು ಅನುಭವಿಸಿದೆ.

ಸಿಂಧಗಿಯಲ್ಲಿ ಬಿಜೆಪಿಗೆ ಭಾರೀ ಅಂತರದ ಗೆಲುವು
ಬಿಜೆಪಿ ಅಥವಾ ಕಾಂಗ್ರೆಸ್ಸಿಗೆ ಜೆಡಿಎಸ್ ಸ್ಪರ್ಧೆಯನ್ನು ನೀಡಬಹುದೆಂದೇ ವ್ಯಾಖ್ಯಾನಿಸಲಾಗಿತ್ತು, ಆದರೆ ಇಷ್ಟು ಹೀನಾಯವಾಗಿ ಸೋಲಲಿದೆ ಎನ್ನುವ ಲೆಕ್ಕಾಚಾರ ಖುದ್ದು ದಳಪತಿಗಳಿಗೆ ಇರಲಿಕ್ಕಿರಲಿಲ್ಲ. ಸಿಂಧಗಿಯಲ್ಲಿ ಬಿಜೆಪಿ ಭಾರೀ ಅಂತರದಿಂದ ಗೆಲ್ಲುವ ಮೂಲಕ, ಜೆಡಿಎಸ್ ತನ್ನ ಬಳಿಯಿದ್ದ ಕ್ಷೇತ್ರವನ್ನು ಕಳೆದುಕೊಂಡಿದೆ. ಬಿಜೆಪಿಗೆ ಅನುಕೂಲ ಮಾಡಿಕೊಡಲೆಂದೇ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ಕಾಂಗ್ರೆಸ್ ಪ್ರಚಾರ ಮಾಡಿತ್ತು. ದೇವೇಗೌಡರು ತಾವು ಗೆಲ್ಲುವುದಕ್ಕಿಂತ ಬೇರೆ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಮುಂದಾಗಿದ್ದಾರಾ ಎನ್ನುವ ಚರ್ಚೆ ಕ್ಷೇತ್ರದಲ್ಲಿ ನಡೆದಿತ್ತು ಎಂಬ ವರದಿಗಳಿವೆ.

ಹಿರಿಯ ಜೀವ ಎಚ್.ಡಿ.ದೇವೇಗೌಡ್ರು ಪಟ್ಟ ಪರಿಶ್ರಮವೆಲ್ಲಾ ನೀರಿನಲ್ಲಿ ಹೋಮ
ಸಿಂಧಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 93,865, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೋಳಿ 62,680 ಮತಗಳನ್ನು ಪಡೆದರೆ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕೇವಲ 4,353 ಮತಗಳನ್ನು ಪಡೆದಿದ್ದಾರೆ. ಕಳೆದ ಚುನಾವಣೆಯಲ್ಲಿ 70,865 ಮತಗಳನ್ನು ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಸಿ.ಮನಗೋಳಿ ಪಡೆದಿದ್ದರು. ಆದರೆ, ಉಪ ಚುನಾವಣೆಯಲ್ಲಿ ಅದರ ಶೇ.ಹತ್ತರಷ್ಟೂ ಮತಗಳನ್ನು ಪಡೆಯಲು ಜೆಡಿಎಸ್ಸಿಗೆ ಸಾಧ್ಯವಾಗಿಲ್ಲ. ಆ ಮೂಲಕ, ಹಿರಿಯ ಜೀವ ಎಚ್.ಡಿ.ದೇವೇಗೌಡ್ರು ಪಟ್ಟ ಪರಿಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗಿದೆ.












Click it and Unblock the Notifications