ಇಂತಹ ದೃಢ ನಿರ್ಧಾರ ತೆಗೆದುಕೊಂಡರೆ ಮಾತ್ರ ಕಾಂಗ್ರೆಸ್ಸಿಗೆ ಉಳಿಗಾಲ
ಹಿರಿಯ ಮುಖಂಡರಿಂದ ಪಕ್ಷ ಪುನರ್ ಸಂಘಟನೆಗೆ ಒತ್ತಾಯ, ಬಲವಿಲ್ಲದ ಹೈಕಮಾಂಡ್, ರಾಹುಲ್ ಗಾಂಧಿಯವರ ಮಾತನ್ನು ಪಕ್ಷದಲ್ಲಿ ಇನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳದೆ ಇರುವುದು.. ಈ ರೀತಿಯ ಹಲವು ನಿರ್ಧಾರಗಳಿಂದ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಸೊರಗುತ್ತಾ ಬರುತ್ತಿದೆ.
ನೆಹರೂ, ಗಾಂಧಿ ಕುಟುಂಬದ ಆಪ್ತರಿಗೆ ಮೊದಲ ಮನ್ನಣೆ, ಎರಡನೇ ಹಂತದ ನಾಯಕರಿಗೆ ಬೆಲೆ ಕೊಡದೇ ಇದ್ದಿದ್ದರಿಂದ, ಕಾಂಗ್ರೆಸ್ ತನ್ನ ಕೈಯಲ್ಲಿದ್ದ ಮಧ್ಯಪ್ರದೇಶವನ್ನು ಬಿಜೆಪಿಗೆ ಬಳುವಳಿಯಾಗಿ ಕೊಟ್ಟಿತ್ತು. ಅದೇ ರೀತಿಯಲ್ಲಿ ಸಾಗುತ್ತಿದ್ದ ರಾಜಸ್ಥಾನದ ರಾಜಕೀಯಕ್ಕೆ ಸದ್ಯ ತೇಪೆ ಹಚ್ಚುವಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರು ಸಫಲತೆಯನ್ನು ಕಂಡಿದ್ದರು.
ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾಗೆ ಪಟ್ಟ ಕಟ್ಟಿದ್ದರೆ, ಕಮಲ್ ನಾಥ್ ಸರಕಾರ ಪತನಗೊಳ್ಳುತ್ತಿರಲಿಲ್ಲ. ಅದೇ ರೀತಿ, ಸಚಿನ್ ಪೈಲಟ್ ಅವರು ಸಿಎಂ ರೇಸಿನಲ್ಲಿದ್ದರೂ ಕೂಡಾ ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಅನ್ನಾಗಿ ಮಾಡಲಾಗಿತ್ತು. ಇದರಿಂದ ಒಂದು ಹಂತದಲ್ಲಿ ಪೈಲಟ್ ಪಕ್ಷದಿಂದಲೇ ಹೊರ ನಡೆಯುವ ನಿರ್ಧಾರಕ್ಕೆ ಬಂದು, ಸರಕಾರ ಪತನಗೊಳ್ಳುವ ಭೀತಿಯಲ್ಲಿತ್ತು.
ಆದರೆ, ಸಕಾಲದ ನಿರ್ಧಾರದಿಂದ ರಾಜಸ್ಥಾನ ಸರಕಾರ ಕಾಂಗ್ರೆಸ್ಸಿನಲ್ಲೇ ಉಳಿಯಿತು. ಇದೇ ರೀತಿ, ಕಳೆದ ಕೆಲವು ತಿಂಗಳಿನಿಂದ ಭಿನ್ನಮತದ ಗೂಡಾಗಿ ಕೂಟಿದ್ದ ಪಂಜಾಬ್ನಲ್ಲಿ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದು, ಹೊಸ ಸಿಎಂ ಆಗಿ ಚರಣ್ ಜಿತ್ ಸಿಂಗ್ ಚನ್ನಿ ಇಂದು (ಸೆ 20) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂತಹ ದೃಢ ನಿರ್ಧಾರ ತೆಗೆದುಕೊಂಡರಷ್ಟೇ ಕಾಂಗ್ರೆಸ್ಸಿಗೆ ಉಳಿಗಾಲ, ಮುಂದೆ ಓದಿ..

ಕ್ಯಾ. ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಮತ
ಪಂಜಾಬ್ನಲ್ಲಿ ಸಿಎಂ ಆಗಿದ್ದ ಕ್ಯಾ. ಅಮರೀಂದರ್ ಸಿಂಗ್ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಮತಕ್ಕೆ ವರ್ಷಗಳ ಇತಿಹಾಸವಿದೆ. ಅದು, ಕೊನೆಗೆ ಅಮರೀಂದರ್ ಸಿಂಗ್ ರಾಜೀನಾಮೆ ನೀಡುವ ಹಂತಕ್ಕೆ ಬಂದು ನಿಂತಿತು. ಮುಂದಿನ ಸಿಎಂಯನ್ನಾಗಿ ಯಾರನ್ನು ಮಾಡಬೇಕು ಎನ್ನುವ ಕಠಿಣ ಸವಾಲು ಹೈಕಮಾಂಡ್ ಮುಂದಿತ್ತು. ಯಾಕೆಂದರೆ, ಇಲ್ಲೂ ಸಿಎಂ ಹುದ್ದೆಯ ರೇಸಿನಲ್ಲಿ ಮೂವರಿದ್ದರು, ಇದರಲ್ಲಿ ಸಿಧು ಕೂಡಾ ಒಬ್ಬರು. ಆದರೆ, ಹೈಕಮಾಂಡ್ ಅಳೆದು ತೂಗಿ, ಒಳ್ಳೆಯ ನಿರ್ಧಾರಕ್ಕೆ ಬಂದಿದೆ.

ಮುಂದಿನ ಚುನಾವಣೆಯಲ್ಲಿ ಗೆದ್ದರೆ, ದಲಿತ ಸಮುದಾಯದವರನ್ನೇ ಸಿಎಂ
ಸಿಎಂ ರೇಸಿನಲ್ಲಿದ್ದ ಸುಖಜಿಂದರ್ ಸಿಂಗ್ ಅವರತ್ತ ಕಾಂಗ್ರೆಸ್ ಒಲವು ತೋರಲು ಮುಂದಾದಾಗ ಸಿಧು ಇದಕ್ಕೆ ವಿರೋಧ ತೋರಿದ್ದು ಒಂದು ಕಡೆ. ಇನ್ನೊಂದು ಕಡೆ ಅಕಾಲಿದಳ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ದಲಿತ ಎನ್ನುವ ಪದವನ್ನು ಮಂಚೂಣಿಗೆ ತಂದಿದ್ದು. ತಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದರೆ, ದಲಿತ ಸಮುದಾಯದವರನ್ನೇ ಸಿಎಂಯನ್ನಾಗಿ ಮಾಡಲಾಗುವುದು ಎನ್ನುವ ಘೋಷಣೆಯೇ, ಕಾಂಗ್ರೆಸ್ ಮುಖ್ಯಮಂತ್ರಿ ಹುದ್ದೆಗೆ ಹೊಸ ಮುಖವನ್ನು ಆರಿಸಲು ಕಾರಣವಾಯಿತು.

ಮೂರು ಬಾರಿಯ ಶಾಸಕರಾಗಿರುವ ಚರಣ್ ಜಿತ್ ಸಿಂಗ್ ಚನ್ನಿ
ಹಿಂದಿನ ಕ್ಯಾ.ಅಮರೀಂದರ್ ಸಿಂಗ್ ಸರಕಾರದಲ್ಲಿ ಸಚಿವರಾಗಿದ್ದ ಮತ್ತು ಮೂರು ಬಾರಿಯ ಶಾಸಕರಾಗಿರುವ ಚರಣ್ ಜಿತ್ ಸಿಂಗ್ ಚನ್ನಿಯವರ ಆಯ್ಕೆ ಪಂಜಾಬ್ ಕಾಂಗ್ರೆಸ್ಸಿನಲ್ಲಿ ಅನಿರೀಕ್ಷಿತ. ಇಲ್ಲಿ, ದಲಿತ ಸಮುದಾಯದವರನ್ನು ಸಿಎಂ ಹುದ್ದೆಗೆ ನೇಮಿಸಿದ್ದು ಮತ್ತು ನವಜೋತ್ ಸಿಂಗ್ ಸಿಧು ಬಣದ ಮಾತಿಗೆ ಮಹತ್ವವನ್ನು ನೀಡಿರುವುದು, ಹೈಕಮಾಂಡ್ ತೋರಿದ ದೃಢ ನಿರ್ಧಾರವಾಗಿದೆ. ಯಾಕೆಂದರೆ, ಇನ್ನೇನು ಕೆಲವೇ ತಿಂಗಳಲ್ಲಿ ಪಂಜಾಬ್ನಲ್ಲಿ ಚುನಾವಣೆ ನಡೆಯಲಿದೆ.

ಭಿನ್ನಾಭಿಪ್ರಾಯ ತಾರಕಕ್ಕೇರಿದ್ದಾಗ ಚರಣ್ ಜಿತ್ ಸಿಂಗ್ ಸಿಧು ಬಣದಲ್ಲಿದ್ದರು
ಅಮರೀಂದರ್ ಸಿಂಗ್-ಸಿಧು ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದಾಗ ಚರಣ್ ಜಿತ್ ಸಿಂಗ್ ಸಿಧು ಬಣದಲ್ಲಿದ್ದರು. ಹಾಗಾಗಿ, ಇವರನ್ನು ಸಿಎಂ ಹುದ್ದೆಗೆ ಆರಿಸಿದಾಗ ಸಿಧು ಅವರಿಂದ ವಿರೋಧ ವ್ಯಕ್ತವಾಗಲಿಲ್ಲ. ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ಸಿಧು ಅವರನ್ನು ಸಿಎಂ ಆಗಿ ಮಾಡಬೇಕಾದ ಅನಿವಾರ್ಯತೆ ಉಂಟಾದರೆ ಆಗ, ಚರಣ್ ಜಿತ್ ಅವರನ್ನು ಸುಲಭವಾಗಿ ಮನವೊಲಿಸಬಹುದು ಎನ್ನುವುದು ಕಾಂಗ್ರೆಸ್ಸಿನ ಲೆಕ್ಕಾಚಾರ.












Click it and Unblock the Notifications