ಕುಮಾರಸ್ವಾಮಿಯವರ ಸಿಎಂ ಹುದ್ದೆ ಹೊಣೆ ವರ್ಗಾವಣೆಗೆ ಕಾಲ ಸನ್ನಿಹಿತವೆ?
Recommended Video
ಮುಖ್ಯಮಂತ್ರಿ ಹುದ್ದೆಯಿಂದ ಎಚ್.ಡಿ.ಕುಮಾರಸ್ವಾಮಿ ಅವರು ನಿರ್ಗಮಿಸುವುದು ಉತ್ತಮವೆ? ಅವರ ಈಚಿನ ಹೇಳಿಕೆಗಳು ಗಮನಿಸಿದರೆ ಹಾಗೆ ಅನಿಸುತ್ತದೆ. "ನನ್ನ ಆರೋಗ್ಯ ಚೆನ್ನಾಗಿಲ್ಲ, ಯಾವಾಗ ಸಾಯ್ತೀನೋ ಗೊತ್ತಿಲ್ಲ. ಅಷ್ಟರಲ್ಲಿ ಅಂದುಕೊಂಡ ಕೆಲಸಗಳನ್ನು ಮಾಡಲು ಅವಕಾಶ ನೀಡಿ" ಎಂದು ಹೋದಲ್ಲಿ ಬಂದಲ್ಲಿ ಮಾತನಾಡುತ್ತಿದ್ದಾರೆ.
ಮಂಗಳವಾರದಂದು ಅವರು ಶಿವಮೊಗ್ಗದಲ್ಲಿ ಆಡಿದ ಮಾತುಗಳು ಮತ್ತೂ ವಿಚಿತ್ರವಾಗಿವೆ. ಮಾಧ್ಯಮಗಳಲ್ಲಿ ಟೀಕೆ-ಟಿಪ್ಪಣಿಗಳು, ಅದರಲ್ಲೂ ಬೇಸರ ಆಗುವಂಥದ್ದು ಬಂದರೆ ಮನಸಿಗೆ ತೆಗೆದುಕೊಂಡು ಬಿಡ್ತೀನಿ. ಇದರಿಂದ ನನ್ನ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತದೆ. ಈಚೆಗೆ ಹಾಗೇ ಆಗಿ, ಅನಾರೋಗ್ಯ ಸಮಸ್ಯೆ ಎದುರಿಸಬೇಕಾಯಿತು ಎಂದಿದ್ದಾರೆ.
ಯಾವಾಗ ಬೇಕಾದ್ರು ಸಾಯ್ಬೋದು ಅಂದಿದ್ದ ಎಚ್ಡಿಕೆ 85 ವರ್ಷ ಬದುಕಿರ್ತಾರಂತೆ
ಇಷ್ಟೆಲ್ಲ ಆರೋಗ್ಯ ಸಮಸ್ಯೆ, ಭಾವುಕ ವ್ಯಕ್ತಿತ್ವದ ಕುಮಾರಸ್ವಾಮಿ ಅವರು ತಮ್ಮ ಜೀವವನ್ನು ಪಣಕ್ಕೆ ಇಟ್ಟು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ಏನು ಅರ್ಥವಿದೆ? ಹೇಗಿದ್ದರೂ ಈ ಮೈತ್ರಿ ಸರಕಾರದಲ್ಲಿ ಸಮನ್ವಯ ಸಮಿತಿ ಅಂತ ಒಂದಿದೆ. ಅದರ ಅಧ್ಯಕ್ಷರಾಗಿರುವವರು ಸಿದ್ದರಾಮಯ್ಯ. ಆ ಸಮಿತಿಯಲ್ಲಿ ಮಾರ್ಗದರ್ಶಕರಾಗಿ ಕುಮಾರಸ್ವಾಮಿ ಮುಂದುವರಿದು, ಸಿಎಂ ಕುರ್ಚಿಯಲ್ಲಿ ಬೇರೊಬ್ಬರನ್ನು ಕೂರಿಸಬಹುದು.
ರೇವಣ್ಣ ಅಥವಾ ಅನಿತಾ ಅವರನ್ನು ಸಿಎಂ ಮಾಡಲಿ
ಜೆಡಿಎಸ್ ನಲ್ಲೇ ತುಂಬ ಹಿರಿಯರು, ಸಚಿವರಾಗಿ ಖಾತೆ ನಿರ್ವಹಿಸಿದ ಅನುಭವ ಇರುವ ಎಚ್.ಡಿ.ರೇವಣ್ಣ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬಹುದು. ಸದ್ಯಕ್ಕೆ ಲೋಕೋಪಯೋಗಿ ಸಚಿವರಾಗಿ ಇರುವ ಅವರ ಸಾಮರ್ಥ್ಯದ ಬಗ್ಗೆ ಉಳಿದೆಲ್ಲರಿಗಿಂತ ಕುಮಾರಸ್ವಾಮಿ ಅವರಿಗೇ ಹೆಚ್ಚು ತಿಳಿದಿದೆ. ಇನ್ನು ರಾಜಕಾರಣಕ್ಕೆ ಕೂಡ ಎಚ್ ಡಿಕೆಗಿಂತ ರೇವಣ್ಣ ಬಹಳ ಹಳಬರು. ಅಥವಾ ಮತ್ತೊಂದು ಸಾಧ್ಯತೆ ಅಂದುಕೊಳ್ಳುವುದಾದರೆ ಈಗ ರಾಮನಗರ ಉಪ ಚುನಾವಣೆ ಕಣದಲ್ಲಿರುವ ಅನಿತಾ ಕುಮಾರಸ್ವಾಮಿ. ತಮ್ಮ ಪತಿಯ ಆಶೋತ್ತರಗಳನ್ನು ಚೆನ್ನಾಗಿ ಬಲ್ಲರು. ಜತೆಗೆ ಕರ್ನಾಟಕವು ಮಹಿಳೆಯೊಬ್ಬರನ್ನು ಮುಖ್ಯಮಂತ್ರಿ ಆಗಿ ಕಾಣುವಂತಾಗುತ್ತದೆ. ಇವರಿಬ್ಬರ ಪೈಕಿ ಯಾರೇ ಮುಖ್ಯಮಂತ್ರಿ ಆದರೂ ಜೆಡಿಎಸ್ ಗೆ ಪಕ್ಷವಾಗಿಯೂ ಯಾವುದೇ ಹಾನಿ ಆಗುವುದಿಲ್ಲ. ಏಕೆಂದರೆ ದೇವೇಗೌಡರ ಕುಟುಂಬ ಸದಸ್ಯರ ಅದರಲ್ಲೂ ಪ್ರಮುಖರಿಬ್ಬರ ಬಳಿಯಲ್ಲೇ ಅಧಿಕಾರ ಇರುತ್ತದೆ.
ಕುಮಾರಸ್ವಾಮಿ ಅನಾರೋಗ್ಯ: ಜಯದೇವ ವೈದ್ಯರ ರಿಪೋರ್ಟ್
ಕಾಂಗ್ರೆಸ್ ನವರನ್ನು ಮುಖ್ಯಮಂತ್ರಿ ಮಾಡಲಿ
ಈಗಿನ ಪರಿಸ್ಥಿತಿಯಲ್ಲಿ ಅಧಿಕಾರ ನಡೆಸುವುದು ಕಷ್ಟವಾಗಿದೆ. ಸಂಪುಟ ವಿಸ್ತರಣೆ, ರೈತರ ಸಾಲ ಮನ್ನಾ, ಭಿನ್ನಮತ ಶಮನದಂಥ ಸಾಲು ಸವಾಲುಗಳಿವೆ. ಜತೆಗೆ ಬಿಜೆಪಿಯವರಿಂದ ಬಹಳ ಹಿಂಸೆ ಆಗುತ್ತಿದೆ ಎಂದೆನಿಸಿದರೆ ಕಾಂಗ್ರೆಸ್ ನಿಂದ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದು. ಒಕ್ಕಲಿಗರೊಬ್ಬರು ಆಗಲಿ ಅಂದರೆ ಸಹಜವಾಗಿಯೇ ಡಿ.ಕೆ.ಶಿವಕುಮಾರ್, ದಲಿತರು ಅಂದುಕೊಂಡರೆ ಪರಮೇಶ್ವರ್ ಅಥವಾ ಖರ್ಗೆ, ಲಿಂಗಾಯತರು ಅಂದುಕೊಳ್ಳುವುದಾದರೆ ಆ ಸಮುದಾಯದ ಪ್ರಮುಖ ನಾಯಕರು, ಬಿಜೆಪಿಗೆ ಪರ್ಯಾಯಯವಾಗಿ ಬ್ರಾಹ್ಮಣರನ್ನು ಬೆಂಬಲಿಸಿದ ಶ್ರೇಯ ಸಿಗಬೇಕು ಅಂದುಕೊಂಡರೆ ಆರ್.ವಿ.ದೇಶಪಾಂಡೆ ಅಥವಾ ದಿನೇಶ್ ಗುಂಡೂರಾವ್, ಕೊನೆಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿಬಿಟ್ಟರು ಎಂದು ದೇವೇಗೌಡರ ಕುಟುಂಬದ ಬಗ್ಗೆ ಈಗಲೂ ಸಿಟ್ಟಾಗಿದ್ದಾರೆ ಅಂತ ಭಾವಿಸುವ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿ, ಜೆಡಿಎಸ್ ನಿಂದ ಒಬ್ಬರನ್ನು ಡಿಸಿಎಂ ಮಾಡಿ, ಪ್ರಭಾವಿ ಖಾತೆಗಳನ್ನು ಉಳಿಸಿಕೊಂಡು, ಮುಂದಿನ ಚುನಾವಣೆಗೆ ಕುಮಾರಸ್ವಾಮಿ-ದೇವೇಗೌಡರು ಸೇರಿ ಪಕ್ಷ ಕಟ್ಟಲು ಆರಂಭಿಸಬಹುದು.
ಇಂಡಿಯಾ ಟುಡೇ ಸಮೀಕ್ಷೆ : ಕುಮಾರಸ್ವಾಮಿ ಸರಕಾರಕ್ಕೆ ಥಂಬ್ಸ್ ಡೌನ್!
ಲೋಕಸಭೆ ಚುನಾವಣೆ ಬಂದೇಬಿಟ್ಟಿತು
ಮುಖ್ಯ ಸಮಸ್ಯೆ ಏನು? ಮಾಧ್ಯಮಗಳು ಟೀಕೆ ಮಾಡುತ್ತವೆ. ಸುಮ್ಮಸುಮ್ಮನೆ ಆರೋಪ ಹೊರೆಸುತ್ತಿವೆ ಎಂಬುದು ತಾನೆ. ಇದು ಸಹಜವಲ್ಲವೆ? ರಾಜ್ಯದ ಮುಖ್ಯಮಂತ್ರಿಯ ಸುತ್ತ ಮಾಧ್ಯಮಗಳು ಸುತ್ತಾಡುತ್ತವೆ. ಚಾನೆಲ್ ವೊಂದರ ಒಡತಿಯಾಗಿರುವ ಅನಿತಾ ಅವರ ಬಳಿ ವಿಚಾರಿಸಿದ್ದರೂ ಗೊತ್ತಾಗುವ ಸಂಗತಿ ಇದು. ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಸಂದರ್ಭದಲ್ಲಿ, ನನಗೆ ಅನಾರೋಗ್ಯ- ಬದುಕುವುದಿಲ್ಲ ಎಂಬ ಮಾತನಾಡಿದರೆ, ನೀವು ಮುಖ್ಯಮಂತ್ರಿ ಆಗಬೇಕು ಎಂಬುದು ಜನರ ಆಯ್ಕೆಯೇ ಆಗಿರಲಿಲ್ಲ ಎಂಬ ಮಾತನ್ನು ನೆನಪಿಸುತ್ತಾರೆ. ಇಷ್ಟು ಅನಾರೋಗ್ಯ ಸಮಸ್ಯೆ ಇರುವಾಗಲೂ ಅಧಿಕಾರದಲ್ಲಿ ಮುಂದುವರಿದರೆ, ಒಂದೋ ಜೆಡಿಎಸ್ ನಲ್ಲಿ ಸಮರ್ಥ ನಾಯಕರಿಲ್ಲ ಅಂತಲೋ ಅಥವಾ ಕುಮಾರಸ್ವಾಮಿ ಅವರಿಗೆ ಅಧಿಕಾರ ಲಾಲಸೆ ಅಂತಲೇ ಬಿಂಬಿತವಾಗುತ್ತದೆ. ಉಳಿದವರಿಗೆ ಏನು ಅನಿಸುತ್ತದೋ ಬಿಡುತ್ತದೋ ಕುಮಾರಸ್ವಾಮಿ ಅವರು ಆರೋಗ್ಯವಾಗಿರುವುದು, ಪ್ರಜೆಗಳ ಪರವಾಗಿ ಕೆಲಸ ಮಾಡುವುದು ರಾಜ್ಯದ ಜನರಿಗೆ ಬೇಕಾಗಿದೆ.
ಉಪ ಚುನಾವಣೆ ಪ್ರಚಾರದಲ್ಲಿ ಹುಮ್ಮಸ್ಸು ಕಳೆದುಕೊಂಡಿತೇ ಜೆಡಿಎಸ್?
ಆ ಒತ್ತಡವನ್ನು ಹೇಗೆ ಸಹಿಸಲು ಸಾಧ್ಯ?
ಕುಮಾರಸ್ವಾಮಿ ಅವರು ಈ ಸಲ ಮುಖ್ಯಮಂತ್ರಿ ಆದ ನಂತರ ಅನಾರೋಗ್ಯದ ಕಾರಣಕ್ಕೆ ಎಷ್ಟು ಬಾರಿ ಜನತಾ ದರ್ಶನ ರದ್ದು ಮಾಡಿದರು? ಎಷ್ಟು ಕಾರ್ಯಕ್ರಮಗಳಿಗೆ ತೆರಳಲು ಸಾಧ್ಯವಾಗಿಲ್ಲ? ಎಷ್ಟು ದೇವಸ್ಥಾನಗಳಲ್ಲಿ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು? ಎಷ್ಟು ಬಾರಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡರು ಈ ಎಲ್ಲ ವಿಚಾರಗಳನ್ನು ಒಮ್ಮೆ ನೆನಪಿಸಿಕೊಂಡರೆ ಸಾಕು, ಪರಿಸ್ಥಿತಿ ಏನು ಎಂಬುದು ಅರಿವಿಗೆ ಬರುತ್ತದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಬರುತ್ತದೆ. ಆಗ ಕೇಂದ್ರದಿಂದಲೂ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಹಲವರು ಬಂದು ಚುನಾವಣಾ ಪ್ರಚಾರ ಮಾಡುತ್ತಾರೆ. ಆಗ ಸಹಜವಾಗಿಯೇ ರಾಜ್ಯ ಸರಕಾರ, ಕುಮಾರಸ್ವಾಮಿ ಹಾಗೂ ಜೆಡಿಎಸ್ ವಿರುದ್ಧವೂ ಕತ್ತಿ ಝಳಪಿಸುತ್ತಾರೆ. ಇದರ ಜತೆಗೆ ಜೆಡಿಎಸ್ ಅನ್ನು ಗೆಲ್ಲಿಸಿಕೊಳ್ಳಲು ಕುಮಾರಸ್ವಾಮಿ ಅವರು ಮತ್ತೆ ರಾಜ್ಯದಾದ್ಯಂತ ಪ್ರವಾಸ ಮಾಡಬೇಕಾಗುತ್ತದೆ. ಇದರ ಜತೆಗೆ ಮುಖ್ಯಮಂತ್ರಿ ಹುದ್ದೆಯ ಹೊಣೆಯೂ ಸೇರಿರುತ್ತದೆ. ಆ ಒತ್ತಡವನ್ನು ಅವರು ಹೇಗೆ ಸಹಿಸಿಯಾರು? ಆದ್ದರಿಂದ ಈಗಲೇ ನಿರ್ಧರಿಸಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಯ ಹೊಣೆಯನ್ನು ತಾವು ನಂಬುವಂಥ, ಅರ್ಹರಿಗೆ ವರ್ಗಾಯಿಸುವುದು ಉತ್ತಮ ಅಲ್ಲವೆ?
ಉಪ ಚುನಾವಣೆ : ಗುಪ್ತಚರ ಇಲಾಖೆ ವರದಿಯಲ್ಲಿ ಕಾಂಗ್ರೆಸ್ಸಿಗೆ ಭಾರೀ ಆಘಾತ