ಸಿಖ್ ಉಗ್ರವಾದ, ಮಂದಿರಗಳ ದಾಳಿ - ಬ್ರಿಟನ್, ಕೆನಡಾ ಮೇಲೆ ಭಾರತ ನಿಗಾ
ನವದೆಹಲಿ, ಸೆ. 22: ಬ್ರಿಟನ್ ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂದೂ ಮಂದಿರಗಳ ಮೇಲಿನ ದಾಳಿ ಘಟನೆಗಳನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಪಾಕಿಸ್ತಾನ ಬೆಂಬಲಿಗ ಮುಸ್ಲಿಮರ ಗುಂಪುಗಳು ಕಳೆದ ಕೆಲ ವಾರಗಳಿಂದ ಬ್ರಿಟನ್ನ ಕೆಲ ಪ್ರದೇಶಗಳಲ್ಲಿ ಗದ್ದಲ ಎಸಗಿರುವುದು ಜಾಗತಿಕವಾಗಿ ಸದ್ದು ಮಾಡಿದೆ. ಭಾರತ ಈಗಾಗಲೇ ಈ ಸಂಬಂಧ ತನ್ನ ಆತಂಕವನ್ನು ಬ್ರಿಟನ್ ದೇಶಕ್ಕೆ ತೋರ್ಪಡಿಸಿದೆ.
ಇದೇ ವೇಳೆ, ಸಿಖ್ ಉಗ್ರವಾದವೂ ಹೆಚ್ಚುತ್ತಿರುವುದು ಕಂಡಬರುತ್ತಿದೆ. ಬ್ರಿಟನ್ನಲ್ಲಿ ಮುಸ್ಲಿಮರ ಜೊತೆಗೆ ಕೆಲ ಸಿಖ್ಖರೂ ಸೇರಿ ಹಿಂದೂಗಳ ಮೇಲೆ ದಾಳಿ ಮಾಡಿದ ಘಟನೆಗಳು ವರದಿಯಾಗಿದ್ದವು. ಕೆನಡಾದಲ್ಲಿ ಸಿಖ್ಖರಿಂದ ಹಿಂದೂಗಳ ಮೇಲೆ ಹಲ್ಲೆಯಾಗಿರುವ ಅಥವಾ ನಿಂದಿಸಿರುವ ಘಟನೆಗಳು ಹಲವು ಜರುಗಿವೆ.
ಇದು ಕ್ರಿಕೆಟ್ ಗಲಾಟೆಯಾ, ಹಿಂದೂ ಮುಸ್ಲಿಂ ಗಲಭೆಯಾ? ಲೈಸಿಸ್ಟರ್ನಲ್ಲಿ ನಡೆದದ್ದೇನು?
ಹಿಂದೂಗಳು, ಹಿಂದೂಗಳ ಮಂದಿರಗಳ ಮೇಲಿನ ದಾಳಿ ಘಟನೆಗಳು ಮತ್ತು ಹೆಚ್ಚುತ್ತಿರುವ ಸಿಖ್ ಉಗ್ರವಾದ ಈ ಎರಡು ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಬ್ರಿಟನ್ ಮತ್ತು ಕೆನಡಾಗಳತ್ತ ನಿಗಾ ಇಡಲು ನಿರ್ಧರಿಸಿದೆ. ಹಾಗೆಯೇ, ಈ ಎರಡು ದೇಶಗಳಿಗೆ ಈ ಬಗ್ಗೆ ಸಂದೇಶ ಕಳುಹಿಸುವ ಬಗ್ಗೆ ಭಾರತ ಅವಲೋಕಿಸುತ್ತಿದೆ.
ಹಗುರವಾಗಿ ತೆಗೆದುಕೊಳ್ಳಲ್ಲ
ಜಾಗತಿಕವಾಗಿ ಭಾರತಕ್ಕೆ ಸಂಬಂಧಿಸಿದ ಬೆಳವಣಿಗೆಯನ್ನು ನಿರ್ಲಕ್ಷಿಸದಿರಲು ಮತ್ತು ಭಾರತ ವಿರೋಧಿ ಕೃತ್ಯಗಳು ಎಲ್ಲೇ ನಡೆದರೂ ಅದಕ್ಕೆ ತೀಕ್ಷ್ಣ ಪ್ರತಿಯಿಸಲು ಸರಕಾರ ನಿರ್ಧರಿಸಿದೆ.
ಲೀಸೆಸ್ಟರ್ ಮತ್ತು ಬರ್ಮಿಂಗ್ಹ್ಯಾಂನಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಘಟನೆಯನ್ನು ಭಾರತ ಬಲವಾಗಿ ಪ್ರತಿಭಟಿಸಿದೆ. ಬ್ರಿಟನ್ ಅಧಿಕಾರಿಗಳ ಬಳಿ ಅದು ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಖಲಿಸ್ತಾನ್ ಉಗ್ರರು ಬ್ರಿಟನ್ನಲ್ಲಿ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದರೂ ಅಲ್ಲಿನ ಸರಕಾರ ಕಣ್ಮುಚ್ಚಿ ಕೂತಿರುವುದು ಭಾರತಕ್ಕೆ ಇರಿಸು ಮುರುಸು ತಂದಿದೆ. ಭಾರತದ ಹಿತಾಸಕ್ತಿ ಇರುವ ಅಫ್ಘಾನಿಸ್ತಾನ-ಪಾಕಿಸ್ತಾನ ಪ್ರದೇಶದಲ್ಲಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮಧ್ಯಪ್ರವೇಶಿಸಲು ಬ್ರಿಟನ್ ಪ್ರಯತ್ನಿಸುತ್ತಿರುವುದೂ ಭಾರತಕ್ಕೆ ಅಸಮಾಧಾನ ತಂದಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಬ್ರಿಟನ್ ಮತ್ತು ಕೆನಡಾದಲ್ಲಿನ ಬೆಳವಣಿಗೆಯನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ದುರ್ಗಾ ಮಂದಿರಕ್ಕೆ ಲಗ್ಗೆ ಇಟ್ಟ ಮುಸ್ಲಿಂ ಗುಂಪು; ಬ್ರಿಟನ್ನಲ್ಲಿ ಹಬ್ಬುತ್ತಿದೆಯಾ ಗಲಭೆ?
ಕೆನಡಾದ ಇಬ್ಬಗೆ ಧೋರಣೆ
ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಯುವ ನಾಯಕನಾಗಿ ಮತ್ತು ಪ್ರಗತಿಪರ ಧೋರಣೆಯ ನಾಯಕನಾಗಿ ಗಮನ ಸೆಳೆಯುತ್ತಿದ್ದಾರಾದರೂ ಭಾರತದ ವಿಚಾರದಲ್ಲಿ ಅವರದ್ದು ಕೆಲವೊಂದಿಷ್ಟು ಇಬ್ಬಗೆಯ ಧೋರಣೆ ಇರುವುದು ಹೌದು. ಕಳೆದ ವರ್ಷ ಭಾರತದಲ್ಲಿ ನಡೆದ ರೈತರ ಪ್ರತಿಭಟನೆಯನ್ನು ಕೆನಡಾ ಪ್ರಧಾನಿ ಬೆಂಬಲಿಸಿದ್ದರು. ಆದರೆ ನಂತರ ಕೆನಡಾದಲ್ಲಿ ನಡೆದ ಟ್ರಕ್ ಚಾಲಕರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದರು.
ಉಕ್ರೇನ್ನ ಕೆಲ ಪ್ರದೇಶಗಳಲ್ಲಿ ರಷ್ಯಾ ಜನಾಭಿಪ್ರಾಯ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಇದನ್ನು ಕೆನಡಾ ಪ್ರಧಾನಿ ಬಲವಾಗಿ ವಿರೋಧಿಸುತ್ತಿದ್ದಾರೆ. ಅದೇ ವೇಳೆ, ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳು ಸಿಖ್ ಜನಾಭಿಪ್ರಾಯ ಸಂಗ್ರಹಕ್ಕೆ ಅನುಮತಿ ನೀಡಿದ್ದಾರೆ. 'ಸಿಖ್ ಫಾರ್ ಜಸ್ಟಿಸ್' ಸಂಘಟನೆ ಸೆ. ೧೯ರಂದು ಆಯೋಜಿಸಿದ ರೆಫರೆಂಡಂಗೆ ಅನುಮತಿ ನಿರಾಕರಿಸುವಂತೆ ಆಗಸ್ಟ್ ತಿಂಗಳಲ್ಲೇ ಭಾರತ ಅಧಿಕೃತವಾಗಿ ಮನವಿ ಮಾಡಿಕೊಂಡಿತ್ತು. ಮೂರು ಬಾರಿ ರಾಜತಾಂತ್ರಿಕ ಮಾರ್ಗದಲ್ಲಿ ಕೆನಡಾಗೆ ಈ ಬಗ್ಗೆ ಮನವಿ ಮಾಡಲಾಗಿತ್ತು. ಆದರೂ ಕೂಡ ಸಿಖ್ ಜನಾಭಿಪ್ರಾಯಕ್ಕೆ ಕೆನಡಾ ಪ್ರಧಾನಿಗಳು ತಡೆ ಕೊಡಲಿಲ್ಲ. ಭಾರತದ ಸಾರ್ವಭೌಮತ್ವವನ್ನು ಕೆನಡಾ ಗೌರವಿಸುತ್ತದೆ. ಸಿಖ್ಖರ ಜನಾಭಿಪ್ರಾಯವನ್ನು ಕೆನಡಾ ಪರಿಗಣಿಸುವುದಿಲ್ಲ ಎಂದು ಸೆಪ್ಟೆಂಬರ್ ೧೬ರಂದು ಕೆನಡಾ ಸರಕಾರ ಸಮಜಾಯಿಷಿ ನೀಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಇದು ಭಾರತಕ್ಕೆ ಬೇಸರ ತರಿಸಿದೆ.
ಸಿಖ್ ಉಗ್ರರ ತಲೆನೋವು
ವಿದೇಶಗಳಲ್ಲಿರುವ ಸಿಖ್ಖರಲ್ಲಿ ಹೆಚ್ಚಿನವರು ಕೆನಡಾ, ಅಮೆರಿಕ ಮತ್ತು ಬ್ರಿಟನ್ ದೇಶಗಳಲ್ಲಿ ನೆಲಸಿದ್ದಾರೆ. ಭಾರತದಿಂದ ಪಂಜಾಬ್ ಅನ್ನು ಖಲಿಸ್ತಾನವಾಗಿ ಪ್ರತ್ಯೇಕಿಸಬೇಕೆಂಬ ಹೋರಾಟಕ್ಕೆ ಭಾರತದೊಳಗೆ ಜಾಗ ಇಲ್ಲವಾದ್ದರಿಂದ ಈ ಮೂರು ದೇಶಗಳಲ್ಲಿ ಸಿಖ್ ಉಗ್ರರು ಕ್ರಿಯಾಶೀಲರಾಗಿದ್ದಾರೆ.
ಇಲ್ಲಿರುವ ಸಿಖ್ ಸಮುದಾಯದವರನ್ನು ಪುಸಲಾಯಿಸಿ ದೇಣಿಗೆ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಪಂಜಾಬ್ನಿಂದ ಅಮಾಯಕ ಯುವಕರನ್ನು ಉಗ್ರವಾದಕ್ಕೆ ಸೆಳೆಯುವ ಕೆಲಸವನ್ನು ಮಾಡಲಾಗುತ್ತಿದೆ. ಪಂಜಾಬ್ನ ಬಹುತೇಕ ಗ್ಯಾಂಗ್ಸ್ಟರ್ಗಳಿಗೆ ಕೆನಡಾವೇ ಆಶ್ರಯತಾಣವಾಗಿದೆ.
ಬ್ರಿಟನ್ನಲ್ಲಿನ ಬೆಳವಣಿಗೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದ ಕಿರಿಕ್ ಎಂಬಂತೆ ಬ್ರಿಟನ್ನ ಲೀಸೆಸ್ಟರ್ನಲ್ಲಿ ಶುರುವಾದ ಗಲಾಟೆ ಬಹಳ ವಿಕೋಪಕ್ಕೆ ಹೋಗಿದೆ. ಅಲ್ಲಿನ ಹಿಂದೂ ಸಮುದಾಯವರನ್ನು ಗುರಿಯಾಗಿಸಿ ದಾಳಿಗಳಾಗಿವೆ. ಮೊನ್ನೆ ಮೊನ್ನೆ ಬರ್ಮಿಂಗ್ಹ್ಯಾಂನಲ್ಲೂ ಹಿಂದೂ ಸಮುದಾಯದವರ ಮೇಲೆ ದಾಳಿಗಳಾಗಿದ್ದವು. ಬ್ರಿಟನ್ನಲ್ಲಿ ಬಹಳ ವರ್ಷಗಳಿಂದ ಶಾಂತಿಯಿಂದ ಮತ್ತು ಸೌಹಾರ್ದತೆಯಿಂದ ವಾಸಿಸುತ್ತಿರುವ ಭಾರತೀಯ ಸಮುದಾಯದ ಮೇಲೆ ದಾಳಿಗಳಾದರೂ ಬ್ರಿಟನ್ ಸರಕಾರ ಅಸಹಾಯಕತೆ ಪ್ರದರ್ಶಿಸುತ್ತಿರುವಂತಿದೆ. ಲೀಸೆಸ್ಟರ್ ಗಲಭೆ ಘಟನೆಯಲ್ಲಿ 47 ಮಂದಿಯನ್ನು ಬಂಧಿಸಲಾಗಿದ್ದರೂ, ಗಲಭೆ ನಡೆಯುವ ವೇಳೆ ದುಷ್ಕರ್ಮಿಗಳನ್ನು ತಡೆಯಲು ಬ್ರಿಟಿಷ್ ಪೊಲೀಸರು ವಿಫಲರಾಗಿದ್ದು ಭಾರತಕ್ಕೆ ಬೇಸರ ತರಿಸಿರುವುದು ಹೌದು.
(ಒನ್ಇಂಡಿಯಾ ಸುದ್ದಿ)