ಕೋವಿಡ್-19 ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಳ: 4ನೇ ಅಲೆಯ ಬಗ್ಗೆ ತಜ್ಞರು ಹೇಳಿದ್ದೇನು?
ಜೂನ್ ತಿಂಗಳ ಆರಂಭದಿಂದ ಭಾರತದಲ್ಲಿ ದೈನಂದಿನ ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜೂನ್ 29 ರಂದು ಒಂದೇ ದಿನ 18,467 ಹೊಸ ಪ್ರಕರಣಗಳು ದಾಖಲಾಗಿದ್ದವು. ಜುಲೈ 6 ರಂದು, ದೈನಂದಿನ ಹೊಸ ಸೋಂಕಿತರ ಪ್ರಮಾಣ 18,506 ಏರಿಕೆಯಾಗುವ ಮೂಲಕ ಆತಂಕ ಮೂಡಿಸಿದೆ.
ಜನವರಿ 2022ರ ಅಂತ್ಯದ ವೇಳೆಗೆ ಮೂರನೇ ಅಲೆ ಉತ್ತುಂಗಕ್ಕೇರಿದ ನಂತರ, ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಜೂನ್ ಆರಂಭದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುವವರೆಗೂ ಸ್ಥಿರವಾಗಿತ್ತು. ನಂತರ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಜುಲೈ 10ರ ವೇಳೆಗೆ ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,28,690 ಗೆ ಹೆಚ್ಚಾಗಿದೆ. ವಾರದ ಪಾಸಿಟಿವಿಟಿ ದರ ಶೇಕಡ 4.09 ಆಗಿದೆ.
ಕೋವಿಡ್-19 ಪ್ರಕರಣಗಳ ಹೆಚ್ಚಾಗುತ್ತಿರುವುದು 4ನೇ ಅಲೆಯ ಸಂಕೇತವಲ್ಲ ಎಂದು ತಜ್ಞರು ಹೇಳುತ್ತಾರೆ. ತಜ್ಞರ ಪ್ರಕಾರ ದಿನನಿತ್ಯದ ಸೋಂಕುಗಳು ಹೆಚ್ಚಾಗುತ್ತಿದ್ದರೂ ರೋಗ ಲಕ್ಷಣದಲ್ಲಿ ಸೌಮ್ಯ ಸ್ವಭಾವ ಇರುವ ಕಾರಣ, ಸೋಂಕಿತರು ಬೇಗನೆ ಗುಣಮುಖರಾಗುತ್ತಿದ್ದಾರೆ.

ಮುಜಾಗ್ರತಾ ಕ್ರಮ ವಹಿಸಲು ಕೇಂದ್ರದ ಸೂಚನೆ
ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ, ಜೂನ್ 9 ರಂದು ಭಾರತದ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಕೋವಿಡ್-19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ ಮತ್ತು ಆರ್ಟಿ-ಪಿಸಿಆರ್ ಪರೀಕ್ಷೆ, ಕಣ್ಗಾವಲು, ಕ್ಲಿನಿಕಲ್ ನಿರ್ವಹಣೆ, ವ್ಯಾಕ್ಸಿನೇಷನ್ ಮತ್ತು ಕೋವಿಡ್-19 ಪ್ರೋಟೋಕಾಲ್ಗಳನ್ನು ಹೆಚ್ಚಿಸಲು ಮತ್ತು ಸಮಯೋಚಿತ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದ್ದಾರೆ.

ಶೀಘ್ರ ಗುಣಮುಖರಾಗುತ್ತಿರುವ ಸೋಂಕಿತರು
"ಕೋವಿಡ್ ಪಾಸಿಟಿವ್ ರೋಗಿಗಳು 48 ರಿಂದ 72 ಗಂಟೆಗಳಲ್ಲಿ ಗುಣಮುಖರಾಗುತ್ತಿದ್ದಾರೆ ಎಂದು ನಾವು ಗಮನಿಸುತ್ತಿದ್ದೇವೆ. ಯಾರಿಗೂ ಯಾವುದೇ ರಿಮೆಡಿಸಿವಿರ್ ಅಥವಾ ಇಮ್ಯುನೊಥೆರಪಿ ಅಗತ್ಯವಿಲ್ಲ. ರೋಗಿಗಳಿಗೆ ಹೆಚ್ಚಿನ ತೊಂದರೆಗಳಿಲ್ಲ. ವ್ಯಾಕ್ಸಿನೇಷನ್ ಎಲ್ಲರಿಗೂ ಸಹಾಯ ಮಾಡಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರು, ಪ್ರಸ್ತುತ ಅಲೆಯ ಸೌಮ್ಯ ಸ್ವಭಾವದಿಂದಾಗಿ, ಸೋಂಕಿತರು ಮನೆಯ ಔಷಧಿಗಳಿಗೆ ಚೇತರಿಸಿಕೊಳ್ಳುತ್ತಿರುವಾಗ ಅಪಾಯದ ಪ್ರಮಾಣ ಕಡಿಮೆಯಾಗುತ್ತಿದೆ. ಕ್ರಮೇಣ ಶೀತದ ತೀವ್ರತೆ ಕಡಿಮೆಯಾಗುತ್ತಿದೆ. ಆದ್ದರಿಂದ ಗಾಬರಿಯಾಗುವ ಅಗತ್ಯವಿಲ್ಲ" ಎಂದು ಮುಂಬೈನ ಗ್ಲೋಬಲ್ ಆಸ್ಪತ್ರೆಯಲ್ಲಿ ಆಂತರಿಕ ಔಷಧ ಹಿರಿಯ ಸಲಹೆಗಾರ ಡಾ. ಮಂಜುಷಾ ಅಗರ್ ವಾಲ್ ಹೇಳಿದರು.
ಜನರು ಮಾಸ್ಕ್ಗಳನ್ನು ಧರಿಸದಿರುವುದು ಅಥವಾ ಬೂಸ್ಟರ್ ಲಸಿಕೆ ಡೋಸ್ಗಳನ್ನು ತೆಗೆದುಕೊಳ್ಳದಿರುವುದು ಕೋವಿಡ್ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.

ಕಳೆದ 24 ಗಂಟೆಯಲ್ಲಿ 18,257 ಹೊಸ ಕೋವಿಡ್ ಪ್ರಕರಣ
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 18,257 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ. ಇದರೊಂದಿಗೆ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,28,690 ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿಗೆ 42 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,25,428 ಕ್ಕೆ ಏರಿದೆ. ದೈನಂದಿನ ಪಾಸಿಟಿವಿಟಿ ದರ ಶೇಕಡ 4.14ಗೆ ಹೆಚ್ಚಾಗಿದೆ.

ಭಾರತ ಸೇರಿ ಹಲವು ದೇಶಗಳಲ್ಲಿ ರೂಪಾಂತರಿ ಪತ್ತೆ
ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಕೋವಿಡ್-19 ಓಮಿಕ್ರಾನ್ ರೂಪಾಂತರದ ಹೊಸ ಉಪ-ವೇರಿಯಂಟ್ ಬಿಎ.2.75 (BA.2.75) ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
"ಯುರೋಪ್ ಮತ್ತು ಅಮೆರಿಕಾದಲ್ಲಿ, ಬಿಎ.4 (BA.4) ಮತ್ತು ಬಿಎ.5 (BA.5) ಅಲೆಗಳನ್ನು ಚಾಲನೆ ಮಾಡುತ್ತಿವೆ. ಭಾರತದಂತಹ ದೇಶಗಳಲ್ಲಿ ಬಿಎ.2.75 ನ ಹೊಸ ಉಪ-ವಂಶಾವಳಿಯನ್ನು ಸಹ ಪತ್ತೆಹಚ್ಚಲಾಗಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದರು.












Click it and Unblock the Notifications