Mahakumbh mela 2025: ಮಹಾಕುಂಭ ಮೇಳದ ಹವಾಮಾನ ವರದಿ ತಿಳಿಯುವುದು ಇನ್ಮುಂದೆ ಸುಲಭ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಬಹುನಿರೀಕ್ಷಿತ ಮಹಾಕುಂಭ ಮೇಳ-2025ಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಇನ್ನು ಕೋಟ್ಯಂತರ ಜನ ಸೇರುವ ಕಾರಣ ಅಲ್ಲಿನ ಹವಾಮಾನ ವೈಪರೀತ್ಯದ ಬಗ್ಗೆ ಜನರಿಗೆ ಮುನ್ಸೂಚನೆ ನೀಡಲು ಭಾರತೀಯ ಹವಾಮಾನ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಮಹಾಕುಂಭ ಮೇಳಕ್ಕಾಗಿಯೇ ಭಾರತೀಯ ಹವಾಮಾನ ಇಲಾಖೆ (IMD) ಎಲ್ಲ ಇತ್ತೀಚಿನ ಹವಾಮಾನ ಮಾಹಿತಿ ಹಂಚಿಕೊಳ್ಳಲು ವಿಶೇಷ ವೆಬ್ ಪುಟವನ್ನು ಪ್ರಾರಂಭಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನಿರ್ದೇಶಕ ಮನೀಶ್ ರಣಲ್ಕರ್, ಮುಂಬರುವ ಮಹಾಕುಂಭ ಮೇಳದ ಹವಾಮಾನ ನವೀಕರಣಗಳಿಗಾಗಿ ಐಎಂಡಿ ವಿಶೇಷ ವೆಬ್ಪುಟವನ್ನು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.

ಮುಂಬರುವ ಮಹಾಕುಂಭ ಮೇಳಕ್ಕಾಗಿ ಇಲಾಖೆಯು ವಿಶೇಷ ವೆಬ್ಪುಟವನ್ನು ಪ್ರಾರಂಭಿಸಿದೆ. ಇದು ಪ್ರತಿ 15 ನಿಮಿಷಗಳಿಗೊಮ್ಮೆ ಇಲ್ಲಿನ ಹವಾಮಾನ ಮಾಹಿತಿ ನೀಡುತ್ತದೆ. ಪ್ರಯಾಗ್ರಾಜ್ನ ಹವಾಮಾನ ಮುನ್ಸೂಚನೆಯು ದಿನಕ್ಕೆ ಎರಡು ಬಾರಿ ನಮ್ಮ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ ಎಂದು ರಣಲ್ಕರ್ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಮಹಾಕುಂಭವನ್ನು ತಾತ್ಕಾಲಿಕ ವಿಭಾಗವಾಗಿ ಸ್ಥಾಪಿಸಲಾಗಿದೆ ಎಂದಿದ್ದಾರೆ.
ಮಹಾಕುಂಭವನ್ನು ಭಾರತೀಯ ಹವಾಮಾನ ಇಲಾಖೆಯು ತಾತ್ಕಾಲಿಕ ಜಿಲ್ಲೆಯಾಗಿ ಸ್ಥಾಪಿಸಿದೆ. ನಾವು ಅದರಲ್ಲಿ ಮೂರು ಹೊಸ ತಂತ್ರಾಂಶವನ್ನು ಸ್ಥಾಪಿಸಿದ್ದೇವೆ. ಮಹಾಕುಂಭ ಜಿಲ್ಲೆಯ ಹವಾಮಾನ ಅಪ್ಡೇಟ್ಗಳು ಪ್ರತಿ 15 ನಿಮಿಷಗಳ ವೆಬ್ಪುಟದಲ್ಲಿ ಲಭ್ಯವಿರಲಿದೆ. ಜನರು ನಿಖರ ಹವಾಮಾನ ಮಾಹಿತಿ ತಿಳಿಯಲು ಎರಡು ಡಿಜಿಟಲ್ ಪ್ರದರ್ಶನಗಳ ವ್ಯವಸ್ಥೆ ಕೂಡ ಮಾಡಲಾಗುವುದು. ಸಮಯಕ್ಕೆ ತಕ್ಕಂತೆ ಮಾಹಿತಿ ಇಲ್ಲಿ ಲಭ್ಯವಿರಲಿದೆ ಎಂದು ವಿವರಿಸಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಮಹಾಕುಂಭಮೇಳದ ಹಿನ್ನೆಲೆ ಮಹಾನಿರ್ವಾಣಿ ಅಖಾರದ ಸಾಧುಗಳು ಮಹಾಕುಂಭ ಶಿಬಿರವನ್ನು ಇಂದು ಪ್ರವೇಶಿಸಿದ್ದಾರೆ. ಡಮರು ಬಾರಿಸುವುದರೊಂದಿಗೆ ಮಹಾದೇವನ ನಾಮವನ್ನು ಜಪಿಸುವ ಮೂಲಕ ಮಹಾಕುಂಭಕ್ಕೆ ಕಾಲಿಟ್ಟಿದ್ದಾರೆ.

ಅಟಲ್ ಅಖಾಡದ ಶ್ರೀಗಳು ಸಹ ಭವ್ಯ ಮೆರವಣಿಗೆಯಲ್ಲಿ ಮಹಾಕುಂಭ ಶಿಬಿರಕ್ಕೆ ಆಗಮಿಸಿದ್ದಾರೆ. ಅವರು ಚಿತಾಭಸ್ಮದಲ್ಲಿ ಮುಳುಗಿ, ಮಾಲೆಗಳನ್ನು ಧರಿಸಿ, ಕುದುರೆ ಸವಾರಿ ಮತ್ತು ಡೋಲುಗಳನ್ನು ಬಾರಿಸುತ್ತಾ ಶಿಬಿರದ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಇಲ್ಲಿ ನೆರೆದಿರುವ ಜನರ ಒಗ್ಗಟ್ಟನ್ನು ವೀಕ್ಷಿಸಲು ಪ್ರತಿಯೊಬ್ಬರೂ ಕುಂಭಮೇಳಕ್ಕೆ ಆಗಮಿಸಬೇಕು. ತಮ್ಮ ದೇಶಗಳಲ್ಲಿ ಇದೇ ರೀತಿಯ ಏಕತೆಯನ್ನು ಉತ್ತೇಜಿಸಲು ಮತ್ತು ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಅಟಲ್ ಅಖಾಡದ ಆಚಾರ್ಯ ವಿಶ್ವಸಾನಂದ ಸರಸ್ವತಿ ಕರೆ ನೀಡಿದ್ದಾರೆ.
ಆಧ್ಯಾತ್ಮಿಕ ನಾಯಕ ಜಗದ್ಗುರು ನರೇಂದ್ರಾಚಾರ್ಯಜಿ ಮಹಾರಾಜರು ಈ ಬಾರಿಯ ಮೇಳಕ್ಕೆ ಅತ್ಯುತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ಶ್ಲಾಘಿಸಿದ್ದಾರೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭವು ಜನವರಿ 13ರಂದು ಪ್ರಾರಂಭವಾಗಿ ಫೆಬ್ರವರಿ 26ರಂದು ಪ್ರಯಾಗರಾಜ್ನಲ್ಲಿ ಮುಕ್ತಾಯಗೊಳ್ಳಲಿದೆ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಹಾಗೂ 144 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಮಹಾಕುಂಭಮೇಳ ಎಂದು ಕರೆಯಲಾಗುತ್ತದೆ. ಈ ಬಾರಿ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವುದು ಮಹಾಕುಂಭ ಮೇಳ. ಪ್ರಯಾಗರಾಜ್ನಲ್ಲಿ ನಡೆಯಲಿರುವ ಮಹಾಕುಂಭ 2025ಕ್ಕೆ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬರೋಬ್ಬರಿ 5,500 ಕೋಟಿ ರೂಪಾಯಿಗಳ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.












Click it and Unblock the Notifications