ಕೊರೊನಾ ಸಮಯದಲ್ಲಿ ಬಿಪಿ, ಶುಗರ್ ಇರುವವರು ಹೇಗಿರಬೇಕು? ಐಸಿಎಂಆರ್ ಸಲಹೆ...
ನವದೆಹಲಿ, ಮೇ 4: ಭಾರತ ಕೊರೊನಾ ಎರಡನೇ ಅಲೆಯ ಬಿಗಿಮುಷ್ಟಿಯಲ್ಲಿದೆ. ಕಳೆದ ಒಂದೂವರೆ ತಿಂಗಳಿನಿಂದಲೂ ಕೊರೊನಾ ಸೋಂಕಿನ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿವೆ.
ಇದರೊಂದಿಗೆ ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯೂ ಹೆಚ್ಚಾಗಿರುವುದು ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಇನ್ನಿತರೆ ಆರೋಗ್ಯ ಸಮಸ್ಯೆಗಳಿರುವವರಿಗೆ ಸೋಂಕು ಅತಿ ಬೇಗನೆ ತಗುಲುತ್ತಿರುವುದು ಭೀತಿ ಮೂಡಿಸಿದೆ. ಮಧುಮೇಹ, ರಕ್ತದೊತ್ತಡ, ಹೃದಯ ಸಮಸ್ಯೆಗಳಿರುವವರಿಗೆ ಸೋಂಕು ಬೇಗನೆ ತಗುಲುತ್ತಿದೆ. ಹೀಗಾಗಿ ಈ ಆರೋಗ್ಯ ಸಮಸ್ಯೆ ಇರುವವರಿಗೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕೆಲವೊಂದು ಸಲಹೆಗಳನ್ನು ನೀಡಿದೆ. ಆ ಸಲಹೆಗಳೇನು? ಮುಂದೆ ಓದಿ...

ದಿನನಿತ್ಯದ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಡಿ
ರಕ್ತದೊತ್ತಡ, ಮಧುಮೇಹ, ಹೃದಯ ಸಮಸ್ಯೆ ಇರುವ ಲಕ್ಷಾಂತರ ಮಂದಿ ಕೊರೊನಾ ಸೋಂಕಿನ ಕುರಿತು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದು, ಅದಕ್ಕೆ ಐಸಿಎಂಆರ್ ಉತ್ತರ ನೀಡಿದೆ. ಹಲವು ಸಲಹೆಗಳನ್ನೂ ನೀಡಿದೆ. ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಮಸ್ಯೆ ಇರುವ ಕೆಲ ಮಂದಿಗೆ ಬೇಗ ಸೋಂಕು ತಗುಲುತ್ತದೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ನಂತರವೂ ಈ ಮುನ್ನ ತೆಗೆದುಕೊಳ್ಳುತ್ತಿದ್ದ ಔಷಧಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಹೇಳಿದೆ.

ಅನಿಯಂತ್ರಿತ ಮಧುಮೇಹ ಇರುವವರಿಗೆ ಸೋಂಕಿನ ಅಪಾಯ
ವೈದ್ಯರ ಸಲಹೆ ಹೊರತಾಗಿ ದಿನನಿತ್ಯ ತೆಗೆದುಕೊಳ್ಳುತ್ತಿದ್ದ ಔಷಧ ಸೇವನೆಯನ್ನು ನಿಲ್ಲಿಸಬೇಡಿ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದ ಔಷಧಿಯನ್ನು ಸೇವಿಸುವುದನ್ನು ನಿಲ್ಲಿಸಬೇಡಿ ಎಂದು ಹೇಳಿದೆ. ಬಿಪಿ, ಶುಗರ್ ಇರುವವರು ಈ ಸೋಂಕಿಗೆ ಅತಿ ಬೇಗನೆ ತುತ್ತಾಗುವುದು ನಿಜವೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಅನಿಯಂತ್ರಿತ ಮಧುಮೇಹ ಇರುವವರು ಎಲ್ಲಾ ರೀತಿಯ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ. ಎಲ್ಲಾ ಮಧುಮೇಹಿಗಳೂ ಈ ಸೋಂಕಿಗೆ ಬೇಗನೆ ತುತ್ತಾಗದಿದ್ದರೂ ಕೆಲವರಲ್ಲಿ ಗಂಭೀರತೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದೆ.

ಆಹಾರ ಪದ್ಧತಿ ಹಾಗೂ ವ್ಯಾಯಾಮ ಸೂಕ್ತವಾಗಿರಲಿ
ಸೋಂಕು ಕಾಣಿಸಿಕೊಂಡ ನಂತರವೂ ಆಹಾರ ಪದ್ಧತಿಯನ್ನು ತಪ್ಪದೇ ಪಾಲಿಸಿ, ಉತ್ತಮ ಆಹಾರವನ್ನೇ ಸೇವಿಸಿ. ತರಕಾರಿ ಯಥೇಚ್ಛವಾಗಿರಲಿ. ವ್ಯಾಯಾಮ ಮಾಡಿ. ನಿಮ್ಮ ದಿನನಿತ್ಯದ ಔಷಧಗಳನ್ನು ಸೇವಿಸಿ. ಮಧುಮೇಹಿಗಳು ಸುಸ್ತಾದರೆ, ರಕ್ತದಲ್ಲಿನ ಗ್ಲೂಕೋಸ್ ಅಂಶದ ಮೇಲೆ ನಿಗಾ ಇಡಿ ಎಂದು ಹೇಳಿದೆ. ಫೋನ್ ಮೂಲಕವಾದರೂ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರಿ ಎಂದು ತಿಳಿಸಿದೆ. ಕೊರೊನಾ ನಿಯಮಾವಳಿಗಳ ಪಾಲನೆಯಲ್ಲಿ ಎಲ್ಲೂ ಎಡವದಿರಿ ಎಂದು ಎಚ್ಚರಿಕೆ ನೀಡಿದೆ.
Recommended Video

ನೋವು ನಿವಾರಕ ಮಾತ್ರೆಗಳ ಕುರಿತು ಎಚ್ಚರಿಕೆ
ಐಬ್ರುಫಿನ್ ನಂಥ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳದಂತೆ ಐಸಿಎಂಆರ್ ಎಚ್ಚರಿಕೆ ನೀಡಿದೆ. ಇದು ಕೊರೊನಾದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳಿದೆ. ಹೃದಯ ಸಮಸ್ಯೆ ಇರುವ ರೋಗಿಗಳಿಗೆ ಈ ಮಾತ್ರೆಗಳು ಅಪಾಯಕಾರಿಯಾಗಿವೆ. ಕಿಡ್ನಿಗೂ ಇದು ಹಾನಿ ಎಂದು ಎಚ್ಚರಿಕೆ ನೀಡಿದೆ. ಪ್ಯಾರಾಸಿಟಮಾಲ್ ಸುರಕ್ಷಿತ ಮಾತ್ರೆ ಎಂದು ಸಲಹೆ ನೀಡಿದೆ. ಮಧುಮೇಹ, ಬಿಪಿ, ಹೃದಯ ಸಮಸ್ಯೆ ಇರುವವರು ಧೂಮಪಾನ, ಮದ್ಯಪಾನ ಮಾಡಲೇಬಾರದು ಎಂದು ಸಲಹೆ ನೀಡಿದ್ದು, ಹೆಚ್ಚು ತರಕಾರಿ ಇರುವ ಆಹಾರ ಸೇವನೆ ಇರಲಿ ಎಂದು ತಜ್ಞರು ಹೇಳಿದ್ದಾರೆ.












Click it and Unblock the Notifications