ಸಿದ್ದು ಅಂಡ್ ಟೀಮ್ ಗೆ ಪರಂ ನೀಡಿದ್ದು 5 ವರ್ಷದ ಸಿಟ್ಟಿನ ಹೊಡೆತ!
"ಜೆಡಿಎಸ್ ಗೆ ಕಾಂಗ್ರೆಸ್ ನಿಂದ ಬೆಂಬಲ ನೀಡುವುದಕ್ಕೆ ತೀರ್ಮಾನ ಮಾಡಿದ್ದೇವೆ" ಎಂದು ಮೇ ಹದಿನೈದರಂದು ಮಾಧ್ಯಮಗಳ ಎದುರಿಗೆ ಹೇಳಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಮುಂದಿನ ವಿಚಾರವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳುತ್ತಾರೆ ಎಂದು ಪಕ್ಕಕ್ಕೆ ಸರಿಯಲು ಮುಂದಾದರು. "ಇನ್ನೇನಿದೆ ನೀವು ಹೇಳಿದರಲ್ಲ" ಎಂದು ಕೈ ಕಟ್ಟಿ ನಿಂತರು ಸಿದ್ದರಾಮಯ್ಯ.
ಅಂದು 'ಕೈ' ಕಟ್ಟಲು ಆರಂಭವಾಯಿತಾ? ಹೌದು, ಸಿದ್ದರಾಮಯ್ಯ ಅವರಿಗೆ ಸುಳಿವು ಸಿಕ್ಕಿರಲಿಕ್ಕೂ ಸಾಕು. ಏಕೆಂದರೆ, ಅವರೇನೂ ಪಟ್ಟು ಗೊತ್ತಿಲ್ಲದ ರಾಜಕಾರಣಿ ಏನಲ್ಲ. ಇನ್ನು ಜೆಡಿಎಸ್ ಜತೆಗೆ ಸೇರಿ ಕಾಂಗ್ರೆಸ್ ಸರಕಾರ ಮಾಡುತ್ತದೆ ಅಂದರೆ ದೇವೇಗೌಡರು ಮತ್ತು ಕುಮಾರಸ್ವಾಮಿ ತಮ್ಮ ಪಾದಗಳನ್ನು ದೊಡ್ಡದು ಮಾಡಿ, ಎತ್ತಿಡುವುದು ತನ್ನ ತಲೆ ಮೇಲೆ ಎಂಬ ಸಂಗತಿ ಖಾತ್ರಿಯಾಗಿತ್ತು.
ಇನ್ನು ಕಾಂಗ್ರೆಸ್ ನೊಳಗೇ ಸಿದ್ದರಾಮಯ್ಯ ವಿರುದ್ಧ ಆಕ್ರೋಶಗೊಂಡಿದ್ದ, ಅವಕಾಶ ಸಿಕ್ಕರೆ ಮೂಲೆಗೆ ಗದುಮಿ, ಅವಮಾನ ಮಾಡುವ ಲೆಕ್ಕಾಚಾರದಲ್ಲಿದ್ದವರಿಗೆ ಹೇಳಿ ಮಾಡಿಸಿದಂಥ ಸನ್ನಿವೇಶ ಸೃಷ್ಟಿಯಾಗಿತ್ತು. ಕಾರ್ಕೋಟಕ ವಿಷ ನುಂಗಿಕೊಂಡಂತೆ ಐದು ವರ್ಷ ಸುಮ್ಮನಿದ್ದ ಪರಮೇಶ್ವರ್ ಅವರೊಳಗಿನ ರಾಜಕಾರಣಿ ಸಟಕ್ಕನೆ ಎದ್ದುಕೂತು ಪಾದರಸದಂತೆ ಕೆಲಸ ಆರಂಭಿಸಿದ್ದೇ ಆಗ.

ಜೆಡಿಎಸ್ ಹೆಗಲ ಮೇಲೆ ಕೋವಿ ಇಟ್ಟು ಶೂಟ್
ಸಿದ್ದರಾಮಯ್ಯ ಬೆಂಬಲಿಗರು, ಜಾತ್ಯಸ್ಥರು, ಹಣಕಾಸು ವಿಚಾರದಲ್ಲಿ ಬೆಂಬಲಕ್ಕೆ ನಿಲ್ಲುತ್ತಿದ್ದವರದೊಂದು ಪಟ್ಟಿ ಮಾಡಿಕೊಂಡು, ಇಬ್ಬರಿಂದ ಮೂವರಿಗೆ ಸಂಪುಟದಲ್ಲಿ ಅವಕಾಶ ಕೊಟ್ಟಂತೆಯೂ ಮಾಡಿ, ಉಳಿದವರ ಹೊಟ್ಟೆಯಲ್ಲಿ ಖಾರ ಅರೆಯುವಂತೆ ಮಾಡಿದರು ಪರಂ. ಐದು ವರ್ಷಗಳ ಕಾಲ ತಮ್ಮದೇ ಸರಕಾರ ಇದ್ದಾಗ ಹೋದಲ್ಲಿ- ಬಂದಲ್ಲಿ ತಾವು ಅನುಭವಿಸಿದ ಅವಮಾನಕ್ಕೆ ಅವರಿಗೆ ಉತ್ತರ ಹೇಳಬೇಕಿತ್ತು. ಅದಕ್ಕೆ ಅವರಿಗೆ ದ್ವೇಷದ ಕೋವಿ ಇಡಲು ಸಿಕ್ಕಿದ್ದು ಜೆಡಿಎಸ್ ಪಕ್ಷದ ಹೆಗಲು. ಆ ಕೆಲಸ ಅಚ್ಚುಕಟ್ಟಾಗಿ ಮಾಡಿದರು. ಆ ನಂತರ ಸಿದ್ದರಾಮಯ್ಯ ಅಲ್ಲೆಲ್ಲೋ ಬಾದಾಮಿಯಲ್ಲಿ, ಮನೆ ಮಾಡ್ತೀನಿ, ನಿಮ್ಮ ಜತೆ ಇರ್ತೀನಿ ಎಂದು ಮಾತನಾಡುವಂತಾಗಿದೆ.

ಸಿದ್ದರಾಮಯ್ಯ ಪ್ರಸ್ತುತರಲ್ಲ ಎಂಬ ಸಂದೇಶ
ಲೋಕಸಭೆ ಚುನಾವಣೆಗೆ ಇನ್ನೊಂದು ವರ್ಷ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಸಾರಥಿ ಬರಬೇಕಿದೆ. ಕಾಂಗ್ರೆಸ್ ನೊಳಗೆ ಭುಗಿಲೆದ್ದಿರುವ ಅಸಮಾಧಾನ ಹತೋಟಿಗೆ ತರುವ ಅಗತ್ಯವಿದೆ. ಇಷ್ಟೆಲ್ಲ ಕೆಲಸದ ಮಧ್ಯೆಯೂ ಇನ್ನು ಸಿದ್ದರಾಮಯ್ಯ ಪ್ರಸ್ತುತರಲ್ಲ ಎಂಬ ಸಂದೇಶ ರವಾನೆಯಾಗುತ್ತಿದೆ. ಅದು ಹೇಗೆ? ಸಮನ್ವಯ ಸಮಿತಿ ಅಧ್ಯಕ್ಷರು ಸಿದ್ದರಾಮಯ್ಯ. ಆದರೆ ತೋಟ ಇಲ್ಲದ ಬಂದೂಕಿನಂತೆ ಪ್ರದರ್ಶನಕ್ಕೆ ಅವರಿದ್ದಾರೆ ಬಿಟ್ಟರೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಇನ್ನೇನು ಸಿದ್ದರಾಮಯ್ಯ ಸೈಡ್ ಆಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಅದರ ಭಾಗವಾಗಿಯೇ ಇತರ ಘಟನೆಗಳು ಸಂಭವಿಸುತ್ತಿವೆ.

ಪ್ರಮುಖ ನಾಯಕರಿಗೆ 'ಸಂಪುಟ ಭಾಗ್ಯ' ಇಲ್ಲ
ಹೊಸಕೋಟೆ ಶಾಸಕ ಎನ್.ನಾಗರಾಜ್ (ಎಂಟಿಬಿ ನಾಗರಾಜ್), ಎಂ.ಬಿ.ಪಾಟೀಲರಂಥವರು ಅದ್ಯಾವ ಪರಿ ಸಿಟ್ಟಾಗಿದ್ದಾರೆ ಅಂದರೆ, ನಾಗರಾಜ್ ರ ರೋಷಾವೇಶಗಳನ್ನು ನಿಯಂತ್ರಿಸಲು ಆಗದೆ, ನನ್ನಿಂದ ಆಗುವಂಥದ್ದು ಏನಿಲ್ಲ. ಬೇಕಾದರೆ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಹತ್ತಿರವೇ ಹೋಗಿ ಕೇಳಿಕೊಳ್ಳಿ ಎಂದು ಹೇಳಿಬಿಟ್ಟಿದ್ದಾರೆ ಸಿದ್ದರಾಮಯ್ಯ. ಆ ನಂತರ ಸತೀಶ್ ಜಾರಕಿಹೊಳಿ ಮತ್ತಿತರರು ಕೂಡ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಒಟ್ಟಾರೆ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದ ಪ್ರಮುಖರು ಯಾರಿಗೂ 'ಸಂಪುಟ ಭಾಗ್ಯ' ಸಿಕ್ಕಿಲ್ಲ. ಅಲ್ಲೂ ಪರಮೇಶ್ವರ್ ತಮ್ಮದೇ ತಂಡ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಮ್ಮ ಕರ್ಮ ಕಣ್ರೀ, ನೀವ್ಯಾಕೆ ಯೋಚಿಸ್ತೀರಾ?
ಸಿದ್ದರಾಮಯ್ಯ ಸ್ಥಿತಿಗೆ ಮರುಗುವ ಅಗತ್ಯವೂ ಇಲ್ಲ. ಏಕೆಂದರೆ ಇದು ರಾಜಕೀಯದಾಟ. ಒಬ್ಬರು ಮೇಲಿದ್ದಾಗ ತನಗೆ ಸ್ಪರ್ಧಿ ಆಗಬಹುದಾದ ವ್ಯಕ್ತಿಯನ್ನು ಕಾಲಡಿ ಸಿಕ್ಕಾಗಲೆಲ್ಲ ತುಳಿಯುವುದು ಅಚ್ಚರಿ ವಿಚಾರ ಏನಲ್ಲ. ಈಗ ಪರಮೇಶ್ವರ್ ಸರದಿ. ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರವೂ ಅದರ ಅರ್ಧಕ್ಕಿಂತ ಕಡಿಮೆ ಪ್ರಮಾಣದ ಸೀಟು ಗಳಿಸಿದ ಪಕ್ಷಕ್ಕೆ ಅಧಿಕಾರ ನಡೆಸಲು ಬಿಟ್ಟುಕೊಡುವುದೇ ಅಚ್ಚರಿಯ ಬೆಳವಣಿಗೆ. ಆ ನಂತರದ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಸಿಕೊಂಡು ಹೋಗುವುದು ಮತ್ತೂ ಅಚ್ಚರಿಯ ವಿಷಯ. ಈ ರೀತಿ ಮೈತ್ರಿ ಸರಕಾರದಲ್ಲಿ ಯಶಸ್ಸಿನ ಶ್ರೇಯ ಮುಖ್ಯಮಂತ್ರಿಗೆ ಅಂದರೆ ಜೆಡಿಎಸ್ ಗೆ ಸಿಗುತ್ತದಲ್ಲಾ ಎಂದು ತುಮಕೂರಿನಲ್ಲಿ ಪತ್ರಕರ್ತರಿಂದ ಪರಮೇಶ್ವರ್ ಗೆ ಪ್ರಶ್ನೆ ಎದುರಾಗಿದೆ. "ಅದು ನಮ್ಮ ಕರ್ಮ ಕಣ್ರೀ, ನೀವ್ಯಾಕೆ ಯೋಚಿಸ್ತೀರಾ?" ಅಂದರಂತೆ ಪರಂ. ಅದೂ ನಿಜ. ಕಾಂಗ್ರೆಸ್ ಕರ್ಮಕ್ಕೆ ಯಾರ್ಯಾಕೆ ಮರುಗಬೇಕು?












Click it and Unblock the Notifications