ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧ ಎಷ್ಟು ಪರಿಣಾಮಕಾರಿ?
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಳೆದ ಹಲವು ದಿನಗಳಿಂದ ಹೆಚ್ಚು ಸುದ್ದಿಯಲ್ಲಿರುವ ಸಂಘಟನೆ ಇದು. ಕಳೆದ ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 27 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಜಾರಿ ನಿರ್ದೇಶನಾಲಯ (ED) ಮತ್ತು ರಾಜ್ಯ ಪೊಲೀಸರು ಪಿಎಫ್ಐ ಮೇಲೆ ದಾಳಿ ನಡೆಸಿ ಮೊದಲ ಸುತ್ತಿನ ದಾಳಿಯಲ್ಲಿ ಪಿಎಫ್ಐಗೆ ಸೇರಿದ 106 ಮಂದಿಯನ್ನು ಬಂಧಿಸಿ ಬಳಿಕ ಎರಡನೇ ಸುತ್ತಿನ ದಾಳಿಯಲ್ಲಿ, ಪಿಎಫ್ಐಗೆ ಸೇರಿದ 247 ಜನರನ್ನು ಬಂಧಿಸಿದ್ದಾರೆ.
ಮಾತ್ರವಲ್ಲದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧವನ್ನು ಹೇರಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಪಿಎಫ್ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ಮಾಡಿ ನೂರಾರು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಪಿಎಫ್ಐ ಬ್ಯಾನ್ ಮಾಡಲು ಕಾರಣವೇನು?
ಅಂದಹಾಗೆ ಪಿಎಫ್ಐ ಬ್ಯಾನ್ ಮಾಡಲು ಕಾರಣವೇನು ಗೊತ್ತಾ. ಪಿಎಫ್ಐ ಹಲವಾರು ಕ್ರಿಮಿನಲ್ ಮತ್ತು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದೆ. ದೇಶದ ಸಾಂವಿಧಾನಿಕ ಅಧಿಕಾರದ ಕಡೆಗೆ ಸಂಪೂರ್ಣ ಅಗೌರವವನ್ನು ತೋರಿಸುತ್ತಿದೆ. ಹೊರಗಿನಿಂದ ಹಣ ಮತ್ತು ಸೈದ್ಧಾಂತಿಕ ಬೆಂಬಲದೊಂದಿಗೆ ಇದು ದೇಶದ ಆಂತರಿಕ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ ಎಂದು ಆರೋಪಿಸಲಾಗಿದೆ. ಹೀಗೆ ಹಲವಾರು ಆರೋಪಗಳನ್ನು ಪಿಎಫ್ಐ ಮೇಲೆ ಮಾಡಲಾಗಿದೆ. ಈ ಆರೋಪಗಳನ್ನು ಆಧರಿಸಿ ಪಿಎಫ್ಐ ಬ್ಯಾನ್ ಮಾಡಲಾಗಿದೆ.
ಇದರರ್ಥ ಪಿಎಫ್ಐ ಹೆಸರಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡುವಂತಿಲ್ಲ. ಇನ್ನುಮುಂದೆ ಪಿಎಫ್ಐ ಹೆಸರಿನಲ್ಲಿ ಯಾವುದೇ ಸಭೆ, ಸಮಾರಂಭ, ಪ್ರತಿಭಟನೆಯಂತಹ ಚಟುವಟಿಗಳು ನಡೆಯುವುದಿಲ್ಲ. ಇದೊಂದು ಸಂಪೂರ್ಣ ನಿಷೇಧಿತ ಸಂಘಟನೆಯಾಗಿದೆ.
ಪಿಎಫ್ಐ ಬ್ಯಾನ್ನಿಂದ ಭಯೋತ್ಪಾದನೆ ತಡೆಯಲು ಸಾಧ್ಯವೇ?
ಹಾಗಾದರೆ ಪಿಎಫ್ಐ ನಿಷೇಧ ಭಯತ್ಪಾದನೆ ತಡೆಗೆ ಮಾರ್ಗವೇ? ಇದರಿಂದ ಭಯೋತ್ಪಾದನೆ ತಡೆಯಲು ಸಾಧ್ಯವೇ? ಪಿಎಫ್ಐ ಬ್ಯಾನ್ ಎಷ್ಟು ಪರಿಣಾಮಕಾರಿ ಎನ್ನುವ ಪ್ರಶ್ನೆ ಮೂಡುತ್ತದೆ. ಭಾರತದಲ್ಲಿ ಹಲವಾರು ನಿಷೇಧಿತ ಸಂಘಟನೆಗಳಿವೆ. ಈ ಸಂಘಟನೆಗಳನ್ನು ಕಟ್ಟಿದವರು ಬೆಳಿಸಿದವರು ಸಂಘಟನೆ ನಿಷೇಧದ ಬಳಿಕ ಏನಾದರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಪಿಎಫ್ಐ ಬ್ಯಾನ್ ಎಷ್ಟು ಪರಿಣಾಮಕಾರಿ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತದೆ. ಇದರಿಂದ ಪಿಎಫ್ಐ ಹುಟ್ಟುಕೊಂಡಿದ್ದು ಹೇಗೆ ಅನ್ನೊದನ್ನು ಮೊದಲು ತಿಳಿಯೋಣ.
ಬಾಬರಿ ಮಸೀದಿ ಧ್ವಂಸದ ನಂತರ, ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಮುಸ್ಲಿಂ ಸಂಘಟನೆಗಳು ಹುಟ್ಟಿಕೊಂಡವು. ಈ ಹಲವು ಸಂಘಟನೆಗಳನ್ನು ವಿಲೀನಗೊಳಿಸಿ ಪಿಎಫ್ಐ ರಚನೆಯಾಯಿತು. ಸಂಘಟನೆಯು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂಬ ಆರೋಪದೊಂದಿಗೆ ದೇಶದ ಹಲವು ರಾಜ್ಯಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಕೇರಳದಲ್ಲಿ ಈ ಸಂಘಟನೆಯನ್ನು ಇದನ್ನು ನಿಷೇಧಿಸಲಾಗಿದೆ. ಇಂತಹ ಹಲವು ಪ್ರಕರಣಗಳಲ್ಲಿ ಅದರ ಹಲವು ಕಾರ್ಯಕರ್ತರು ಮತ್ತು ಮುಖಂಡರನ್ನು ಬಂಧಿಸಲಾಗಿದೆ. ಅಪಹರಣ, ಕೊಲೆ, ಬೆದರಿಕೆ, ದ್ವೇಷದ ಪ್ರಚಾರಗಳು, ಗಲಭೆ, ಲವ್ ಜಿಹಾದ್, ಧಾರ್ಮಿಕ ತೀವ್ರವಾದ ಮತ್ತು ಶಸ್ತ್ರಾಸ್ತ್ರ ಹೊಂದಿದ ಆರೋಪಗಳು ಸಂಘಟನೆಯ ಮೇಲಿವೆ.
ನಿಷೇಧಿತ ಸಿಮಿ ಸಂಘಟನೆಯಿಂದ ಕಾರ್ಯದರ್ಶಿಗಳು ಪಿಎಫ್ಐಗೆ ಶಿಫ್ಟ್?
2006ರಲ್ಲಿ ಭಾರತದ ದಕ್ಷಿಣ ರಾಜ್ಯವಾದ ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಡಿಪಾಯವನ್ನು ಹಾಕಲಾಯಿತು. ಇದು ನ್ಯಾಷನಲ್ ಡೆವಲಪ್ಮೆಂಟ್ ಫ್ರಂಟ್ (ಎನ್ಡಿಎಫ್) ಆಗಿ ಜನಿಸಿತು. ನಂತರ ಮಾನಿತ ನೀತಿ ಪಸರಾಯಿ, ಕರ್ನಾಟಕ ಫೋರಂ ಫಾರ್ ಡಿಗ್ನಿಟಿ, ರಾಷ್ಟ್ರೀಯ ವಿಕಾಸ ಮೋರ್ಚಾ ಮತ್ತು ಇತರ ಹಲವು ಮುಸ್ಲಿಂ ಸಂಘಟನೆಗಳು ಅದರಲ್ಲಿ ವಿಲೀನಗೊಂಡವು. ಅದರ ನಂತರ ಇದನ್ನು ಪಿಎಫ್ಐ(PFI) ಅಂದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂದು ಕರೆಯಲಾಯಿತು.
ಪಿಎಫ್ಐ ನಿಷೇಧಿತ ಸಿಮಿಯ ಇನ್ನೊಂದು ರೂಪ ಎಂಬ ಆರೋಪಗಳಿವೆ. ಪಿಎಫ್ಐ ಸಂಘಟಕರ ಪಟ್ಟಿಯಲ್ಲಿ ನಿಷೇಧಿತ ಸಿಮಿಯ ಗುಂಪು ಸೇರಿಕೊಂಡಿದೆ ಎನ್ನಲಾಗುತ್ತದೆ. ಜತೆಗೆ ಇದಕ್ಕೆ ಒಂದಷ್ಟು ಮೇಲ್ನೋಟದ ಸಾಕ್ಷ್ಯಗಳೂ ಇವೆ. ಹಾಲಿ ಪಿಎಫ್ಐ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರೆಹ್ಮಾನ್ ಈ ಹಿಂದೆ ಸಿಮಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದವರು. ಪಿಎಫ್ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಹಿಂದೆ ಸಿಮಿಯಲ್ಲೂ ರಾಜ್ಯ ಕಾರ್ಯದರ್ಶಿಯಾಗಿದ್ದರು. ಸಂಘಟನೆಯ ಹಲವು ಹಾಲಿ ಪದಾಧಿಕಾರಿಗಳು ಸಿಮಿಯವರೇ ಆಗಿದ್ದಾರೆ. ಆದರೆ ಇದನ್ನು ಪಿಎಫ್ಐ ನಾಯಕರು ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಆದರೆ ಇದರ ಬಗ್ಗೆ ಆಳವಾದ ತನಿಖೆಗಳು ಈವರೆಗೂ ನಡೆದಿಲ್ಲ.
ಸಿಮಿ ಸಂಘಟನೆ ನಿಷೇಧ
ನಿಷೇಧಿತ ಸಂಘಟನೆಗಳು ಮತ್ತೆ ಹೊಸ ಸಂಘಟನೆಯಾಗಿ ಹುಟ್ಟಿಕೊಳ್ಳುತ್ತಿರುವುದಕ್ಕೆ ಇದೊಂದು ನಿದರ್ಶನವಷ್ಟೇ. ಇಂತಹ ಹಲವಾರು ಸಂಘಟನೆಗಳು ನಿಷೇಧದ ಬಳಿಕ ಅದರ ಸಂಘಟನಾಕಾರರು ಎಲ್ಲಿದ್ದಾರೆ? ಯಾವ ಸಂಘ ಕಟ್ಟಿದ್ದಾರೆ? ಕಟ್ಟಿದ್ದಾರೋ ಇಲ್ವೋ? ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದರೆ ಇದರ ಬಗ್ಗೆ ತಳಮಟ್ಟದ ತನಿಖೆಗಳು ಆಗುತ್ತಿಲ್ಲ. ನಿಜವಾಗಲೂ ಸಂಘಟನೆ ಕಟ್ಟಿದವರ ವಿಚಾರಣೆಯಾಗಲಿ ಅವರ ವಿರುದ್ಧ ಕ್ರಮವಾಗಲಿ ಆಗುತ್ತಿಲ್ಲ. ಮೇಲ್ನೋಟಕ್ಕೆ ಕಣ್ಣೋರೆಸುವ ನಿಟ್ಟಿನಲ್ಲಿ ದಾಳಿಗಳು ನಡೆಯುತ್ತಿವೆ ಹಾಗೂ ಬಂಧನಗಳಾಗುತ್ತಿವೆ ಎನ್ನುವ ಅನುಮಾನಗಳಿವೆ.
ಸಿಮಿ ಸಂಘಟನೆ 1993ರಲ್ಲೇ ಆರಂಭವಾಗಿಯಿತು. ಸಿಮಿ ನಿಷೇಧಿತವಾಗಿದ್ದು 2001ರಲ್ಲಿ. ಆದರೆ ಇದರ ಸಂಘಟಕರೇ ಪಿಎಫ್ಐ ಸಂಘಟನೆಯಲ್ಲಿದ್ದಾರೆ ಎನ್ನುವ ಬಗ್ಗೆ ಗಂಭೀರವಾದ ತನಿಖೆಗಳು ಇಲ್ಲಿವರೆಗೂ ನಡೆದಿಲ್ಲ. ಇದಕ್ಕೆ ಯಾವ ರಾಜ್ಯದ ಸರ್ಕಾರಗಳೂ ಈವರೆಗೆ ತಲೆ ಕೆಡೆಸಿಕೊಂಡಿಲ್ಲ. ಇದೊಂದು ರೀತಿ ಕಳ್ಳರನ್ನು ಹಿಡಿದು ಅವರ ತರಬೀತಿದಾರರನ್ನು ಬಿಟ್ಟಂತಾಗಿದೆ. ಇದರಿಂದ ಭಯೋತ್ಪಾದನೆ ತಡೆಗಟ್ಟಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗಳು ಇನ್ನೂ ಜೀವಂತವಾಗಿಯೇ ಉಳಿದಿವೆ.