ಇನ್ನೈದು ವರ್ಷದಲ್ಲಿ ಭಾರತದಲ್ಲಿ ಪೆಟ್ರೋಲ್ ನಿಷೇಧ? ಗಡ್ಕರಿ ಹೇಳಿದ್ದು ನಿಜವಾ?
ನವದೆಹಲಿ, ಜುಲೈ 8: ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆ ಇರುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿರುವುದು ವರದಿಯಾಗಿದೆ.
ಮಹಾರಾಷ್ಟ್ರದ ಅಕೋಲದಲ್ಲಿರುವ ಡಾ. ಪಾಂಜಾಬರಾವ್ ದೇಶಮುಖ್ ಕೃಷಿ ವಿದ್ಯಾಪೀಠದಲ್ಲಿ ಗುರುವಾರ ನಡೆದ 36ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಈ ವಿಚಾರ ಮಾತನಾಡಿರುವುದು ತಿಳಿದುಬಂದಿದೆ.
ಎಂಟು ಆಸನಗಳ ವಾಹನಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ: ಕೇಂದ್ರ ಸಚಿವ ಗಡ್ಕರಿ
ಈ ಘಟಿಕೋತ್ಸವದಲ್ಲಿ ನಿತಿನ್ ಗಡ್ಕರಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ (ಡಿಎಸ್ಸಿ) ಗೌರವ ಪದವಿ ನೀಡಲಾಯಿತು. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಪದವಿ ಪ್ರಮಾಣಪತ್ರವನ್ನು ಗಡ್ಕರಿಗೆ ನೀಡಿದರು.
ವಿಶ್ವವಿದ್ಯಾಲಯದ ಮಾಜಿ ವೈಸ್ ಚಾನ್ಸಲರ್ ಡಾ. ಮೋತಿಲಾಲ್ ಮದನ್, ಹಾಲಿ ಉಪಕುಲಪತಿ ವಿಲಾಸ್ ಭಾಲೆ, ವಿವಿಯ ರಿಜಿಸ್ಟ್ರಾರ್, ಬೋಧಕ ವರ್ಗದ ಡೀನ್ಗಳು, ಪ್ರೊಫೆಸರ್ಗಳು, ವಿದ್ಯಾರ್ಥಿಗಳು ಮೊದಲಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಉಲ್ಬಣ: ಒಂದು ದಿನಕ್ಕಾಗುವಷ್ಟು ಮಾತ್ರ ಇಂಧನ
ಪೆಟ್ರೋಲ್ ಸಿಗಲ್ಲ
ಭಾರತದಲ್ಲಿ ಮುಂದಿನ ಐದು ವರ್ಷದಲ್ಲಿ ಪೆಟ್ರೋಲ್ ಬಳಕೆಯೇ ಇರುವುದಿಲ್ಲ ಎಂದು ಈ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಹೇಳಿದ್ದರೆಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಿತಿನ್ ಗಡ್ಕರಿ ಬಯೋ ಎಥನಾಲ್ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ಜೈವಿಕ ಇಂಧನವಾದ ಬಯೋ ಎಥನಾಲ್ ಅನ್ನು ತಯಾರಿಸಲಾಗುತ್ತಿದೆ. ಅದನ್ನು ಪೆಟ್ರೋಲ್ಗೆ ಪರ್ಯಾಯವಾಗಿ ವಾಹನಗಳಿಗೆ ಬಳಕೆಯಾಗುತ್ತಿರುವ ವಿಚಾರವನ್ನು ಅವರು ತಿಳಿಸಿದರೆನ್ನಲಾಗಿದೆ.
ಬಾವಿ ಆಳದಿಂದ ಹೈಡ್ರೋಜನ್
ಆಳದ ಬಾವಿ ನೀರಿನಿಂದ ಗ್ರೀನ್ ಹೈಡ್ರೋಜನ್ ತಯಾರಿಸುವ ಸಾಧ್ಯತೆಯನ್ನು ನಿತಿನ್ ಗಡ್ಕರಿ ಈ ವೇಳೆ ತಿಳಿಸಿದ್ದಾರೆ. ಈ ಗ್ರೀನ್ ಹೈಡ್ರೋಜನ್ ಅನ್ನು ಒಂದು ಕಿಲೋಗೆ 70 ರೂ ನಂತೆ ಮಾರಬಹುದು ಎಂದು ಅವರು ಆ ಸಂದರ್ಭದಲ್ಲಿ ಹೇಳಿದ್ದಾರೆ.
ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿ ಪೆಟ್ರೋಲ್ ಸಿಗಲ್ಲ. ಪೆಟ್ರೋಲ್ ಅನ್ನು ದೇಶದಲ್ಲಿ ನಿಷೇಧಿಸಲಾಗುತ್ತದೆ ಎಂದೂ ನಿತಿನ್ ಗಡ್ಕರಿ ಹೇಳಿದರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪೆಟ್ರೋಲ್ ನಿಷೇಧಿಸುತ್ತೇವೆಂದದ್ದು ನಿಜವಾ?
ಪೆಟ್ರೋಲ್ ನಿಷೇಧಿಸಲಾಗುತ್ತದೆ ಎಂದು ಕೇಂದ್ರ ಸಚಿವರೊಬ್ಬರು ಅಷ್ಟು ಸುಲಭವಾಗಿ ಹೇಳಲು ಸಾಧ್ಯವಾ? 2030ರೊಳಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಸರ್ವವ್ಯಾಪಿ ಮಾಡುವ ಯೋಜನೆ ಕೇಂದ್ರದ್ದಾಗಿರುವುದು ಹೌದು. ಆದರೆ ಅದಕ್ಕೆ ಪೂರಕವಾದ ಸೌಕರ್ಯ ನಿರ್ಮಾಣ ಆಗುವವರೆಗೂ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ನಿಷೇಧಿಸಲು ಸಾಧ್ಯವಿಲ್ಲ. ಏಕಾಏಕಿ ಈ ಹೇಳಿಕೆ ನೀಡಿದರೆ ಹಾಲಿ ವಾಹನ ಮಾರುಕಟ್ಟೆಯೇ ಕುಸಿದುಬೀಳುತ್ತದೆ.
ಜೈವಿಕ ಇಂಧನ, ಹಸಿರು ಜಲಜನಕ ಇಂಧನ ಇತ್ಯಾದಿ ಪೆಟ್ರೋಲ್ಗೆ ಪರ್ಯಾಯವಾದ ಇಂಧನ ವ್ಯವಸ್ಥೆ ಹೆಚ್ಚುವುದರಿಂದ ಐದು ವರ್ಷದಲ್ಲಿ ಪೆಟ್ರೋಲ್ ಬಳಕೆ ನಿಲ್ಲಬಹುದು ಎಂಬರ್ಥದಲ್ಲಿ ನಿತಿನ್ ಗಡ್ಕರಿ ಹೇಳಿದ್ದಿರಬಹುದು.
ಅನ್ನದ ಜೊತೆ ಇಂಧನ ನೀಡಿ
ಡಾ ಪಂಜಾಬರಾವ್ ದೇಶಮುಖ್ ಕೃಷಿ ವಿದ್ಯಾಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ದೇಶದ ಭವಿಷ್ಯ ಬದಲಿಸುವ ಕಾರ್ಯದಲ್ಲಿ ರೈತರ ಮಹತ್ವದ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ರೈತರು ಕೇವಲ ಆಹಾರ ಉತ್ಪಾದನೆ ಮಾತ್ರವಲ್ಲ, ಇಂಧನ ಉತ್ಪಾದಕರೂ ಆಗಬೇಕು ಎಂದು ಗಡ್ಕರಿ ಕರೆ ನೀಡಿದ್ದಾರೆ. ರೈತ ಕೇವಲ ಗೋಧಿ, ಅಕ್ಕಿ, ಜೋಳ ಬೆಳೆಯುತ್ತಾ ಕೂತರೆ ಆತನ ಭವಿಷ್ಯ ಬದಲಾಗುವುದಿಲ್ಲ. ಆತ ಇಂಧನದ ಉತ್ಪಾದನೆಯನ್ನೂ ಜೊತೆಯಲ್ಲಿ ಮಾಡಬೇಕು ಎಂದು ಕೇಂದ್ರ ಸಚಿವರು ಸಲಹೆ ನೀಡಿದ್ಧಾರೆ.
ಜೈವಿಕ ಇಂಧನ ಮತ್ತು ಗ್ರೀನ್ ಹೈಡ್ರೋಜನ್ ತಯಾರಿಕೆಯಲ್ಲಿ ರೈತರು ತೊಡಗಿಸಿಕೊಳ್ಳಬಹುದು.
(ಒನ್ಇಂಡಿಯಾ ಸುದ್ದಿ)