ಮೇ 21 ರಂದು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ, ಏನದು?
ಲೋಕಸಭೆ ಚುನಾವಣೆಗೆ ಇನ್ನೆರಡೂ ಹಂತದ ಮತದಾನ ಬಾಕಿ ಉಳಿದಿದೆ. ಫಲಿತಾಂಶದ ದಿನವೂ ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಪ್ರಶ್ನೆಗೆ ಬಹುಶಃ ಮೇ 21 ರಂದು ಉತ್ತರ ಸಿಗುವ ನಿರೀಕ್ಷೆಯಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಹಾಘಟಬಂಧನದ ಎಲ್ಲಾ ಪಕ್ಷಗಳು ಮೇ21 ರಂದು ಸಭೆ ಸೇರಲಿದ್ದು, ಅಂದು ಒಬ್ಬ ಪ್ರಧಾನಿ ಅಭ್ಯರ್ಥಿಯನ್ನು ಒಕ್ಕೋರಲಿನಿಂದ ಬೆಂಬಲಿಸಲಿದ್ದಾರೆ. ಫಲಿತಾಂಶಕ್ಕೂ ಎರಡು ದಿನ ಮೊದಲು ನಡೆಯಲಿರುವ ಈ ಸಭೆ ಫಲಿತಾಂಶದಷ್ಟೇ ಮಹತ್ವದ್ದೆನ್ನಿಸಿದೆ.
ಇನ್ನೂ ಅಚ್ಚರಿಯ ವಿಷಯವೆಂದರೆ ತೆಲಂಗಾಣ ಮುಖ್ಯಮಂತ್ರಿ, ಟಿಆರ್ ಎಸ್ ಮುಖಂಡ ಕೆ ಚಂದ್ರಶೇಖರ್ ರಾವ್ ಅವರು ಹೇಗಾದರೂ ಮಾಡಿ ಮಹಾಘಟಬಂಧನವನ್ನು ಪ್ರವೇಶಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ತಮ್ಮ ತೃತೀಯ ರಂಗದ ಪ್ರಯತ್ನಕ್ಕೆ ಹೆಚ್ಚು ಬೆಂಬಲ ಸಿಗದ ಹಿನ್ನೆಲೆಯಲ್ಲಿ ಕೆಸಿಆರ್ ಈ ನಿರ್ಧಾರಕ್ಕೆ ಬಂದಂತಿದೆ.

ಸಭೆಯಲ್ಲಿ ಯಾರ್ಯಾರ ಉಪಸ್ಥಿತಿ?
ಮಹಾಘಟಬಂಧನದ ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಜೆಡಿಎಸ್ ಸುಪ್ರಿಮೋ ಎಚ್ ಡಿ ದೇವೇಗೌಡ, ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್, ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಮುಂತಾದವರು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಪ್ರಧಾನಿ ಅಭ್ಯರ್ಥಿಗಳ ಪಟ್ಟಿ ದೊಡ್ಡದು!
ಮಹಾಘಟಬಂಧನದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಸಾಕಷ್ಟು ಹೆಸರುಗಳು ಸಿಗುತ್ತವೆ. ಮಮತಾ ಬ್ಯಾನರ್ಜಿ, ಮಾಯಾವತಿ ಮತ್ತು ರಾಹುಲ್ ಗಾಂಧಿ ಅವರ ಹೆಸರು ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಒಬ್ಬ ವ್ಯಕ್ತಿಯ್ನು ಮಾತ್ರ ಈ ಪಟ್ಟಕ್ಕೆ ಆರಿಸಬೇಕಾಗಿರುವುದರಿಂದ ಮೈತ್ರಿ ಪಕ್ಷಗಳು ಯಾವ ಒಪ್ಪಂದಕ್ಕೆ ಬರುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಮಹಾಘಟಬಂಧನದ ಮೈತ್ರಿಕೂಟದಲ್ಲಿ ಕಾಂಗ್ರೆಸ್ಸೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇರುವುದರಿಂದ ಅದು ರಾಹುಲ್ ಗಾಂಧಿ ಹೊರತಾಗಿ ಬೇರೊಬ್ಬರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಆದರೆ ರಾಹಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಲು ಮಮತಾ ಬ್ಯಾನರ್ಜಿ, ಮಾಯಾವತಿಯಂಥ ನಾಯಕರು ಸಿದ್ಧರಿಲ್ಲ. ಜೊತೆಗೆ ದಕ್ಷಿಣದ ರಾಜ್ಯಗಳ ನಾಯಕರಿಗೆ ಪ್ರಧಾನಿಯಾಗುವ ಅವಕಾಶ ನೀಡಬೇಕು ಎಂಬ ಮಾತುಗಳೂ ಕೇಳಿಬರುತ್ತಿರುವುದರಿಂದ ಎಚ್ ಡಿ ದೇವೇಗೌಡ, ಕೆ ಚಂದ್ರಶೇಖರ್ ರಾವ್ ಅವರೂ ಈ ದಿನಕ್ಕಾಗಿ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಆದರೆ ತಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಈಗಾಗಲೇ ಚಂದ್ರಬಾಬು ನಾಯ್ಡು ಹೇಳಿಬಿಟ್ಟಿದ್ದಾರೆ.

ಕೆಸಿಆರ್ ಯೂಟರ್ನ್
ಬಿಜೆಪಿ, ಕಾಂಗ್ರೆಸ್ ಅನ್ನು ಹೊರಗಿಟ್ಟು ತೃತೀಯ ರಂಗ ನಿರ್ಮಿಸಲು ಹೊರಟ ಕೆ ಚಂದ್ರಶೇಖರ್ ರಾವ್ ಅವರ ಪ್ರಯತ್ನಕ್ಕೆ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಅವರೂ ಹಾಘಟಬಂಧನದೊಂದಿಗೆ ಗುರುತಿಸಿಕೊಳ್ಳಬಹುದು ಎಂಬ ವದಂತಿ ಹಬ್ಬಿದೆ. ಇದು ಬಿಜೆಪಿಗೆ ಭಾರೀ ಹಿನ್ನಡೆಯನ್ನುಂಟು ಮಾಡಬಹುದು. ಕಾಂಗ್ರೆಸ್ ಅನ್ನು ಹೊರಗಿಟ್ಟು ಮೈತ್ರಿ ಮಾಡಿಕೊಂಡರೆ ಬಹುಮತ ಪಡೆಯುವುದು ಸಾಧ್ಯ ಇಲ್ಲ ಎಂಬುದನ್ನು ಅರಿತ ಕೆಸಿಆರ್ ಈ ನಿರ್ಧಾರಕ್ಕೆ ಬಂದಂತಿದೆ.

ನಾಯ್ಡು-ಕೆಸಿಆರ್ ಕೆಮೆಸ್ಟ್ರಿ!
ಅಕಸ್ಮಾತ್ ಕೆಸಿಆರ್ ಮಹಾಘಟಬಂಧನ ಒಳಹೊಕ್ಕರೆ ಬದ್ಧ ವೈರಿ ಚಂದ್ರಬಾಬು ನಾಯ್ಡು ಅವರೊಂದಿಗೆ ರಾಜಿ ಮಾಡಿಕೊಳ್ಳಬೇಕಾಗಬಹುದು. ಆದರೆ ಅದು ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯ ರಾಜಕಾರಣದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ. ಆದ್ದರಿಂದ ಕೆಸಿಆರ್ ನಡೆ ಭಾರೀ ಕುತೂಹಲಲ ಕೆರಳಿಸಿದೆ.












Click it and Unblock the Notifications