ದೀಪಾವಳಿಯಲ್ಲಿ ಚಾಡಿಕೋರನಿಗೆ ಬೈಗುಳದ ಸೇವೆ, ಜೊತೆಗೆ ಸಗಣಿಯಲ್ಲಿ ಮಿಂದೇಳುವ ಜನ!

ತಮಿಳುನಾಡಿನ ತಾಳವಾಡಿ ಫಿರ್ಕಾ ವ್ಯಾಪ್ತಿಯ, ಚಾಮರಾಜನಗರ ಗಡಿಯಲ್ಲಿನ ಗುಮಟಾಪುರ ಗ್ರಾಮದಲ್ಲಿ ದೀಪಾವಳಿಯ ಬಲಿಪಾಡ್ಯಮಿ ಮಾರನೆಯ ದಿನ ನಡೆಯುವ ಗೋರೆ ಹಬ್ಬ ವಿಶಿಷ್ಟ ಮತ್ತು ವಿಭಿನ್ನ.

ಚಾಡಿಕೋರನನ್ನು ಊರಿನಲ್ಲಿ ಕತ್ತೆ ಮೇಲೆ ಮೆರವಣಿಗೆ ನಡೆಸುತ್ತಾ ಅಶ್ಲೀಲವಾಗಿ ಬೈಯ್ಯುತ್ತಾ ಕೊನೆಗೆ ಆತನ ಮೀಸೆ ಕಿತ್ತು ತಿಪ್ಪೆಗೆ ಹಾಕಿ ಪೂಜೆ ಸಲ್ಲಿಸಿ ಸೆಗಣಿಯಲ್ಲಿ ಬಡಿದಾಡಿಕೊಳ್ಳುವುದು ಹಬ್ಬದ ಹೈಲೈಟ್ಸ್.

"ಚಾಡಿಕೋರನಿದ್ದರೆ ಇಡೀ ಊರೇ ಹಾಳು"

ಇಲ್ಲಿನ ಜನ ಪ್ರತಿ ವರ್ಷ ದೀಪಾವಳಿ (ಬಲಿಪಾಡ್ಯಮಿ) ಹಬ್ಬವಾದ ಮಾರನೇ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಇಡೀ ಊರಿನಲ್ಲಿ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿಬಿಡುತ್ತದೆ. ಎಲ್ಲೆಡೆ ತಳಿರು ತೋರಣ, ರಂಗೋಲಿಯಿಂದ ಕಂಗೊಳಿಸುವ ಮನೆಗಳು, ಜನರಲ್ಲಿ ಉತ್ಸಾಹ ಸಂಭ್ರಮ ಮನೆ ಮಾಡಿ ಬಿಡುತ್ತದೆ.

ಚಾಡಿಕೋರನೊಬ್ಬನಿದ್ದರೆ ಇಡೀ ಊರೇ ಹಾಳಾಗಿ ಬಿಡುತ್ತದೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಚಾಡಿ ಹೇಳುತ್ತಾ ಕುಟುಂಬಗಳ ನಡುವೆ ವೈಮನಸ್ಸು ತಂದಿಡುತ್ತಾನೆ. ಇಂತಹ ಚಾಡಿಕೋರನ ದಮನ ಮಾಡಿ ಊರಲ್ಲಿ ಶಾಂತಿ, ನೆಮ್ಮದಿ, ಒಗ್ಗಟ್ಟು ನೆಲೆಸುವಂತೆ ಮಾಡುವ ಸಂದೇಶವನ್ನು ಹಬ್ಬ ಸಾರುತ್ತದೆ.

 ಹುಲ್ಲಿನ ಗಡ್ಡ, ಮೀಸೆ ಹೊತ್ತವನ ಕತ್ತೆ ಮೇಲೆ ಮೆರವಣಿಗೆ

ಹುಲ್ಲಿನ ಗಡ್ಡ, ಮೀಸೆ ಹೊತ್ತವನ ಕತ್ತೆ ಮೇಲೆ ಮೆರವಣಿಗೆ

ಹಬ್ಬದ ದಿನ ಯುವಕರೆಲ್ಲ ಸೇರಿ ತಮ್ಮ ಮನೆಯಿಂದ ಸಗಣಿ ತಂದು ಗ್ರಾಮದ ಬೀರಪ್ಪನ ಗುಡಿ ಮುಂದೆ ಸುರಿದು ರಾಶಿ ಮಾಡುತ್ತಾರೆ. ನಂತರ ಗ್ರಾಮದ ಯುವಕನಿಗೆ ಹುಲ್ಲಿನಿಂದ ಮಾಡಿದ ಗಡ್ಡ ಮತ್ತು ಮೀಸೆಯನ್ನು ಕಟ್ಟಿ ಚಾಡಿಕೋರನ ವೇಷ ಧರಿಸುತ್ತಾರೆ. ಬಳಿಕ ಆತನನ್ನು ಕತ್ತೆ ಮೇಲೆ ಕೂರಿಸಿ ಗ್ರಾಮದ ತುಂಬಾ ಮೆರವಣಿಗೆ ಮಾಡುತ್ತಾರೆ. ಈ ವೇಳೆ ಗ್ರಾಮದ ಜನ ಕತ್ತೆ ಮೇಲೆ ಕೂತ ಚಾಡಿಕೋರನಿಗೆ ಮನಸ್ಸೋ ಇಚ್ಛೆ ಬೈಯ್ಯುತ್ತಾರೆ.

ಗ್ರಾಮದ ಕೆರೆಯಿಂದ ಆರಂಭವಾಗುವ ಮೆರವಣಿಗೆ ಗ್ರಾಮದ ಮೂಲಕ ಸಾಗಿ ಬೀರಪ್ಪನ ದೇವಸ್ಥಾನದ ಮುಂದೆ ಸಮಾಪ್ತಿಯಾಗುತ್ತದೆ. ನಂತರ ಚಾಡಿಕೋರನ ಹುಲ್ಲಿನ ಮೀಸೆ ಹಾಗೂ ಗಡ್ಡ ತೆಗೆದು ಸಗಣಿ ರಾಶಿಯಲ್ಲಿ ಇರಿಸಿ ಬೀರೇಶ್ವರನಿಗೆ ಪೂಜೆ ಸಲ್ಲಿಸಲಾಗುತ್ತದೆ. ಗ್ರಾಮದ ಯುವಕರು ಸಗಣಿಯನ್ನು ಉಂಡೆ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಾ ಸಗಣಿ ರಾಶಿಯಲ್ಲಿ ಉರುಳಾಡುತ್ತಾರೆ.

 ಊರಿಗೆ ಒಗ್ಗಟ್ಟಿನ ಸಂದೇಶ ಹೇಳುವ ಹಬ್ಬ

ಊರಿಗೆ ಒಗ್ಗಟ್ಟಿನ ಸಂದೇಶ ಹೇಳುವ ಹಬ್ಬ

ಇದಾದ ಬಳಿಕ ಚಾಡಿಕೋರ ಗುಡ್ಡದಲ್ಲಿ ಹಿಡಿಕಟ್ಟೆಗಳಿಂದ ಗೊಂಬೆಯೊಂದನ್ನು ನಿರ್ಮಿಸಿ ಸುಡುವ ಮೂಲಕ ಚಾಡಿಕೋರನನ್ನು ದಹಿಸಲಾಗುತ್ತದೆ. ನಂತರ ಸಗಣಿಯಲ್ಲಿ ಬಡಿದಾಡಿಕೊಂಡವರು, ಉರುಳಾಡಿದವರು ಹೀಗೆ ಎಲ್ಲರೂ ಸೇರಿ ಕೆರೆಗೆ ತೆರಳಿ ಅಲ್ಲಿ ಸ್ನಾನ ಮಾಡಿ ಶುಭ್ರರಾಗಿ ಮನೆಯ ಹಾದಿ ಹಿಡಿಯುತ್ತಾರೆ. ಅಲ್ಲಿಗೆ ಹಬ್ಬ ಮುಗಿದು ಹೋಗುತ್ತದೆ. ತನ್ನದೇ ಆದ ವಿಶಿಷ್ಟತೆ ಹೊಂದಿರುವ ಈ ಹಬ್ಬವನ್ನು ನೋಡಲು ಗ್ರಾಮದ ಜನರಲ್ಲದೆ, ಹೊರಗಿನಿಂದಲೂ ಬರುತ್ತಾರೆ. ಸಗಣಿಯಲ್ಲಿ ಮಿಂದೇಳುವ ಊರಿನ ಜನರನ್ನು ನೋಡಿ ಅಚ್ಚರಿಗೊಳ್ಳುತ್ತಾರೆ. ಇನ್ನು ಊರಿನಲ್ಲಿರುವ ಚಾಡಿಕೋರ ಮನಸ್ಸುಗಳನ್ನು ಸದೆ ಬಡಿದು ಎಲ್ಲರೂ ಒಂದಾಗಿ ಬಾಳಬೇಕೆಂಬ ಸಂದೇಶ ಸಾರುವ ಹಬ್ಬ ನಿಜಕ್ಕೂ ಮಹತ್ವಪೂರ್ಣ ಎನಿಸದಿರದು.

 ಸಗಣಿ ಹಬ್ಬದ ಇತಿಹಾಸ

ಸಗಣಿ ಹಬ್ಬದ ಇತಿಹಾಸ

ಇದೆಲ್ಲದರ ನಡುವೆ ಈ ಸಗಣಿ ಹಬ್ಬದ ಆಚರಣೆ ಹೇಗೆ ಬಂತು? ಊರಿನಲ್ಲಿ ಬೀರಪ್ಪನ ಗುಡಿ ಹೇಗೆ ನಿರ್ಮಾಣವಾಯಿತು? ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಗುಮಟಾಪುರ ಗ್ರಾಮದ ಗೌಡನ ಮನೆಗೆ ಗುಡ್ಡಪ್ಪನೊಬ್ಬ ಕೆಲಸಕ್ಕೆ ಸೇರಿದ್ದನು. ಕೆಲವು ದಿನಗಳ ಬಳಿಕ ಆತ ಸಾವನ್ನಪ್ಪುತ್ತಾನೆ. ಈ ವೇಳೆ ಅವನ ಅಂತ್ಯಕ್ರಿಯೆ ನಡೆಸಿದ ಬಳಿಕ ಆತನ ಜೋಳಿಗೆ ಮನೆಯಲ್ಲಿರುವುದು ಕಾಣಿಸುತ್ತದೆ. ಆ ಜೋಳಿಗೆ ನಮಗೇಕೆ ಎಂದ ಗೌಡರು ಅದನ್ನು ತಿಪ್ಪೆಗೆ ಎಸೆಯುತ್ತಾರೆ.

ಇದಾದ ಕೆಲ ದಿನಗಳ ನಂತರ ಗೌಡರು ತಮ್ಮ ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದಾಗ ತಿಪ್ಪೆಗೆ ಎಸೆದ ಜೋಳಿಗೆ ಎತ್ತಿನ ಗಾಡಿಯ ಚಕ್ರಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಏನಾಯಿತೆಂದು ನೋಡುವ ಹೊತ್ತಿಗೆ ಸಮೀಪದಲ್ಲಿದ್ದ ಶಿವಲಿಂಗದಿಂದ ರಕ್ತ ಬರುವುದು ಕಾಣಿಸುತ್ತದೆ. ಗೌಡರಿಗೆ ಇದೆಲ್ಲವೂ ಅಚ್ಚರಿಯಾಗಿ ಕಾಣಿಸುತ್ತದೆ.

ಅವತ್ತು ರಾತ್ರಿ ಮಲಗಿದ ಗೌಡರಿಗೆ ಕನಸಿನಲ್ಲಿ ದೇವರು ಕಾಣಿಸಿಕೊಂಡಂತಾಗಿ ಈ ದೋಷ ನಿವಾರಣೆಗಾಗಿ ಗ್ರಾಮದಲ್ಲಿ ಗುಡಿಯೊಂದನ್ನು ನಿರ್ಮಿಸಿ, ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಆಚರಿಸಬೇಕು ಎಂದು ಹೇಳಿದಂತೆ ಭಾಸವಾಯಿತು. ನಂತರ ತಿಪ್ಪೆ ಸ್ಥಳದಲ್ಲಿ ಬೀರಪ್ಪನ ಗುಡಿ ಕಟ್ಟಿ ಸಗಣಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುವುದು ಹಬ್ಬದ ಆಚರಣೆಯ ಹಿಂದಿರುವ ಕಥೆಯಾಗಿದೆ.

ಅದು ಏನೇ ಇರಲಿ.. ಇವತ್ತಿಗೂ ಜನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾ ಹೋಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+