ಸಿಬಿಐ ದಾಳಿ, ನಾಯ್ಡು ಮುನಿಸಿನ ಬಗ್ಗೆ ಜನಾರ್ದನ ರೆಡ್ಡಿ ಹೇಳಿದ್ದೇನು?
"ನನ್ನ ಮಗಳ ಮದುವೆಗೆ ಆಭರಣವೂ ಸೇರಿದಂತೆ ಒಟ್ಟಾರೆ ಖರ್ಚಾಗಿದ್ದು ಮೂವತ್ತು ಕೋಟಿ ರುಪಾಯಿ. ಅದರ ಪ್ರತಿ ರುಪಾಯಿಯ ಲೆಕ್ಕವನ್ನೂ ಆದಾಯ ತೆರಿಗೆ ಇಲಾಖೆಗೆ ಕೊಟ್ಟಿದ್ದೀನಿ. ಅಷ್ಟೇ ಅಲ್ಲ, ಒಬ್ಬ ಟ್ಯಾಕ್ಸಿ ಡ್ರೈವರ್ ಗೆ ಕೊಟ್ಟ ಬಾಡಿಗೆ ಹಣದಿಂದ ಮೊದಲುಗೊಂಡು ಹೂವು ಮತ್ತೊಂದಕ್ಕೆ ಖರ್ಚು ಮಾಡಿದ್ದರ ಲೆಕ್ಕ ಹಾಗೂ ಯಾರಿಗೆ ಹಣ ಪಾವತಿಸಿದ್ದೀವಿ ಅವರ ಫೋನ್ ನಂಬರ್ ಸಹಿತ ನೀಡಿದ್ದೀನಿ".
- ಹೀಗೆ ತೆಲುಗು ಟಿವಿಯೊಂದರ ಸುದೀರ್ಘ ಸಂದರ್ಶನದ ವೇಳೆ ತಮ್ಮ ಮಗಳ ಮದುವೆ ಖರ್ಚಿನ ಬಗ್ಗೆ ಮಾತನಾಡಿದ್ದಾರೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ. ಜತೆಗೆ, "ಸಾರ್ವಜನಿಕ ಜೀವನದಲ್ಲಿ ನಾನಿದ್ದೀನಿ ಆದ್ದರಿಂದ ಈ ರೀತಿಯಲ್ಲಿ ಪ್ರಚಾರ ಆಗುವುದು ಸಹಜ. ಮಾಧ್ಯಮಗಳಲ್ಲಿ ಆ ಮದುವೆಯ ಖರ್ಚು ಐನೂರು ಕೋಟಿ ರುಪಾಯಿ ಅಂತ ಪ್ರಚಾರ ಆಯಿತು" ಎಂದಿದ್ದಾರೆ.
ಇನ್ನು ದುಬಾರಿ ಆಹ್ವಾನ ಪತ್ರಿಕೆ ಬಗ್ಗೆ ಉತ್ತರ ನೀಡಿದ ಅವರು, ಅದು ಕೂಡ ಅಗತ್ಯಕ್ಕಿಂತ ಹೆಚ್ಚು ಪ್ರಚಾರವಾಯಿತು. ಸದ್ಯಕ್ಕೆ ಇರುವ ತಂತ್ರಜ್ಞಾನ ಇದು. ಎಲ್ ಸಿಡಿ ಬಳಸಿ ಮಾಡಿದ ಇನ್ವಿಟೇಷನ್ ಅದು. ಯಾರಿಗೇ ಆಗಲಿ ತಮ್ಮ ಮಗಳನ್ನು ಹೀಗೆ ನೋಡಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಅವಳ ಮದುವೆ ಅದ್ಧೂರಿ ಆಗಿ ಮಾಡಬೇಕು ಅಂತಿರುತ್ತದೆ. ಅದೇ ರೀತಿ ನನಗೂ ಇತ್ತು ಎಂದಿದ್ದಾರೆ.
ಜನಾರ್ದನ ರೆಡ್ಡಿ ಅವರು ತಿಳಿಸಿದ ಇನ್ನಷ್ಟು ಆಸಕ್ತಿಕರ ವಿವರಗಳಿಗೆ ಮುಂದೆ ಓದಿ.
ಕರ್ನಾಟಕದಲ್ಲಿ ಗಣಿ ವ್ಯವಹಾರ ಇಲ್ಲ
ಕರ್ನಾಟಕದಲ್ಲಿ ನಮಗೆ ಗಣಿ ವ್ಯವಹಾರವೇ ಇಲ್ಲ. ನಮ್ಮದೆಲ್ಲ ಆಂಧ್ರದಲ್ಲೇ ವ್ಯವಹಾರ ಇದೆ. ವೈಎಸ್ ರಾಜಶೇಖರ ರೆಡ್ಡಿ ಅವರು ಎಸ್ಸೆಂ ಕೃಷ್ಣ ಅವರ ಜತೆಗೆ ಮಾತನಾಡಿ, ನಮಗೆ ಅನುಕೂಲ ಮಾಡಿಕೊಟ್ಟರು ಎಂಬ ಮಾತೇ ಸುಳ್ಳು. ಏಕೆಂದರೆ ಕರ್ನಾಟಕದಲ್ಲಿ ನಾವು ಯಾವುದೇ ವ್ಯವಹಾರ ಮಾಡುತ್ತಿರಲಿಲ್ಲ.
ದೇವಸ್ಥಾನ ನಿರ್ಮಾಣ ನಿಯಮಗಳಿಗೆ ವಿರುದ್ಧವಾಗಿತ್ತು
ಸುಗ್ಗಲಮ್ಮ ದೇವಸ್ಥಾನ ನಮಗೆ ಗಣಿಯನ್ನು ನೀಡಿದವರು ಹತ್ತು ವರ್ಷದ ಹಿಂದೆ ಕಟ್ಟಿದ್ದರು. ಅದು ನಿಯಮಗಳ ವಿರುದ್ಧ ಕಟ್ಟಲಾಗಿತ್ತು. ಆದ್ದರಿಂದಲೇ ಕೆಡವಲಾಯಿತು. ಜತೆಗೆ ಅದು ಸಣ್ಣ ಗುಡಿಯಾಗಿತ್ತು. ಹೈ ಕೋರ್ಟ್ ನಲ್ಲಿ ಆ ದೇವಸ್ಥಾನ ಈಚೆಗೆ ಕಟ್ಟಿದ್ದು ಎಂಬುದು ಸಾಬೀತಾಯಿತು. ನನಗೆ ದೈವದ ಮೇಲೆ ಅಪಾರ ನಂಬಿಕೆ. ಅಂಥದ್ದರಲ್ಲಿ ವಿನಾಕಾರಣ ಅದನ್ನು ಕೆಡವುತ್ತೇನಾ? ಈಗ ಈ ಕಾರ್ಯಕ್ರಮಕ್ಕೆ ಬರುವಾಗ ಕೂಡ ರಾಹು ಕಾಲ ನೋಡಿಕೊಂಡು ಇಲ್ಲಿಗೆ ಬಂದೆ. ಅಷ್ಟು ದೈವಭಕ್ತಿ ನನಗೆ.
ಆ ದೇವರು ಕೊಟ್ಟ ಚಾಟಿ ಏಟು
ನನಗೆ ಈಗ ಐವತ್ತು ವರ್ಷ. ಸಮಸ್ಯೆ ಆರಂಭವಾದಾಗ ನಲವತ್ಮೂರು ವರ್ಷ. ಈ ಏಳು ವರ್ಷ ಸಾಕಷ್ಟು ಪಾಠ ಕಲಿತಿದ್ದೀನಿ. ಯಾರು ನಮ್ಮವರು, ಯಾರು ನಮ್ಮವರಲ್ಲ ಎಂಬುದು ಗೊತ್ತಾಯಿತು. ಮೈ ಮರೆತಾಗ ಆ ಶಿವ ಚಾಟಿ ಏಟು ಕೊಡ್ತಾನಂತೆ. ಆ ರೀತಿ ನನಗೆ ಬಿದ್ದ ಏಟದು ಅಂತ ನಾನು ಅಂದುಕೊಳ್ತೀನಿ.
ಚಂದ್ರಬಾಬು ನಾಯ್ಡು ವಿರುದ್ಧ ಹಾಗೆ ಮಾತನಾಡಬಾರದಿತ್ತು
ಹೈದ್ರಾಬಾದ್ ನಲ್ಲಿ ನನ್ನ ಮನೆ ಮೇಲೆ ಟಿಡಿಪಿ ಕಾರ್ಯಕರ್ತರು ಅಂತ ಹೇಳಿಕೊಂಡ ಕೆಲವರು ದಾಳಿ ನಡೆಸಿದರು. ಅದುವರೆಗೂ ಯಾವುದೇ ಮಾತನಾಡದ ನಾನು, ಚಂದ್ರಬಾಬು ನಾಯ್ಡು ಅವರ ಮೇಲೆ ವಾಗ್ದಾಳಿ ನಡೆಸಿದೆ. ಅಂದು ನಾನು ಮಾತನಾಡಿದ ರೀತಿಗೆ ಪಶ್ಚಾತಾಪ ಪಟ್ಟಿದ್ದೀನಿ. ಚಂದ್ರಬಾಬು ನಾಯ್ಡು ವಿರುದ್ಧ ಅಂಥ ಭಾಷೆ ಬಳಸಬಾರದಿತ್ತು. ಆ ನಂತರ ಆಡಿದ ಮಾತುಗಳಿಗೆ ಬಹಳ ಬಾಧೆ ಪಟ್ಟಿದ್ದೀನಿ.
ಸಿಬಿಐ ಬಂಧನದ ಬಗ್ಗೆ ಮುಂಚೆಯೇ ಗೊತ್ತಿತ್ತು
ಎರಡು ವರ್ಷದ ಹಿಂದೆಯೇ ನನ್ನ ವಿರುದ್ಧ ಸಿಬಿಐ ದೂರು ಆಗಿತ್ತು. ಏನೇ ಆದರೂ ಅದಕ್ಕಾಗಿ ಮಾನಸಿಕವಾಗಿ ಸಿದ್ಧನಾಗಿದ್ದೆ. ಆಗ ಮಕ್ಕಳಿಗೆ ಹೇಳಿದ್ದೆ: ನನ್ನ ವಿರುದ್ಧ ಏನು ಬೇಕಾದರೂ ಆಗಬಹುದು. ಅದು ಕಾನೂನು ಬದ್ಧವಾಗಿ ಸಾಬೀತಾಗಲು ಸಮಯ ಬೇಕಾಗುತ್ತದೆ. ಆದ್ದರಿಂದ ಶಾಲೆಗೆ ಹೋಗುವುದನ್ನು ತಪ್ಪಿಸಬೇಡಿ ಅಂತ ನನ್ನ ಬಂಧನ ಆಗುವ ಹಿಂದಿನ ರಾತ್ರಿಯೇ ಹೇಳಿದ್ದೆ.
ಹದಿನೈದು ನಿಮಿಷದಲ್ಲಿ ಅವರ ಜೊತೆ ಹೊರಟೆ
ಸಿಬಿಐನವರು ಬಂದು ತನಿಖೆಗೆ ಸಹಕಾರ ನೀಡುವಂತೆ ಕೇಳಿದರು. ನಾನು ನಿಮಗಾಗಿಯೇ ಕಾಯುತ್ತಿದ್ದೆ ಎಂದು ಅವರ ಜತೆಗೆ ಹೊರಟೆ. ಅವರ ಬಂದ ಹದಿನೈದು ನಿಮಿಷದೊಳಗೆ ಹೊರಟುಬಿಟ್ಟೆ. ಏಕೆಂದರೆ ನನ್ನೂರಿನ ಜನ ಅಮಾಯಕರು. ಭಾವನಾತ್ಮಕವಾಗಿ ಏನಾದರೂ ನಿರ್ಧಾರ ತೆಗೆದುಕೊಂಡು ಬಿಟ್ಟರೆ ಎಂಬ ಆತಂಕ ನನಗಿತ್ತು.