ಚಂಪಾಷಷ್ಠಿ ವೀಕ್ಷಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಾರೆ ವಿಶೇಷ ಅತಿಥಿಗಳು!
ಮಂಗಳೂರು, ಡಿಸೆಂಬರ್ 4: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಷಷ್ಠಿ ಉತ್ಸವ ಆರಂಭಗೊಂಡಿದೆ. ಡಿ.1ರಿಂದ ಆರಂಭವಾದ ಷಷ್ಠಿ ಮಹೋತ್ಸವ ಡಿ.15ರವರೆಗೂ ನಡೆಯಲಿದೆ.
ಇದೇ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ ನಡೆಯುತ್ತಿದೆ. ಹೀಗಾಗಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಭಕ್ತರು ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದಾರೆ.
ಇದರ ನಡುವೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೇವಲ ಅಸಂಖ್ಯಾತ ಭಕ್ತರು ಮಾತ್ರವಲ್ಲ, ವಿಶೇಷ ಅತಿಥಿಗಳೂ ಸುಬ್ರಹ್ಮಣ್ಯದ ಜಾತ್ರೆ ನೋಡಲು ಆಗಮಿಸುತ್ತವೆ. ಪಶ್ಚಿಮ ಘಟ್ಟದಲ್ಲಿ ಉಗಮವಾಗಿ, ಪರ್ವತ ಕಣಿವೆಗಳಿಂದ ಇಳಿದು, ಕುಮಾರಧಾರಾ ತೊರೆ ನದಿಯಾಗಿ ಹರಿಯುವುದು ಕುಕ್ಕೆ ಸುಬ್ರಹ್ಮಣ್ಯ ತಲುಪಿದ ಬಳಿಕವೇ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿಯಲ್ಲಿ ಪ್ರತಿವರ್ಷ ಚಂಪಾ ಷಷ್ಠಿಯ ಸಂದರ್ಭದಲ್ಲಿ ಮೀನುಗಳು ಬಂದು, ಚಂಪಾಷಷ್ಠಿ ಮುಗಿದ ಬಳಿಕ ಬೇರೆ ಕಡೆ ಹೋಗುವುದು ಪ್ರತಿವರ್ಷದ ವಾಡಿಕೆ. ಅದರಂತೆ ಈ ಬಾರಿಯೂ ಕುಮಾರಧಾರಾ ನದಿಯಲ್ಲಿ ಚಂಪಾಷಷ್ಠಿಯ ಆರಂಭದ ದಿನದಂದು ಮೀನುಗಳು ಪ್ರತ್ಯಕ್ಷವಾಗಿದೆ. ಕುಮಾರಧಾರಾ ಸ್ನಾನ ಘಟ್ಟಕ್ಕೆ ಅತಿಥಿಗಳಾಗಿ ಬರುವುದು ಕ್ಷೇತ್ರದ ಆಶ್ಚರ್ಯಕರ ಸಂಗತಿಗಳಲ್ಲಿ ಒಂದಾಗಿದೆ.

ಸುಬ್ರಹ್ಮಣ್ಯದ ಕಡೆಗೆ ಪ್ರಯಾಣ ಬೆಳೆಸುತ್ತವೆ
ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು, ದೂರದ ಏನಕಲ್ಲು- ಸಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿರುವ ಮೀನುಗಳು ಆ ದಿನದ ಸುಬ್ರಹ್ಮಣ್ಯದ ಕಡೆಗೆ ಪ್ರಯಾಣ ಬೆಳೆಸುತ್ತವೆ. ಜಾತ್ರೆ ಮುಗಿಯುವವರೆಗೂ ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟದ ಬಳಿಯೇ ಕಂಡುಬರುವ ಈ ಮೀನುಗಳು, ದೇವಸ್ಥಾನದ ಷಷ್ಠಿ ಮಹೋತ್ಸವದ ನಡಾವಳಿಗಳು ಮುಕ್ತಾಯಗೊಂಡ ಬಳಿಕ ತಾವು ಬಂದ ಸ್ಥಳಕ್ಕೆ ಮತ್ತೆ ಹಿಂದಿರುತ್ತವೆ.
ಕುಕ್ಕೆ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ರಥೋತ್ಸವ, ದೇವರ ಜಳಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ಬಳಿಕ ಕ್ಷೇತ್ರದಲ್ಲಿ ಆರಾಧನೆಗೊಳಪಡುತ್ತಿರುವ ಪುರುಷರಾಯ ದೈವದ ನೇಮೋತ್ಸವವು ನಡೆಯುತ್ತದೆ. ಈ ನೇಮೋತ್ಸವದ ಬಳಿಕ ಸ್ವತಃ ಪುರುಷರಾಯ ದೈವ ಕುಮಾರಧಾರಾ ಸ್ನಾನಘಟ್ಟದ ಬಳಿ ಬಂದು, ದೇವರ ನೈವೇದ್ಯವನ್ನು ಹಾಕಿದ ಬಳಿಕ ನೈವೇದ್ಯವನ್ನು ತಿಂದ ನಂತರ ಮೀನುಗಳು ಮರಳಿ ಸ್ವಸ್ಥಾನಕ್ಕೆ ಮರಳುತ್ತದೆ.

ಮೀನುಗಳಿಂದಲೇ ತುಂಬಿ ತುಳುಕುವ ಕುಮಾರಧಾರಾ ನದಿ
ಜಾತ್ರೆಯ ಸಂದರ್ಭದಲ್ಲಿ ಮೀನುಗಳಿಂದಲೇ ತುಂಬಿ ತುಳುಕುವ ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡುವವರಿಗೆ ಇವುಗಳು ಕಚಗುಳಿ ಇಡುತ್ತವೆ. ಈ ಮೀನುಗಳನ್ನು ಯಾರೂ ಹಿಡಿಯುವಂತಿಲ್ಲ. ಮೀನುಗಳ ಈ ನಡವಳಿಕೆಗಳಿಗೆ ನೈಸರ್ಗಿಕ ಕಾರಣಗಳಿದ್ದರೂ, ಸುಬ್ರಹ್ಮಣ್ಯದ ಜಾತ್ರೋತ್ಸವದ ಸಂದರ್ಭವೇ ಇವುಗಳು ಇಲ್ಲಿ ಸೇರುತ್ತಿರುವುದರಿಂದ ಇವುಗಳು ಭಕ್ತರಿಗೆ ಕುತೂಹಲದ ಕೇಂದ್ರ ಬಿಂದುವಾಗಿದೆ.

ಮೀನುಗಳು ಜಾತ್ರೆಯ ದಿನಗಳಂದೇ ಬರುತ್ತವೆ
ಕುಮಾರಧಾರಾ ಸ್ನಾನ ಘಟ್ಟದಲ್ಲಿ ಹೇರಳ ಸಂಖ್ಯೆಯಲ್ಲಿ ಕಂಡುಬರುವ ಈ ಮೀನುಗಳಿಗೆ ನದಿಯಲ್ಲಿ ತೀರ್ಥಸ್ನಾನ ಮಾಡುವ ಭಕ್ತರು ಮಂಡಕ್ಕಿ ಹಾಕಿ ಖುಷಿಪಡುತ್ತಾರೆ. ಜಾತ್ರೆಯ ಸಮಯದಲ್ಲಿ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಹರಿದುಬರುವ ಹಿನ್ನಲೆಯಲ್ಲಿ ತಮಗೂ ತಿನ್ನಲು ಅಹಾರ ಸಿಗುತ್ತವೆ ಎನ್ನುವುದನ್ನು ಅರಿತಿರುವ ಈ ಮೀನುಗಳು ಜಾತ್ರೆಯ ದಿನಗಳಂದೇ ಹೇಗೆ ಸ್ನಾನಘಟ್ಟದ ಬಳಿ ಸೇರುತ್ತದೆ ಎನ್ನುವುದು ಹಲವರ ವಾದವಾಗಿದೆ.
ಅದೇನೇ ಇದ್ದರೂ ಕುಮಾರ ಪರ್ವತದ ತಪ್ಪಲಿನಲ್ಲಿ ಇರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿಯ ವೈಭವ ನಡೆಯುತ್ತಿದೆ. ನಂಬಿದವರ ಇಷ್ಟಾರ್ಥ ಸಿದ್ಧಿಯಾಗುವ, ಅಭೀಷ್ಠೆ ನೆರವೇರುವ ಕಾರಣಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಲವು ದೈವ ಪವಾಡಗಳ ಮೂಲಕ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ.












Click it and Unblock the Notifications