ಯಾವ ಪಕ್ಷದಲ್ಲಿಲ್ಲ ಕುಟುಂಬ ರಾಜಕಾರಣ? ಇಲ್ಲೊಂದಿಷ್ಟು ಜಾಸ್ತಿ, ಅಲ್ಲಿ ಕಮ್ಮಿ
Recommended Video
ಕರ್ನಾಟಕದಲ್ಲಿ ದೇವೇಗೌಡರ ಮೊಮ್ಮಕ್ಕಳು ಲೋಕಸಭಾ ಚುನಾವಣೆ ಕಣಕ್ಕೆ ಇಳಿಯುತ್ತಿದ್ದಂತೆ ಕುಟುಂಬ ರಾಜಕಾರಣ ಅನ್ನೋದರ ಬಗ್ಗೆ ಆಕ್ಷೇಪ ವಿಪರೀತ ಹೆಚ್ಚಾಯಿತು.
ಸದ್ಯಕ್ಕೆ ದೇವೇಗೌಡರು, ಅವರ ಇಬ್ಬರು ಮಕ್ಕಳಾದ ರೇವಣ್ಣ, ಕುಮಾರಸ್ವಾಮಿ, ಸೊಸೆಯರಾದ ಅನಿತಾ ಹಾಗೂ ಭವಾನಿ, ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ರಾಜಕಾರಣದಲ್ಲಿ ಇದ್ದಾರೆ. ಇದರಲ್ಲಿ ಬೀಗರೆಲ್ಲ ಸೇರಿಕೊಂಡಿಲ್ಲ. ಹಾಗೆ ಸೇರಿಸಿದರೆ ಡಿ.ಸಿ.ತಮ್ಮಣ್ಣ, ಸಿ.ಎನ್.ಬಾಲಕೃಷ್ಣ ಅವರನ್ನು ಕೂಡ ಸೇರ್ಪಡೆ ಮಾಡಬೇಕು.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಅವರ ಮಗ ಯತೀಂದ್ರ, ಡಿ.ಕೆ.ಶಿವಕುಮಾರ್ ಹಾಗೂ ಅವರ ತಮ್ಮ ಡಿ.ಕೆ.ಸುರೇಶ್, ಶಾಮನೂರು ಶಿವಶಂಕರಪ್ಪ ಮತ್ತವರ ಮಗ ಮಲ್ಲಿಕಾರ್ಜುನ, ಜಿ.ಎಂ.ಸಿದ್ದೇಶ್ವರ, ಮಲ್ಲಿಕಾರ್ಜುನ ಖರ್ಗೆ- ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ದಿ ಹಾಗೂ ಸೌಮ್ಯಾ ರೆಡ್ಡಿ, ಕೆ.ಎಚ್.ಮುನಿಯಪ್ಪ- ರೂಪಾ ಶಶಿಧರ್, ಸತೀಶ್ ಜಾರಕಿಹೊಳಿ- ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ (ಬಿಜೆಪಿಯಲ್ಲಿದ್ದಾರೆ). ಭೀಮಣ್ಣ ಖಂಡ್ರೆ, ಈಶ್ವರ ಖಂಡ್ರೆ. ಅನಿಲ್ ಲಾಡ್- ಸಂತೋಷ್ ಲಾಡ್.
ವೀರಪ್ಪ ಮೊಯಿಲಿ ಅವರು ತಮ್ಮ ಮಗ ಹರ್ಷ ಅವರಿಗೆ ಹಾಗೂ ಎಚ್.ಸಿ.ಮಹದೇವಪ್ಪ ತಮ್ಮ ಮಗ ಸುನೀಲ್ ಬೋಸ್ ಗೂ ರಾಜಕೀಯ ಅರಂಗೇಟ್ರಂಗೆ ಹರಸಾಹಸ ಪಟ್ಟರು. ಆರ್.ವಿ.ದೇಶಪಾಂಡೆ ಅವರಿಗಂತೂ ಈ ಸಲ ತಮ್ಮ ಮಗನಿಗೆ ಲೋಕಸಭೆಗೆ ಸ್ಪರ್ಧೆಗೆ ಇಳಿಸಬೇಕು ಎಂಬ ಆಕಾಂಕ್ಷೆ. ವಿಜಯಾನಂದ ಕಾಶಪ್ಪನವರ್ ಅವರ ಮಗಳು ವೀಣಾ ಕಾಶಪ್ಪನವರ್ ಬಾಗಲಕೋಟೆಯಿಂದ ಕಾಂಗ್ರೆಸ್ ಅಭ್ಯರ್ಥಿ.
ಕುಟುಂಬ ರಾಜಕಾರಣ ಬರೀ ದೇವೇಗೌಡ್ರ ಸ್ವತ್ತಾ, ಇವರದ್ದೆಲ್ಲಾ ಇನ್ನೇನು ಮತ್ತೆ?
ಕಾಂಗ್ರೆಸ್ ಪಕ್ಷದ್ದು ಜೆಡಿಎಸ್ ಗೂ ಮೀರಿದ ದಾಖಲೆ ಇದೆ. ಕೇಂದ್ರದಲ್ಲಿ ನೆಹರೂ-ಇಂದಿರಾ-ರಾಜೀವ್-ರಾಹುಲ್ ಮತ್ತು ಪ್ರಿಯಾಂಕಾ...ಇದು ನಾಲ್ಕನೇ ತಲೆಮಾರಿನ ಮುಂದುವರಿಕೆ. ಇಂದಿರಾಗಾಂಧಿ ಅವರ ಮತ್ತೊಬ್ಬ ಮಗ ಸಂಜಯ್ ಗಾಂಧಿ ಅವರ ಪತ್ನಿ ಮೇನಕಾ ಹಾಗೂ ವರುಣ್ ಬಿಜೆಪಿಯಲ್ಲಿದ್ದಾರೆ.
ಬಿಜೆಪಿಯಲ್ಲಿ ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ. ಈಶ್ವರಪ್ಪ ಮತ್ತು ಅವರ ಮಗ ಕಾಂತರಾಜು. ಸಿ.ಎಂ.ಉದಾಸಿ- ಶಿವಕುಮಾರ್ ಉದಾಸಿ. ಮುರುಗೇಶ್ ನಿರಾಣಿ ಸೋದರರು. ಉಮೇಶ್ ಕತ್ತಿ- ರಮೇಶ್ ಕತ್ತಿ ಸೋದರರು. ಜಿ.ಸೊಮಶೇಖರ ರೆಡ್ಡಿ- ಕರುಣಾಕರ ರೆಡ್ಡಿ. ಜಗದೀಶ್ ಶೆಟ್ಟರ್ ಹಾಗೂ ಅವರ ತಮ್ಮ ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್.
ಎಲ್ಲಿ ಇದೇ ಕುಟುಂಬ ರಾಜಕಾರಣ ಮುಂದುವರಿಯುತ್ತದೋ ಎಂಬ ಆತಂಕದಲ್ಲಿ ಬಿಜೆಪಿಯಿಂದ ಕೇಂದ್ರದ ದಿವಂಗತ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿಗೆ ಬೆಂಗಳೂರು ದಕ್ಷಿಣದ ಟಿಕೆಟ್ ನಿರಾಕರಿಸಿರುವ ಸಾಧ್ಯತೆ ಇದೆ. ಆದರೆ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಸಿಕ್ಕಿದೆ.
ಲೋಕಸಭಾ ಚುನಾವಣೆ ಹೊತ್ತಿಗೆ ಗೌಡರ ಕುಟುಂಬದಲ್ಲಿ ಯಾರ್ಯಾರು, ಏನೇನು?
ಬೇರೆ ಬೇರೆ ಪಕ್ಷದಲ್ಲಿರುವ ಮಧು ಹಾಗೂ ಕುಮಾರ್ ಬಂಗಾರಪ್ಪ, ಈಗ ಮಂಡ್ಯ ಚುನಾವಣೆ ಕಣದಲ್ಲಿರುವ ಸುಮಲತಾ ಅಂಬರೀಶ್. ಇದು ಕೊನೆಯಾಗದ ಪಟ್ಟಿ.
ಯಾಕೆ ಇಷ್ಟೆಲ್ಲ ಹೇಳಬೇಕಾಯಿತು ಅಂದರೆ, ಮೇಲ್ನೋಟಕ್ಕೆ ಕುಟುಂಬ ರಾಜಕಾರಣ ಅವರದು ಎಂದು ಪರಸ್ಪರರ ಮೇಲೆ ಆರೋಪ ಮಾಡುವವರು ಕೂಡ ತಮ್ಮ ಮಕ್ಕಳನ್ನು ಕನಿಷ್ಠ ಜಿ.ಪಂ.- ಗ್ರಾ.ಪಂ. ಸದಸ್ಯರನ್ನಾಗಿಯಾದರೂ ಮಾಡಿರುತ್ತಾರೆ. ವೈದ್ಯರ ಮಗ ವೈದ್ಯ, ವಕೀಲರ ಮಗ ವಕೀಲ, ಎಂಜಿನಿಯರ್ ಮಗ ಎಂಜಿನಿಯರ್ ಆಗುವುದರಲ್ಲಿ ತಪ್ಪಿಲ್ಲ ಅನ್ನೋದಾದರೆ ರಾಜಕಾರಣಿಯ ಮಗ ರಾಜಕಾರಣಿ ಆಗುವುದರಲ್ಲಿ ತಪ್ಪೇನು ಎಂಬುದು ಅವರ ವಾದ.
ಆ ಎಲ್ಲಕ್ಕೂ ಒಂದು ಶಿಕ್ಷಣ, ಪದವಿ ನಿಗದಿ ಆಗಿದೆ. ಅದನ್ನು ಸಂಪಾದಿಸಿದ ನಂತರವೇ ಆಗಲು ಸಾಧ್ಯ. ಆದರೆ ರಾಜಕಾರಣಿ ಆಗಲು ಏನು ಸ್ವಾಮಿ ಅರ್ಹತೆ, ಮಾನದಂಡ? ಪತಿ ತೀರಿಕೊಂಡ ನಂತರ ರಾಜಕೀಯ ಪ್ರವೇಶಿಸಿದ ಅವರ ಪತ್ನಿಯರು, ನಾಯಕರ ತಮ್ಮಂದಿರು, ಮಕ್ಕಳು, ಸಂಬಂಧಿಕರು... ಓಹ್, ಎಂಥ ರಾಜಕೀಯ!