ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?
ಕರ್ನಾಟಕದ ರಾಜಕೀಯ ಬಿಕ್ಕಟ್ಟು, ಗೋವಾದಲ್ಲಿನ ಶಾಸಕರ ವಲಸೆ ಎಲ್ಲವೂ ಮತ್ತೊಮ್ಮೆ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ಕರ್ನಾಟಕದಲ್ಲಿ 13 ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರವು ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿದೆ. ರಾಜೀನಾಮೆ ಸ್ವೀಕರಿಸಿರುವ ಕರ್ನಾಟಕ ವಿಧಾನಸಭೆ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಅವರು ರಾಜೀನಾಮೆ ಅಂಗೀಕರಿಸಿಲ್ಲ. ಗುರುವಾರ (ಜುಲೈ 18) ದಂದು ಮುಖ್ಯಮಂತ್ರಿ ಎಚ್ .ಡಿ ಕುಮಾರಸ್ವಾಮಿ ಅವರು ಬಜೆಟ್ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಕಾಂಗ್ರೆಸ್ -ಜೆಡಿಎಸ್ ಶಾಸಕರಿಗೆ ಈಗಾಗಲೇ ವಿಪ್ ಜಾರಿ ಮಾಡಲಾಗಿದ್ದು, ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಂಡು ಸರ್ಕಾರದ ಪರ ಮತ ಹಾಕುವಂತೆ ಸೂಚಿಸಲಾಗಿದೆ. ಆದರೆ, ರೆಬೆಲ್ ಶಾಸಕರು ಮುಂಬೈನಲ್ಲೇ ಉಳಿಯಲು ನಿರ್ಧರಿಸಿದ್ದು, ಸರ್ಕಾರದ ಅಳಿವು ಉಳಿವಿನ ಪ್ರಶ್ನೆಗೆ ಈ ಮೂಲಕ ಸಂದೇಶ ರವಾನಿಸಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?
-ಸಂವಿಧಾನದ 10ನೇ ಶೆಡ್ಯೂಲ್ ನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ(Anti Defection Law) ಬಗ್ಗೆ ಉಲ್ಲೇಖವಿದ್ದು, 52 ತಿದ್ದುಪಡಿಯನ್ನು ಕಂಡಿದೆ.
ಈ ಕಾಯ್ದೆ ಪ್ರಕಾರ ಅನರ್ಹತೆ ಮಾಡಲು ನಿಯಮಗಳೇನು?
* ವಿಧಾನಸಭಾ ಸದಸ್ಯರು ತಮ್ಮ ಸ್ವಇಚ್ಛೆಯಿಂದ ರಾಜಕೀಯ ಪಕ್ಷವೊಂದರ ಸದಸ್ಯತ್ವವನ್ನು ತೊರೆದಿದ್ದು, ವಿಪ್ ಅನುಗುಣವಾಗಿ ಮತ ಹಾಕದಿದ್ದರೆ ಅಥವಾ ಮತದಾನ ಪ್ರಕ್ರಿಯೆಗೆ ಗೈರಾದರೆ...
* ವಿಶ್ವಾಸಮತ ಯಾಚನೆಗೂ 15 ದಿನ ಮೊದಲು ಪಕ್ಷದಿಂದ ಪೂರ್ವಾನುಮತಿ ಪಡೆದ ಸದಸ್ಯರು ಅನರ್ಹತೆ ಭೀತಿಯಿಂದ ಬಚಾವಾಗುತ್ತಾರೆ.
* ಸ್ವತಂತ್ರ ಸದಸ್ಯರೊಬ್ಬರು ಚುನಾವಣೆ ಬಳಿಕ ರಾಜಕೀಯ ಪಕ್ಷ ಸೇರಿದಾಗ
* ವಿಧಾನಸಭೆಯ ನಾಮಾಂಕಿತ ಸದಸ್ಯರು, ನಾಮಾಂಕಿತಗೊಂಡ 6 ತಿಂಗಳ ನಂತರ ಯಾವುದೇ ಪಕ್ಷವನ್ನು ಸೇರಿದರೆ,
ಯಾರು ಅನರ್ಹಗೊಳಿಸಬಹುದು?
* ವಿಧಾನಸಭಾ ಸ್ಪೀಕರ್ ಅವರಿಗೆ ಈ ಅಧಿಕಾರ ಇರುತ್ತದೆ.
* ಸ್ಪೀಕರ್ ವಿರುದ್ಧವೇ ಅವಿಶ್ವಾಸ ಮಂಡನೆಯಾಗಿ, ದೂರು ಎದುರಿಸುತ್ತಿದ್ದರೆ, ಸದನದ ಸದಸ್ಯರು ಶಾಸಕರೊಬ್ಬರ ಅನರ್ಹತೆ ಬಗ್ಗೆ ತೀರ್ಮಾನ ಕೈಗೊಳ್ಳಬಹುದು.
ಯಾವ ಸಂದರ್ಭದಲ್ಲಿ ವಿನಾಯಿತಿ?
* ಶಾಸಕರೊಬ್ಬರ ಪಕ್ಷವು ಮತ್ತೊಂದು ಪಕ್ಷದೊಡನೆ ವಿಲೀನವಾದರೆ, ಅನರ್ಹತೆ ಊರ್ಜಿತವಾಗುವುದಿಲ್ಲ. ಹಳೆ ಪಕ್ಷದ ಶಾಸಕರೆಲ್ಲರೂ ಹೊಸ ಪಕ್ಷದ ಸದಸ್ಯರಾಗಿ ಪರಿಗಣಿಸಲ್ಪಡುತ್ತಾರೆ ಅಥವಾ ವಿಲೀನವನ್ನು ವಿರೋಧಿಸಿದ ಪ್ರತ್ಯೇಕ ಗುಂಪಾಗಿ ಗುರುತಿಸಲ್ಪಡುತ್ತಾರೆ.
* ಈ ರೀತಿ ವಿನಾಯಿತಿ ಸಂದರ್ಭದ ಬರಲು ವಿಧಾನಸಭೆಯಲ್ಲಿ ಪಕ್ಷವೊಂದರ ಕನಿಷ್ಠ 2/3ರಷ್ಟು ಸದಸ್ಯರು ವಿಲೀನಕ್ಕೆ ಒಪ್ಪಿಗೆ ಸೂಚಿಸಿರಬೇಕು.












Click it and Unblock the Notifications