Get Updates
Get notified of breaking news, exclusive insights, and must-see stories!

ದರ್ಪ, ಅಹಂಕಾರ, ಅಣುವಿಗೆ ಹೆದರಿ ಕುಳಿತಿದೆ: ಮಾನವನ ಅಹಂಗೆ ಭಗವಂತನ ಉತ್ತರ ಇದೇ ಏನೋ?

'ಕೆಟ್ಟು ಪಟ್ಟಣ ಸೇರು' ಎಂಬ ಗಾದೆಯಿದೆ. ಮೂರ್ನಾಲ್ಕು ದಶಕಗಳಿಂದ ನಮ್ಮ ಹಳ್ಳಿಯ ಯುವಕರು ಹಳ್ಳಿಯನ್ನು ತೊರೆದು ಪಟ್ಟಣ ಸೇರುತ್ತಿದ್ದಾರೆ. ಇದಕ್ಕೆ ಕಾರಣ ಹಲವಾರು. ನಗರದ ಐಷಾರಾಮಿ ಜೀವನದ ಆಕರ್ಷಣೆ,ಹಳ್ಳಿಯ ಬದುಕಿನ ಏಕತಾನತೆ,ಉದ್ಯೋಗದ ಆಕಾಂಕ್ಷೆಗಳು ಕಾರಣವಾಗಿರಬಹುದು.

Recommended Video

      Virat Kohli First Indian to Reach 70 Million Instagram followers | Oneindia Kannada

      ಜೊತೆಗೆ ಒಂದು ಮುಖ್ಯವಾದ ಕಾರಣವೆಂದರೆ ಹಳ್ಳಿಯ ಯುವಕರ ಮದುವೆ ಸಮಸ್ಯೆ. ಹಳ್ಳಿಗ,ಕೃಷಿಕರನ್ನು ಮದುವೆಯಾಗಲು ಯಾವ ಯುವತಿಯರೂ ಮುಂದೆ ಬರುತ್ತಿಲ್ಲ. ಹೀಗಾಗಿ ಅವರೆಲ್ಲಾ ಬಲವಂತದ ಬ್ರಹ್ಮಚಾರಿಗಳಾಗಿ ಬಿಡುತ್ತಿದ್ದಾರೆ. ನಗರದ ಬದುಕಿಗೆ ಹೊಂದಿಕೊಂಡವರು ಮತ್ತೆಂದೂ ತಮ್ಮ ಗತ ಜೀವನಕ್ಕೆ ಹಿಂದಿರುಗಲಾರದಷ್ಟೂ ದೂರ ಹೋಗಿರುತ್ತಾರೆ.

      ಅಲ್ಲಿ ಹಣ ಸುರಿದರೆ ಸಾಕು.ಎಲ್ಲವೂ ಕಾಲ ಬುಡಕ್ಕೇ ಬಂದು ಬೀಳುವಾಗ ಹಳ್ಳಿಯ ಕಷ್ಟದ ಬದುಕು ಯಾರಿಗೆ ರುಚಿಸೀತು. ಹೀಗಾಗಿ ಹೆಚ್ಚು ಕಲಿತವರು ವಿದೇಶಕ್ಕೆ ಪಲಾಯನ ಮಾಡಿದರೆ,ಸಾಧಾರಣ ವಿದ್ಯಾವಂತರು ಸಣ್ಣ ಪುಟ್ಟ ಉದ್ಯೋಗಗಳನ್ನು ಅರಸಿ,ಪಟ್ಟಣಕ್ಕೆ ಹಾರಿದರು. ಇತ್ತೀಚೆಗೆ ಹಳ್ಳಿಗಳಲ್ಲಿ ಕೃಷಿಕರೇ ಇಲ್ಲದಂಥ ಪರಿಸ್ಥಿತಿ ಬಂದೊದಗಿದೆ.

      Ego Is Afraid Of Virus: Is This The Gods Answer To The Human Ego

      ಇಷ್ಟರವರೆಗೆ ಎಲ್ಲವೂ ಸರಿಯಾಗಿತ್ತು.ಆದರೆ ಕಂಡೂ ಕೇಳರಿಯದ ವೈರಸ್ ಒಂದು ಇಡೀ ಜಗತ್ತಿಗೇ ತನ್ನ ವಿಶ್ವರೂಪವನ್ನು ತೋರಿಸಿ,ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಎಲ್ಲರ ಬದುಕೂ ಬೀದಿಗೆ ಬಿದ್ದಿದೆ.ದೊಡ್ಡ ದೊಡ್ಡ ಮಾಲುಗಳ, ಹೋಟೆಲುಗಳ,ಬಸ್ಸುಗಳ ಮಾಲೀಕರುಗಳು ತಲೆಯ ಮೇಲೆ ಕೈ ಹೊತ್ತು ಕುಳಿತು ಬಿಟ್ಟಿದ್ದಾರೆ.

      ಮಕ್ಕಳಿಗೆ ಶಾಲೆ ಮುಗಿದು,ವರ್ಷಾಂತ್ಯದ ರಜೆಯಲ್ಲಿ, ಹಬ್ಬಹರಿದನಗಳಲ್ಲಿ ಊರಿಗೆ ಹೊರಡಲು ಸಿದ್ಧವಾದರೆ ಬಸ್ಸಿನ ಪ್ರಯಾಣ ದರವನ್ನು ದುಪ್ಪಟ್ಟಾಗಿಸಿ,ಎಲ್ಲರ ಕಣ್ಣಿನಲ್ಲೂ ನೀರು ತರಿಸುತ್ತಿದ್ದರು. ಆಗ ಜನರು ನಿರಾಶೆಯಿಂದ ತಮ್ಮ ಪ್ರಯಾಣವನ್ನು ರದ್ದುಗೊಳಿಸುತ್ತಿದ್ದರು.ಈಗ ಬಸ್ಸಿಗೆ ಜನರೇ ಸುಳಿಯುತ್ತಿಲ್ಲ.

      ಬಸ್ಸುಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ. ಜನರ ದುರ್ಬಲತೆಯನ್ನು ಉಪಯೋಗಿಸಿ ಒಂದಕ್ಕೆಡರಂತೆ ಹಣ ವಸೂಲಿ ಮಾಡುತ್ತಿದ್ದ ಡೇ ಕೇರ್ ಗಳು,ಬೇಸಿಗೆ ಶಿಬಿರಗಳು,ಹೋಂ ಸ್ಟೇ ಗಳು ಈಗ ಕೆಲಸವಿಲ್ಲದೆ ಕೈ ಕೈ ಹಿಸುಕುತ್ತಾ ಕುಳಿತ್ತಿದ್ದಾರೆ. ಮನೆಯ ಕೆಲಸಕ್ಕೆ ಬರುವ ಕೆಲಸದಾಳುಗಳ ದರ್ಪದ ಮಾತಿಗೂ ಪೆಟ್ಟು ಬಿದ್ದಿದೆ.

      'ಒಂದು ಕೆಲಸಕ್ಕೆ 500 ರೂ. ಬೇಕಿದ್ದರೆ ಇಟ್ಟುಕೊಳ್ಳಿ.ಇಲ್ಲದಿದ್ದರೆ ಬೇರೆಯವರನ್ನು ನೋಡಿಕೊಳ್ಳಿ ಎಂದು ಖಡಕ್ ಮಾತು.ಈಗ ಎಲ್ಲರೂ ಕೆಲಸದವರನ್ನು ಬಿಡಿಸಿ ತಾವೇ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಪುಟ್ಟ ಕೈಗಾರಿಕೆಗಳು ಬಾಗಿಲು ಮುಚ್ಚಿರುವ ಕಾರಣ,ಕೂಲಿ ಕಾರ್ಮಿಕರೆಲ್ಲರೂ ಕೆಲಸವಿಲ್ಲದೆ ನರಳುತ್ತಿದ್ದಾರೆ. ತಳ್ಳು ಗಾಡಿಗಳು,ಹೂ ಮಾರಾಟಗಾರರು,ಅರ್ಚಕರು,ಬಾಣಸಿಗರು,ಸಿನೆಮಾ ಮಂದಿ ಹೀಗೆ ಎಲ್ಲರ ಬದುಕೂ ಅನಿಶ್ಚಯತೆ ಎಂಬ ಮಹಾ ಸಾಗರದಲ್ಲಿ ತೇಲುತ್ತಿದೆ. ಮುಳುಗುತ್ತದೋ ದಡ ಸೇರುತ್ತದೋ ಆ ದೇವರೇ ಬಲ್ಲ.

      Ego Is Afraid Of Virus: Is This The Gods Answer To The Human Ego

      ಈ ಮಧ್ಯೆ ಕೊರೊನಾದ ರಣಕೇಕೆಯಿಂದ ,ನಗರಗಳ ಅವ್ಯವಸ್ಥೆಯಿಂದ ಬೇಸತ್ತು,ತಂತಮ್ಮ ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಕೆಲಸವಿಲ್ಲದೆ ಊಟಕ್ಕೂ ತತ್ವಾರ ವಾಗಿರುವಾಗ ಇನ್ನು ಬಾಡಿಗೆ ಕಟ್ಟಲು ಹಣ.ಎಲ್ಲರೂ ಮನೆ ಖಾಲಿ ಮಾಡಿ ಗುಳೇ ಹೊರಟಿದ್ದಾರೆ. ಲಕ್ಷಗಟ್ಟಲೆ ಸಾಲಸೋಲ ಮಾಡಿ, ಮನೆ ಕಟ್ಟಿ,ಬಾಡಿಗೆ ಹಣದಿಂದ ಕೂತು ತಿನ್ನುತ್ತಿದ್ದ ಮನೆ ಮಾಲಿಕರುಗಳು ಖಾಲಿ ಬಿದ್ದ ಮನೆಯನ್ನು ನೋಡಿ,ಕಂಬನಿಗರೆಯುತ್ತಿದ್ದಾರೆ. ಸಾಲ ಕಟ್ಟಲಾಗದೆ ಸೋಲುತ್ತಿದ್ದಾರೆ.

      ಇತ್ತ ಹಳ್ಳಿಗೆ ವಾಪಸ್ಸಾಗುತ್ತಿರುವ ಜನರು ತಮ್ಮ ಊರಿಗೇ ಅಪರಿಚಿತರು. ಮನೆಗೆ ಪರಕೀಯರು. ಊರಿನಲ್ಲಿ ಮೊದಲು ಸಿಗುತ್ತಿದ್ದ ಗೌರವ,ಬೆಲೆಗಳು ಈಗ ಸಿಗುತ್ತಿಲ್ಲ. ಆದರೆ ಹಸಿವಿಗಿಂತ ದೊಡ್ಡದು ಯಾವುದೂ ಇಲ್ಲ. ಸಾಗುವಳಿಯಿಂದ ಹೊಟ್ಟೆಯಾದರೂ ತುಂಬುತ್ತದೆ ಎಂಬುದೇ ಸಮಾಧಾನ.

      ನಮ್ಮ ಊರೆ ನಮಗೆ ಸರಿ ಎಂಬ ನಿರ್ಧಾರ. ಗಂಜಿತಿಳಿಯನ್ನಾದರೂ ಕುಡಿದು ಬದುಕುವ ಇಚ್ಛೆ ಅವರದು.ವಿದೇಶಗಳಿಂದಲೂ ಕೆಲಸ ಕಳೆದುಕೊಂಡು ಬರುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗಿ,ಆತ್ಮಹತ್ಯೆಹೆಚ್ಚಾಗುತ್ತಿದೆ. ಎಲ್ಲೋ ಓದಿದ ಒಂದೆರಡು ಸಾಲುಗಳು ನೆನಪಾಗುತ್ತಿವೆ.ರಜೆಯೇನೋ ಇದೆ ಸಂಭ್ರಮವಿಲ್ಲ. ಎಲ್ಲರೂ ಇದ್ದಾರೆ .ಆದರೂ ಒಂಟಿ.ತುಂಟ ಮಕ್ಕಳನ್ನು ಕಟ್ಟಿಹಾಕಿದ ಹಾಗೆ.ಅಜ್ಞಾತ ಕಣ್ಣುಗಳ ಎದುರು ನಾವೆಲ್ಲಾ ಬಲಿಪಶುಗಳು.

      ಶರಣಾಗತಿಯೊಂದೇ ನಮ್ಮ ಮುಂದಿರುವ ದಾರಿ. ಇಡೀ ಶತ್ರು ರಾಷ್ಟ್ರವನ್ನೇ ಸರ್ವನಾಶ ಮಾಡುವ ದರ್ಪ, ಅಹಂಕಾರಗಳೆಲ್ಲವೂ ಒಂದು ಅಣುವಿಗೆ ಹೆದರಿ ಮುದುಡಿ ಕುಳಿತಿದೆ .ಪೌರುಷದ ಮಾತು ಹಿಂದೆ ಸರಿದಿದೆ. ಮಾನವನ ಅಹಂಕಾರಕ್ಕೆ ಭಗವಂತನ ಉತ್ತರ ಇದೇ ಏನೋ!

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+