ಜೆಡಿಎಸ್ ಗೆ ಮತ ಹಾಕಿದವರಿಗೆ ಮಾತ್ರ ಕುಮಾರಸ್ವಾಮಿ ಮುಖ್ಯಮಂತ್ರಿಗಳೇ?
Recommended Video
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ವಭಾವವೇ ಹೀಗಾ ಅಥವಾ ಮಗ ನಿಖಿಲ್ ಹಾಗೂ ತಂದೆ ದೇವೇಗೌಡರ ಸೋಲು, ಮೈತ್ರಿ ಸರಕಾರದ ಸವಾಲುಗಳು, ಮಾಧ್ಯಮಗಳಲ್ಲಿ ನಿರಂತರವಾಗಿ ಬರುತ್ತಿರುವ ಮೈತ್ರಿ ಸರಕಾರದ ಬಗೆಗಿನ ವರದಿಗಳಿಂದ ಹತಾಶರಾಗಿದ್ದಾರಾ? ರಾಯಚೂರಿನಲ್ಲಿ ಬುಧವಾರ ಅವರು ನೀಡಿದ ಹೇಳಿಕೆ ಅಂಥ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ.
ಮೋದಿಗೆ ಮತ ಹಾಕುತ್ತೀರಿ, ನಿಮ್ಮ ಕೆಲಸ ಮಾಡಿಕೊಡಲು ನಾನು ಬೇಕಾ?- ಇಂಥ ಮಾತನ್ನು ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆ ಆಗುವ ಜನಪ್ರತಿನಿಧಿ ಕೂಡ ಆಡಬಾರದು. ಅಂಥದ್ದರಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ಹೀಗೆ ಹೇಳುತ್ತಾರೆ ಅಂದರೆ ಹೇಗೆ? ಅಂದ ಹಾಗೆ ಕುಮಾರಸ್ವಾಮಿ ಅವರ ಮಾತುಗಳು ಈಚೆಗೆ ಈ ರೀತಿ ವಿವಾದ ಆಗುತ್ತಲೇ ಇದೆ.
ಲೋಕಸಭೆ ಚುನಾವಣೆ ವೇಳೆ ಕೂಡ ಅವರು ಸಿಟ್ಟಿನಲ್ಲಿ ಆಡಿದ್ದ ಮಾತುಗಳು, ಮಾಧ್ಯಮದವರ ಜತೆ ಮಾತನಾಡಲ್ಲ ಎಂದು ರಚ್ಚೆ ಹಿಡಿದಿದ್ದು ಇವೆಲ್ಲ ಗಮನಿಸಿದರೆ ಕುಮಾರಸ್ವಾಮಿ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿ ಆದ ಮೇಲೆ ಏನಾಯಿತು? ಮಾಧ್ಯಮಗಳ ಮೇಲೆ ಜೆಡಿಎಸ್ ನಿಂದ ಕೇಸುಗಳನ್ನು ಹಾಕಿದ್ದು, ವೇದಿಕೆಗಳಲ್ಲಿ 'ಹುಷಾರ್' ಎಂಬ ಧಾಟಿಯಲ್ಲಿ ಮಾತನಾಡಿದ್ದು ಸಹ ಅವರ ಹುದ್ದೆಗೆ ಶೋಭೆ ಅಲ್ಲ.

ಯಾರೂ ಏನನ್ನೂ ಹೇಳಬಾರದಾ?
ನಾನು ಬಿಜೆಪಿಯವರಿಂದ ಪಾಠ ಕಲಿಯಬೇಕಿಲ್ಲ, ಅವರಿಂದ ಹೇಳಿಸಿಕೊಳ್ಳಬೇಕಿಲ್ಲ, ನಮ್ಮ ಕುಟುಂಬದ ಬಗ್ಗೆ ಅವರು ಮಾತನಾಡಬೇಕಿಲ್ಲ, ಪ್ರಾಮಾಣಿಕತೆ ಬಗ್ಗೆ ನನಗೆ ಪಾಠ ಹೇಳುತ್ತಿರುವ ವ್ಯಕ್ತಿಗಿಂತ ಸಾರ್ವಜನಿಕ ಜೀವನದಲ್ಲಿ ನಾನು ಹೆಚ್ಚು ಪಾರದರ್ಶಕ ಹಾಗೂ ಪ್ರಾಮಾಣಿಕನಾಗಿದ್ದೇನೆ... ಇವೇ ಹಾಗೂ ಇಂಥವೇ ಅಲ್ಲವಾ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತುಗಳು.

ಜೆಡಿಎಸ್ ಗೆ ಮತ ಹಾಕಿದವರು ಮಾತ್ರ ಮಾತನಾಡಬೇಕಾ?
ಸರಿ, ಹಾಗಿದ್ದರೆ ಯಾರು ಮಾತನಾಡಬೇಕು? ಜೆಡಿಎಸ್ ಗೆ ಮತ ಹಾಕಿದವರು ಹೊರತುಪಡಿಸಿ ಬೇರೆ ಯಾರೂ- ಏನೂ ಕೇಳಲೇಬಾರದಾ? ಜೆಡಿಎಸ್ ನಿಂದ ಸಚಿವರಾಗಿರುವ- ದೇವೇಗೌಡರ ಬೀಗರೂ ಆಗಿರುವ ಡಿ.ಸಿ.ತಮ್ಮಣ್ಣ ಕೂಡ ಅದೇ ಧಾಟಿಯಲ್ಲಿ ಮಾತನಾಡುತ್ತಾರೆ. ಸುಮಲತಾಗೆ ಮತ ಹಾಕಿದ್ದೀರಿ, ನಿಮ್ಮ ಕೆಲಸ ಮಾಡಿಕೊಡುವುದಕ್ಕೆ ನಾನು ಬೇಕಾ ಎಂಬುದು ಅವರ ಪ್ರಶ್ನೆ.

ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಏಕೆ ಅವಮಾನ ಆಗಬೇಕು?
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಹೀನಾಯ ಸೋಲಿನಿಂದ ಬೇಸರ, ಮೈತ್ರಿ ಸರಕಾರದ ಒತ್ತಡ, ದೇವೇಗೌಡರು ಹೇಳುವಂತೆ ಯಾವುದೋ ಶಕ್ತಿಯಿಂದ ಹಿಂಸೆ... ಇಂಥದ್ದೇನಾದರೂ ಇದ್ದರೆ ಅದರಿಂದ ಹೊರಬರಲು ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಳ್ಳಿ. ಯಾವುದರ ಸಹವಾಸವೇ ಬೇಡ ಅಂದರೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿ. ಅದನ್ನು ಬಿಟ್ಟು ಕುಮಾರಸ್ವಾಮಿ ಹತಾಶೆ ಕಾರಣಕ್ಕೆ ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಏಕೆ ಅವಮಾನ ಆಗಬೇಕು?

ಹೊಳೆಯಲ್ಲಿ ಹುಣಸೇಹಣ್ಣು ಕಿವಿಚಿದಂತಾಗದಿರಲಿ ಜನರ ಪ್ರೀತಿ
ಸಿಎಂ ಕುಮಾರಸ್ವಾಮಿ ಬುಧವಾರ ರಾಯಚೂರಿನಲ್ಲಿ ಆಡಿದ ಮಾತಿಗೂ ಮಂಡ್ಯದಲ್ಲಿ ಡಿ.ಸಿ.ತಮ್ಮಣ್ಣ ಆಡಿದ್ದ ಮಾತಿಗೂ ಯಾವುದೇ ವ್ಯತ್ಯಾಸ ಏನೂ ಇಲ್ಲ. ಈಗಲೂ ಮಾಧ್ಯಮಗಳ ಎದುರು ಹೀಗೆ ಸಿಟ್ಟು ತೋರುತ್ತಾ ಮುಂದುವರಿದರೆ ಈ ಹಿಂದೆ ಕುಮಾರಸ್ವಾಮಿ ಅವರೇ ಗಳಿಸಿದ್ದ- ಪಡೆದಿದ್ದ ಜನರ ಪ್ರೀತಿಯನ್ನು ಹೊಳೆ ನೀರಿನಲ್ಲಿ ಹುಣಸೇಹಣ್ಣು ತೊಳೆದಂತೆ ಮಾಡಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications