ಶತ್ರು ಪಾಳೆಯಕ್ಕೆ ಮಿತ್ರನನ್ನು ನುಗ್ಗಿಸಿ ಡಿಕೆ-ಹೆಚ್ಡಿಕೆ ಬಾಂಬು ಹಾಕಿದ ರಿಯಲ್ ಸ್ಟೋರಿ
Recommended Video

ಬಿಜೆಪಿ ಪಾಳೆಯಕ್ಕೆ ತಮ್ಮ ಮಿತ್ರನನ್ನೇ ನುಗ್ಗಿಸಿದ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಡಿಕೆ ಶಿವಕುಮಾರ್ ಅವರು, ಬಾಂಬ್ ಉಡಾಯಿಸಿರುವ ರೀತಿ ಕಮಲ ಪಾಳೆಯದ ರಾಜ್ಯ ನಾಯಕರನ್ನಷ್ಟೇ ಅಲ್ಲ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ದಂಗಾಗುವಂತೆ ಮಾಡಿದೆ.
ಹಾಗಂತಲೇ ಈ ಡೇಂಜರಸ್ ತಂತ್ರಗಾರಿಕೆಯ ವಿವರ ಪಡೆಯಲು ತುರ್ತಾಗಿ ಸೀಕ್ರೆಟ್ ಸ್ಕ್ವಾಡ್ ರಚಿಸಿ, ಅಮಿತ್ ಶಾ ಅವರು ಪಡೆದ ಪ್ರಾಥಮಿಕ ಮಾಹಿತಿಯೂ ಇಂಟರೆಸ್ಟಿಂಗ್ ಆಗಿದೆ.
ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಂದ್ರಶೇಖರ್ ಅವರು ಗುರುವಾರ ಏಕಾಏಕಿಯಾಗಿ ಸ್ಪರ್ಧಾ ಕಣದಿಂದ ಹಿಂದೆ ಸರಿದ ರಹಸ್ಯವನ್ನು ಅರಿಯದಿದ್ದರೆ ಮುಂದಿನ ದಿನಗಳಲ್ಲಿ ತಾವು ಕಟ್ಟಿರುವ ಕೋಟೆ ಕುಸಿದು ಹೋಗುತ್ತದೆ ಎಂಬುದು ಅಮಿತ್ ಶಾ ಅವರ ತಕ್ಷಣದ ಲೆಕ್ಕಾಚಾರ.
ಅದೇ ರೀತಿ, ದೇಶದೆಲ್ಲೆಡೆ ತಮ್ಮನ್ನು ಚಾಣಕ್ಯನಿಗೆ ಹೋಲಿಸುವವರು ಹೆಚ್ಚಿರುವಾಗ ಕರ್ನಾಟಕದಲ್ಲಿ ನಡೆದ ಬೆಳವಣಿಗೆಯನ್ನು ನೋಡಿಕೊಂಡು ಸುಮ್ಮನಿರುವುದು ಎಂದರೆ ಚಾಣಕ್ಯನ ಪೋಸ್ಟನ್ನು ಕಳೆದುಕೊಳ್ಳುವುದಷ್ಟೇ ಅಲ್ಲ, ರಾಜ್ಯದಲ್ಲಿ ಬಿಜೆಪಿ ಮಕಾಡೆ ಮಲಗಲು ತಾವೇ ಅವಕಾಶ ನೀಡಿದಂತೆ ಎಂಬುದು ಅಮಿತ್ ಶಾ ದಿಗಿಲು.
ಹಾಗಂತಲೇ ರಾಜ್ಯದ ಕಮಲ ಪಾಳೆಯದ ನಾಯಕರನ್ನು ದೂರವಿಟ್ಟು ತಮ್ಮದೇ ಸೀಕ್ರೆಟ್ ಸ್ಕ್ವಾಡ್ ಅನ್ನು ನೇಮಕ ಮಾಡಿರುವ ಅಮಿತ್ ಶಾ ಅವರು ಒಂದೇ ದಿನದಲ್ಲಿ ಕಲೆ ಹಾಕಿರುವ ಮಾಹಿತಿ ಅಚ್ಚರಿ ಹುಟ್ಟಿಸುವಂತಿದೆ.

ಈ ಪ್ರಹಸನ ಶುರುವಾಗಿದ್ದಾದರೂ ಎಲ್ಲಿಂದ?
ಅಂದ ಹಾಗೆ, ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಸೂಕ್ತ ಕ್ಯಾಂಡಿಡೇಟ್ ಇಲ್ಲದಿದ್ದರೂ, ಪ್ರವೀಣ್ ಶೆಟ್ಟಿ ಸೇರಿದಂತೆ ಇರುವ ಮೂರ್ನಾಲ್ಕು ಮಂದಿ ಪವರ್ ಫುಲ್ ಲೀಡರುಗಳ ಪೈಕಿ ಒಬ್ಬರಿಗೆ ಟಿಕೆಟ್ ನೀಡಬೇಕು ಎಂಬುದು ಕಮಲ ಪಾಳೆಯದ ಕಾರ್ಯಕರ್ತರು ಒತ್ತಾಯಿಸುತ್ತಲೇ ಬಂದಿದ್ದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಕ್ಯಾಂಡಿಡೇಟ್ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರನ್ನು ಇವರು ಸೋಲಿಸದಿದ್ದರೂ, ಒಂದು ಮಟ್ಟದಲ್ಲಿ ಘಾಸಿಗೊಳಿಸಬಲ್ಲರು ಮತ್ತು ಪಕ್ಷದ ನೆಲೆಯನ್ನು ವಿಸ್ತರಿಸಬಲ್ಲರು ಎಂಬುದು ಕಾರ್ಯಕರ್ತರ ಯೋಚನೆಯಾಗಿತ್ತು. ಮತ್ತದು ಸರಿಯೂ ಆಗಿತ್ತು.
ಆದರೆ ಬಿಜೆಪಿ ಪರದೆಯ ಮೇಲೆ ಇದ್ದಕ್ಕಿದ್ದಂತೆ ಕ್ಯಾಂಡಿಡೇಟ್ ಪೋಸ್ಟಿಗೆ ಚಂದ್ರಶೇಖರ್ ಹೆಸರು ಕೇಳಿ ಬಂತು. ಈ ಚಂದ್ರಶೇಖರ್ ಅವರನ್ನು ಕ್ಯಾಂಡಿಡೇಟ್ ಮಾಡಲು ಯಾರು ಕಾರಣ? ಅಂತ ಪತ್ತೆ ಮಾಡಲು ಹೊರಟಿರುವ ಅಮಿತ್ ಶಾ ಗ್ಯಾಂಗಿನ ಕಣ್ಣಿಗೆ ಕಂಡಿರುವುದು ಸಿಎಂ ಕುಮಾರಸ್ವಾಮಿ ಅವರ ಪರಮಾಪ್ತ ಅಶ್ವತ್ಥ್.

ಅಮಿತ್ ಶಾ ಗ್ಯಾಂಗಿನ ಕಣ್ಣಿಗೆ ಬಿದ್ದಿದ್ದು ಅಶ್ವತ್ಥ್.
ಒಂದು ಕಾಲದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೊರಳೊಡ್ಡಿ ಜೆಡಿಎಸ್ ನಿಂದ ಹೊರಬಿದ್ದವರು ಅಶ್ವತ್ಥ್. ಇತ್ತೀಚೆಗೆ ಅವರು ಏಕಾಏಕಿಯಾಗಿ ಕುಮಾರಸ್ವಾಮಿ ಅವರಿಗೆ ಹತ್ತಿರವಾಗಿದ್ದಾರೆ. ಅಷ್ಟೇ ಅಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರಿಗೆ ಮೇಜರ್ ಸಲಹೆಗಳು ರವಾನೆಯಾಗುತ್ತಿರುವುದೇ ಅಶ್ವತ್ಥ್ ಅವರಿಂದ.
ಸದರಿ ಅಶ್ವತ್ಥ್ ಅವರೇ ಕೆಲ ಕಾಲದ ಹಿಂದೆ ಬಿಜೆಪಿ ನಾಯಕರಾದ ಅಶೋಕ್, ಸಿ.ಪಿ. ಯೋಗೇಶ್ವರ್ ಹಾಗೂ ರುದ್ರೇಶ್ ಅವರನ್ನು ಹಿಡಿದುಕೊಂಡು, ಹೇಗಿದ್ದರೂ ರಾಮನಗರದಲ್ಲಿ ನಿಮ್ಮ ಪಕ್ಷಕ್ಕೆ ಹೇಳಿಕೊಳ್ಳುವಂತಹ ಕ್ಯಾಂಡಿಡೇಟು ಇಲ್ಲ. ಹೀಗಿರುವಾಗ ಜೆಡಿಎಸ್ ವಿರುದ್ದ ಇರುವ ಅಲೆಯನ್ನು ನೀವು ಎನ್ ಕ್ಯಾಶ್ ಮಾಡಿಕೊಳ್ಳಲು ಸಾಧ್ಯವಿಲ್ಲ, ಹೀಗಾಗಿ ಚಂದ್ರಶೇಖರ್ ಅವರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದರು ಅನ್ನುವುದು ಅಮಿತ್ ಶಾ ಅವರಿಗೆ ಸಿಕ್ಕ ಪ್ರಾಥಮಿಕ ಮಾಹಿತಿ.
ಯಾವಾಗ ಅಶ್ವತ್ಥ್ ಅವರು ಈ ಸಲಹೆ ಕೊಟ್ಟರೋ? ಆಗ ಒಕ್ಕಲಿಗರ ಪಾಳೇಪಟ್ಟಿನಲ್ಲಿ ತಮ್ಮದೇ ಮಾತು ನಡೆಯಬೇಕು. ಪಕ್ಷದಲ್ಲಿ ಬೇರೊಬ್ಬ ಒಕ್ಕಲಿಗ ನಾಯಕರು ಬೆಳೆಯಕೂಡದು ಎಂದು ಅಶೋಕ್, ಯೋಗೇಶ್ವರ್ ಲೆಕ್ಕ ಹಾಕಿದರು. ಮತ್ತಿದೇ ಕಾರಣಕ್ಕಾಗಿ ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದರು. ರುದ್ರೇಶ್ ಹೇಗಿದ್ದರೂ ಯಡಿಯೂರಪ್ಪ ಅವರಿಗೆ ಆಪ್ತ. ಹೀಗಾಗಿ ಒಂದು ಲೆವೆಲ್ಲಿನಲ್ಲಿ ಅವರ ಮಾತಿಗೂ ಶಕ್ತಿ ಸಿಕ್ಕಿತು.

ರುದ್ರೇಶ್ ಹೇಳಿದರು ಯಡಿಯೂರಪ್ಪ ಎಸ್ ಅಂದರು!
ಹೇಗಿದ್ದರೂ ಹಳೆ ಮೈಸೂರಿನ ಮೇಲೆ ತಮಗೆ ಕಮಾಂಡ್ ಇಲ್ಲ ಎಂಬ ಕಾರಣಕ್ಕಾಗಿ ಯಡಿಯೂರಪ್ಪ ಹಿಂದಿನಿಂದಲೂ ಈ ಭಾಗದ ರಾಜಕಾರಣದ ಮೇಲೆ ಹೇಳಿಕೊಳ್ಳುವಷ್ಟು ಗಮನ ಕೊಡುತ್ತಿಲ್ಲ. ಈ ಸಲವೂ ಅಷ್ಟೇ. ತಮ್ಮ ಆಪ್ತ ರುದ್ರೇಶ್ ಕೂಡಾ ಪಟ್ಟು ಹಿಡಿದಿದ್ದರಿಂದ ಮರು ಮಾತನಾಡದೆ ಅದನ್ನು ಒಪ್ಪಿದರು. ಹೀಗೆ ಬಿಜೆಪಿ ಪಾಳೆಯಕ್ಕೆ ಅರಿವಾಗದಂತೆ ಅನಿತಾ ಕುಮಾರಸ್ವಾಮಿ ವಿರುದ್ದ ಜೆಡಿಎಸ್ ತನ್ನದೇ ಮಿತ್ರನನ್ನು ನುಗ್ಗಿಸಿತು ಎಂಬುದು ಅಮಿತ್ ಶಾ ಅವರಿಗೆ ದಕ್ಕಿರುವ ಪ್ರಾಥಮಿಕ ಮಾಹಿತಿಯಲ್ಲಿರುವ ಅಂಶ.
ಇಂಟರೆಸ್ಟಿಂಗ್ ಸಂಗತಿ ಎಂದರೆ ಬಿಜೆಪಿ ಕ್ಯಾಂಡಿಡೇಟ್ ಚಂದ್ರಶೇಖರ್ ಏಕಕಾಲಕ್ಕೆ ಎಚ್.ಡಿ.ಕೆ. ಗ್ಯಾಂಗಿನ ಆಪ್ತರು ಮಾತ್ರವಲ್ಲ, ಜಲಸಂಪನ್ಮೂಲ ಸಚಿವ ಡಿಕೆಶಿ ಅವರ ಸಹೋದರ, ಎಚ್.ಡಿ. ಸುರೇಶ್ ಅವರಿಗೂ ಆತ್ಮೀಯರು. ಅಂದ ಹಾಗೆ ಚಂದ್ರಶೇಖರ್ ಅವರನ್ನು ಕಾಲದಿಂದ ಕಾಲಕ್ಕೆ ಅಚ್ಚಾ ಅಚ್ಚಾ ಮಾಡಿ ನೋಡಿಕೊಂಡು ಬಂದವರು ಇದೇ ಸುರೇಶ್ ಎಂಬುದು ಕೂಡಾ ರಹಸ್ಯವಲ್ಲ.

ಅನಿತಾಗೆ ಟಫ್ ಫೈಟ್ ಕೊಡಲು ಸಿದ್ಧರಿದ್ದ ಚಂದ್ರು
ಒಟ್ಟಿನಲ್ಲಿ ಡಿಕೆಶಿ ಮತ್ತು ಎಚ್.ಡಿ.ಕೆ ಸೇರಿ ಮಾಡಿದ ಪ್ಲಾನಿನಂತೆಯೇ ಎಲ್ಲ ಬೆಳವಣಿಗೆಗಳು ನಡೆಯತೊಡಗಿದವು. ಆದರೆ ಇಷ್ಟೆಲ್ಲ ಬೆಳವಣಿಗೆಗಳಾದರೂ ಚಂದ್ರಶೇಖರ್ ಅವರಿಗೆ ಮಾತ್ರ, ತಾವು ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಪ್ಲಾನಿನ ಪ್ರಕಾರ ಎದ್ದು ನಿಂತಿರುವ ಕ್ಯಾಂಡಿಡೇಟು ಎಂಬುದು ಗೊತ್ತಿರಲಿಲ್ಲ ಅನ್ನುವುದೇ ಅಮಿತ್ ಶಾ ಕೈಲಿರುವ ಪ್ರಾಥಮಿಕ ವರದಿಯ ಕುತೂಹಲಕಾರಿ ಅಂಶ.
ಹೀಗಾಗಿ ಶುರುವಿನಲ್ಲಿ ಚಂದ್ರಶೇಖರ್ ಕೂಡಾ ರಾಮನಗರದ ರಣಾಂಗಣದಲ್ಲಿ ಮೈತ್ರಿಕೂಟದ ಕ್ಯಾಂಡಿಡೇಟು ಅನಿತಾ ಕುಮಾರಸ್ವಾಮಿ ಅವರಿಗೆ ಫೈಟು ಕೊಡುವ ರೀತಿಯಲ್ಲೇ ಗುಡುಗಿದರು. ಬಿಜೆಪಿ ಕೂಡಾ ರಾಮನಗರದಲ್ಲಿ ದೇವು ಫ್ಯಾಮಿಲಿಯ ಪವರ್ ಅನ್ನು ಕಟ್ ಮಾಡಲು ಹರಸಾಹಸ ಮಾಡತೊಡಗಿತು. ಶ್ರಮ ವಹಿಸಿ ದುಡಿಯತೊಡಗಿತು. ಪರಿಣಾಮ? ಮೈತ್ರಿಕೂಟದ ಕ್ಯಾಂಡಿಡೇಟ್ ಅನಿತಾ ಕುಮಾರಸ್ವಾಮಿ ಟಫ್ ಫೈಟ್ ಎದುರಿಸುತ್ತಾರೆ ಎಂಬ ಪಿಕ್ಚರು ಕಾಣತೊಡಗಿತು.

ಅನಿತಾ ಹೋದಲ್ಲೆಲ್ಲ ಜನರ ಆಕ್ರೋಶ
ಶ್ರೀಮತಿ ಅನಿತಾ ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ಎಲ್ಲೇ ಹೋದರೂ ರಾಮನಗರದ ವಿವಿಧ ಕಡೆ ಮತದಾರರಿಂದ ವ್ಯಕ್ತವಾಗುತ್ತಿದ್ದ ಭಾರೀ ಆಕ್ರೋಶ ಇದಕ್ಕೆ ಸಾಕ್ಷಿ. 'ದಶಕಕ್ಕೂ ಹೆಚ್ಚು ಕಾಲದಿಂದ ನಿಮ್ಮ ಫ್ಯಾಮಿಲಿ ಹೇಳಿದಂತೆ ಕೇಳುತ್ತಿದ್ದೇವೆ. ಗೆಲ್ಲಿಸಿ ವಿಧಾನಸಭೆಗೆ ಕಳಿಸುತ್ತಿದ್ದೇವೆ. ಆದರೆ ರಾಮನಗರದ ಹಳ್ಳಿಗಾಡು ಇನ್ನೂ ಉದ್ದಾರವಾಗಿಲ್ಲ' ಎಂದು ಜನ ಬಹಿರಂಗವಾಗಿಯೇ ಕ್ರೋಧ ವ್ಯಕ್ತಪಡಿಸುತ್ತಿದ್ದರು.
ರಸ್ತೆ ಇಲ್ಲ, ಕುಡಿಯಲು ಒಳ್ಳೆ ನೀರು ಸಿಗುತ್ತಿಲ್ಲ, ವಿದ್ಯುತ್ತಿನ ಕತೆ ದೇವರಿಗೇ ಪ್ರೀತಿ ಎಂಬುದರಿಂದ ಹಿಡಿದು ಹಲವು ರೀತಿಯಲ್ಲಿ ಜನ ವ್ಯಕ್ತಪಡಿಸುತ್ತಿದ್ದ ಆಕ್ರೋಶವನ್ನು ಕಂಡ ಬಿಜೆಪಿಯ ಕಾರ್ಯಕರ್ತರು, ಈ ಸಲ ದೇವೇಗೌಡರ ಕೋಟೆಯಲ್ಲೇ ಜೆಡಿಎಸ್ ಮುಖಭಂಗ ಅನುಭವಿಸುವುದು ಗ್ಯಾರಂಟಿ. ಬೇಕಿದ್ದರೆ ಬೆಟ್ ಕಟ್ಟಲು ರೆಡಿ ಎಂದು ಹೇಳಿಕೊಳ್ಳುತ್ತಿದ್ದರು.
ಹೀಗೆ ಅನಿತಾ ಕುಮಾರಸ್ವಾಮಿ ಅವರು ಹೋದಾಗ ವ್ಯಕ್ತವಾಗುತ್ತಿದ್ದ ವಿರೋಧ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಹೋದಾಗಲೂ ಮುಂದುವರಿಯಿತು. ಮತ್ತು ಮಾಜಿ ಪ್ರಧಾನಿ ದೇವೇಗೌಡರು ಹೋದಾಗಲೂ ವ್ಯಕ್ತವಾಯಿತು. ಯಾವಾಗ ಪರಿಸ್ಥಿತಿ ತಮ್ಮ ಕೈ ಮೀರಲಿದೆ ಅನ್ನುವುದು ದೇವೇಗೌಡರಿಗೆ ನಿಕ್ಕಿಯಾಯಿತೋ? ಆನಂತರ ಅವರು ಕುಮಾರಸ್ವಾಮಿ ಜತೆ ಮಾತನಾಡಿದರು. ಅದರ ಆಧಾರದ ಮೇಲೆ ಕುಮಾರಸ್ವಾಮಿ ಅವರು ಡಿ.ಕೆ.ಶಿ ಜತೆ ಮಾತನಾಡಿದರು.

ರಣರಂಗದ ಮೊದಲ ವ್ಯೂಹ ರಚನೆ ಯಶಸ್ವಿ
ರಣರಂಗದ ಮೊದಲ ವ್ಯೂಹ ರಚನೆ ಯಶಸ್ವಿಯಾಗಿದೆ. ಈಗ ಬಾಕಿ ಉಳಿದಿದ್ದು ಎರಡನೇ ಮತ್ತು ಫೈನಲ್ ಹಂತದ ಕಾರ್ಯಾಚರಣೆ ಎಂದು ವಿವರಿಸಿದರು. ಆಗ ಫೀಲ್ಡಿಗೆ ಎಂಟ್ರಿ ಆದರು ಡಿ.ಕೆ.ಶಿ. ಒಂದು ಕಾಲದಲ್ಲಿ ಡಿಕೆ ಮತ್ತು ಎಚ್.ಡಿ.ಕೆ ಪಾರಂಪರಿಕ ಶತ್ರುಗಳು. ಆದರೆ ಈಗ ಪರಮಾಪ್ತರು. ನೀ ನನಗಾದರೆ, ನಾ ನಿನಗೆ ಎನ್ನುವ ಹಂತಕ್ಕೆ ಬಂದಿರುವವರು.
ಹೀಗೆ ಫೀಲ್ಡಿಗೆ ಎಂಟ್ರಿಯಾದ ಡಿಕೆಶಿ ಕೊಟ್ಟ ಸೂಚನೆಯ ಮೇರೆಗೆ ಮೈಸೂರು ರಸ್ತೆಯ ಕ್ಲಬ್ ಒಂದರಲ್ಲಿ ಬುಧವಾರ ರಾತ್ರಿ ಒಂದು ರಹಸ್ಯ ಸಭೆ ನಡೆಯಿತು. ಈ ಸಭೆಯಲ್ಲಿ ಡಿಕೆಸು, ಚಂದ್ರಶೇಖರ್ ಭಾಗವಹಿಸಿದ್ದರು.
ಮತ್ತು ಈ ಸಭೆಯಲ್ಲಿ ತಾವು ಹಿಂದೆ ನೀಡಿದ ಸಹಕಾರಕ್ಕಾಗಿ, ಈಗ ನೀವು ಪ್ರತಿಫಲ ನೀಡಬೇಕಾದ ಸ್ಥಿತಿ ಬಂದಿದೆ. ಹಿಂದೆ ನಾನು ನೀಡಿದ ಸಹಕಾರವೆಲ್ಲ ಈಗ ಗ್ರೇಸ್ ಬಾಲ್ ಇದ್ದಂತೆ. ಹಾಗಂತ ಗ್ರೇಸ್ ಬಾಲ್ ಕತೆ ಮುಗಿಯಿತು ಎಂದಲ್ಲ. ಗ್ರೇಸ್ ಬಾಲ್ ಮುಂದುವರಿಯಲಿದೆ ಎಂದು ಡಿ.ಕೆ. ಸುರೇಶ್ ಅವರು ಹೇಳಿದ ಮೇಲೆ ಚಂದ್ರಶೇಖರ್ ಅವರಿಗೆ ಇದನ್ನು ಒಪ್ಪದೆ ಬೇರೆ ದಾರಿಯೇ ಇರಲಿಲ್ಲ.

ಮಹಿಳಾ ಕೋಟಾದಡಿ ಅನಿತಕ್ಕಗೆ ಮಂತ್ರಿಗಿರಿ
ಹಾಗಂತಲೇ ಮರುದಿನ ರಾಮನಗರದ ರಣಾಂಗಣದಿಂದ ಹಿಂದೆ ಸರಿದ ಚಂದ್ರಶೇಖರ್, ಜೆಡಿಎಸ್ ನ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರ ದಾರಿಯನ್ನು ಸಾಫ್ ಮಾಡಿದರು. ಈಗೇನಿದ್ದರೂ ನಾಮ್ ಕೆ ವಾಸ್ಥೆ ಆಟ. ಅನಿತಾ ಕುಮಾರಸ್ವಾಮಿ ಗೆಲುವು ಹೆಚ್ಚೂ ಕಡಿಮೆ ಖಚಿತ. ಈ ಆಟದ ನಂತರ ಅನಿತಾ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ವತಿಯಿಂದ ಮಹಿಳಾ ಕೋಟಾದಡಿ ಮಂತ್ರಿಯಾಗುವುದೂ ಬಹುತೇಕ ಗ್ಯಾರಂಟಿ.
ಎಚ್ಡಿಕೆ ಒಂದೇ ಕಲ್ಲಿಗೆ ಎರಡು ಹಕ್ಕಿ ಉದುರಿಸಿದ್ದಾರೆ. ಅಂದ ಹಾಗೆ, ಕಾಂಗ್ರೆಸ್ ಕೋಟಾದಡಿ ಈಗಾಗಲೇ ಮಾಜಿ ನಟಿ ಜಯಮಾಲಾ ಮಂತ್ರಿಯಾಗಿದ್ದಾರೆ. ಈಗ ಜೆಡಿಎಸ್ ವತಿಯಿಂದ ಮಹಿಳಾ ಕೋಟಾ ಭರ್ತಿಯಾಗಬೇಕಿದೆ. ಈ ಕೋಟಾ ಭರ್ತಿ ಮಾಡಲು ಈಗ ಅನಿತಾ ಕುಮಾರಸ್ವಾಮಿ ಸಜ್ಜಾಗುತ್ತಿದ್ದಾರೆ. ಈ ಎಲ್ಲ ಕಾರ್ಯಾಚರಣೆಯ ಹಿಂದಿನ ಪ್ಲಾನ್ ಕೂಡ ಇದೇ ಆಗಿತ್ತು.

ವೀರ ಸಾಧಕರು ಯಾರು? ಮೀರ್ ಸಾಧಕರು?
ಹೀಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರು ತಮ್ಮ ಪಕ್ಷಕ್ಕೆ ನೀಡಿದ ಬಿಗ್ ಶಾಕ್ ನ ವಿವರವನ್ನು ಕಂಡು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಂಗು ಬಡಿದು ಹೋಗಿದ್ದಾರೆ.
ಅಷ್ಟು ಮಾತ್ರವಲ್ಲ, ಮೈತ್ರಿಕೂಟ ನಡೆಸಿದ ಆಪರೇಷನ್ ರಾಮನಗರ ಕಾರ್ಯಾಚರಣೆಯ ಮತ್ತಷ್ಟು ವಿವರಗಳಿಗಾಗಿ ಕಾಯುತ್ತಿದ್ದಾರೆ. ಅದಿನ್ನಿನ್ಯಾವ ವಿವರಗಳು ಅವರಿಗೆ ದಕ್ಕುತ್ತವೋ? ಅದು ಬೇರೆ ವಿಷಯ.
ಆದರೆ ಈಗ ತಮಗೆ ದಕ್ಕಿರುವ ಇನ್ ಫಾರ್ಮೇಶನ್, ರಾಜ್ಯದ ಕಮಲ ಪಾಳೆಯದಲ್ಲಿ ವೀರ ಸಾಧಕರು ಯಾರು? ಮೀರ್ ಸಾಧಕರು ಯಾರು? ಅನ್ನುವ ಪ್ರಶ್ನೆ ಅವರ ತಲೆಯಲ್ಲಿ ಮೊಳೆಯುವಂತೆ ಮಾಡಿರುವುದು ಮಾತ್ರ ನಿಜ. ಈಗ ಅಮಿತ್ ಶಾ ಮುಂದಿನ ನಡೆಯೇನು? ರಾಜ್ಯ ರಾಜಕೀಯ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ.












Click it and Unblock the Notifications