ಮೂಕಾಂಬಿಕೆಯ ಮೂಕ ಭಕ್ತೆಯ ಸಾವಿನ‌ ಸುತ್ತ!

ಒಂದು ಆನೆಯ ಅಂತ್ಯ ಕರಾವಳಿಯಲ್ಲಿ ಈ ರೀತಿ ಸುದ್ದಿಯಾಗಿದ್ದೇ ಇಲ್ಲ. ಮಂಗಳವಾರ ಸಾವಿಗೀಡಾದ ಕೊಲ್ಲೂರು ಮುಕಾಂಬಿಕೆಯ ಪರಮಭಕ್ತೆ, ದಿನವೂ ತಪ್ಪದೆ ತಾಯಿಯ ಸೇವೆ ಮಾಡುತ್ತಿದ್ದವಳು! ಟಿಂಬರ್ ಮಿಲ್ ನಲ್ಲಿ ದುಡಿಯುತ್ತಿದ್ದವಳಿಗೆ ಮುಕ್ತಿ ನೀಡಿ ಮುಕಾಂಬಿಕೆಯ ಸೇವೆಗೆ ನಿಯೋಜಿಸಲಾಗಿತ್ತು. ಪ್ರತಿದಿನ ತಾಯಿಯ ಸೇವೆಗೆ ಬರುತ್ತಿದ್ದವಳು ಕಳೆದ ಹತ್ತು ದಿನದಿಂದ ಅನಾರೋಗ್ಯಗೊಂಡಿದ್ದಳು. ಏನಾಗಿದೆ ಎಂದು ಹೋಗಿ ನೋಡಿದ್ರೆ ಆಕೆ ಆಗಲೇ ಕೊನೆಯ ದಿನಗಳನ್ನು ಎಣಿಸುತ್ತಿದ್ದಳು. ಮಂಗಳವಾರ ಆಕೆ ಸಾವನ್ನಪ್ಪಿದಾಗ, ಕೊಲ್ಲೂರಮ್ಮ ಭಕ್ತರನ್ನು ತಲ್ಲಣಗೊಳಿಸಿದ್ದು ಮಾತ್ರವಲ್ಲ ಆಕ್ರೋಶಕ್ಕೂ ಕಾರಣವಾದ ಕತೆ ಇದು.

ಕಳೆದ ಇಪ್ಪತ್ತು ವರ್ಷ ತಾಯಿ ಮೂಕಾಂಬಿಕೆಯ ಸೇವೆ ಮಾಡಿದ್ದವಳು, ಕೊಲ್ಲೂರಮ್ಮನನ್ನು ಕಾಣಲು ಬಂದ ಲಕ್ಷಾಂತರ ಭಕ್ತರಿಗೆ ಸೊಂಡಿಲೆತ್ತಿ ಹರಸಿದ್ದವಳು, ಕ್ಷೇತ್ರಕ್ಕೆ ನಿಜಾರ್ಥದಲ್ಲಿ ಗಜಗಾಂಭೀರ್ಯ ತಂದುಕೊಟ್ಟವಳೇ ಈಕೆ. ಮೂಕಾಂಬಿಕೆಯ ಜಾತ್ರೆಯ ಮೆರುಗು ಹೆಚ್ಚಿಸಿದವಳು ಈಗ ನೆನಪು ಮಾತ್ರ. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಆನೆ ಇಂದಿರಾಳ ಅಕಾಲಿಕ ಅಗಲುವಿಕೆ ಭಕ್ತ ಜನರನ್ನು ಶೋಕಸಾಗರದಲ್ಲಿ ಮುಳುಗಿಸಿರುವುದು ಸುಳ್ಳಲ್ಲ.

ಮೂಕಾಂಬಿಕೆಯ ಸೇವೆಗಾಗಿ ಕೇರಳ‌ ಮೂಲದ ಭಕ್ತ ಮಧು ಎನ್ನುವವರು ಇಪ್ಪತ್ತು ವರುಷ ಹಿಂದೆ ಹರಕೆ ರೂಪದಲ್ಲಿ ಇಂದಿರೆಯನ್ನು ದಾನ ನೀಡಿದ್ದರು. ಆಕೆಯ ಲಾಲನೆ ಪಾಲನೆಗೆ ಬೇಕಾದ ಹಣವನ್ನೂ ಕೊಟ್ಟಿದ್ದರು. ಮರದ ಮಿಲ್ ನಲ್ಲಿ ದುಡಿಯುತ್ತಿದ್ದ ಇಂದಿರಾಗೆ ಕ್ಷೇತ್ರದ ಸೇವೆಯಿಂದ ಖುಷಿಯೂ ಆಗಿತ್ತು. ಕೊಲ್ಲೂರು ಕ್ಷೇತ್ರಕ್ಕೆ ಬರುವ ವೇಳೆಗೆ 40 ವರುಷ ತುಂಬಿದ್ದ ಇಂದಿರೆಗೆ ಇನ್ನು 13 ದಿನಗಳು ಕಳೆದಿದ್ದರೆ 62 ವರ್ಷ ಪೂರ್ಣವಾಗ್ತಿತ್ತು. ಆದ್ರೆ ವಿಪರೀತ ಮಳೆಯ ಪರಿಣಾಮ ಇಪ್ಪತ್ತು ದಿನದಿಂದ ಇಂದಿರಾ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಮಂಗಳವಾರ ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ತ್ಯಜಿಸಿದ್ದಾಳೆ. ವಿಪರೀತ ಜ್ವರಬಾಧೆಯೇ ಈಕೆಯ ಸಾವಿಗೆ ಕಾರಣ.

Devotees Outrage Against Elephant Indira Death In Kolluru

ಮೇಲ್ನೋಟಕ್ಕೆ ಈಕೆಯದ್ದು ಸಹಜ ಸಾವಿನಂತೆ ಕಂಡರೂ, ಇಲ್ಲಿ ಆನೆಗಾದ ಅನ್ಯಾಯ ಎದ್ದು ಕಾಣುತ್ತೆ. ಮಳೆಗಾಳಿಯ ಹೊಡೆತಕ್ಕೆ ರಕ್ಷಣೆ ಪಡೆಯಲು ಈಕೆಗಿದ್ದದ್ದು ಕೇವಲ, ಒಂದು ತಗಡಿನ ಮಾಡು. ರಾಜ್ಯದಲ್ಲೇ ಅತೀ ಹೆಚ್ಚಿನ ಮಳೆ ಕೊಲ್ಲೂರು ಆಸುಪಾಸು ಬೀಳುತ್ತಿದೆ. ಸುತ್ತಲೂ ನೀರಿನ ಹೊಡೆತದಿಂದ ಶೀತಜ್ವರ ಬಾಧೆ ಉಂಟಾಗಿತ್ತು. ಆನೆಯ ಸಾವಿಗೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಆನೆ ಮೇಲ್ವಿಚಾರಣೆ ನಡೆಸುವವರ ನಿರ್ಲಕ್ಷ್ಯ ಕಾರಣ ಎಂದು ಅಕ್ರೋಶವೂ ವ್ಯಕ್ತವಾಗ್ತಿದೆ. ಆನೆ ವಾಸವಿದ್ದ ಲಾಯ ಅವ್ಯವಸ್ಥಿತವಾಗಿದ್ದು ಆಹಾರ, ಪಾಲನೆ ಪೋಷಣೆಯಲ್ಲಿ ದೇವಳದ ಆಡಳಿತ ಮಂಡಳಿ ಹಾಗು ಸರ್ಕಾರ ನಿರ್ಲಕ್ಷ್ಯ ತೋರಿದೆ. ತಮ್ಮ ನೆಚ್ಚಿನ ಆನೆ ಸತ್ತಿರುವುದು ಸ್ಥಳೀಯರು ಮತ್ತು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಲ್ಲೂರಿನ ಹೆಮ್ಮೆಯಂತಿದ್ದ ಇಂದಿರಾಳ ಅಂತ್ಯಸಂಸ್ಕಾರದಲ್ಲಿ ನೂರಾರು ಭಕ್ತರು ಸೇರಿದ್ದೇ ಆಕೆಯ ಜನಪ್ರಿಯತೆಗೆ ಸಾಕ್ಷಿ. ರಾತ್ರಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ನೂರಾರು ‌ಭಕ್ತರು ಬಂದಿದ್ದರು. ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಪೋಸ್ಟ್ ಮಾರ್ಟಂ ಮಾಡಿದ ನಂತರ, ಗಜೇಂದ್ರ ಮೋಕ್ಷ ಹೋಮ ನಡೆಸಲಾಯ್ತು, ಅರಣ್ಯ ಇಲಾಖೆಯ ನೀತಿಯ ಅನುಸಾರವಾಗಿ ಆನೆಯ ಅಂತ್ಯಸಂಸ್ಕಾರ ನಡೆಸಲಾಯಿತು. ಇಂದಿರಾಳ ಸಾವು, ಮೂಕಪ್ರಾಣಿಗಳನ್ನು ಈ ರೀತಿಯ ಧಾರ್ಮಿಕ ಸೇವೆಗೆ ಬಳಸಿಕೊಳ್ಳೋದು ಎಷ್ಟು ಸರಿ ಅನ್ನೋ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+