ಪಂಚರತ್ನ ರಥಯಾತ್ರೆ: ಜೆಡಿಎಸ್ ಪಾಲಿಗೆ ಯಾಕೆ ನಿರ್ಣಾಯಕ?
ರಾಜ್ಯದಲ್ಲಿ ಈಗ ಯಾತ್ರೆಗಳ ಸರದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಕರ್ನಾಟಕದಲ್ಲಿ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿತ್ತು. ಇದಾದ ನಂತರ ಬಿಜೆಪಿಯ ಸಂಕಲ್ಪ ಯಾತ್ರೆ, ಇದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಈಗ, ರಾಜ್ಯದ ಮತ್ತೊಂದು ಕಿಂಗ್ ಮೇಕರ್ ಪಕ್ಷವಾಗಿದ್ದ ಜೆಡಿಎಸ್ ಸರದಿ. ಹಲವು ತಿಂಗಳ ಪೂರ್ವ ಕಸರತ್ತಿನ ನಂತರ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ಆರಂಭವಾಗಲಿದೆ. ಹಳೇ ಮೈಸೂರು ಭಾಗದಲ್ಲಿ ಪ್ರಮುಖವಾಗಿ ಈ ಯಾತ್ರೆ ಸಾಗಲಿದೆ.
ಮನೆ ಮನೆಯ ಮೇಲೂ ಕನ್ನಡ ಬಾವುಟ, ಎಚ್ಡಿಕೆಯಿಂದ ಧ್ವಜಾರೋಹಣ
ನವೆಂಬರ್ ಒಂದರ ರಾಜ್ಯೋತ್ಸವದ ದಿನದಂದು ಪಂಚರತ್ನ ಯಾತ್ರೆಗೆ ಮುಳಬಾಗಿಲಿನಲ್ಲಿ ಚಾಲನೆ ಸಿಗಲಿದೆ. ರಾಜಕಾರಣಿಗಳ ಫೇವರೇಟ್ ಕುರುಡುಮಲೆಯ ಶ್ರೀಮಹಾಗಣಪತಿ ದೇವಾಲಯದಲ್ಲಿ ಪೂಜೆ, ಹೋಮ ಹವನಾದಿಗಳ ಮೂಲಕ ಯಾತ್ರೆ ಆರಂಭವಾಗಲಿದೆ.
ಜೆಡಿಎಸ್ ಈ ಬಾರಿ ಚುನಾವಣೆಗೆ ಭಾರಿ ರಣೋತ್ಸಾಹದಲ್ಲಿದೆ. ಪಕ್ಷದ ಮುಖಂಡರ ಜೊತೆಗೆ ಬೇಸರಿಕೊಂಡಿದ್ದ ಹಲವು ಮುಖಂಡರನ್ನು ದೊಡ್ಡ ಗೌಡ್ರು ಸಮಾಧಾನ ಮಾಡಿ, ಪಕ್ಷದಲ್ಲಿ ಮತ್ತೆ ಸಕ್ರಿಯರಾಗುವಂತೆ ಮಾಡಿರುವುದು ಜೆಡಿಎಸ್ ಪಾಲಿಗೆ ಹೊಸ ಉತ್ಸಾಹವನ್ನು ತಂದಿದೆ.
ಮದ್ದೂರು: ಕಾಂಗ್ರೆಸ್ನಿಂದ ಶೀಘ್ರದಲ್ಲೇ ವಿಭಾಗ ಮಟ್ಟದ ರಥಯಾತ್ರೆ-ಚೆಲುವರಾಯಸ್ವಾಮಿ
ಗ್ರಾಮ ವಾಸ್ತವ್ಯ ಎಚ್ಡಿಕೆಗೆ ಜನಪ್ರಿಯತೆಯನ್ನು ತಂದು ಕೊಟ್ಟ ಕಾರ್ಯಕ್ರಮ
ನವೆಂಬರ್ ಒಂದರಂದು ಆರಂಭವಾಗಲಿರುವ ಪಂಚರತ್ನ ಯಾತ್ರೆ ಡಿಸೆಂಬರ್ ಆರರಂದು ಆನೇಕಲ್ ನಲ್ಲಿ ಮುಕ್ತಾಯಗೊಳ್ಳಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಹಾಸನ ಜಿಲ್ಲೆಯ ಪ್ರತೀ ಅಸೆಂಬ್ಲಿ ಕ್ಷೇತ್ರದಲ್ಲಿ ಯಾತ್ರೆ ಸಾಗಲಿದೆ. ಆಯಾಯ ದಿನದ ಯಾತ್ರೆಯ ವೇಳೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಕೂಡಾ ಕುಮಾರಸ್ವಾಮಿ ಹಮ್ಮಿಕೊಂಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಗ್ರಾಮ ವಾಸ್ತವ್ಯ ಅವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟ ಕಾರ್ಯಕ್ರಮವಾಗಿತ್ತು. ಹಾಗಾಗಿ, ಜೆಡಿಎಸ್ ಮತ್ತೆ ಅದನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದೆ.
ಮುಂದಿನ ಬಾರಿ ನಮ್ಮದೇ ಸರಕಾರ ಎನ್ನುವ ಆತ್ಮವಿಶ್ವಾಸದ ಮಾತು
ದೇವೇಗೌಡ್ರು, ಕುಮಾರಸ್ವಾಮಿ ಆದಿಯಾಗಿ ಜೆಡಿಎಸ್ ಪಕ್ಷದ ಪ್ರಮುಖ ಮುಖಂಡರು ಮುಂದಿನ ಬಾರಿ ನಮ್ಮದೇ ಸರಕಾರ ಎಂದು ಆತ್ಮವಿಶ್ವಾಸದ ಮಾತನ್ನಾಡುತ್ತಿದ್ದಾರೆ. ಅದು, ಸ್ವಂತ ಬಲದಿಂದಲೋ ಅಥವಾ ಕಿಂಗ್ ಮೇಕರ್ ಆಗಿಯೋ ಎನ್ನುವುದನ್ನು ಪಕ್ಷದ ನಾಯಕರು ಸ್ಪಷ್ಟ ಪಡಿಸುತ್ತಿಲ್ಲ. ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಭಾಗದಲ್ಲಿ ಪಕ್ಷ ತೊರೆದಿದ್ದ ಹಲವು ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಜೆಡಿಎಸ್ಸಿಗೆ ಹೊಸ ಬಲವನ್ನು ತಂದಿದೆ.
ಜಿ.ಟಿ.ದೇವೇಗೌಡ ಮತ್ತವರ ಪುತ್ರ ಹರೀಶ್ ಗೌಡ
ಮೈಸೂರು ಭಾಗದ ಪ್ರಭಾವೀ ಮುಖಂಡ ಜಿ.ಟಿ.ದೇವೇಗೌಡ ಮತ್ತವರ ಪುತ್ರ ಹರೀಶ್ ಗೌಡ, ಜೆಡಿಎಸ್ ನಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ. ದೀಪಾವಳಿಯ ದಿನ ಜೆಡಿಎಸ್ ಪ್ರಧಾನ ಕಚೇರಿಗೆ ಆಗಮಿಸಿ ಕುಮಾರಸ್ವಾಮಿಯವರಿಗೆ ಸಿಹಿ ತಿನ್ನಿಸಿದ್ದಾರೆ, ಕುಮಾರಸ್ವಾಮಿಯವರನ್ನು ಸಿಎಂ ಮಾಡುವುದೇ ನನ್ನ ಮುಂದಿನ ಗುರಿ ಎಂದು ಘೋಷಿಸಿದ್ದಾರೆ. ಜಿಟಿಡಿಯವರ ನಡೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
|
ಜೆಡಿಎಸ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿರುವ ಪಂಚರತ್ನ ರಥಯಾತ್ರೆ
ಜೆಡಿಎಸ್ ಸ್ವಂತ ಬಲದಿಂದಲೋ ಅಥವಾ ಕಿಂಗ್ ಮೇಕರ್ ಆಗಲು ನಿರ್ಣಾಯಕವಾಗಿರುವುದು ಏಳೆಂಟು ಜಿಲ್ಲೆಗಳಲ್ಲಿ. ಹಾಗಾಗಿ, ಈ ಭಾಗವನ್ನು ಟಾರ್ಗೆಟ್ ಮಾಡಿಕೊಳ್ಳಲು ದಳಪತಿಗಳು ನಿರ್ಧರಿಸಿದ್ದಾರೆ. ಪಂಚರತ್ನ ಯಾತ್ರೆ ಈ ನಿಟ್ಟಿನಲ್ಲಿ ಪಕ್ಷಕ್ಕೆ ಸಂಜೀವಿನಿಯಾಗುವ ಸಾಧ್ಯತೆಯಿಲ್ಲದಿಲ್ಲ. ಆಧುನಿಕ ಟೆಕ್ನಾಲಜಿಯ ಮೂಲಕ ಜನರನ್ನು ತಲುಪಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಅಧಿಕಾರಕ್ಕೆ ಬಂದರೆ ಸರಕಾರದ ಕಾರ್ಯವೈಖರಿ ಹೇಗಿರಲಿದೆ ಎನ್ನುವುದನ್ನು ಯಾತ್ರೆಯ ವೇಳೆಯೇ ಜನರಿಗೆ ತಿಳಿಪಡಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಒಟ್ಟಿನಲ್ಲಿ, ಪಂಚರತ್ನ ಯಾತ್ರೆ ಜೆಡಿಎಸ್ ಪಾಲಿಗೆ ನಿರ್ಣಾಯಕವಾಗಲಿದೆ.