ಮಠ ದೇವಾಲಯ, ಸಂಘ ಸಂಸ್ಥೆಗಳಿಗೆ ಕೋಟಿ ಕೋಟಿ ಅನುದಾನ: ಯಾರಿಗೆ ಎಷ್ಟು?
ರಾಜ್ಯ ಸರಕಾರ ಗುತ್ತಿಗೆದಾರರಿಗೆ ಮತ್ತು ಇತರ ಕಾಮಗಾರಿಯ ಬಿಲ್ ಪಾವತಿಸಲು ಅದೆಷ್ಟು ಕೋಟಿ ಬಾಕಿ ಉಳಿಸಿಕೊಂಡಿದೆಯೋ? ಆದರೆ, ಮಠಮಾನ್ಯ, ಸಂಘ ಸಂಸ್ಥೆಗಳಿಗೆ ಅನುದಾನ ಕೊಡಲು ಮಾತ್ರ ರಾಜ್ಯದ ಬೊಕ್ಕಸ ತುಂಬಿರುತ್ತದೆ.
ಧಾರ್ಮಿಕ ಶ್ರದ್ದಾ ಕೇಂದ್ರಗಳಿಗೆ ಅನುದಾನ ನೀಡುವ ಪರಿಪಾಠ ಇಂದು ನಿನ್ನೆಯದಲ್ಲ ಮತ್ತು ಇದಕ್ಕೆ ಯಾವ ಪಕ್ಷವೇ ಇರಲಿ ಯಾವ ಸರಕಾರವೇ ಇರಲಿ ಕೂಡಾ ಹೊರತಾಗಿಲ್ಲ. ಆದರೆ, ಅನುದಾನ ನೀಡುವ ಮುನ್ನ ಮತಬ್ಯಾಂಕ್ ಭದ್ರ ಪಡಿಸಿಕೊಳ್ಳುವ ರಾಜಕೀಯ ಹಿತಾಶಕ್ತಿ ಮಾತ್ರ ಇದ್ದೇ ಇರುತ್ತದೆ.
Recommended Video
ನಾಗಾಲೋಟದಲ್ಲಿರುವ ಕಾಂಗ್ರೆಸ್ಸಿಗೆ ಮತ್ತೊಂದು ಅಸ್ತ್ರ ಕೊಟ್ಟ ಬಿಜೆಪಿ
ಲಂಚ ಕೊಡದೇ ಯಾವುದೇ ಫೈಲ್ ಸರಕಾರದ ಮಟ್ಟದಲ್ಲಿ ಮುಂದಕ್ಕೆ ಹೋಗುವುದಿಲ್ಲ ಎಂದು ಖುದ್ದು ರಾಜ್ಯ ಉಚ್ಚ ನ್ಯಾಯಾಲಯವೇ ಸರಕಾರಕ್ಕೆ ಮಂಗಳಾರತಿ ಇತ್ತೀಚೆಗೆ ಮಾಡಿತ್ತು. ಸರಕಾರದಿಂದ ಅನುದಾನ ಪಡೆಯಲೂ ಕಮಿಷನ್ ಹೊಡೆಯಬೇಕು ಎಂದು ಖುದ್ದು ಶಿರಲಂಚಾಹಟ್ಟಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು.
ಅದೇನೇ ಇರಲಿ, ಲಂಚಾವತಾರದ ಸುಳಿವಿನ ಒಳಗೆ ಹೋಗದೇ ಈ ತಿಂಗಳು ಸರಕಾರ, ವಿವಿಧ ಮಠ, ಸಂಘ ಸಂಸ್ಥೆಗಳಿಗೆ, ದೇವಾಲಯ, ಟ್ರಸ್ಟ್ ಗಳಿಗೆ ಬರೋಬ್ಬರಿ 142.59 ಕೋಟಿ ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ: ಅದರ ಪ್ರಮುಖ ಮಠಮಾನ್ಯಗಳ ಪಟ್ಟಿ ಇಂತಿದೆ:
ಕಾಶೀಹಾರ ಚುನಾವಣೆ ತನಕ ನಿಮ್ಮ ಕೊರಳಲ್ಲೇ ಇರಲಿ: ಸಿದ್ದರಾಮಯ್ಯಗೆ ಶ್ರೀಗಳ 'ಶ್ರೀರಕ್ಷೆ'
ಚುನಾವಣಾ ಪೂರ್ವ ಕಸರತ್ತು
142.59 ಕೋಟಿ ಅನುದಾನದ ಪೈಕಿ 178 ಮಠಗಳಿಗೆ 108.24 ಕೋಟಿ ರೂಪಾಯಿಯನ್ನು ಹಂಚಲಾಗಿದೆ. ಇನ್ನುಳಿದ ಅನುದಾನದ ಮೊತ್ತವನ್ನು 59 ದೇವಾಲಯಗಳಿಗೆ 21.35, ಮತ್ತು ಇತರ ಕೆಲವು ಟ್ರಸ್ಟ್ ಗಳಿಗೆ ನೀಡಲು ಆದೇಶ ಹೊರಡಿಸಲಾಗಿದೆ. ಅನುದಾನ ಪಡೆದುಕೊಳ್ಳುವ ಮಠಗಳ ಪೈಕಿ ಎಲ್ಲಾ ಸಮುದಾಯದ ಪೀಠಕ್ಕೆ ಆದ್ಯತೆಯನ್ನು ನೀಡಲಾಗಿದೆ. ಇದು, ಚುನಾವಣಾ ಪೂರ್ವ ಕಸರತ್ತು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಉಡುಪಿ ಕುಂಜಾರು ಮಧ್ವವನ ಅಭಿವೃದ್ದಿ
ಈ ಪೈಕಿ ಅತಿಹೆಚ್ಚು ಅನುದಾನ ಪಡೆದದ್ದು ಮುರುಘಾ ಮಠದ ಶಿವಯೋಗಾಶ್ರಮ ಟ್ರಸ್ಟ್ ಮತ್ತು ಜೋಯಿಡಾ ಉಳವಿ ಚನ್ನಬಶವೇಶ್ವರ ಮಠಕ್ಕೆ ಐದು ಕೋಟಿ ಒದಗಿಸಲಾಗಿದೆ. ಇದಾದ ನಂತರ, ಉಡುಪಿ ಕುಂಜಾರು ಮಧ್ವವನ ಅಭಿವೃದ್ದಿಗಾಗಿ ಪಲಿಮಾರು ಮಠ ಮತ್ತು ಚಿಕ್ಕಮಗಳೂರಿನ ದೊಡ್ಡಕುರುಬರ ಹಳ್ಳಿಯಲ್ಲಿರುವ ಬಸವತತ್ವ ಪೀಠಕ್ಕೆ ತಲಾ ಮೂರು ಕೋಟಿ ಅನುದಾನ ನೀಡುವುದು ಮಂಜೂರಾಗಿದೆ.
ಬೆಂಗಳೂರಿನಲ್ಲಿರುವ ವಿಶ್ವೇಶ್ವರತೀರ್ಥ ಸಂಶೋಧನಾ ಕೇಂದ್ರ
ನರಗುಂದ ದೊರೆಸ್ವಾಮಿ ಮಠ, ಕೊಪ್ಪಳದ ರಾಘವೇಂದ್ರಸ್ವಾಮಿ ಮಠ, ಉಡುಪಿ ಪೇಜಾವರ ಮಠ ಬೆಂಗಳೂರಿನಲ್ಲಿರುವ ವಿಶ್ವೇಶ್ವರತೀರ್ಥ ಸಂಶೋಧನಾ ಕೇಂದ್ರ, ಮೈಸೂರು ಭಾರತೀಯ ಯೋಗಧಾಮ, ದಾಸರಿಘಟ್ಟದ ಆದಿಚುಂಚನಗಿರಿ ಶಾಖಾಮಠ, ಶೃಂಗೇರಿ ಶಿವಗಂಗಾ ಶಾರದಾ ಪೀಠ, ಎಡೆತೊರೆ ಯೋಗನಂದೇಶ್ವರ ಸರಸ್ವತಿ ಮಠ, ಸವಣೂರಿನ ರೇವಣ ಸಿದ್ದೇಶ್ವರ ಮಠ, ಬೆಂಗಳೂರಿನ ಗಿರಿನಗರದ ಭಂಡಾರಕೆರೆ ಮಠ, ಬೆಂಗಳೂರಿನ ಜಯಸತ್ಯಪ್ರಮೋಧ (ಉತ್ತರಾಧಿ ಮಠ) ಸೇರಿದಂತೆ ಹಲವು ಮಠಗಳಿಗೆ ತಲಾ ಒಂದು ಕೋಟಿ ನೀಡಲು ಆಡಳಿತಾತ್ಮ ಅನುಮೋದನೆ ನೀಡಲಾಗಿದೆ.
ಉಡುಪಿಯ ವಾದಿರಾಜ ಸಂಶೋಧನಾ ಕೇಂದ್ರಕ್ಕೆ ಅರವತ್ತು ಲಕ್ಷ
ಶಿರಸಿ ರುದ್ರದೇವರ ಮಠ, ಸಿದ್ದಾಪುರ ಮುರುಘಾ ಮಠ, ಸೋಮವಾರಪೇಟೆ ವಿರಕ್ತಿ ಮಠ ಸೇರಿದಂತೆ ಹಲವು ಮಠಗಳಿಗೆ ತಲಾ ಐವತ್ತು ಲಕ್ಷ. ತಿಪಟೂರಿನ ಷಡಕ್ಷರ ಮಠ, ಬೆಂಗಳೂರಿನಲ್ಲಿರುವ ತಿಪ್ಪಶೆಟ್ಟಿ ಮಠ, ಹುಕ್ಕೇರಿಯ ಹಾವೇರಿ ಮಠ, ಅಥಣಿಯ ಗಜ್ಜಲಮಠ, ಶಿವಮೊಗ್ಗದ ಬೆಕ್ಕಿನಕಲ್ಮಠಕ್ಕೆ ತಲಾ ಎರಡು ಕೋಟಿ ಅನುದಾನ ನೀಡಲು ಅನುಮತಿ ದೊರೆತಿದೆ. ಬನವಾಶಿಯ ಮಧುಕೇಶ್ವರ ದೇವಸ್ಥಾನದ ರಥ ನಿರ್ಮಾಣಕ್ಕೆ ಮೂರು ಕೋಟಿ, ಉಡುಪಿಯ ವಾದಿರಾಜ ಸಂಶೋಧನಾ ಕೇಂದ್ರಕ್ಕೆ ಅರವತ್ತು ಲಕ್ಷ ಅನುದಾನ ನೀಡಿ ಆದೇಶ ಹೊರಡಿಸಿದೆ.