ನರೇಶ್ ಪಟೇಲ್, ಪ್ರಶಾಂತ್ ಕಿಶೋರ್: ಗುಜರಾತ್ ಚುನಾವಣೆಗೆ ಕಾಂಗ್ರೆಸ್ ತಂತ್ರ
ನವದೆಹಲಿ, ಮಾರ್ಚ್ 31: ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯು ಅಂತ್ಯವಾಗುತ್ತಿದ್ದಂತೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆಯಲ್ಲಿ ತೊಡಗಿದೆ. ಪಂಚ ರಾಜ್ಯಗಳಲ್ಲಿ ಮುಖಭಂಗವಾದಂತೆ ಇನ್ನುಳಿದ ವಿಧಾನಸಭೆಯಲ್ಲಿ ಹೀನಾಯವಾಗಿ ಪರಾಭವಗೊಳ್ಳುವುದನ್ನು ತಪ್ಪಿಸಲು ಕಾಂಗ್ರೆಸ್ ಈಗಾಗಲೇ ತಯಾರಿಯಲ್ಲಿ ತೊಡಗಿದೆ. ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಏಕಕಾಲದಲ್ಲಿ ಕಾಂಗ್ರೆಸ್ ಪ್ರಭಾವಿ ಪಾಟಿದಾರ್ ನಾಯಕ ನರೇಶ್ ಪಟೇಲ್ ಮತ್ತು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಒಲಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ನಿರ್ಣಾಯಕ ಪ್ರದೇಶದಲ್ಲಿ ನರೇಶ್ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಬಹುದು ಮತ್ತು ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಕಾರ್ಯತಂತ್ರವನ್ನು ರೂಪಿಸಬಹುದು ಎಂದು ಗುಜರಾತ್ನ ಕಾಂಗ್ರೆಸ್ ನಾಯಕರು ಭಾವಿಸುತ್ತಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಜೇತರಿಗೆ ಫಲಿತಾಂಶವು ಉತ್ತೇಜನಕಾರಿಯಾಗಿರುವುದರಿಂದ ರಾಜ್ಯವು ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ನಿರ್ಣಾಯಕವಾಗಿದೆ.
ಗುಜರಾತ್ ಚುನಾವಣೆ: ರಾಹುಲ್ ಗಾಂಧಿಯನ್ನು ಸಂಪರ್ಕಿಸಿದ ಚುನಾವಣಾ ಚಾಣಕ್ಯ
ಶ್ರೀ ಖೋಡಲ್ಧಾಮ್ ಟ್ರಸ್ಟ್ (ಎಸ್ಕೆಟಿ) ಅಧ್ಯಕ್ಷ ನರೇಶ್ ಪಟೇಲ್ ಅವರು ರಾಜಕೀಯಕ್ಕೆ ಸೇರಲು ಉತ್ಸುಕರಾಗಿದ್ದಾರೆ ಎಂದು ರಾಜ್ಕೋಟ್ನಲ್ಲಿ ಹೇಳಿದ್ದಾರೆ. ಸಮುದಾಯದ ಯುವಕರು ಸಮೀಕ್ಷೆ ನಡೆಸುವಂತೆ ಸೂಚಿಸಿದ್ದು ಈ ಯುವಕರು ಮನೆ ಮನೆಗೆ ತೆರಳಿ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ಇನ್ನು ಎಸ್ಕೆಟಿಯ ಸಮೀಕ್ಷಾ ಸಮಿತಿಯು ಜಿಲ್ಲೆಯಿಂದ ಗ್ರಾಮ ಮಟ್ಟದವರೆಗೆ ತನ್ನ ನೆಟ್ವರ್ಕ್ ಮೂಲಕ ಕೆಲಸ ಮಾಡುತ್ತಿದೆ. ಅಭಿಪ್ರಾಯವನ್ನು ಪಡೆಯಲು ಜನರನ್ನು ಸಂಪರ್ಕಿಸುತ್ತಿದೆ ಎಂದು ಪಟೇಲ್ ಹೇಳಿದರು.
ನರೇಶ್ ಪಟೇಲ್ರ ಷರತ್ತುಗಳು ಏನು?
ಪಾಟಿದಾರ್ ನಾಯಕ ನರೇಶ್ ಪಟೇಲ್ ಕಾಂಗ್ರೆಸ್ಗೆ ಎಂಟ್ರಿಯಾಗುವುದು ಕೆಲವೇ ವಿಚಾರಗಳ ಮೇಲೆ ನಿಂತಿದೆ. ನರೇಶ್ ಪಟೇಲ್ರ ಷರತ್ತಿಗೆ ಪಕ್ಷದಲ್ಲಿ ಪ್ರತಿರೋಧವಿದೆ. ಗುಜರಾತ್ನಲ್ಲಿ ಕಾಂಗ್ರೆಸ್ನ ಚುನಾವಣಾ ಪ್ರಚಾರವನ್ನು ಪ್ರಶಾಂತ್ ಕಿಶೋರ್ ನಿಭಾಯಿಸಬೇಕೆಂದು ನರೇಶ್ ಪಟೇಲ್ ಬಯಸುತ್ತಾರೆ. ಕಾಂಗ್ರೆಸ್ ಪಕ್ಷವು ಕೂಡಾ ಕಿಶೋರ್ರನ್ನು ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಮುಂದಾಗುವಂತೆ ಕಂಡುಬಂದಿದೆ. ಆದರೆ ಕಾಂಗ್ರೆಸ್ನಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ಟೀಕೆ ಮಾಡುವ ಅನೇಕ ಮಂದಿ ಇದ್ದಾರೆ. ಈ ನಡುವೆ ಪ್ರಶಾಂತ್ ಕಿಶೋರ್ ಹಾಗೂ ಪಟೇಲ್ ಜೊತೆಯಾಗಿಯೇ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಇದೆ. ಒಂದೆಡೆ ಪಕ್ಷವು ಪಟೇಲರನ್ನು ತನ್ನ ಪ್ರಮುಖ ಮುಖವಾಗಿ ಬಿಂಬಿಸಬೇಕೆಂದು ಕಿಶೋರ್ ಬಯಸಿದರೆ, ಇನ್ನೊಂದೆಡೆ ಚುನಾವಣಾ ತಂತ್ರಗಾರರಾಗಿ ಕಿಶೋರ್ ಇರಬೇಕು ಎಂದು ಪಟೇಲ್ ಬಯಸುತ್ತಿದ್ದಾರೆ.
ಎಐಸಿಸಿಗೆ ಹೊಸ ಅಧ್ಯಕ್ಷರ ನೇಮಕ ಯಾವಾಗ?: ಕಾಂಗ್ರೆಸ್ಸಿನ ಜಿ-23 ನಾಯಕರ ಪ್ರಶ್ನೆ
ಲೇಯುವ ಪಾಟಿದಾರ್ ಸಮುದಾಯವನ್ನು ಪಕ್ಷದತ್ತ ಸೆಳೆಯುವ ತಂತ್ರ?
ಪಟೇಲ್ ಖೋಡಲ್ಧಾಮ್ ಟ್ರಸ್ಟ್ನ ಅಧ್ಯಕ್ಷರಾಗಿದ್ದು, ರಾಜ್ಕೋಟ್ ಬಳಿಯ ಲೇಯುವಾ ಪಾಟಿದಾರ್ ಸಮುದಾಯದ ಪೋಷಕ ದೇವತೆಯಾದ ಖೋಡಿಯಾರ್ ದೇವಿಯ ಭವ್ಯವಾದ ದೇವಾಲಯವನ್ನು ನಿರ್ವಹಣೆ ಮಾಡುತ್ತದೆ. ಪಟೇಲ್ ಈ ಪ್ರದೇಶದಲ್ಲಿನ ಪಾಟಿದಾರ್ ಸಮುದಾಯವನ್ನು ಪಕ್ಷದತ್ತ ಸೆಳೆಯಲು ಸಹಾಯ ಮಾಡುತ್ತದೆ ಎಂದು ಕಾಂಗ್ರೆಸ್ ನಂಬಿಕೆ ಹೊಂದಿದೆ. ಪಟೇಲ್ ಪಕ್ಷಕ್ಕೆ ಎಂಟ್ರಿ ನೀಡಿದರೆ ಲೇಯುವ ಪಾಟಿದಾರ್ ಸಮುದಾಯವನ್ನು ಪಕ್ಷದತ್ತ ಸೆಳೆಯಲು ಸಹಾಯ ಆಗಲಿದೆ ಎಂದು ಕಾಂಗ್ರೆಸ್ ನಂಬಿದೆ. ರಾಜಕೀಯವಾಗಿ ಪ್ರಭಾವಿ ಸಮುದಾಯವು ಇದಾಗಿದೆ.
ರಾಹುಲ್ ಗಾಂಧಿ-ಆನಂದ್ ಶರ್ಮಾ
ಈ ಎಲ್ಲಾ ಬೆಳವಣಿಗೆಯ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಅವರು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬುಧವಾರ ದಿಢೀರ್ ಭೇಟಿ ಮಾಡಿದರು. ರಾಜ್ಯಸಭೆಯಲ್ಲಿ ಕಾಂಗ್ರೆಸ್ನ ನಾಯಕರಾಗಿರುವ ಆನಂದ್ ಶರ್ಮಾ ಸದನದಿಂದ ನಿವೃತ್ತರಾಗುತ್ತಿದ್ದಾರೆ. ಈ ನಡುವೆ ಹರ್ಯಾಣದಿಂದ ಅವರನ್ನು ಮರು ನಾಮನಿರ್ದೇಶನ ಮಾಡಬಹುದೆಂಬ ಮಾತು ಕೇಳಿಬರುತ್ತಿದ್ದು ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ಆದರೆ ಶರ್ಮಾ ಅವರೊಂದಿಗಿನ ರಾಹುಲ್ ಅವರ ಭೇಟಿಯು 'ಜಿ 23' ಯಲ್ಲಿ ಚರ್ಚೆಗೆ ಕಾರಣವಾಗಿದೆ. ನಾಯಕರುಗಳು ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಿದ್ದಾರೆ.
ರಾಹುಲ್ ಗಾಂಧಿಯನ್ನು ಸಂಪರ್ಕಿಸಿದ್ದ ಚಾಣಕ್ಯ
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರನ್ನು ಪ್ರಶಾಂತ್ ಕಿಶೋರ್ ಸಂಪರ್ಕ ಮಾಡಿದ್ದಾರೆ ಎಂದು ಕಾಂಗ್ರೆಸ್ನ ಮೂಲಗಳು ತಿಳಿಸಿದೆ. ಕಳೆದ ವರ್ಷ ಗುಜರಾತ್ ಚುನಾವಣೆಯ ನಿಟ್ಟಿನಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಶಾಂತ್ ಕಿಶೋರ್ ನಡುವೆ ಹಲವಾರು ಹಂತಗಳ ಮಾತುಕತೆ ನಡೆದಿದ್ದು, ಎಲ್ಲವೂ ಮುರಿದು ಬಿದ್ದಿತ್ತು. ಆದರೆ ಇದೀಗ ನಾಟಕೀಯ ತಿರುವು ಪಡೆದುಕೊಂಡಿದ್ದು, ರಾಹುಲ್ ಗಾಂಧಿಯ ಜೊತೆ ಪ್ರಶಾಂತ್ ಕಿಶೋರ್ ಮಾತನಾಡಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ.